Thursday, March 30, 2017

ಸುಲಭಾ

ಮಹಿಳಾ ದಿನಾಚರಣೆ ನಿಮಿತ್ತ ವಿಶಿಷ್ಟ ಲೇಖನ ಸರಣಿ:
“ಸನಾತನ ಭಾರತದ ಸ್ತ್ರೀರತ್ನಗಳು”
ಭಾಗ – ೩೧

ಸುಲಭಾ

ಮಹಾಭಾರತದಲ್ಲಿ ಶ್ರುತಾವತೀ, ಸಿದ್ಧಾ, ಸುಲಭಾ ಮುಂತಾದ ಅನೇಕ ಬ್ರಹ್ಮವಾದಿನಿಯರ ಉಲ್ಲೇಖವಿದೆ. ಸ್ಥಾಲೀಪುಲಾಕ ನ್ಯಾಯದಿಂದ ಅವರಲ್ಲಿ ಒಬ್ಬಳಾದ ಸುಲಭಾ ಎಂಬ ಯೋಗಿನಿಯ ಸಾಧನೆಯನ್ನು ನಿಮ್ಮ ಮುಂದಿಡುತ್ತೇನೆ. ಶಾಂತಿಪರ್ವದ ೩೨೦ನೇ ಅಧ್ಯಾಯದಲ್ಲಿ ಇವಳ ಕಥೆಯಿದೆ.

ಪ್ರಧಾನ ಎಂಬ ರಾಜರ್ಷಿಯ ಮಗಳು ಮಗಳು ಸುಲಭಾ. ವೇದಶಾಸ್ತ್ರಾದಿಪಾರಂಗತೆಯಾಗಿದ್ದ ಅವಳು ಒಬ್ಬಳು ಶ್ರೇಷ್ಠವಾದ ಯೋಗಿನಿಯಾಗಿದ್ದಳು. ಅವಳೇ ಹೇಳಿಕೊಂಡಂತೆ ತನ್ನ ವಿದ್ಯೆ, ಜ್ಞಾನಗಳಿಗೆ ಅನುರೂಪನಾದ ವರ ಸಿಗದೆ ವೈರಾಗ್ಯವೇ ಮೋಕ್ಷಸಾಧನೆಯೆಂದು ಅರಿತು ಸಂನ್ಯಾಸತ್ವವನ್ನು ಸ್ವೀಕರಿಸಿದ್ದಳು. ಪರಿವ್ರಾಜಕಳಾಗಿ ಸಂತರನ್ನೂ ಬ್ರಹ್ಮಜ್ಞಾನಿಗಳನ್ನೂ ಸಂದರ್ಶಿಸುತ್ತ ಆತ್ಮವಿಚಾರವನ್ನು ಚರ್ಚಿಸುತ್ತಿದ್ದಳು. ಒಮ್ಮೆ ರಾಜರ್ಷಿ ಜನಕನ ವಿಚಾರ ಅವಳ ಕಿವಿಗೆ ಬಿತ್ತು. ಅವನೊಂದಿಗೆ ವಾಕ್ಯಾರ್ಥವನ್ನು ಮಾಡುವ ಮನಸ್ಸಾಯಿತು. ಸುಂದರ ಯುವತಿಯ ರೂಪದಲ್ಲಿ ಮಿಥಿಲೆಗೆ ಬಂದು ಜನಕನ ಮುಂದೆ ನಿಂತಳು. ಜನಕ ಮಹಾರಾಜ ಅವಳನ್ನು ಗೌರವದಿಂದ ಸ್ವಾಗತಿಸಿದ. ಜನಕನ ಆಧ್ಯಾತ್ಮ ಸಾಧನೆಯನ್ನು ಪರೀಕ್ಷಿಸಲೋಸುಗ ಯೋಗಮಾರ್ಗದ ಮೂಲಕ ಅವನ ಮನಸ್ಸನ್ನು ಪ್ರವೇಶಿಸಿದಳು. ಜನಕನಿಗೆ ಅದು ಅರಿವಾಗಿ ಕಸಿವಿಸಿಯಾಯಿತು. ಅವನು ಅವಳನ್ನು ಪ್ರಶ್ನಿಸಿದ – “ಹೇ ಯುವತಿ! ಯಾರು ನೀನು? ಯಾರಿಗೆ ಸೇರಿದವಳು? ನೀನು ಹೀಗೆ ಪರಪುರುಷನ ಮನಸ್ಸನ್ನು ಪ್ರವೇಶಿಸುವುದು ತರವಲ್ಲ. ನನ್ನ ಅರಿವಿನೊಂದಿಗೆ ನಿನ್ನ ಅರಿವನ್ನು ಜೋಡಿಸಿ ನೀನು ವ್ಯಭಿಚಾರವನ್ನೆಸಗುತ್ತಿದ್ದೀಯಾ”.

ಸುಲಭಾ ಮುಗುಳ್ನಕ್ಕಳು. ಈ ಮಾತನ್ನು ಅವಳು ನಿರೀಕ್ಷಿಸಿದ್ದಳು. ಅವಳು ಮಾತನಾಡತೊಡಗಿದಳು – “ನಮ್ಮೆಲ್ಲರ ಶರೀರ ಪಾಂಚಭೌತಿಕವಾದದ್ದು. ಎಲ್ಲರ ದೇಹದಲ್ಲಿಯೂ ಇರುವ ದೇಹೀ ಒಬ್ಬನೇ. ಆಧ್ಯಾತ್ಮಿಕವಾಗಿ ಎಲ್ಲರೂ ಒಂದೇ. ನಮ್ಮಲ್ಲಿರುವ ವ್ಯತ್ಯಾಸ ಪ್ರಾಕೃತಿಕವಾದದ್ದು.  ಹಾಗಿರುವಾಗ ನಿನ್ನ ಆತ್ಮವನ್ನು ನನ್ನ ಆತ್ಮದಲ್ಲೂ ನಿನ್ನ ದೇಹವನ್ನು ನನ್ನ ದೇಹದಲ್ಲೂ ಯಾಕೆ ಕಾಣಲಾರೆ? ನೀನಿನ್ನೂ ದ್ವೈತವನ್ನು ದಾಟಿ ಅದ್ವೈತವನ್ನು ತಲುಪಿಲ್ಲ. ಜೀವನ್ಮುಕ್ತತೆಯ ಸ್ತರವನ್ನು ಇನ್ನೂ ಮುಟ್ಟಿಲ್ಲ. ಹಾಗಾಗಿಯೇ ನೀನು ಯಾರು? ನೀನು ಯಾರವಳು? ಎಂಬ ಅರ್ಥಹೀನ ಪ್ರಶ್ನೆಗಳನ್ನು ಕೇಳುತ್ತಿದ್ದೀಯಾ. ನನಗೆ ನನ್ನ ದೇಹದ ಜೊತೆಗೇ ನಿಜವಾದ ಸಂಬಂಧವಿಲ್ಲದಿರುವಾಗ ನಿನ್ನನ್ನು ಪ್ರವೇಶಿಸಿರುವುದು ವ್ಯಭಿಚಾರ ಹೇಗೆ? ಪಂಚಶಿಖರು ನಿನಗೆ ಬೋಧಿಸಿದ ತತ್ತ್ವವನ್ನು ಅರ್ಥೈಸಿಕೊಳ್ಳದೆ ಆತ್ಮವನ್ನೂ ದೇಹವನ್ನೂ ಒಂದೇ ಎಂದು ತಿಳಿದು ಇಂತಹ ಮೂರ್ಖ ಪ್ರಶ್ನೆಗಳನ್ನು ಕೇಳುತ್ತಿದ್ದೀಯಾ. ನೀನಿನ್ನೂ ಬ್ರಹ್ಮಜ್ಞಾನಕ್ಕೆ ಬಲು ದೂರ ಇದ್ದೀಯಾ.”

ಸುಲಭಾಳ ವಾದವನ್ನು ಕೇಳಿ ಜನಕ ಸ್ತಂಭೀಭೂತನಾದ. ಅವನ ಬಾಯಿಯಿಂದ ಮಾತೇ ಹೊರಡಲಿಲ್ಲ. ತನ್ನ ತಪ್ಪನ್ನು ಅರಿತ. ಯೋಗಿನಿಗೆ ಶರಣಾದ.


ಬ್ರಹ್ಮಜಿಜ್ಞಾಸುಗಳ ಗಡಣದಲ್ಲಿ ’ರಾಜರ್ಷಿ’ ಎಂಬ ಬಿರುದನ್ನು ಪಡೆದಿದ್ದ ಜನಕನಿಗೆ ಸವಾಲೆಸೆಯುವುದು, ಅವನನ್ನು ವಾದದಲ್ಲಿ ಸೋಲಿಸುವುದು ಸುಲಭದ ಮಾತಲ್ಲ. ಆದರೆ ಸುಲಭಾ ಅದನ್ನು ಸುಗಮವಾಗಿ ಮಾಡಿ ಮುಗಿಸಿದ್ದಳು. ಅವಳ ಧೈರ್ಯ, ಆತ್ಮವಿಶ್ವಾಸಗಳಿಗೆ ಎಣೆಯಿಲ್ಲ. ಮಹಿಳೆಯೊಬ್ಬಳು ತನ್ನ ವಿಚಾರಶೀಲತೆಯಿಂದ ಒಬ್ಬಂಟಿಯಾಗಿ ಯಾವ ಮಟ್ಟವನ್ನು ತಲುಪಬಲ್ಲಳು ಎಂಬುದಕ್ಕೆ ಸುಲಭಳು ದೃಷ್ಟಾಂತವಾಗಬಲ್ಲಳು. 

ಮಹಾಬಲ ಭಟ್, ಗೋವಾ

ಸಾವಿತ್ರೀ

ಮಹಿಳಾ ದಿನಾಚರಣೆ ನಿಮಿತ್ತ ವಿಶಿಷ್ಟ ಲೇಖನ ಸರಣಿ:
“ಸನಾತನ ಭಾರತದ ಸ್ತ್ರೀರತ್ನಗಳು”
ಭಾಗ – ೩೦

ಸಾವಿತ್ರೀ

ಸತ್ಯವಾನ್-ಸಾವಿತ್ರಿಯ ಕಥೆ ಯಾರಿಗೆ ಗೊತ್ತಿಲ್ಲ. ಮೃತ್ಯುವನ್ನೇ ಗೆದ್ದ ಸಾವಿತ್ರಿ ಧೈರ್ಯಶಾಲಿನಿ ಸತಿಯರ ಪಂಕ್ತಿಯಲ್ಲಿ ಅಗ್ರಗಣ್ಯಳಾಗಿ ನಿಲ್ಲುತ್ತಾಳೆ.

ಮದ್ರದೇಶದ ಅಧಿಪತಿ ಅಶ್ವಪತಿಯ ಮಗಳು ಇವಳು. ಸಕಲವಿದ್ಯಾಸಂಪನ್ನೆ. ರೂಪಯೌವನಗಳು ಅನರ್ಥಕಾರಿಗಳಾಗದಂತೆ ವಿದ್ಯೆಯು ಇವಳಿಗೆ ವಿನಯವನ್ನಿತ್ತಿತ್ತು. ಅವಳಿಗೆ ತಕ್ಕನಾದ ವರನನ್ನು ಹುಡುಕುವುದು ಅಶ್ವಪತಿಗೆ ಸಮಸ್ಯೆಯಾಗಿತ್ತು. ತಂದೆಯ ಅನುಜ್ಞೆಯಂತೆ ವರಾನ್ವೇಷಣೆಗೆ ಹೊರಟ ಸಾವಿತ್ರಿ ಅನೇಕ ರಾಜರ್ಷಿಗಳನ್ನು ತನ್ನ ಒರೆಗಲ್ಲಿಗೆ ಹಚ್ಚಿದಳು. ಕೊನೆಗೆ ಅವಳ ಮನಸ್ಸನ್ನು ಗೆದ್ದ ಯುವಕ ಶಾಲ್ವದೇಶದ ದ್ಯುಮತ್ಸೇನನ ಮಗನಾಗಿದ್ದ ’ಸತ್ಯವಾನ”. ಅವನು ಸಣ್ಣವನಾಗಿದ್ದಾಗಲೇ ರಾಜನ ವಯೋಸಹಜ ದೃಷ್ಟಿಹೀನತೆಯ ಲಾಭ ಪಡೆದಿದ್ದ ಶತ್ರುಗಳು ರಾಜ್ಯವನ್ನು ಅಪಹರಿಸಿದ್ದರು. ಸಾವಿತ್ರಿಗೆ ಅವನ ರಾಜ್ಯಹೀನತೆಯಾಗಲೀ ಬಡತನವಾಗಲೀ ಅವನನ್ನು ವರನನ್ನಾಗಿ ಆರಿಸುವಲ್ಲಿ ಪ್ರತಿಬಂಧಕಗಳಾಗಲಿಲ್ಲ. ಸತ್ಯವಾನನ ಗುಣಶೀಲ, ವಿದ್ಯಾ, ವಿನಯತೆಗೆ ತಲೆ ಬಾಗಿದಳು.
ಅಶ್ವಪತಿ ವಿರೋಧಿಸಲಿಲ್ಲ. ಆದರೆ ನಾರದರು ಬಂದು ಸತ್ಯವಾನನ ಆಯಸ್ಸು ಇನ್ನು ಒಂದೇ ವರ್ಷ ಎಂದಾಗ ದಿಗಿಲುಗೊಂಡು ನಿರ್ಧಾರವನ್ನು ಬದಲಿಸುವಂತೆ ಸಾವಿತ್ರಿಯನ್ನು ಕೇಳಿಕೊಂಡ. ’ಸಕೃತ್ ಕನ್ಯಾ ಪ್ರದೀಯತೇ’ ಎಂಬ ವಚನವನ್ನು ಮುಂದಿಟ್ಟುಕೊಂಡು ಸಾವಿತ್ರಿ ತನ್ನ ನಿರ್ಧಾರವನ್ನು ಬದಲಿಸಲಿಲ್ಲ.

ಮದುವೆಯಾಯಿತು. ದಂಪತಿಗಳು ಕಷ್ಟ-ಸುಖಗಳನ್ನು ಹಂಚಿಕೊಂಡು ಒಂದು ವರ್ಷ ಕಳೆದರು. ’ಆ ದಿನ’ ಸಮೀಪಿಸಿತು. ಸಾವಿತ್ರಿಗೆ ಗಂಡನನ್ನು ಉಳಿಸಿಕೊಳ್ಳುವ ಛಲ ಇತ್ತು. ಕಾಡಿಗೆ ಕಟ್ಟಿಗೆ ತರಲು ಹೊರಟ ಅವನನ್ನು ತಾನೂ ಅನುಸರಿಸಿದಳು. ’ಆ ಕ್ಷಣ’ ವೂ ಬಂದೇ ಬಿಟ್ಟಿತ್ತು. ಸತ್ಯವಾನನ ದೇಹ ನಿಶ್ಚೇಷ್ಟಿತವಾಗಿ ಬಿದ್ದಿತ್ತು. ಅಂತಹ ಧರ್ಮಾತ್ಮನ ಆತ್ಮವನ್ನು ತೆಗೆದುಕೊಂಡು ಹೋಗಲು ಸ್ವತ: ಯಮಧರ್ಮರಾಜನೇ ಆಗಮಿಸಿದ್ದ. ಸಾವಿತ್ರಿ ಅವನನ್ನು ಹಿಂಬಾಲಿಸಿದಳು. ಯಮನಿಗೆ ಕರುಣೆ ಉಕ್ಕಿತು. ಅವಳ ಜೊತೆ ಮಾತಿಗಾರಂಭಿಸಿದ. ಅವಳ ಯುಕ್ತಿಯುಕ್ತ ಮಾತಿಗೆ ಮರುಳಾಗಿ ಸತ್ಯವಾನನ ಜೀವವೊಂದನ್ನು ಬಿಟ್ಟು ಮತ್ಯಾವುದೇ ವರ ಬೇಡು ಅಂದ. ಸಾವಿತ್ರಿ ಚತುರೆ. ಅಂತಹ ಕಷ್ಟಮಯ ಸಮಯದಲ್ಲೂ ಅವಳ ಚಾಕಚಕ್ಯತೆ ಕೆಲಸ ಮಾಡಿತು. ತನ್ನ ವಾಕ್ಚಾತುರ್ಯದಿಂದ ಯಮನನ್ನು ಮರುಳಾಗಿಸಿ ಒಟ್ಟು ನಾಲ್ಕು ವರಗಳನ್ನು ಪಡೆದಳು. ಮಾವನ ದೃಷ್ಟಿ ಮತ್ತು ರಾಜ್ಯವನ್ನು ಮೊದಲೆರಡು ವರಗಳಿಂದಲೂ, ತಂದೆಗೆ ನೂರು ಗಂಡುಮಕ್ಕಳನ್ನು ಮೂರನೆಯ ವರದಿಂದಲೂ ದೊರಕಿಸಿದ ಸಾವಿತ್ರಿ ನಾಲ್ಕನೆಯ ವರದಿಂದ ತನಗೆ ನೂರು ಮಕ್ಕಳು ಹುಟ್ಟುವಂತೆ ವರ ಪಡೆದಳು. ಈ ವರವನ್ನು ದಯಪಾಲಿಸಿ ಯಮ ತನ್ನ ಮಾತಿನಿಂದಲೇ ಬದ್ಧನಾದ. ಪತಿಯಿಲ್ಲದೆ ಪತಿವ್ರತೆಗೆ ಸಂತಾನವಾಗಲು ಸಾಧ್ಯವೆ? ಸಂತಾನ ಪಡೆಯುವ ಪರ್ಯಾಯ ಮಾರ್ಗವನ್ನು ಸೂಚಿಸುವ ದುಸ್ಸಾಹಸವನ್ನು ಯಮ ಮಾಡಲಿಲ್ಲ. ಸತ್ಯವಾನನ ಜೀವವನ್ನು ಹಿಂತಿರುಗಿಸಿದ.

ಕಷ್ಟವನ್ನೇ ಮೆಟ್ಟಿಲಾಗಿಸಿಕೊಂಡು ಗಂಡನನ್ನು ಉಳಿಸಿಕೊಂಡದ್ದೇ ಅಲ್ಲದೆ ಸೇರಿದ ಮನೆಗೂ, ತವರು ಮನೆಗೂ ಶ್ರೇಯಸ್ಸನ್ನುಂಟುಮಾಡಿದ ಸಾವಿತ್ರಿ ಲೋಕವಿಖ್ಯಾತವಾದುದರಲ್ಲಿ ಆಶ್ಚರ್ಯವೇನಿದೆ?


ಮಹಾಬಲ ಭಟ್, ಗೋವಾ

Tuesday, March 28, 2017

ಮಮತಾ

ಮಹಿಳಾ ದಿನಾಚರಣೆ ನಿಮಿತ್ತ ವಿಶಿಷ್ಟ ಲೇಖನ ಸರಣಿ:
“ಸನಾತನ ಭಾರತದ ಸ್ತ್ರೀರತ್ನಗಳು”
ಭಾಗ – ೨೯

ಮಮತಾ

ಬೃಹಸ್ಪತಿಯ ಸೋದರನ ಹೆಸರು ಉಚ್ಯಥ. ಅವನ ಪತ್ನಿಯೇ ಮಮತಾ. ವಿದ್ಯಾಸಂಪನ್ನೆ, ಗುಣವತಿ ಹಾಗೂ ರೂಪವತಿಯಾಗಿದ್ದಳು. ಅವಳು ಗರ್ಭಿಣಿಯಾಗಿದ್ದಾಗ ಬೃಹಸ್ಪತಿಯ ಕಾಮ ದೃಷ್ಟಿ ಅವಳ ಮೇಲೆ ಬಿತ್ತು. ಸೋದರನ ಪತ್ನಿಯು ಪಂಚಮಾತೆಯರಲ್ಲಿ ಒಬ್ಬಳು ಎಂಬುದನ್ನು ಮರೆತ. (ಮಿತ್ರಪತ್ನೀ ಗುರೋರ್ಪತ್ನೀ ಭ್ರಾತೃಪತ್ನೀ ತಥೈವ ಚ | ಪತ್ನೀಮಾತಾ ಸ್ವಮಾತಾ ಚ ಪಂಚೈತೇ ಮಾತರ: ಸ್ಮೃತಾ:||) ಕಾಮಕೇಳಿಗೆ ಕರೆದ. ಮಮತಾ ದಿಗ್ಭ್ರಾಂತಳಾದಳು. ತಿಳಿ ಹೇಳಿದಳು. ಕೇಳಲಿಲ್ಲ;ಕಾಮ ಅವನನ್ನು ಕಿವುಡಾಗಿಸಿತ್ತು. ಕೈಮುಗಿದು ಅಂಗಲಾಚಿದಳು. ಕಾಣಲಿಲ್ಲ; ಕಾಮಾಂಧನಾಗಿದ್ದ. ಆಕ್ರಮಿಸಿದ. ಆದರೆ ಮಮತಾಳ ಹೊಟ್ಟೆಯಲ್ಲಿದ್ದ ಗರ್ಭ ಅವನನ್ನು ತಡೆಯಿತು. ಕಾಮ ತಣಿಯದೆ ಕೋಪದ ರೂಪವನ್ನು ತಾಳಿತು. ’ಕಾಮಾತ್ ಕ್ರೋಧೋಭಿಜಾಯತೇ’ ಎನ್ನುವುದು ನಿಜವಾಯಿತು. ಸಿಟ್ಟಿನಿಂದ ’ನೀನು ಜನ್ಮಾಂಧನಾಗು’ ಎಂದು ಆ ಭ್ರೂಣಕ್ಕೆ ಶಾಪಕೊಟ್ಟ. ಆ ತಾಯಿ ಕಣ್ಣೀರು ಹಾಕಿದಳು. ತನ್ನದಲ್ಲದ ತಪ್ಪಿಗೆ ಆ ಮಗುವಿಗೆ ಈ ಶಿಕ್ಷೆ!

ಹುಟ್ಟಿದ ಮಗು ಸುಂದರವಾಗಿತ್ತು. ಆದರೆ ದೃಷ್ಟಿಹೀನವಾಗಿತ್ತು. ಮಮತಾ ಮರುಗಿದಳು. ಆದರೆ ಮಗುವಿನ ಮೇಲಿನ ಮಮತೆ ಕಡಿಮೆಯಾಗಲು ಸಾಧ್ಯವೆ? ಅವನಿಗೆ ತಾನೇ ದೃಷ್ಟಿಯಾದಳು. ಅವನ ಅಂತರ್ದೃಷ್ಟಿಯನ್ನು ತೆರೆಸಿದಳು. ಕೊಡಬೇಕಾದ ಸಂಸ್ಕಾರದಲ್ಲಿ ಎಳ್ಳಿನಿತೂ ಲೋಪ ಮಾಡಲಿಲ್ಲ. ಅದು ಶ್ರುತಿಕಾಲ. ಅಧ್ಯಯನಕ್ಕೆ ಕಣ್ಣಿಗಿಂತ ಕಿವಿ ಮುಖ್ಯವಾಗಿತ್ತು. ಹಾಗಾಗಿ ಮಗು ವಿದ್ಯಾಭ್ಯಾಸದಲ್ಲಿ ಹಿಂದೆ ಬೀಳಲಿಲ್ಲ. ತಾಯಿಯ ಬೆಂಗಾವಲಿತ್ತು. ತಪಸ್ಸು ಮಾಡಿದ ಕೊನೆಗೆ ದೃಷ್ಟಿಹೀನನಾಗಿದ್ದರೂ ವೇದದೃಷ್ಟಾರನಾದ. ಅವನೇ ದೀರ್ಘತಮನೆಂಬ ಮಹರ್ಷಿ.


ವಿಕಲಚೇತನಮಗುವಿನ ತಾಯಿಯಾಗಿ ಮಮತಾಮಯಿ ಮಮತಾ ಮಾಡಿದ ಕಾರ್ಯ ಅಂತಹ ನೂರಾರು ತಾಯಿಯರಿಗೆ ಪ್ರೇರಣಾಸ್ಥಾನ.

ಮಹಾಬಲ ಭಟ್, ಗೋವಾ

Monday, March 27, 2017

ಸುಕನ್ಯಾ

ಮಹಿಳಾ ದಿನಾಚರಣೆ ನಿಮಿತ್ತ ವಿಶಿಷ್ಟ ಲೇಖನ ಸರಣಿ:
“ಸನಾತನ ಭಾರತದ ಸ್ತ್ರೀರತ್ನಗಳು”
ಭಾಗ – ೨೮
ಸುಕನ್ಯಾ

ಮನುವಂಶದ ಶರ್ಯಾತನೆಂಬ ರಾಜ ಭರತಖಂಡದಲ್ಲಿ ರಾಜ್ಯವಾಳುತ್ತಿದ್ದ. ಅವನ ಮಗಳು ಸುಕನ್ಯಾ. ರೂಪದಲ್ಲಿ ಚೆಲುವೆ, ಸಂಸ್ಕಾರವಂತೆ ಹಾಗೂ ವಿದ್ಯಾಸಂಪನ್ನೆಯಾಗಿದ್ದಳು. ಚ್ಯವನನೆಂಬ ಮಹರ್ಷಿ ರಸವಿದ್ಯೆಯಲ್ಲಿ ಖ್ಯಾತನಾಗಿದ್ದ. ಮುದುಕನಾದರೂ ಯೌವನವನ್ನು ಮರಳಿ ಪಡೆಯುವ ನಿಟ್ಟಿನಲ್ಲಿ ಪ್ರಯೋಗನಿರತನಾಗಿದ್ದ. ಕಾಡಿನಲ್ಲಿ ಒಮ್ಮೆ ಸಂಚರಿಸುವಾಗ ಒಂದು ಕಂದರದಲ್ಲಿ ಬಿದ್ದುಬಿಟ್ಟ. ಅವನ ಮೇಲೆ ತರಗೆಲೆಗಳು, ಮಣ್ಣು ಬಿದ್ದು ಯಾರಿಗೂ ಸ್ಪಷ್ಟವಾಗಿ ಕಾಣದಂತಾದ.
ಅದೇ ಸಮಯಕ್ಕೆ ಶರ್ಯಾತ ರಾಜ ತನ್ನ ಪರಿವಾರದೊಂದಿಗೆ ಮೃಗಯಾ ವಿಹಾರಕ್ಕೆಂದು ಆ ಕಾಡಿಗೆ ಬಂದು ಬಿಡಾರ ಹೂಡಿದ್ದ. ಸುಕನ್ಯೆಯೂ ಅವನೊಂದಿಗೆ ಬಂದಿದ್ದಳು. ಪರಿವಾರದ ಜನರು ಆ ಅಸ್ಪಷ್ಟ ಮಾನವಾಕೃತಿಯನ್ನು ಕಂಡು ಕುತೂಹಲದಿಂದ ಕಲ್ಲುಮಣ್ಣುಗಳನ್ನು ಎರಚಿದರು. ಸುಕನ್ಯೆ ಹೊಳೆಯುವ ಕಣ್ಣಿಗೆ ಕಡ್ಡಿಯಿಂದ ಚುಚ್ಚಿದಳು. ಚ್ಯವನ ನೋವಿನಿಂದ ಮುಲುಗಿದ.

ಇತ್ತ ರಾಜನ ಬಿಡಾರದಲ್ಲಿ ಆಶ್ಚರ್ಯಕರ ಘಟನೆಗಳು ನಡೆದವು. ವಿನಾಕಾರಣ ಎಲ್ಲರೂ ಪರಸ್ಪರ ಜಗಳವಾಡಹತ್ತಿದರು. ಚೀರತೊಡಗಿದರು. ರಾಜನಿಗೆ ಒಮ್ಮೆಲೇ ನಡೆದ ಈ ವಿದ್ಯಮಾನ ಸೋಜಿಗವನ್ನು ತಂದಿತು. ಆಗ ಅವನ ಮಂತ್ರಿಗಳು ಚ್ಯವನನಿಗೆ ಸೇವಕರು ಕೊಟ್ಟ ತೊಂದರೆಗಳನ್ನು ತಿಳಿಸಿದರು. ರಾಜ ಅಲ್ಲಿಗೆ ಧಾವಿಸಿದ. ಚ್ಯವನನನ್ನು ಪ್ರಾರ್ಥಿಸಿದ. ರಾಜನ ವಿನಯತೆ ಚ್ಯವನನಿಗೆ ಇಷ್ಟವಾಯಿತು. ಅಕಸ್ಮಾತ್ ಅವನ ದೃಷ್ಟಿ ರಾಜನ ಪಕ್ಕದಲ್ಲಿ ನಿಂತಿದ್ದ ಸುಕನ್ಯೆಯ ಮೆಲೆ ಬಿತ್ತು. ಅವಳ ಯೌವನ ಅವನನ್ನು ಆಕರ್ಷಿಸಿತು. ಅವಳನ್ನು ತನಗೆ ಮದುವೆ ಮಾಡಿಕೊಟ್ಟರೆ ತೊಂದರೆಯನ್ನು ನಿವಾರಿಸುವುದಾಗಿ ಹೇಳಿದ. ರಾಜ ದಿಗ್ಭ್ರಾಂತನಾದ. ಆದರೆ ಅನಿವಾರ್ಯವಾಗಿತ್ತು. ಸುಕನ್ಯೆಯ ಮನದಲ್ಲೂ ಅಪರಾಧಿ ಭಾವ ಮೊಳೆದಿತ್ತು. ಒಟ್ಟಿನಲ್ಲಿ ಮುದುಕನನ್ನು ಮದುವೆಯಾಗುವ ಭಾಗ್ಯ ಅವಳ ಹಣೆಯಲ್ಲಿ ಬರೆದಿತ್ತು. ಅವಳದನ್ನು ಸ್ವೀಕರಿಸಿದಳು. ಶ್ರದ್ಧೆಯಿಂದ ಗಂಡನ ಸೇವೆ ಮಾಡುತ್ತಿದ್ದಳು.

ದೇವವೈದ್ಯರಾದ ಅಶ್ವಿನೀಕುಮಾರರು ಒಮ್ಮೆ ಅವಳನ್ನು ನೋಡಿದರು. ಹಣ್ಣು ಹಣ್ಣು ಮುದುಕನಿಗೆ ನವತಾರುಣ್ಯದ ಹೆಂಡತಿ. ಯಮಳರು ಸುಕನ್ಯೆಯಲ್ಲಿಗೆ ಬಂದು ಮುದುಕನನ್ನು ಬಿಟ್ಟು ತಮ್ಮೊಂದಿಗೆ ಬಂದು ಬಿಡು ಎಂದರು. ಸುಕನ್ಯೆ ನಿತ್ಯರುಣರಾದ ಅವರ ರೂಪದ ಬಲೆಗೆ ಬೀಳಲಿಲ್ಲ. ಸರಿಯಾಗಿ ಮಂಗಳಾರತಿ ಮಾಡಿ ಕಳುಹಿದಳು. ಚ್ಯವನನಿಗೆ ಇದು ಗೊತ್ತಾಯಿತು. ತನ್ನ ಹೆಂಡತಿಯ ಮೇಲೆ ಅಭಿಮಾನ ಮೂಡಿತು. ಈ ಸಂದರ್ಭವನ್ನು ಸರಿಯಾಗಿ ಉಪಯೋಗಿಸಿಕೊಳ್ಳಬೇಕು ಎಂದು ಯೋಚಿಸಿ ಮರುದಿನ ಮತ್ತೆ ಅವರು ಬಂದರೆ ಏನು ಹೇಳಬೇಕೆಂದು ತನ್ನ ಹೆಂಡತಿಗೆ ಸೂಚಿಸಿದನು.

ಮರುದಿನ ಅವಳಿಕುಮಾರರು ಮತ್ತೆ ಸುಕನ್ಯೆಯಲ್ಲಿಗೆ ಬಂದಳು. ಆಗ ಅವಳು ’ ನೀವು ನನ್ನ ಗಂಡನಷ್ಟು ಶ್ರೇಷ್ಠರಲ್ಲ. ನಿಮಗೆ ಯಜ್ಞದಲ್ಲಿ ಹವಿರ್ಭಾಗವಿಲ್ಲ. ದೇವತೆಗಳು ನಿಮ್ಮನ್ನು ಹೊರಗಿಟ್ಟಿರುವರು’ ಅಂದಳು. ’ನನ್ನ ಗಂಡ ನಿಮಗೆ ಸೋಮರಸ ಪಾನ ಮಾಡಿಸಬಲ್ಲರು’ ಎಂದೂ ಸೂಚಿಸಿದಳು. ಅಶ್ವಿನೀಕುಮಾರರಿಗೆ ಆಸೆಯಾಯಿತು. ಅವರು ಚ್ಯವನನಲ್ಲಿಗೆ ಬಂದು ವಿನಂತಿಸಿಕೊಂಡರು. ಆಗ ತನ್ನನ್ನು ನವಯುವಕನನ್ನಾಗಿ ಮಾಡಿದರೆ ತಾನು ಅವರಿಗೆ ಸ್ಥಾನಮಾನ ಕೊಡಿಸುವುದಾಗಿ ಚ್ಯವನ ಹೇಳಿದ. ಅಶ್ವಿನೀಕುಮಾರರು ಒಪ್ಪಿಕೊಂಡರು. ಸರಸ್ವತೀನದಿಯಲ್ಲಿ ಮುಳುಗು ಹಾಕಿ ಬಂದ ಚ್ಯವನ ನವ ಯುವಕನಾದ. ಸುಕನ್ಯೆಯ ಪತಿನಿಷ್ಠೆ ಫಲ ನೀಡಿತು. ಅವಳ ಬಾಳು ಹಸನಾಯಿತು.


ಮಹಾಬಲ ಭಟ್, ಗೋವಾ

Sunday, March 26, 2017

ವೇದಕಾಲದ ಕೆಲವು ಋಷಿಕೆಯರು: (....ಮುಂದುವರಿದುದು)

ಮಹಿಳಾ ದಿನಾಚರಣೆ ನಿಮಿತ್ತ ವಿಶಿಷ್ಟ ಲೇಖನ ಸರಣಿ:

“ಸನಾತನ ಭಾರತದ ಸ್ತ್ರೀರತ್ನಗಳು”

ಭಾಗ – ೨೭

ವೇದಕಾಲದ ಕೆಲವು ಋಷಿಕೆಯರು: (....ಮುಂದುವರಿದುದು)

ಇಂದ್ರಮಾತಾ: ಹತ್ತನೆಯ ಮಂಡಲದ ೧೫೩ ನೇ ಸೂಕ್ತದ ಋಷಿಕೆ. ಕೇವಲ ಐದು ಮಂತ್ರಗಳಿರುವ ಸೂಕ್ತ ಇಂದ್ರಪರಕವಾಗಿದೆ.
ಶಿಖಂಡಿನೀ: ಕಶ್ಯಪಮುನಿಯ ಕುವರಿಯರಾದ ಶಿಖಂಡಿನಿಯರು ಒಂಭತ್ತನೆಯ ಮಂಡಲದ ೧೦೪ನೇ ಸೂಕ್ತದ ದ್ರಷ್ಟಾರರು. ಈ ಸೂಕ್ತ ಪವಮಾನ ಸೋಮನ ಪರಕವಾಗಿದೆ.
ಸೂರ್ಯಾ ಸಾವಿತ್ರೀ : ಸೂರ್ಯನ ಮಗಳು ಹಾಗೂ ಪ್ರಜಾಪತಿಯಿಂದ ಪಾಲಿತಳಾದವಳು. ಋಗ್ವೇದದ ಹತ್ತನೆಯ ಮಂಡಲದ ೮೫ ನೆಯ ಸೂಕ್ತದಲ್ಲಿ ಇವಳ ವಿವಾಹದ ವರ್ಣನೆಯಿದೆ. ವಿವಾಹ ಸಮಯದಲ್ಲಿ ಸೋಮನು ಇವಳಿಗೆ ಮೂರೂ ವೇದಗಳನ್ನು ಕೊಟ್ಟನು. ವಿವಾಹದಲ್ಲಿ ಬಳಸುವ ಪ್ರಸಿದ್ಧ ಮಂತ್ರಗಳು ಈ ಸೂಕ್ತದಲ್ಲಿವೆ. ಪಾಣಿಗ್ರಹಣ ಕಾಲದಲ್ಲಿ ವರನು ಹೇಳುವ ’ಗೃಭ್ಣಾಮಿ ತೇ ಸೌಭಗತ್ವಾಯ ಹಸ್ತಂ’ ಎಂಬ ಮಂತ್ರ ಇದೇ ಸೂಕ್ತದ್ದು. ವಧುವು ಸುಮಂಗಲಿಯಾಗಿದ್ದಾಳೆ. ಇವಳಿಗೆ ಸೌಭಾಗ್ಯವನ್ನು ನೀಡಿ ಎಂದು ಪ್ರಾರ್ಥಿಸುವ ’ಸುಮಂಗಲೀರಿಯಂ ವಧೂ: ಸಮೇತ ಪಶ್ಯತ’ ಎಂಬ ಮಂತ್ರವೂ ಇದೆ. ಕೊನೆಯ ಮಂತ್ರ ’ಸಮ್ರಾಜ್ಞೀ ಶ್ವಶುರೇ ಭವ, ಸಮ್ರಾಜ್ಞೀ ಶ್ವಶ್ರ್ವಾಂ ಭವ’ ಎಂಬ ಮಂತ್ರದ್ತಲ್ಲಂತೂ ಗಂಡನ ಮನೆಯಲ್ಲಿ ವಧುವು ಮಾವ, ಅತ್ತೆ ಮೈದುನರು ಹಾಗೂ ನಾದಿನಿಯರ ಮನವನ್ನು ಗೆದ್ದು ಸಾಮ್ರಾಜ್ಞಿಯಾಗಿ ಮೆರೆಯಲಿ ಎಂಬ ಉನ್ನತ ಆಶಯ ವ್ಯಕ್ತವಾಗಿದೆ.

ಬೃಹದ್ದೇವತಾ ಎಂಬ ಗ್ರಂಥದ ಎರಡನೆಯ ಅಧ್ಯಾಯದಲ್ಲಿ ವೇದಕಾಲದ ಋಷಿಕೆಯರ ಯಾದಿಯನ್ನು ಕೊಡಲಾಗಿದೆ.
ಘೋಷಾ ಗೋಧಾ ವಿಶ್ವವಾರಾ ಅಪಾಲೊಪನಿಷನ್ನಿಷತ್ |
ಬ್ರಹ್ಮಜಾಯಾ ಜುಹುರ್ನಾಮ ಅಗಸ್ತ್ಯಸ್ಯ ಸ್ವಸಾದಿತಿ ||
ಇಂದ್ರಾಣೀ ಚೇಂದ್ರಮಾತಾ ಚ ಸರಮಾ ರೋಮಶೋರ್ವಶೀ |
ಲೋಪಾಮುದ್ರಾ ಚ ನದ್ಯಶ್ಚ ಯಮೀ ನಾರೀ ಚ ಶಶ್ವತೀ ||
ಶ್ರೀರ್ಲಾಕ್ಷಾ ಸಾರ್ಪರಾಜ್ಞೀ ವಾಕ್ ಶ್ರದ್ಧಾ ಮೇಧಾ ಚ ದಕ್ಷಿಣಾ |
ರಾತ್ರೀ ಸೂರ್ಯಾ ಚ ಸಾವಿತ್ರೀ ಬ್ರಹ್ಮವಾದಿನ್ಯ ಈರಿತಾ: ||

ಇವರಲ್ಲಿ ಶ್ರೀ, ಲಾಕ್ಷಾ, ಮೇಧಾ ಮುಂತಾದ ಋಷಿಕೆಯರ ಬಗ್ಗೆ ಮಾಹಿತಿ ಸಿಗಲಿಲ್ಲ. ಹುಡುಕಿ ಮುಂದೆ ಬರೆಯುತ್ತೇನೆ.


ಮಹಾಬಲ ಭಟ್, ಗೋವಾ

ವೇದಕಾಲದ ಕೆಲವು ಋಷಿಕೆಯರು: (....ಮುಂದುವರಿದುದು)

ಮಹಿಳಾ ದಿನಾಚರಣೆ ನಿಮಿತ್ತ ವಿಶಿಷ್ಟ ಲೇಖನ ಸರಣಿ:

“ಸನಾತನ ಭಾರತದ ಸ್ತ್ರೀರತ್ನಗಳು”

ಭಾಗ – ೨೬

ವೇದಕಾಲದ ಕೆಲವು ಋಷಿಕೆಯರು: (....ಮುಂದುವರಿದುದು)

ವೈವಸ್ವತೀ ಯಮೀ: ಸೂರ್ಯ ಮತ್ತು ಸರಣ್ಯೂ ದೇವಿಯರ ಮಕ್ಕಳು ಯಮ ಮತ್ತು ಯಮೀ. ಋಗ್ವೇದದ ೧೦ ನೆಯ ಮಂಡಲದ ಹತ್ತನೆಯ ಸೂಕ್ತ ಇವರ ಸಂವಾದವನ್ನು ಹೊಂದಿದೆ. ಇಲ್ಲಿ ಯಮೀ ತನ್ನ ಸೋದರನಾದ ಯಮನಿಂದಲೇ ತನ್ನ ಕಾಮವನ್ನು ಪೂರ್ತಿಗೊಳಿಸಿಕೊಳ್ಳುವ ಇಚ್ಛೆಯನ್ನು ವ್ಯಕ್ತಪಡಿಸುತ್ತಾಳೆ. ಆದರೆ ಯಮನು ಅದಕ್ಕೆ ಒಪ್ಪದೆ ಅಣ್ಣ ತಂಗಿಯರ ದೈಹಿಕ ಸಂಬಂಧ ಅಪ್ರಾಕೃತಿಕವಾದದ್ದು ಎಂದು ಪ್ರತಿಪಾದಿಸಿ ಅವಳನ್ನು ಸುಮ್ಮನಾಗಿಸುತ್ತಾನೆ. ಹತ್ತನೆಯ ಮಂಡಲದ ೧೫೪ ನೇ ಸೂಕ್ತದ ಋಷಿಕೆಯೂ ಈ ಯಮೀ.

ರಾತ್ರಿ: ಹತ್ತನೆಯ ಮಂಡಲದ ೧೨೭ ನೇ ಸೂಕ್ತ ೮ ಮಂತ್ರಗಳನ್ನು ಹೊಂದಿದ್ದು ರಾತ್ರಿಸೂಕ್ತವೆಂದು ಪ್ರಸಿದ್ಧವಾಗಿದೆ. ಇದರ ಋಷಿಕೆಯ ಹೆಸರೂ ರಾತ್ರಿ. ಅವಳು ಭರದ್ವಾಜ ಮುನಿಯ ಮಗಳಾಗಿದ್ದಳು.

ಸರಮಾ: ಇದು ದೇವಲೋಕದ ಹೆಣ್ಣು ನಾಯಿಯ ಹೆಸರು. ಹತ್ತನೆಯ ಮಂಡಲದ ೧೦೮ ನೇ ಸೂಕ್ತದಲ್ಲಿ ಈ ನಾಯಿಯ ವಿಕ್ರಮ ವರ್ಣಿತವಾಗಿದೆ. ಇವಳನ್ನೇ ಈ ಸೂಕ್ತದ ಋಷಿಕೆ ಎಂತಲೂ ಹೇಳಲಾಗಿದೆ.ಈ  ಸೂಕ್ತದಲ್ಲಿ ಬರುವ ಘಟನೆ ಕುತೂಹಲಕಾರಿಯಾಗಿದೆ. ಪತ್ತೇದಾರಿಕೆಗೆ ನಾಯಿಯನ್ನು ಬಳಸಿಕೊಳ್ಳುವ ವಿಧಾನ ಋಗ್ವೇದಕಾಲದಲ್ಲಿಯೇ ಇತ್ತು ಎಂದು ಈ ಸೂಕ್ತದಿಂದ ಕಂಡುಬರುತ್ತದೆ. ಆಂಗಿರಸರಿಗೆ ಸಂಬಂಧಿಸಿದ ಗೋವುಗಳನ್ನು ಫಣಿಗಳೆಂಬ ಕಳ್ಳರು ಅಪಹರಿಸಿ ಗುಹೆಯಲ್ಲಿ ಅಡಗಿಕೊಂಡಾಗ ಅವರು ಇಂದ್ರನಿಗೆ ಮೊರೆಯಿಡುತ್ತಾರೆ. ಇಂದ್ರ ಕಳ್ಳರನ್ನು ಕಂಡುಹಿಡಿಯಲು ಸುಪರ್ಣನೆಂಬ ಪಕ್ಷಿಯನ್ನು ಕಳಿಸುತ್ತಾನೆ. ಆದರೆ ಫಣಿಗಳ ಎಂಜಲು ಕಾಸಿಗೆ ಕೈಯ್ಯೊಡ್ಡಿದ ಸುಪರ್ಣ ಇಂದ್ರನಿಗೆ ವಿಶ್ವಾಸದ್ರೋಹವನ್ನು ಮಾಡುತ್ತಾನೆ. ನಂತರ ಇಂದ್ರ ಸರಮೆಗೆ ಈ ಕೆಲಸವನ್ನು ಒಪ್ಪಿಸಿದಾಗ ತನ್ನ ಮರಿಗಳಿಗೆ ಆ ಆಕಳ ಹಾಲನ್ನು ನೀಡಬೇಕೆಂದು ಕೇಳಿಕೊಳ್ಳುತ್ತಾಳೆ. ಬಹಳ ಚಾಕಚಕ್ಯತೆಯಿಂದ ಫಣಿಗಳ ಇರವನ್ನು ಸರಮೆ ಕಂಡು ಹಿಡಿಯುತ್ತಾಳೆ. ಫಣಿಗಳು ಅವಳನ್ನು ’ನೀನು ನಮ್ಮ ಸೋದರಿಯಾಗು. ಇಂದ್ರನನ್ನು ಮರೆ’ ಎಂದು ಆಮಿಷ ಒಡ್ಡುತ್ತಾರೆ. ಆದರೆ ಸರಮೆ ಅದಕ್ಕೆ ಕಿವಿಗೊಡದೆ ಅವರ ತಾವನ್ನು ಇಂದ್ರನಿಗೆ ತಿಳಿಸುತ್ತಾಳೆ. ಇಂದ್ರನು ಫಣಿಗಳನ್ನು ನಾಶಮಾಡಿ ಗೋವುಗಳನ್ನು ರಕ್ಷಿಸುತ್ತಾನೆ. ಹೀಗೆ ಸರಮೆ ವಿಶ್ವಾಸಪಾತ್ರ ಪತ್ತೇದಾರಳಾಗಿ ಪ್ರಸಿದ್ಧಳಾಗಿದ್ದಾಳೆ. ಇಂದಿಗೂ ಅವಳ ಸಂತಾನವಾದ ’ಸಾರಮೇಯ’ ಅಂದರೆ ನಾಯಿಗಳು ಯಜಮಾನನಿಗೆ ನಿಷ್ಠವಾಗಿರುತ್ತವೆ ಹಾಗೂ ಅಪರಾಧ ಪತ್ತೆ ಮಾಡುವಲ್ಲಿ ನಿಷ್ಣಾತವಾಗಿವೆ.
(ಮುಂದುವರಿಯುವುದು........)


ಮಹಾಬಲ ಭಟ್, ಗೋವಾ

Saturday, March 25, 2017

ವೇದಕಾಲದ ಕೆಲವು ಋಷಿಕೆಯರು: (....ಮುಂದುವರಿದುದು)

ಮಹಿಳಾ ದಿನಾಚರಣೆ ನಿಮಿತ್ತ ವಿಶಿಷ್ಟ ಲೇಖನ ಸರಣಿ:

“ಸನಾತನ ಭಾರತದ ಸ್ತ್ರೀರತ್ನಗಳು”

ಭಾಗ – 25

ವೇದಕಾಲದ ಕೆಲವು ಋಷಿಕೆಯರು: (....ಮುಂದುವರಿದುದು)

ಉರ್ವಶಿ: ಋಗ್ವೇದದಲ್ಲಿರುವ ಅನೇಕ ಸಂವಾದ ಸೂಕ್ತಗಳಲ್ಲಿ ಹತ್ತನೆಯ ಮಂಡಲದ ೯೫ ನೇ ಸೂಕ್ತವೂ ಒಂದು. ಇದರಲ್ಲಿ ಅಪ್ಸರೆ ಉರ್ವಶೀ ಹಾಗೂ ಚಂದ್ರವಂಶದ ರಾಜ ಪುರೂರವನ ಸಂವಾದವಿದೆ. ದೇವಲೋಕದ ಅಪ್ಸರೆಯಾದ ಉರ್ವಶಿ ಭೂಲೋಕಕ್ಕೆ ಬಂದಾಗ ಪುರೂರವ ಮೋಹಿತನಾಗಿ ಅವಳನ್ನು ವಿವಾಹವಾಗುತ್ತಾನೆ. ಮೂರು ಷರತ್ತುಗಳನ್ನು ವಿಧಿಸಿ ಉರ್ವಶಿ ಒಪ್ಪಿಕೊಳ್ಳುತ್ತಾಳೆ. ಅವಳ ಆಡುಗಳ ರಕ್ಷಣೆ, ಕೇವಲ ತುಪ್ಪದ ಸೇವನೆ ಮತ್ತು ಸಂಭೋಗ ಸಮಯದಲ್ಲದೆ ವಿವಸ್ತ್ರನಾಗಿ ಕಣ್ಣಿಗೆ ಬೀಳಬಾರದು ಎಂಬವೇ ಮೂರು ಷರತ್ತುಗಳು. ಅವರು ಸುಖ ದಾಂಪತ್ಯದಲ್ಲಿ ಯಯಾತಿಯೆಂಬ ಮಗನನ್ನು ಪಡೆಯುತ್ತಾರೆ. ಉರ್ವಶಿಯಿಲ್ಲದೆ ಕೊರಗುತ್ತಿದ್ದ ದೇವತೆಗಳು ಒಂದು ರಾತ್ರಿ ಅವಳ ಆಡುಗಳನ್ನು ಅಪಹರಿಸುತ್ತಾರೆ. ಅವರ ಕೂಗಿಗೆ ಎದ್ದ ಇಬ್ಬರೂ ವಿವಸ್ತ್ರವಾಗಿರುವಾಗ ಪರಸ್ಪರ ನೋಡುತ್ತಾರೆ. ನಿಯಮಭಂಗವಾದ ಕಾರಣ ಉರ್ವಶಿ ಸ್ವರ್ಗಕ್ಕೆ ನಡೆಯುತ್ತಾಳೆ.

ವಸುಕ್ರಪತ್ನಿ: ಇಂದ್ರನ ಮಗನಾದ ವಸುಕ್ರ ಎನ್ನುವವನ ಮಗಳು ಇವಳು. ಹತ್ತನೆಯ ಮಂಡಲದ ಇಪ್ಪತ್ತೆಂಟನೆಯ ಸೂಕ್ತದ ಋಷಿಕೆ. ಹನ್ನೆರಡು ಮಂತ್ರಗಳನ್ನು ಹೊಂದಿರುವ ಈ ಸೂಕ್ತದಲ್ಲಿ ಇಂದ್ರನ ಹಾಗೂ ವಸುಕ್ರನ ಸ್ತುತಿಯಿದೆ.

ಇಂದ್ರಾಣಿ: ಹತ್ತನೆಯ ಮಂಡಲದ ೮೬ ನೇ ಸೂಕ್ತದ ಋಷಿಕೆ. ಇಂದ್ರಪರಕವಾದ ಈ ಸೂಕ್ತದಲ್ಲಿ ಹತ್ತು ಮಂತ್ರಗಳು ಇಂದ್ರಾಣಿಯವು.
(ಮುಂದುವರಿಯುವುದು......)

ಮಹಾಬಲ ಭಟ್, ಗೋವಾ

Friday, March 24, 2017

ವೇದಕಾಲದ ಕೆಲವು ಋಷಿಕೆಯರು: (....ಮುಂದುವರಿದುದು)

ಮಹಿಳಾ ದಿನಾಚರಣೆ ನಿಮಿತ್ತ ವಿಶಿಷ್ಟ ಲೇಖನ ಸರಣಿ:

“ಸನಾತನ ಭಾರತದ ಸ್ತ್ರೀರತ್ನಗಳು”

ಭಾಗ – ೨೪

ವೇದಕಾಲದ ಕೆಲವು ಋಷಿಕೆಯರು: (....ಮುಂದುವರಿದುದು)

ಸುದಿತಿ: ಎಂಟನೆಯ ಮಂಡಲದ ೭೧ನೆಯ ಸೂಕ್ತ. ಆಂಗಿರಸ, ಪುರುಮೀಳ ಋಷಿಗಳೊಂದಿಗೆ ಸುದಿತಿಯು ಕೂಡ ಈ ಸೂಕ್ತದ ಋಷಿಪಟ್ಟವನ್ನಲಂಕರಿಸಿದ್ದಾಳೆ. ೧೫ ಮಂತ್ರಗಳ ಈ ಸೂಕ್ತ ಅಗ್ನಿಪರಕವಾಗಿದೆ.

ಜರಿತಾ: ಹತ್ತನೆಯ ಮಂಡಲದ ೧೪೨ ನೆಯ ಅಗ್ನಿಪರಕವಾದ ಸೂಕ್ತದ ದ್ರಷ್ಟಾರೆ ಜರಿತಾ. ಮಹಾಭಾರತದ ಆದಿಪರ್ವದ ೨೩೦ನೇ ಅಧ್ಯಾಯದಲ್ಲಿರುವ ಕಥೆಯ ಪ್ರಕಾರ ಜರಿತಾ ಖಾಂಡವ ವನದಲ್ಲಿರುವ ಒಬ್ಬಳು ಪಕ್ಷಿಣಿ. ಮಂದಪಾಲನೆಂಬ ಮುನಿಯಿಂದ ಅವಳಿಗೆ ನಾಲ್ಕು ಬ್ರಹ್ಮಜ್ಞಾನಿ ಮಕ್ಕಳು ಹುಟ್ಟಿದರು. ಅಗ್ನಿಯು ಖಾಂಡವವನವನ್ನು ಸುಡಲು ಬಂದಾಗ ತನ್ನ ಮಕ್ಕಳ ರಕ್ಷಣೆಗಾಗಿ ಅಗ್ನಿಯನ್ನು ಸ್ತುತಿಸುತ್ತಾಳೆ. ಈ ಸೂಕ್ತದ ಮೊದಲ ಎರಡು ಮಂತ್ರಗಳು ಮಾತ್ರ ಇವಳ ಹೆಸರಿನಲ್ಲಿವೆ.

ಸಿಕತಾ ನಿವಾವರಿ: ಒಂಭತ್ತನೆಯ ಮಂಡಲದ ೮೬ನೇ ಸೂಕ್ತದ ೧೧ ರಿಂದ ೨೦ನೆಯ ಮಂತ್ರಗಳ ಋಷಿಕೆ ಇವಳು. ಪವಮಾನ ಸೋಮ ಈ ಸೂಕ್ತದ ದೇವತೆ.

ರೋಮಶಾ: ಬೃಹಸ್ಪತಿಯ ಮಗಳು ಹಾಗೂ ಭಾವಭವ್ಯನ ಪತ್ನಿ. ವಿದುಷಿಯಾಗಿದ್ದಳು. ಇವಳ ಮೈಯೆಲ್ಲ ರೋಮದಿಂದ ಕೂಡಿದ್ದರಿಂದ ಪತಿಗೆ ಇವಳು ಇಷ್ಟವಾಗುತ್ತಿರಲಿಲ್ಲ. ಇವಳು ಮಹಿಳೆಯರ ವಿದ್ಯಾಭ್ಯಾಸದ ಬಗ್ಗೆ, ಸ್ವಾಭಿಮಾನದಿಂದ ಕೂಡಿದ ಜೀವದ ಬಗ್ಗೆ ಸಮಾಜದಲ್ಲಿ ಜಾಗೃತಿ ಮೂಡಿಸಿದಳು. ಋಗ್ವೇದದ ಪ್ರಥಮಮಂಡಲದ ೧೨೬ ನೇ ಸೂಕ್ತದ ಕೊನೆಯ ಮಂತ್ರದ ಋಷಿಕೆ ಇವಳು. ಸಾಮವೇದದ ಅನೇಕ ಸೂಕ್ತಗಳು ಇವಳ ಹೆಸರಿನಲ್ಲಿವೆ. (ಮುಂದುವರಿಯುವುದು...)


ಮಹಾಬಲ ಭಟ್, ಗೋವಾ

Thursday, March 23, 2017

ವೇದಕಾಲದ ಕೆಲವು ಋಷಿಕೆಯರು: (ಮುಂದುವರಿದುದು)

ಮಹಿಳಾ ದಿನಾಚರಣೆ ನಿಮಿತ್ತ ವಿಶಿಷ್ಟ ಲೇಖನ ಸರಣಿ:

“ಸನಾತನ ಭಾರತದ ಸ್ತ್ರೀರತ್ನಗಳು”

ಭಾಗ – 23

ವೇದಕಾಲದ ಕೆಲವು ಋಷಿಕೆಯರು: (ಮುಂದುವರಿದುದು)

ವಾಗಾಂಭ್ರಣೀ: ಅಂಭ್ರಣ ಋಷಿಯ ಕುವರಿ ವಾಕ್ ಹತ್ತನೆಯ ಮಂಡಲದ ೧೨೫ ನೇ ಸೂಕ್ತದ ಋಷಿಕೆ. ಅತ್ಯುನ್ನತ ಅದ್ವೈತತತ್ತ್ವವನ್ನು ಸಾಧಿಸಿದ್ದ ಈ ಬ್ರಹ್ಮವಾದಿನಿ ಸಚ್ಚಿತ್ಸುಖಾತ್ಮಕವಾದ ಪರಮಾತ್ಮನೊಂದಿಗೆ ತಾದಾತ್ಮ್ಯವನ್ನನುಭವಿಸುತ್ತ ತನ್ನನ್ನೇ ತಾನು ಸ್ತುತಿಸಿಕೊಳ್ಳುತ್ತಾಳೆ. ತಾನೇ ಮರುತ್, ಮಿತ್ರ, ರುದ್ರ ಎಂದೆಲ್ಲ ವರ್ಣಿಸುತ್ತ ಆತ್ಮ ಸರ್ವವನ್ನೂ ವ್ಯಾಪಿಸಿದೆ ಎಂಬ ಅದ್ವೈತ ತತ್ತ್ವವನ್ನು ಸಾರುತ್ತಾಳೆ.

ಶ್ರದ್ಧಾ ಕಾಮಾಯನೀ: ಋಗ್ವೇದದ ಹತ್ತನೆಯ ಮಂಡಲದ ೧೫೧ ನೇ ಸೂಕ್ತದ ದೇವತೆ ಶ್ರದ್ಧಾ. ಐದು ಮಂತ್ರಗಳ ಈ ಸೂಕ್ತದ ಋಷಿಕೆ ಶ್ರದ್ಧಾ ಕಾಮಾಯನೀ. ಜ್ಞಾನ ಸಂಪಾದನೆಯಲ್ಲಿ, ದಾನದಲ್ಲಿ, ಕೆಲಸದಲ್ಲಿ ಹೀಗೆ ಜೀವನದ ಪ್ರತಿಯೊಂದು ಕ್ಷಣದಲ್ಲೂ ಶ್ರದ್ಧೆ ಬೇಕು ಎಂಬುದನ್ನು ಭಗವದ್ಗೀತಾದಿಯಾಗಿ ಅನೇಕ ಗ್ರಂಥಗಳು ಹೇಳಿವೆ. ಈ ಸೂಕ್ತದಲ್ಲಿ ಋಷಿಕೆಯು ಅದನ್ನೇ ಹೇಳುತ್ತಾಳೆ. ಬೆಳಿಗ್ಗೆ, ಮಧ್ಯಾಹ್ನ, ಸಂಜೆ ಹೀಗೆ ಎಲ್ಲ ಕಾಲದಲ್ಲಿಯೂ ಶ್ರದ್ಧಾದೇವಿಯ ಅನುಗ್ರಹವಾಗಲಿ ಎಂದು ಬೇಡಿಕೊಳ್ಳುತ್ತಾಳೆ.


ಸರ್ಪರಾಜ್ಞೀ: ಋಗ್ವೇದದ ಹತ್ತನೆಯ ಮಂಡಲದ ೧೮೯ ನೇ ಸೂಕ್ತದ ಋಷಿಕೆ ಸರ್ಪರಾಜ್ಞೀ. ಸೂರ್ಯದೇವತಾಪರಕವಾದ ಇ ಸೂಕ್ತದಲ್ಲಿ ಗಾಯತ್ರಿ ಛಂದಸ್ಸಿನ ಮೂರು ಋಕ್ಕುಗಳು ಮಾತ್ರ ಇವೆ. ಈ ಸೂಕ್ತ ಇತರ ವೇದಗಳಲ್ಲಿಯೂ ಕಾಣಸಿಗುತ್ತದೆ.

ಮಹಾಬಲ ಭಟ್, ಗೋವಾ

Wednesday, March 22, 2017

ವೇದಕಾಲದ ಕೆಲವು ಋಷಿಕೆಯರು:

ಮಹಿಳಾ ದಿನಾಚರಣೆ ನಿಮಿತ್ತ ವಿಶಿಷ್ಟ ಲೇಖನ ಸರಣಿ:

“ಸನಾತನ ಭಾರತದ ಸ್ತ್ರೀರತ್ನಗಳು”

ಭಾಗ – ೨೨

ವೇದಕಾಲದ ಕೆಲವು ಋಷಿಕೆಯರು:

ವೇದದೃಷ್ಟಾರರಾದ ಕೆಲವು ಋಷಿಕೆಯರ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಿಲ್ಲ. ಲಭ್ಯವಿರುವ ಮಾಹಿತಿಯನ್ನು ಇಲ್ಲಿ ಸಂಗ್ರಹಿಸಿ ಕೊಡಲಾಗಿದೆ.
ಶಾಶ್ವತಿ ಆಂಗೀರಸಿ: ಆಂಗೀರಸ ಗೋತ್ರದ ಋಷಿಕೆ ಇವಳು. ೮ನೆಯ ಮಂಡಲದ ೧ನೆಯ ಸೂಕ್ತದ ಕೊನೆಯ ಋಕ್ಕಿನ ಋಷಿಕೆ. ಇವಳ ಗಂಡನ ಪುರುಷತ್ವ ಯಾವುದೋ ಕಾರಣದಿಂದ ನಾಶವಾಗಿತ್ತು. ಇಂದ್ರನ ಪ್ರಾರ್ಥನೆಯಿಂದ ಅವನು ಅದನ್ನು ಮರಳಿ ಪಡೆದಾಗ ಶಾಶ್ವತಿ ಆನಂದ ಹೊಂದಿದಳು ಎಂಬ ವಿಚಾರ ಈ ಋಕ್ಕಿನಲ್ಲಿದೆ.
ಅದಿತಿ: ನಾಲ್ಕನೆಯ ಮಂಡಲದ ೧೮ ನೇ ಸೂಕ್ತದ ೭ನೇ ಋಕ್ಕಿನ ದೃಷ್ಟಾರಳು. ಇಲ್ಲಿ ’ನನ್ನ ಮಗನಾದ ಇಂದ್ರನು ವಜ್ರಾಯುಧದಿಂದ ವೃತ್ರಾಸುರನನ್ನು ಕೊಂದು ನದಿಗಳು ಸ್ವತಂತ್ರವಾಗಿ ಹರಿಯುವಂತೆ ಮಾಡಿದನು’ ಎಂದು ಹೇಳಿದ್ದಾಳೆ. ಪ್ರಾಯ: ಕಶ್ಯಪ ಋಷಿಯ ಹೆಂಡತಿ ಹಾಗೂ ದೇವತೆಗಳ ಅಥವಾ ಆದಿತ್ಯರ ತಾಯಿಯಾದ ಅದಿತಿಯೇ ಇವರಿಳಬೇಕು.
ಅದಿತಿ ದಾಕ್ಷಾಯಣಿ: ಹತ್ತನೆಯ ಮಂಡಲದ ೭೨ ನೆಯ ಸೂಕ್ತದ ಋಷಿಕೆ. ಈ ಸೂಕ್ತ ಸೃಷ್ಟಿಯ ಕ್ರಮವನ್ನು ವರ್ಣಿಸುತ್ತದೆ. ದಕ್ಷ ಪ್ರಜಾಪತಿಯಿಂದ ಅದಿತಿ ಹುಟ್ಟಿದಳೆಂದೂ ಅವಳಿಂದ ದೇವತೆಗಳೆಲ್ಲ ಹುಟ್ಟಿದರು ಎಂದು ವರ್ಣಿಸಲಾಗಿದೆ.
ಗೋಧಾ: ಹತ್ತನೆಯ ಮಂಡಲದ ೧೩೪ನೇ ಸೂಕ್ತದ ೬ ಮತ್ತು ೭ನೆಯ ಋಕ್ಕುಗಳು ಇವಳ ಹೆಸರಿನಲ್ಲಿದೆ. ಇದು ಇಂದ್ರನನ್ನು ಹೊಗಳುವ ಹಾಗೂ ಪ್ರಾರ್ಥಿಸುವ ಸೂಕ್ತ.
ಪ್ರಾಜಾಪತ್ಯಾ ದಕ್ಷಿಣಾ: ಹತ್ತನೆಯ ಮಂಡಲದ ೧೦೭ ನೇ ಸೂಕ್ತದ ಋಷಿಕೆ. ದಕ್ಷಿಣೆಯ ಮಹತ್ತ್ವವನ್ನು ವರ್ಣಿಸಿದ್ದಾಳೆ.
                                                                             ..... ಮುಂದುವರಿಯುವುದು

ಮಹಾಬಲ ಭಟ್, ಗೋವಾ

Tuesday, March 21, 2017

ಶಚೀ ಪೌಲೋಮಿ

ಮಹಿಳಾ ದಿನಾಚರಣೆ ನಿಮಿತ್ತ ವಿಶಿಷ್ಟ ಲೇಖನ ಸರಣಿ:

“ಸನಾತನ ಭಾರತದ ಸ್ತ್ರೀರತ್ನಗಳು”

ಭಾಗ – ೧೯

ಶಚೀ ಪೌಲೋಮಿ

ಇವಳೊಬ್ಬಳು ಸ್ವಾಭಿಮಾನಿ ಋಷಿಕೆ. ಇವಳಿಂದ ಪ್ರಣೀತವಾದ ಶಚೀದೇವಿಯ ಕುರಿತಾದ ಋಗ್ವೇದ ಸೂಕ್ತದಲ್ಲಿ (೧೦ಮಂಡಲ,೧೫೯ಸೂಕ್ತ) ಅವಳ ಆತ್ಮಗೌರವ, ಜೀವನೋತ್ಸಾಹ, ಆತ್ಮವಿಶ್ವಾಸ, ತನ್ನ ಸಾಮರ್ಥ್ಯದ ಮೇಲೆ ಇರುವ ನಂಬಿಕೆ ಇವು ತುಂಬಿ ತುಳುಕುತ್ತಿವೆ. ’ಅಹಂ ಕೇತುರಹಂ ಮೂರ್ಧಾ ಅಹಮುಗ್ರಾ ವಿವಾಚನೀ’ – ನಾನು ಮನೆಯ ಪತಾಕೆ, ನಾನು ಮನೆಯ ತಲೆ(ಮುಖ್ಯಸ್ಥೆ-ಬುದ್ಧಿವಂತೆ) ನಾನು ಅನ್ಯಾಯದ ವಿರುದ್ಧ ಉಗ್ರಳು. ನಾನು ವಿವೇಚನ ಶಕ್ತಿಯುಳ್ಳವಳು. ನನ್ನ ನಿರ್ಧಾರವನ್ನು ನನ್ನ ಪತಿ ಬೆಂಬಲಿಸುತ್ತಾನೆ ಎಂದ ಅವಳ ಹಮ್ಮಿಗೆ ಇನ್ನೇನು ಸಾಕ್ಷಿ ಬೇಕು.

ಗಂಡು ಮಕ್ಕಳು ಒಳ್ಳೆಯವರೇ. ಅದರೆ ಹೆಣ್ಣುಮಕ್ಕಳೇನೂ ಕಡಿಮೆಯಲ್ಲ ಎಂದು ಅವಳು ಈ ಸೂಕ್ತದಲ್ಲಿ ಸ್ಪಷ್ಟವಾಗಿ ಹೇಳಿದ್ದಾಳೆ. ’ಮಮ ಪುತ್ರಾ: ಶತ್ರುಹಣೋಥೋ ಮಮ ದುಹಿತಾ ವಿರಾಟ್’ – ನನ್ನ ಗಂಡು ಮಕ್ಕಳು ಶತ್ರು ಸಂಹಾರಕರು. ನನ್ನ ಹೆಣ್ಣು ಮಕಳು ವಿರಾಟ್ ಸ್ವರೂಪದವರು. ನಾನು ಶತ್ರುವನ್ನು ಗೆದ್ದವಳು ಹಾಗಾಗಿ ನನ್ನ ಪತಿಯೂ ನನ್ನನ್ನು ಗೌರವಿಸುತ್ತಾನೆ ಎಂದು ಅವಳು ಹೆಮ್ಮೆಯಿಂದ ಹೇಳಿಕೊಳ್ಳುತ್ತಾಳೆ. ತ್ಯಾಗ, ಶಾಂತಿ, ಸಹನೆಗಳು ಹೆಣ್ಣಿನ ಹುಟ್ಟುಗುಣಗಳೇ ಆಗಿದ್ದರೂ ಅವು ದುರುಪಯೋಗಕ್ಕೆ ಒಳಗಾಗಬಾರದು ಎಂಬುದು ಅವಳ ಆಶಯ. ಹೆಣ್ಣು ಯಾವಾಗಲು ತಗ್ಗಿ ಬಗ್ಗಿಯೇ ನಡೆಯಬೇಕಿಲ್ಲ. ತಲೆ ಎತ್ತಿ ನಡೆಯಬಹುದು ಎಂದು ಅವಳು ಬಲವಾಗಿ ಪ್ರತಿಪಾದಿಸಿದ್ದಾಳೆ.


ಮಹಿಳೆಯರ ಸ್ವಾಭಿಮಾನವನ್ನು ಜಾಗ್ರತಗೊಳಿಸಿದ ಮೊದಲ ನಾರಿ ಎಂಬ ಬಿರುದನ್ನು ಶಚೀ ಪೌಲೋಮಿಗೆ ಕೊಡಬಹುದು. ವಿವಾಹ ಸಮಯದಲ್ಲಿ ಈ ಸೂಕ್ತವನ್ನು ವಧುವು ಪಠಿಸುವ ಪರಿಪಾಠವಿತ್ತು. ಇಂದಿಗೂ ವೈದಿಕ ಸಂಪ್ರದಾಯದ ಮದುವೆಯಲ್ಲಿ ಮದುವೆಗಿಂತ ಮುಂಚೆ ವಧುವಿನಿಂದ ಶಚೀಪೂಜೆಯನ್ನು ಮಾಡಿಸುತ್ತಾರೆ. ಆಗ ಇದೇ ಸೂಕ್ತದ ಪಠನೆಯಾಗುತ್ತದೆ. ಆ ವಧುವು ತನ್ನ ಗಂಡನ ಮನೆಯಲ್ಲಿ ಸ್ವಾಭಿಮಾನಿಯಾಗಿ ಬಾಳಲಿ ಎಂಬ ಉದ್ದೇಶ ಈ ಪೂಜೆಯ ಹಿಂದಿದೆ. ಪೂಜೆಯ ಸಮಯದಲ್ಲಿ ಇದನ್ನು ವಧುವಿಗೆ ತಿಳಿಸಿಕೊಟ್ಟರೆ ನಿಜಕ್ಕೂ ಅವಳ ಆತ್ಮವಿಶ್ವಾಸ ವರ್ಧಿಸೀತು.

ಮಹಾಬಲ ಭಟ್, ಗೋವಾ

ಇತರಾ

ಮಹಿಳಾ ದಿನಾಚರಣೆ ನಿಮಿತ್ತ ವಿಶಿಷ್ಟ ಲೇಖನ ಸರಣಿ:

“ಸನಾತನ ಭಾರತದ ಸ್ತ್ರೀರತ್ನಗಳು”

ಭಾಗ – ೨೧

ಇತರಾ

ಹಾರೀತ ವಂಶದ ಮಾಂಡುಕೀ ಎಂಬ ಋಷಿಯ ಪತ್ನಿಯಾಗಿದ್ದಳು ಇತರಾ. ಅವಳು ಅಷ್ಟೇನೂ ಅಧ್ಯಯನ ಮಾಡದ ಮುಗ್ಧೆಯಾಗಿದ್ದಳು. ಆದರೂ ಗೃಹಸಂಸ್ಕಾರಾದಿ ವಿಷಯವನ್ನು ಚೆನ್ನಾಗಿಯೇ ತಿಳಿದಿದ್ದಳು. ಗೃಹಿಣಿಯಾಗಿ ಮನೆಯನ್ನು ಮುನ್ನಡೆಸಿಕೊಂಡು ಹೋಗುತ್ತಿದ್ದಳು. ಗಂಡ-ಹೆಂಡತಿ ಪರಸ್ಪರ ಅರಿತುಕೊಂಡು ಸುಖಜೀವನವನ್ನು ನಡೆಸುತ್ತಿದ್ದರು. ಅವರಿಗೆ ಹುಟ್ಟಿದ ಒಬ್ಬನೇ ಮಗನಿಗೆ ಮಹೀದಾಸ ಎಂದು ಹೆಸರಿಟ್ಟಿದ್ದರು. ಮಹೀದಾಸ ಯಾವಾಗಲೂ ಮೌನವಾಗಿರುತ್ತಿದ್ದ. ಉಪನೀತನಾದರೂ ಅವನ ಬಾಯಿಂದ ’ಓಂ ಓಂ ನಮೋ ಭಗವತೇ ವಾಸುದೇವಾಯ’ ಎಂಬ ದ್ವಾದಶಾಕ್ಷರಿ ಮಂತ್ರವನ್ನು ಬಿಟ್ಟರೆ ಮತ್ತೇನೂ ಹೊರಬರುತ್ತಿರಲಿಲ್ಲ. ಹಾಗಾಗಿ ಯಾವುದೇ ರೀತಿಯ ಅಧ್ಯಯನ ನಡೆಯಲಿಲ್ಲ. ಮಾಂಡುಕಿ ಮುನಿಗೆ ಪುತ್ರನ ಮೇಲೆ ಜುಗುಪ್ಸೆ ಮೂಡಿತು. ಅವನನ್ನು ಹೆತ್ತ ಇತರಾಳ ವಿಷಯದಲ್ಲೂ ಅನಾದರವನ್ನು ತೋರಲಾರಂಭಿಸಿದ. ಇತರಾ ತನ್ನ ಮಗನಿಗೆ ಸಂಸ್ಕಾರ ಕೊಡುವುದನ್ನು ತಪ್ಪಿಸಲಿಲ್ಲ. ಮಾಂಡೂಕಿಯು ಕಾಲಕ್ರಮದಲ್ಲಿ ಪಿಂಗಾ ಎನ್ನುವ ಇನ್ನೊಬ್ಬ ಮಹಿಳೆಯನ್ನು ಮದುವೆಯಾದ. ಅವಳಲ್ಲಿ ಹುಟ್ಟಿದ ನಾಲ್ಕು ಮಂದಿ ಗಂಡುಮಕ್ಕಳು ವೇದವಿದ್ಯಾ ಸಂಪನ್ನರಾದರು. ಇತರಾ ಹಾಗೂ ಮಹೀದಾಸನ ವಿಷಯದಲ್ಲಿ ಅವನ ಅನಾದರ ಹೆಚ್ಚಾಯಿತು. ಅವಮಾನವನ್ನು ತಡೆಯಲಾರದೆ ಇಬ್ಬರೂ ಮನೆಯನ್ನು ಬಿಟ್ಟು ಹೊರಟರು.

ಸದಾ ಕಾಲ ದ್ವಾದಶಾಕ್ಷರಿ ಮಂತ್ರವನ್ನು ಪಠಿಸುತ್ತಿದ್ದ ಮಹೀದಾಸನಿಗೆ ವಿಷ್ಣುವಿನ ಅನುಗ್ರಹವಾಯಿತು. ಗುರುಕುಲವನ್ನು ಸೇರಿ ಅವನು ವೇದವಿದ್ಯಾ ಸಂಪನ್ನನಾದ. ಗುರುವಿನ ಮಾರ್ಗದರ್ಶನದಲ್ಲಿ ಋಗ್ವೇದ ಭಾಷ್ಯವನ್ನು ಬರೆದ. ಕರ್ಮಕಾಂಡವನ್ನು ಬೋಧಿಸುವ ’ಬ್ರಾಹ್ಮಣ’ ಗ್ರಂಥವನ್ನು ರಚಿಸಿದ. ಅದನ್ನು ಆಧಾರವಾಗಿಟ್ಟುಕೊಂಡು ಹರಿಮೇಧ್ಯ ರಾಜನಿಂದ ಯಜ್ಞವನ್ನು ಮಾಡಿಸಿದ. ಯಜ್ಞದ ಕೊನೆಯಲ್ಲಿ ರಾಜ ತನ್ನ ಮಗಳನ್ನು ಅವನಿಗೆ ಮದುವೆ ಮಾಡಿಕೊಟ್ಟ.

ಮಹೀದಾಸನ ಕೃತಿಯನ್ನು ಜನರು ’ಮಹೀದಾಸ ಬ್ರಾಹ್ಮಣ’ ಎಂದು ಕರೆಯ ತೊಡಗಿದರು. ಆಗ ಮಹೀದಾಸನೆಂದ ’ಪ್ರತಿಕೂಲ ಪರಿಸ್ಥಿತಿಯಲ್ಲೂ ನನ್ನ ಬೆಂಬಲವಾಗಿ ನಿಂತು, ಪತಿಯನ್ನು ವಿರೋಧಿಸಿಯೂ ನನ್ನನ್ನು ಸಂಸ್ಕಾರವಂತನಾಗಿ ಬೆಳೆಸಿದ ನನ್ನ ಮಾತೆಗೆ ಗೌರವ ಸಿಗಲಿ. ನಾನು ಇತರಾಳ ಮಗನಾದ್ದರಿಂದ ಈ ಕೃತಿ ’ಐತರೇಯ ಬ್ರಾಹ್ಮಣ’ ಎಂದು ಕರೆಯಲ್ಪಡಲಿ’ ಎಂದ. ಮುಂದೆ ಈ ಕೃತಿ ಐತರೇಯ ಬ್ರಾಹ್ಮಣ, ಐತರೇಯ ಆರಣ್ಯಕ ಹಾಗೂ ಐತರೇಯ ಉಪನಿಷತ್ತು ಎಂದು ಮೂರು ಭಾಗವಾಗಿ ಪ್ರಸಿದ್ಧವಾಯಿತು. ಸ್ವಾಭಿಮಾನಿ, ತ್ಯಾಗಮಯಿ ಹಾಗೂ ವಾತ್ಸಲ್ಯಮಯಿ ತಾಯಿಗೆ ತಕ್ಕ ಗೌರವ ದೊರೆಯಿತು. ಇತರಾಳ ಹೆಸರು ಅಜರಾಮರವಾಯಿತು.


ಮಹಾಬಲ ಭಟ್, ಗೋವಾ

Monday, March 20, 2017

ಮದಾಲಸಾ

ಮಹಿಳಾ ದಿನಾಚರಣೆ ನಿಮಿತ್ತ ವಿಶಿಷ್ಟ ಲೇಖನ ಸರಣಿ:

“ಸನಾತನ ಭಾರತದ ಸ್ತ್ರೀರತ್ನಗಳು”

ಭಾಗ – ೨೦

ಮದಾಲಸಾ

ವಿಶ್ವಾವಸು ಮಹಾರಾಜನ ಮಗಳು ಮದಾಲಸಾ ಸರ್ವವಿದ್ಯಾಸಂಪನ್ನೆಯಾದ ಕನ್ಯೆಯಾಗಿದ್ದಳು. ವಿವಾಹಬಂಧನಕ್ಕೆ ಒಳಗಾಗದೆ ಸ್ವತಂತ್ರವಾಗಿ ಜ್ಞಾನ ವಿಜ್ಞಾನಗಳ ಅನುಸಂಧಾನವನ್ನು ಮಾಡಬೇಕೆಂಬ ಇಂಗಿತ ಅವಳಿಗಿತ್ತು. ತಾನು ಬ್ರಹ್ಮವಾದಿನಿಯಾಗಬೇಕು ಎಂಬ ಪ್ರಬಲ ಇಚ್ಛೆ ಅವಳಿಗಿತ್ತು. ಆ ಸಾಮರ್ಥ್ಯವೂ ಕೂಡ ಅವಳಿಗಿತ್ತು. ಪುರುಷನು ತನ್ನ ಪತ್ನಿಯು ತನ್ನ ಇಚ್ಛೆಯಂತೆ ನಡೆಯಬೇಕೆಂದು ಬಯಸುವುದು ಅವಳಿಗೆ ಇಷ್ಟವಿರಲಿಲ್ಲ. ಸುದೈವ ವಶದಿಂದ ಶತ್ರುಜಿತ್ ಮಹಾರಾಜನ ಮಗ ಋತಧ್ವಜಕುಮಾರ ಗೃಹಸ್ಥಾಶ್ರಮ ಪ್ರಯೋಗಶಾಲೆಯಲ್ಲಿ ತಾನು ತನ್ನ ಮಡದಿಗೆ ಸಂಪೂರ್ಣ ಸ್ವಾತಂತ್ರ್ಯವನ್ನು ನೀಡುವುದಾಗಿ ಮುಂದೆ ಬಂದ. ಮದಾಲಸಾ ಅವನ ಪ್ರಸ್ತಾಪವನ್ನು ಸ್ವೀಕರಿಸಿದಳು. ಭಾವೀ ಸಂತತಿಯನ್ನು ತನ್ನಿಚ್ಛೆಯಂತೆ ಬೆಳೆಸುವ ಅನುಮತಿಯನ್ನು ಮೊದಲೇ ಪಡೆದುಕೊಂಡಳು.
ಕಾಲಕ್ರಮೇಣ ಮದಾಲಸಾ ವಿಕ್ರಾಂತ, ಸುಬಾಹು, ಶತ್ರುಮರ್ದನ ಎಂಬ ಮೂವರು ಗಂಡುಮಕ್ಕಳಿಗೆ ತಾಯಿಯಾದಳು. ರಾಜನು ಮಕ್ಕಳಿಗೆ ಕ್ಷತ್ರಿಯೋಚಿತ ನಾಮಕರಣವನ್ನು ಮಾಡುತ್ತಿರುವಾಗ ಅವಳು ಮುಸಿ ಮುಸಿ ನಗುತ್ತಿದ್ದಳು.ರಾಜನು ಕಾರಣವನ್ನು ಕೇಳಿದಾಗ ’ವ್ಯಕ್ತಿಗಳು ತಮ್ಮ ಹೆಸರಿನಂತೆಯೇ ಇರಬೇಕೆಂದೇನೂ ಇಲ್ಲ’ ಎಂದು ಉತ್ತರಿಸಿದಳು. ಬ್ರಹ್ಮಜ್ಞಾನಿಯಾದ ಅವಳು ಮಕ್ಕಳಿಗೆ ಜೋಗುಳ ಹಾಡುವಾಗ ಕೂಡ ಬ್ರಹ್ಮತತ್ತ್ವಯುತ ಹಾಡನ್ನೇ ಹಾಡುತ್ತಿದ್ದಳು.

ಶುದ್ಧೋಸಿ ಬುದ್ಧೋಸಿ ನಿರಂಜನೋಸಿ
ಸಂಸಾರಮಾಯಾಪರಿವರ್ಜಿತೋಸಿ |
ಸಂಸಾರಸ್ವಪ್ನಂ ತ್ಯಜ ಮೋಹನಿದ್ರಾಂ
ನ ಜನ್ಮಮೃತ್ಯೂ ತತ್ಸತ್ಸ್ವರೂಪೇ ||

ಶುದ್ಧನು ನೀನು, ಬುದ್ಧನು ನೀನು, ನಿರಂಜನರೂಪನು ನೀನು. ಸಂಸಾರಮಾಯೆಯಿಂದ ಮುಕ್ತನು ನೀನು. ಸಂಸಾರ ಸ್ವಪ್ನವನು, ಮೋಹನಿದ್ರೆಯನು ಬಿಡು. ಸತ್ ಸ್ವರೂಪಕ್ಕೆ ಜನ್ಮಮೃತ್ಯುಗಳಿಲ್ಲ.

ಇಂತಹ ತತ್ತ್ವವನ್ನೇ ಕೇಳುತ್ತ ಬೆಳೆದ ಮಕ್ಕಳು ತಾಯಿಯಂತೆ ವೈರಾಗ್ಯಶಾಲಿಗಳಾದರು. ಇದನ್ನೆಲ್ಲ ನೋಡುತ್ತಿದ್ದ ಋತಧ್ವಜನಿಗೆ ಚಿಂತೆಯಾಯಿತು. ಎಲ್ಲ ಮಕ್ಕಳೂ ಹೀಗೆ ಸಂನ್ಯಾಸಿಗಳಾದರೆ ವಂಶ ಮುಂದುವರಿಯುವುದಾದರೂ ಹೇಗೆ? ಹಾಗಾಗಿ ನಾಲ್ಕನೆಯ ಮಗನಿಗೆ ವೈರಾಗ್ಯಬೋಧನೆ ಮಾಡದಂತೆ ವಿನಂತಿಸಿಕೊಂಡ. ಒಪ್ಪಿಕೊಂಡ ಮದಾಲಸಾ ಅಲರ್ಕ ನೆಂಬ ಹೆಸರಿನ ನಾಲ್ಕನೆಯ ಮಗನಿಗೆ ವೀರಗೀತೆಗಳ ಜೋಗುಳವನ್ನು ಹಾಡಿದಳು. ರಾಜನೀತಿಯನ್ನು ಬೋಧಿಸಿದಳು. ಯುದ್ಧವಿದ್ಯೆಯನ್ನು ಕಲಿಸಿದಳು. ಸಂಸಾರವನ್ನು ನಿರ್ವಹಿಸಿ ತದನಂತರ ವೈರಾಗ್ಯ ಹೊಂದುವಂತೆ ಬೋಧಿಸಿದಳು. ಅವನು ಮುಂದೆ ಅವಳ ಮಾರ್ಗದರ್ಶನದಲ್ಲಿ ಅನೇಕ ವರ್ಷಗಳ ಕಾಲ ರಾಜ್ಯಭಾರ ಮಾಡಿದ.
ಧ್ಯೇಯನಿಷ್ಠತೆ, ಆತ್ಮವಿಶ್ವಾಸ, ಸ್ವಾಭಿಮಾನಗಳ ಮೂರ್ತರೂಪವಾದ ಮದಾಲಸಾ ಸಾಧನೆಯ ಪಥದಲ್ಲಿರುವ ಮಹಿಳೆಯರಿಗೆ ಆದರ್ಶವಾಗಿ ನಿಲ್ಲುತ್ತಾಳೆ.

ಮಹಾಬಲ ಭಟ್, ಗೋವಾ

Sunday, March 19, 2017

ಮಹಾರಾಣಿ ಶಶೀಯಸೀ

ಮಹಿಳಾ ದಿನಾಚರಣೆ ನಿಮಿತ್ತ ವಿಶಿಷ್ಟ ಲೇಖನ ಸರಣಿ:

“ಸನಾತನ ಭಾರತದ ಸ್ತ್ರೀರತ್ನಗಳು”

ಭಾಗ – ೧೮

ಮಹಾರಾಣಿ ಶಶೀಯಸೀ

ಋಗ್ವೇದದಲ್ಲಿ ವರ್ಣಿಸಿರುವ ಧೀರ ನಾರಿಯರಲ್ಲಿ ಮಹಾರಾಣಿ ಶಶೀಯಸೀ ಒಬ್ಬಳು. ಸಮಾಜಸುಧಾರಕ ಮಹಿಳೆಯರಿಗೆ ಇವಳು ಆದರ್ಶ. ಶ್ಯಾವಾಶ್ವನೆಂಬ ಋಷಿಯಿಂದ ಪ್ರಣೀತವಾದ ಐದನೆಯ ಮಂಡಲದ ೬೧ನೇ ಸೂಕ್ತದಲ್ಲಿ ಇವಳ ವರ್ಣನೆಯಿದೆ. ಇವಳ ಪತಿ ತರಂತ ಮಹಾರಾಜ ವ್ಯಸನಗಳ ದಾಸನಾಗಿ ರಾಜ್ಯಭಾರವನ್ನು ಅಲಕ್ಷಿಸಿದ್ದ. ಜನರಿಗೆ ಶಿಕ್ಷಣ ಸರಿಯಾಗಿಲ್ಲದೆ ಸಮಾಜದಲ್ಲಿ ಅಜ್ಞಾನ, ದಾರಿದ್ರ್ಯಗಳು ತಾಂಡವವಾಡುತ್ತಿದ್ದವು. ಕೊಲೆ ಸುಲಿಗೆ ಮೊದಲಾದ ಸಾಮಾಜಿಕ ಪಿಡುಗುಗಳು ಹೆಚ್ಚಾಗಿದ್ದವು. ರಾಜ್ಯದ ಆದಾಯವೆಲ್ಲ ರಾಜನ ವಿಲಾಸಕ್ಕೇ ವ್ಯಯವಾಗುತ್ತಿತ್ತು. ಉದಾರಗುಣಸಂಪನ್ನಳೂ ಮಾನವತಾವಾದಿಯೂ ಆಗಿದ್ದ ಶಶೀಯಸಿ ಜನರಲ್ಲಿ ಜಾಗೃತಿ ಮೂಡಿಸಲು ಯತ್ನಿಸಿದಳು. ಮರುತ್ತುಗಳನ್ನು ಕರೆದು ಜನರಿಗೆ ವಿದ್ಯಾಭ್ಯಾಸವನ್ನು ಮಾಡಿಸುವ ಹೊಣೆಹೊರಿಸಿದಳು. ಜನರ ಸಂಘಟನೆಯನ್ನು ಮಾಡಿ ಅರಿವು ಮೂಡಿಸಲು ಪ್ರಯತ್ನಿಸಿದಳು. ಶ್ಯಾವಾಶ್ವನೆಂಬ ನಿರ್ಧನಯುವಕ ಮರುತ್ತುಗಳಿಂದ ಶಿಕ್ಷಣವನ್ನು ಪಡೆದು ರಾಜ್ಯಾದ್ಯಂತ ಮಹಾರಾಣಿ ನಡೆಸಿದ್ದ ಶಿಕ್ಷಣಕ್ರಾಂತಿಗೆ ಹೆಗಲುಕೊಟ್ಟ. ತರಂತ ಇದನ್ನೆಲ್ಲ ವಿರೋಧಿಸಿದರೂ ಜಾಗ್ರತರಾದ ಪ್ರಜೆಗಳು ದಂಗೆಯೇಳುವ ಭಯವಿದ್ದುದರಿಂದ ಸುಮ್ಮನಾದ. ಶಶೀಯಸೀ ರಾಜ್ಯಭಾರವನ್ನು ತನ್ನ ಹತೋಟಿಗೆ ತಂದುಕೊಂಡು ಪ್ರಜೆಗಳು ಸಾಮಾನ್ಯ ಆವಶ್ಯಕತೆಗಳನ್ನು ಪೂರೈಸಿದಳು. ಶ್ಯಾವಾಶ್ವನಿಗೂ ಅಪಾರವಾದ ಗೋಸಂಪತ್ತನ್ನು ದಾನಮಾಡಿದಳು. ದಾರ್ಭ್ಯನೆಂಬವ ಕುಮಾರಿಯನ್ನು ಶ್ಯಾವಾಶ್ವ ಪ್ರೀತಿಸುತ್ತಿದ್ದ. ಆದರೆ ದಾರ್ಭ್ಯನಿಗೆ ಅದು ಮನಸ್ಸಿರಲಿಲ್ಲ. ಶಶೀಯಸಿಯೇ ಮುಂದೆ ನಿಂತು ದಾರ್ಭ್ಯನನ್ನು ಓಲೈಸಿ ಮದುವೆ ಮಾಡಿಸಿದಳು. ಸುಪ್ರೀತನಾದ ಶ್ಯಾವಾಶ್ವ ತನ್ನ ಸೂಕ್ತದಲ್ಲಿ ಅವಳ ದಾನಶೀಲತೆಯನ್ನೂ ರಾಜ್ಯಭಾರ ದಕ್ಷತೆಯನ್ನೂ ಪ್ರಶಂಸಿಸಿದ್ದಾನೆ.


ಮಹಾಬಲ ಭಟ್, ಗೋವಾ

नारायण महादेव धोनि

 असङ्ख्यानां वीरयोधानां जन्मभूमिः इयं भारतमाता। अतः एव कश्चन कविः कवयति 'वन्ध्या न भारतजननी शूरसुतानां जन्मभूमिः' इति। प्रायेण सार्ध...