Saturday, October 19, 2013

ವಂದೇ ವಾಲ್ಮೀಕಿಕೋಕಿಲಮ್


ಅವನ ಹೆಸರು ರತ್ನಾಕರ. ವೃತ್ತಿ ದರೋಡೆ. ಅದು ನಿರ್ಜನ ಮಾರ್ಗವೇ ಆಗಲಿ, ಜನರಿಂದ ಕೂಡಿದ ದಾರಿಯೇ ಆಗಲಿ ಪಥಿಕರನ್ನು ಹೆದರಿಸಿ, ಬೆದರಿಸಿ ಅವರ ಸಂಪತ್ತನ್ನು ಅಪಹರಿಸುತ್ತಿದ್ದ. ಅವನ ಹೆಂಡತಿ ಮಕ್ಕಳದ್ದೂ ಇದಕ್ಕೆ ವಿರೋಧ ಇರಲಿಲ್ಲ. ಅವನು ತಂದ ಸಂಪತ್ತನ್ನು ಭೋಗಿಸುತ್ತಿದ್ದರು, ಖುಷಿಯಿಂದಿದ್ದರು.


ಒಂದಿನ ಒಬ್ಬ ದಾಸಯ್ಯ ದಾರಿಯಲ್ಲಿ ಹೋಗ್ತಾ ಇದ್ದ. ಅವನನ್ನೂ ಇವನು ಬಿಡಲಿಲ್ಲ. ಅಡ್ಡಗಟ್ಟಿದ, ನಿನ್ನಲ್ಲಿರುವುದನ್ನೆಲ್ಲ ತೆಗಿ ಎಂದ. ದಾಸಯ್ಯ ತನ್ನ ಸಂಪತ್ತು ತಂಬೂರಿ ಮಾತ್ರ ಅಂತ ನಗುತ್ತಾ ಹೇಳಿದ. ಕಳ್ಳನಿಗೆ ಅದರಿಂದ ಏನೂ ಪ್ರಯೋಜನ ಇಲ್ಲ ಅಂತ ಅನ್ನಿಸ್ತು. ದಾಸಯ್ಯ ಅವನನ್ನು ಮಾತಿಗೆಳೆದ. ’ಯಾಕಯ್ಯ ಇಂತಹ ಕೆಲಸವನ್ನೆಲ್ಲ ಮಾಡುತ್ತಅಂತ ಕೇಳಿದ. ನನ್ನ ಕುಟುಂಬಕ್ಕಾಗಿ ಎಂದು ಹೇಳಿದ ಕಳ್ಳ. ದಾಸಯ್ಯನಿಗೆ ಅರ್ಥ ಆಯಿತು. ನೀನು ದರೋಡೆ ಮಾಡಿಕೊಂಡು ಹೋದದ್ದನ್ನೆಲ್ಲ ನಿನ್ನ ಹೆಂಡತಿ ಮಕ್ಕಳು ತಗೊಳ್ತಾರಾ? ಎಂದು ಕೇಳಿದ. ಕಳ್ಳ ಹೌದು ಅಂದ. ’ನಿನ್ನ ಪಾಪದಲ್ಲೂ ಪಾಲು ತಗೊಳ್ತಾರಾ?’ ಇದು ದಾಸಯ್ಯನ ಮುಂದಿನ ಪ್ರಶ್ನೆ. ಕಳ್ಳನಿಗೆ ಉತ್ತರ ಗೊತ್ತಿರಲಿಲ್ಲ. ಮನೆಗೆ ಹೋಗಿ ಕೇಳಿ ಬಾ ಅಂದ ದಾಸಯ್ಯ. ಅವನ್ನು ಅಲ್ಲೇ ಒಂದು ಮರಕ್ಕೆ ಕಟ್ಟಿ ಕಳ್ಳ ಮನೆಗೆ ಹೋದ. ಮನೆ ಮಂದಿ ಅವನ ಪಾಪದಲ್ಲಿ ಪಾಲು ತಗೊಳ್ಲಿಕ್ಕೆ ತಯಾರಿರಲಿಲ್ಲ. ಕಳ್ಳನಿಗೆ ಜ್ಞಾನೋದಯ ಆಗಿತ್ತು. ಸುಖಕ್ಕೆ ಪಾಲುದಾರರಾದ ಕುತುಂಬಿಕರು ಪಾಪಕ್ಕಿಲ್ಲ ಅಂತ ಗೊತ್ತಾಯ್ತು. ದಾಸಯ್ಯನಿಗೆ ಕೈಮುಗಿದ. ದಾರಿ ತೋರು ಅಂದ. ’ರಾಮ, ರಾಮಹೇಳು ಅಂದ ದಾಸಯ್ಯ. ಅವನ ನಾಲಿಗೆ ಹೊರಳಲಿಲ್ಲ. ಮತ್ತೆ ಮತ್ತೆ ಹೇಳಿಸಿದ. ಕೊನೆಗೆ ಕಳ್ಳ ಅದರಲ್ಲೇ ಮೈಮರೆತ. ಅವನ ಮೈಮೇಲೆ ಹುತ್ತ ಬೆಳೀತು. ಆದರೂ ಎಚ್ಚರಾಗಲಿಲ್ಲ. ಮತ್ತೆ ಅದೇ ದಾಸಯ್ಯ ಬಂದು ಎಬ್ಬಿಸಿದ. ಸ್ನಾನ ಮಾಡಿ ಬಾ ಅಂದ. ಪಾದ ಕತ್ತಲೆ ಓಡಿಸುವ ತಮಸಾ ನದಿ ಸಮೀಪದಲ್ಲೇ ಇತ್ತು. ಸ್ನಾನ ಮಾಡಿ ಬರುವಾಗ ಒಬ್ಬ ಬೇಡ ಪಕ್ಷಿ ದಂಪತಿಗಳಲ್ಲಿ ಒಂದು ಪಕ್ಷಿಯನ್ನು ಕೊಂದು ಬಿಟ್ಟ. ಇನ್ನೊಂದು ಪಕ್ಷಿ ಅಳುತ್ತಾ ಇತ್ತು. ಅದನ್ನು ನೋಡಿ ಇವನ ಹೃದಯ ಕರಗಿತು. ಶೋಕವೇ ಶ್ಲೋಕವಾಗಿ ಹೊರಬ್ಬಿತ್ತು. ಅದೇ ಶ್ಲೋಕ ಭಾರತದ ಕಾವ್ಯಪರಂಪರೆಯ ನಾಂದಿಯಾಯ್ತು.


ನಾನು ಹೇಳಿದ ಕಥೆ ವಾಲ್ಮೀಕಿಯದ್ದು ಎಂಬುದು ನಿಮಗೆ ಗೊತ್ತಾಗಿರಬಹುದು. ಇದು ನಿಮಗೇನೂ ಹೊಸ ಕಥೆಯಲ್ಲ. ಆದರೆ ರಾಮಾಯಣ ಹುಟ್ಟಿದ ಕಥೆಯನ್ನು ಎಷ್ಟು ಕೇಳಿದರೂ ಕಡಿಮೆ. ವಲ್ಮೀಕದಿಂದ ಹೊರಬರುವಷ್ಟರಲ್ಲಿ ಕಲ್ಲುಹೃದಯದ ದುಷ್ಟ ದರೋಡೆಕೋರ ಸಹೃದಯ ಶಿಷ್ಟ ಕವಿಯಾಗಿ ಬದಲಾಗಿದ್ದ. ಅವನನ್ನು ಬದಲಿಸಿದ ದಾಸಯ್ಯ ಲೋಕೋಪಕಾರಿ ನಾರದ. ’ಕಲಹಪ್ರಿಯಅಂತಲೇ ಹೆಸರಾದ ನಾರದನ ನಿಜಸ್ವರೂಪ ಬಲ್ಲವರು ಕಡಿಮೆ. ’ನಾರಂ ದದಾತಿ ಇತಿ ನಾರದ:’ ದುಷ್ಟರಿಗೂ, ಶಿಷ್ಟರಿಗೂ ಮೋಕ್ಷ ಕೊಡಿಸುವವ ನಾರದ. ಕಳ್ಳನನ್ನು ಕವಿಯಾಗಿ ಬದಲಿಸಿದವ ಅವನೇ.


ರಾಮಾಯಣ ರಚಿಸಿದ್ದು ವಾಲ್ಮೀಕಿ ಹೌದು. ರಾಮಾಯಣ ನಡೆದಿದ್ದೂ ವಾಲ್ಮೀಕಿ ಕಾಲದಲ್ಲೇ ಎಂಬುದೂ ನಿಜ. ನಮ್ಮ ಎರಡೂ ಆರ್ಷ ಕಾವ್ಯಗಳ ವೈಶಿಷ್ಟ್ಯ ಅದು. ರಾಮಾಯಣ-ಮಹಾಭಾರತ ಎರಡೂ ಕಾವ್ಯಗಳ ಕವಿಗಳು ಕಾಯ್ವದ ಪ್ರಮುಖ ಪಾತ್ರಗಳು. ಆದರೆ ರಾಮಾಯಣದ ಕಥೆ ಮಾತ್ರ ತುಂಬಾ ಹಳೆಯದ್ದು. ರಾಮರಕ್ಷಾ ಸ್ತೋತ್ರದಲ್ಲಿ ಹೇಳಿದಂತೆಚರಿತಂ ರಘುನಾಥಸ್ಯ ಶತಕೋಟಿಪ್ರವಿಸ್ತರಮ್’. ಅಷ್ಟು ವಿಸ್ತೃತವಾದ ಕಥೆಯನ್ನು ನಾರದನಿಂದಲೇ ಕೇಳಿ ಕಾವ್ಯರೂಪಕ್ಕಿಳಿಸಿದವನು ವಾಲ್ಮೀಕಿ.


ಕ್ರೌಂಚ ಪಕ್ಷಿಯ ವಿಯೋಗದು: ಕವಿಹೃದಯವನ್ನು ಕರಗಿಸಿತ್ತು. ಶೋಕಸ್ಥಾಯೀಭಾವ ಕರುಣರಸವಾಗಿ ಹರಿದಿತ್ತು. ಆವರೆಗೆ ವೇದಗಳಲ್ಲೂ ಪುರಾಣಗಳಲ್ಲೂ ಬಳಕೆಯಾಗಿದ್ದರೂ ವಿಶಿಷ್ಟ ರೀತಿಯಿಂದ ಕಾವ್ಯರೂಪ ವಾಗಿ ಹೊರಹೊಮ್ಮಿತ್ತು ಅನುಷ್ಟುಪ್  ಎನ್ನುವ ಛಂದಸ್ಸು.


ಮಾ ನಿಷಾದ ಪ್ರತಿಷ್ಠಾಂ ತ್ವಮಗಮ: ಶಾಶ್ವತೀ: ಸಮಾ: |

ಯತ್ಕ್ರೌಂಚಮಿಥುನಾದೇಕಮ್ ಅವಧೀ: ಕಾಮಮೋಹಿತಮ್ ||


ಇದು ಅಯಾಚಿತವಾಗಿ ಬಂದ ಶ್ಲೋಕ. ಬುದ್ಧ್ಯಾ ರಚಿಸಿದ್ದಲ್ಲ. ಅದೂ ಶಾಪರೂಪವಾಗಿ ಬಂದಿದ್ದು. ಇದನ್ನೇ ನಾಂದಿ ಶ್ಲೋಕವಾಗಿಟ್ಟುಕೊಂಡು ಕಾವ್ಯ ರಚಿಸುವಂತೆ ಸ್ವತ: ವಾಣೀಪತಿಯೇ ಆದೇಶಿಸುತ್ತಾನೆ ವಾಲ್ಮೀಕಿಗೆ. ಚಂಪೂರಾಮಾಯಣದಲ್ಲಿ ಅದರ ಸುಂದರ ವರ್ಣನೆಯಿದೆ.


ಸರಸಿಜಯೋನೇರಾಜ್ಞಯಾ ರಾಮವೃತ್ತಂ

ಕರಬದರಸಮಾನಂ ಪ್ರೇಕ್ಷ್ಯ ದೃಷ್ಟ್ಯಾ ಪ್ರತೀಚ್ಯಾ |

ಶುಭಮತನುತ ಕಾವ್ಯಂ ಸ್ವಾದು ರಾಮಾಯಣಾಖ್ಯಂ

ಮಧುಮಯಭಣಿತೀನಾಂ ಮಾರ್ಗದರ್ಶೀ ಮಹರ್ಷಿ: ||


ಬ್ರಹ್ಮನ ಆಜ್ಞೆಯಂತೆ ತನ್ನ ದಿವ್ಯ ದೃಷ್ಟಿಯಿಂದ ರಾಮನ ಕಥೆಯನ್ನು ಅಂಗೈ ನೆಲ್ಲಿಯಂತೆ ಸ್ಪಷ್ಟವಾಗಿ ನೋಡಿ ರಾಮಾಯಣವೆಂಬ ಸ್ವಾದಿಷ್ಟ ಶುಭಕಾವ್ಯವನ್ನು ರಚಿಸಿದವನು ಮಧುರ ವಚನದ ಮಾರ್ಗದರ್ಶಿಯಾದ ಮಹರ್ಷಿ ವಾಲ್ಮೀಕಿ.


ಮಂಗಲಾಚರಣೆ ಸಾಮಾನ್ಯವಾಗಿ ಪ್ರಾರ್ಥನಾರೂಪದಲ್ಲೋ, ಆಶೀರ್ವಾದ ರೂಪದಲ್ಲೋ ಇಲ್ಲ ವಸ್ತುನಿರ್ದೇಶನದ ರೂಪದಲ್ಲೋ ಇರುತ್ತದೆ. ಶಾಪರೂಪವಾಗಿ ಇರುವುದು ಕಡಿಮೆ. ಅದರಲ್ಲೂ ಆದಿಕಾವ್ಯದ ಆದಿಶ್ಲೋಕ!


ಇದಕ್ಕೆ ಬಲ್ಲವರು ಹೇಳುವ ಪರಿಹಾರ ಇದು- ’ಮಾಎಂಬ ಪದಕ್ಕೆ ನಿಷೇಧಾತ್ಮಕವಾದ ಒಂದು ಅರ್ಥ ಇದ್ದರೆ ಲಕ್ಷ್ಮಿ ಎಂಬ ಇನ್ನೊಂದು ಅರ್ಥವೂ ಇದೆ. ಹಾಗಾಗಿ ಮಾ ಶಬ್ದದಿಂದ ಮಾಡಿದ ಆರಂಭ ಶ್ರೀಕಾರದೊಂದಿಗೆ ಮಾಡಿದಂತೆ. ಹಾಗಾಗಿ ಇದು ದೋಷರಹಿತ. ಇನ್ನು ಮೂರನೇ ಪ್ರಕಾರವಾದ ವಸ್ತುನಿರ್ದೇಶಾತ್ಮಕ ನಾಂದಿ ಇದು ಎನ್ನಬಹುದು. ಕ್ರೌಂಚ ಮಿಥುನಗಳ ವಿಯೋಗ ಸೀತಾರಾಮರ ವಿಯೋಗದ ಸೂಚಕ. ವ್ಯಾಧ ರಾವಣನ ಪ್ರತಿನಿಧಿ. ಪತಿಪತ್ನಿಯರನ್ನು ಬೇರ್ಪಡಿಸಿದವನಿಗೆ ಜೀವನದಲ್ಲಿ ಶ್ರೇಯಸ್ಸಿಲ್ಲ ಎಂಬುದು ಇಲ್ಲಿ ಸೂಚಿತವಾಗಿದೆ.


 ವಾಲ್ಮೀಕಿಯೆಂಬ ಪಾತ್ರ ಪ್ರವೇಶವಾಗುವುದು ಉತ್ತರರಾಮಚರಿತೆಯಲ್ಲಿ. ರಾಮನಿಂದ ಪರಿತ್ಯಕ್ತಳಾದ ಭೂಸುತೆಗೆ ವಲ್ಮೀಕ(ಮಣ್ಣಿನ ಇನ್ನೊಂದು ರೂಪ)ದಿಂದ ಪುನರ್ಜನ್ಮ ಪಡೆದ ವಾಲ್ಮೀಕಿ ಸಹೋದರನ ಪಾತ್ರವನ್ನು ನಿರ್ವಹಿಸಿ ಬಾಣಂತನ ಮಾಡಿದ್ದು ವಿಶೇಷ. ಲವಕುಶರಿಗೆ ಗುರುವಾಗಿ ತಂದೆಯ ಅನುಪಸ್ಥಿತಿಯಲ್ಲಿ ವಿದ್ಯಾಭ್ಯಾಸ ಮಾಡಿಸಿದ್ದು ಅವನೇ. ರಾಮಾಯಣದ ಈಭಾಗ ವಾಲ್ಮೀಕಿರಚಿತವಲ್ಲ ಎಂಬ ವಿದ್ವಾಂಸರ ಅಭಿಪ್ರಾಯಕ್ಕೆ ಮನ್ನಣೆಯಿತ್ತರೂ ಕಥೆಯ ಬಗ್ಗೆ ಇರುವ ಪ್ರೀತಿ ಕಡಿಮೆಯಾಗುವುದಿಲ್ಲ. ಲವಕುಶರ ವೀರಗಾಥೆ ಆಬಾಲವೃದ್ಧರಿಗೂ ಆಪ್ಯಾಯಮಾನವೇ. ವಾಲ್ಮೀಕಿ ಕುಶಲವರಿಗೆ ರಾಮಾಯಣವನ್ನು ಸುಶ್ರಾವ್ಯವಾಗಿ ಹಾಡಲು ಕಲಿಸಿದ್ದ. ರಾಮನ ಸಜೀವ ಪ್ರತಿಮೆಗಳಂತಿದ್ದ ಅವರು ರಾಮಾಯಣವನ್ನು ರಾಮನಿಗೇ ಕೇಳಿಸಿದ ಪ್ರತಿಭಾಶಾಲಿಗಳು. ಅವರನ್ನು ಸಿದ್ಧಗೊಳಿಸಿದ ಸಂಪೂರ್ಣ ಶ್ರೇಯಸ್ಸು ವಾಲ್ಮೀಕಿಗೆ ಸಲ್ಲುತ್ತದೆ.


ಸಮಸ್ತ ಲೋಕದ ಆಸ್ತಿಯಾಗಬೇಕಾಗಿದ್ದ ವಾಲ್ಮೀಕಿ, ಕನಕದಾಸ ಮುಂತಾದ ಘನ ವ್ಯಕ್ತಿಗಳು ಇಂದು ವಿಶಿಷ್ಟ ಜನಾಂಗದ ಮೂಲಪುರುಷರಂತೆಯೋ ನಾಯಕರಂತೆಯೋ ಪ್ರದರ್ಶಿತವಾಗುತ್ತಿದ್ದಾರೆ. ಜನಾಂಗದವರು ಅವರನ್ನು ಗೌರವಿಸಿದರೆ ತಪ್ಪೇನಲ್ಲ. ಆದರೆ ಬೆಸ್ತರ ಕನ್ಯೆಯ ಮಗನನ್ನೂ, ಬೇಡರ ಜಾತಿಯ ದರೋಡೆಕೋರನನ್ನೂ ಋಷಿಪಟ್ಟಕ್ಕೆ ಏರಿಸಿದ, ಕುರುಬರ ಹುಡುಗನನ್ನು ದಾಸಶ್ರೇಷ್ಠರೆಂದು ಗೌರವಿಸುವ ನಮ್ಮ ಸಂಸ್ಕೃತಿಯನ್ನು ನಾವು ಮರೆಯಬಾರದು. ವಾಲ್ಮೀಕಿ ಜಯಂತಿ ಕೊನೆಗೊಳ್ಳುತ್ತಿರುವ ಸಮಯದಲ್ಲಿ ಆದಿ ಕವಿಗೊಂದು ಪ್ರಣಾಮ ಕುಸುಮಾಂಜಲಿ.


ಕೂಜಂತಂ ರಾಮ ರಾಮೇತಿ ಮಧುರಂ ಮಧುರಾಕ್ಷರಮ್ |

ಆರುಹ್ಯ ಕವಿತಾಶಾಖಾಂ ವಂದೇ ವಾಲ್ಮೀಕಿಕೋಕಿಲಮ್ ||


ಕವಿತೆಯೆಂಬ ಟೊಂಗೆಯ ಮೇಲೆ ಕುಳಿತು ಮಧುರ ರಾಮನಾಮದ ಕೂಜನ ಮಾಡುತ್ತಿರುವ ವಾಲ್ಮೀಕಿ ಎಂಬ ಕೋಗಿಲೆಯನ್ನು ವಂದಿಸುತ್ತೇನೆ.


नारायण महादेव धोनि

 असङ्ख्यानां वीरयोधानां जन्मभूमिः इयं भारतमाता। अतः एव कश्चन कविः कवयति 'वन्ध्या न भारतजननी शूरसुतानां जन्मभूमिः' इति। प्रायेण सार्ध...