Tuesday, February 21, 2017

ತಿಂಗಳಿಗೊಂದು ಪುಸ್ತಕ - ೬ - ಮಳೆ ಮಾರುವ ಹುಡುಗನ ಕಥಾಸಂಕಲನ

’ಮಳೆಮಾರುವ ಹುಡುಗ’ ಇದು ಕರ್ಕಿ ಕೃಷ್ಣಮೂರ್ತಿಯವರ ಚೊಚ್ಚಲ ಕಥಾ ಸಂಕಲನ. ಸ್ವಸ್ತಿ ಪ್ರಕಾಶನದ ಉತ್ತಮ ಕಥಾ ಸಂಕಲನ ಪ್ರಶಸ್ತಿಯನ್ನು ಪಡೆದಿರುವ ಈ ಕೃತಿಯಲ್ಲಿ ಒಟ್ಟು ಒಂಭತ್ತು ಕಥೆಗಳು ಅಡಕವಾಗಿವೆ.
’ಅನಿಮಿತ್ತ’ ಎಂಬ ಮೊದಲ ಕಥೆ ಆರಂಭವಾಗುವುದು ಓಮಾನ್ ನ ರಾಜಧಾನಿ ಮಸ್ಕತ್ ನಿಂದ. ಗಲ್ಫ್ ರಾಷ್ಟ್ರಗಳ ವೈಭವೋಪೇತ ಜೀವನದ ಕಲ್ಪನೆಯೊಂದಿಗೆ ಅಲ್ಲಿಗೆ ತೆರಳಿದ ಕಥಾನಾಯಕ ಕಡುಘೋರ ಮರುಭೂಮಿಯ ನಡುವಿನ ತೈಲಸಂಸ್ಕರಣಾ ಕೇಂದ್ರದಲ್ಲಿ ಕೆಲಸಮಾಡಬೇಕಾಗಿ ಬಂದಾಗ ಅನುಭವಿಸುವ ಬವಣೆ ಮನಸ್ಸಿಗೆ ತಟ್ಟುವಂತೆ ನಿರೂಪಿಸಲ್ಪಟ್ಟಿದೆ. ಕಥೆಗೆ ರೋಚಕತೆ ಬರುವುದು ಜಗನ್ನಾಥ ಪೂಜಾರಿ ಎಂಬ ವ್ಯಕ್ತಿ ಮಸ್ಕತ್ ನಲ್ಲೆಲ್ಲೋ ಕೆಲಸ ಮಾಡುತ್ತಿರುವ ತನ್ನ ಮಗನನ್ನು ಹುಡುಕಿ ಕೊಡಲು ಸಾಧ್ಯವೆ ಎಂದು ಪತ್ರ ಬರೆದಾಗ. ಮಗನನ್ನು ಹುಡುಕದೆ ಪತ್ರಗಳ ಮೂಲಕ ತನ್ನ ಸಮಯಯಾಪನೆಗೆ ಸಹಾಯ ಮಾಡಿದ ಅಪ್ಪನನ್ನೇ ಹುಡುಕಿ ಹೋಗುವುದು ಸೋಜಿಗದ ಸಂಗತಿ ಈ ಹುಡುಕಾಟದ ಕೊನೆಯಲ್ಲಿ ಅವ್ಯಕ್ತವನ್ನು ಹುಡುಕಿ ಹೊರಟ ಆಧ್ಯಾತ್ಮಸಾಧಕನ ಸಂಭ್ರಾಂತಭಾವವೇ ಕಥಾನಾಯಕನನ್ನೂ ಆವರಿಸಿದೆ.
ಗೊರಟಪಾದಪ್ಪ ಎಂಬ ಅಂಕಿತದ ವ್ಯಕ್ತಿಯೊಬ್ಬ ತನ್ನ ಹಳ್ಳಿಗಾಡಿನ ಹೆಸರಿಂದಾಗಿ ನಾನಾ ಅವಮಾನಗಳನ್ನು ಅನುಭವಿಸಿ, ಹೆಸರು ಬದಲಾಯಿಸಿಕೊಂಡು ತಾನೇ ಕಳೆದು ಹೋದಂತಹ ಪರಿಸ್ಥಿತಿಯನ್ನು ಅನುಭವಿಸುವುದು ಎರಡನೆಯ ಕಥೆಯ ತಿರುಳು.
ಅಮೇರಿಕದ ಶ್ರವಂತಿ ಮತ್ತು ಬೆಂಗಳೂರಿನ ಚಿನ್ಮಯಿ ಎಂಬ ಎರಡು ಸಂಸ್ಕೃತಿಗಳ ಮಧ್ಯೆ ನಡೆಯುವ ಸಂವಾದ, ತಿಕ್ಕಾಟಗಳು ಮೂರನೆಯ ಕಥೆಯ ವಸ್ತು.
ಗಾರೆ ಎಂಬ ಕಥೆ ಗಾರೆ ಕೆಲಸ ಮಾಡುವ ಕೆಲಸಗಾರರ ಚಿತ್ರಣವನ್ನು ಕಟ್ಟಿಕೊಡುತ್ತದೆ. ನಿಮ್ಮ ಪಾದರಕ್ಷೆಗಳನ್ನು ಇಲ್ಲಿಗೆ ಬಿಡಿ ಎಂಬುದು ಕಥೆಗಿಂತ ಲಲಿತಪ್ರಬಂಧ ಎಂದು ಕರೆಸಿಕೊಳ್ಳಲು ಯೋಗ್ಯವಾಗಿದೆ. ಬೇರು ಅನ್ನುವ ಕಥೆ ದಾಂಡೇಲಿಯ ಅರಣ್ಯಪ್ರದೇಶದಿಂದ ಅಮೇರಿಕಕ್ಕೆ ಹಾರಿದ ಸಾಫ್ಟ್ ವೆರ್ ಇಂಜಿನಿಯರ್ ಒಬ್ಬನ ಏರು ಬೀಳುಗಳನ್ನು ಹೇಳುವ ಸಾಧಾರಣ ಕಥೆ. ಹುಡುಕಾಟ ಎಂಬುದು ಕಳೆದು ಹೋದ ಕೈಗಡಿಯಾರದ ಮೇಲೆ ಬರೆದ ಪ್ರಬಂಧದಂತಿದೆ.
ಪುಸ್ತಕದ ತಲೆಬರಹದ ಕಥೆ ’ಮಳೆ ಮಾರುವ ಹುಡುಗ’ ಸರದಿಯಲ್ಲಿ ಎಂಟನೆಯದು. ಬರಗಾಲದಲ್ಲಿ ಮಳೆ ತರುವ ಯಂತ್ರವೊಂದರಿಂದ ಮನೆಮನೆಗೆ ನೀರನ್ನು ಉತ್ಪಾದಿಸಿಕೊಡುತ್ತಿದ್ದ ಹುಡುಗನೊಬ್ಬನ ಕಥೆ. ಈ ಕಥೆ ಕೊನೆಯಾಗುವುದು ’ಸರ್! ಮಳೆ ಬರುತ್ತಿದ್ದುದು ಯಂತ್ರದಿಂದಲ್ಲ, ಮನಸ್ಸಿನಿಂದ. ಯಾಕೋ ಮಳೆ ತರಿಸಲು ಮನಸ್ಸೇ ಆಗಲಿಲ್ಲ’. ಎಂಬ ವಾಕ್ಯದಿಂದ. ಮನಸ್ಸೇ ಎಲ್ಲದಕ್ಕೂ ಕಾರಣ ಎಂಬ ಹಳೆಯ ತತ್ತ್ವವನ್ನು ಹೇಳುವುದಕ್ಕೇ ಬರೆದ ಕಥೆಯೋ ಎಂಬಂತಿದೆ. ಯಂತ್ರದಿಂದ ಮಳೆಯನ್ನು ಉತ್ಪಾದಿಸಿ ಕೊಡುತ್ತಿದ್ದುದು ಅವಾಸ್ತವಿಕ ಎನಿಸಿದ್ದರಿಂದಲೊ ಏನೊ, ಕಥೆ ನನ್ನ ಮಟ್ಟಿಗೆ ನಿಗೂಢತೆಯನ್ನು ಬಿಟ್ಟುಕೊಡಲಿಲ್ಲ.
’ಮಾಸ್ತಿಯ ದುಬೈ ನೌಕರಿ’ ಎಂಬ ಕೊನೆಯ ಕಥೆ ’ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ’ ಎಂಬ ಗಾದೆಯನ್ನು ನೆನಪಿಸುವ, ಅವಾಸ್ತವಿಕ ವರ್ಣಮಯ ಜಗತ್ತಿನ ಹಿಂದೆ ಓಡಿ ತೊಳಲಾಡುವ ಮಾಸ್ತಿ ಗೌಡ ಎಂಬ ಹಳ್ಳಿ ಹೈದನ ಕಥಾನಕ.
ಹಳ್ಳಿಯನ್ನು ಬಿಟ್ಟು ನಗರದೆಡೆಗೆ ಮುಖ ಮಾಡಿದ ಮಹತ್ತ್ವಾಕಾಂಕ್ಷಿಗಳ ಚಡಪಡಿಕೆಯೇ ಹೆಚ್ಚಿನ ಕಥೆಗಳಲ್ಲಿ ಕಾಣಸಿಗುವ ಮುಖ್ಯ ವಸ್ತು. ನಿರರ್ಗಳ ಸರಳ ಭಾಷೆ ಸಂಕಲನವನ್ನು ಆಪ್ಯಾಯಮಾನವನ್ನಾಗಿ ಮಾಡುತ್ತದೆ. ಆರಂಭದಲ್ಲಿ, ಕೃತಿಯನ್ನು ಬಹುಮಾನಕ್ಕಾಗಿ ಆಯ್ಕೆ ಮಾಡಿದ ತೀರ್ಪುಗಾರರಾದ ಡಾ. ಶ್ರೀಧರ ಬಳಗಾರ್ ಸಂಪೂರ್ಣ ಕೃತಿಯ ಚಿತ್ರಣವನ್ನು ಕಟ್ಟಿಕೊಟ್ಟಿದ್ದಾರೆ. ಜಯಂತ ಕಾಯ್ಕಿಣಿಯವರ ಸ್ಪಂದನೆಯೂ ಇದೆ. ೧೦೦ ಪುಟಗಳ ಹೊತ್ತಿಗೆಯ ಬೆಲೆ ೯೦ ರೂಪಾಯಿಗಳು. ಕುಮಟಾದ ಸ್ವಸ್ತಿ ಪ್ರಕಾಶನದ ಪ್ರಿಯದರ್ಶಿನಿ ಭಟ್ (ಮೊ: ೮೭೬೨೩೬೭೪೮೯) ರಲ್ಲಿ ಪ್ರತಿಗಳು ಲಭ್ಯ.


नारायण महादेव धोनि

 असङ्ख्यानां वीरयोधानां जन्मभूमिः इयं भारतमाता। अतः एव कश्चन कविः कवयति 'वन्ध्या न भारतजननी शूरसुतानां जन्मभूमिः' इति। प्रायेण सार्ध...