Wednesday, January 8, 2020

ಪರಕಾಯ ಪ್ರವೇಶ

ಪುರಾಣ ಪಾತ್ರಗಳ ಹೃದಯವನ್ನು ಅನಾವರಣಗೊಳಿಸುವ

*ಪರಕಾಯ ಪ್ರವೇಶ*

ಲೇಖಕರು: _ಶ್ರೀ ರಾಧಾಕೃಷ್ಣ ಕಲ್ಚಾರ್_
ಪ್ರಕಾಶಕರು: _ಸಾಹಿತ್ಯ ಸಿಂಧು ಪ್ರಕಾಶನ, ಬೆಂಗಳೂರು_
ಬೆಲೆ: _140/-_

ಯಕ್ಷಗಾನ ತಾಳಮದ್ದಳೆಯ ಪ್ರಸಿದ್ಧ ಅರ್ಥಧಾರಿ ಶ್ರೀ ರಾಧಾಕೃಷ್ಣ ಕಲ್ಚಾರ್ ಅವರು ಉತ್ಥಾನ ಪತ್ರಿಕೆಗೆ ಬರೆಯುತ್ತಿದ್ದ ಅಂಕಣ ಬರಹಗಳ ಸಂಗ್ರಹವಿದು.

ಇಲ್ಲಿ ಪುರಾಣದ ಪಾತ್ರಗಳು ಮಾತನಾಡುತ್ತವೆ. ತಮ್ಮ ಜೀವನವನ್ನು, ಹೃದಯದಲ್ಲಿ ಹುದುಗಿರುವ ರಹಸ್ಯವನ್ನು ಬಿಚ್ಚಿಡುತ್ತವೆ.

ಹದಿನಾಲ್ಕು ಪಾತ್ರಗಳಲ್ಲಿ ಹೆಚ್ಚಿನವು ಸಾಮಾನ್ಯ ಪಾತ್ರಗಳು. ದಂಡಕ, ಸುಯೋಧನ ಹಾಗೂ ಪರೀಕ್ಷಿತ ಈ ಮೂರು ಪಾತ್ರಗಳನ್ನು ಬಿಟ್ಟರೆ ಉಳಿದವೆಲ್ಲ ಪುರಾಣದ ದೃಷ್ಟಿಯಿಂದ ಅಮುಖ್ಯವಾದವು. ಮಹಾಭಾರತದ ಒಂದೆರಡು ಸಂದರ್ಭಗಳಲ್ಲಿ ಮಾತ್ರ ಕೇಳಿ ಬರುವ  ವಿಕರ್ಣ, ಕೀಚಕವಧಾಪ್ರಸಂಗದ ಪೋಷಕಪಾತ್ರವಾದ ಸುದೇಷ್ಣೆ, ಅತಿಸಾಮಾನ್ಯ ಪಾತ್ರಗ಼ಳಾದ ರಥಕಾರ, ದುರ್ಯೋಧನನ ಸೂತ ಪ್ರಾತಿಕಾಮಿ, ಶಲ್ಯನ ಸಾರಥಿ, ರಾಮಾಯಣದ ಭದ್ರ ಮತ್ತು ರುಮೆ ಇಂತಹ ಸಣ್ಣ ಪಾತ್ರಗಳ ಕಣ್ಣಿಂದ ವಿವಿಧ ಸನ್ನಿವೇಶಗಳನ್ನು ನೋಡುವ ಅವರ ನೆಲೆಯಲ್ಲಿ ನಿಂತು ವಿಮರ್ಶಿಸುವ ಲೇಖಕರ ಪ್ರಯತ್ನ ಅನ್ಯಾದೃಶ.

ಸರಳವಾದ, ಹಿತವಾದ, ಪುರಾಣಕಥೆಗಳಿಗೆ ಒಪ್ಪುವ ಭಾಷೆ, ಹಾಗೂ ಕುತೂಹಲ ಕೆರಳಿಸುವ ನಿರೂಪಣಾ ಶೈಲಿ ಹೊತ್ತಿಗೆಯ ಸೊಬಗನ್ನು ಹೆಚ್ಚಿಸಿವೆ.

ಪುರಾಣ ಕಥೆಗಳಲ್ಲಿ ಆಸಕ್ತಿ ಇರುವ, ಅಲ್ಲಿನ ಪಾತ್ರಗಳ ಹೃದಯವನ್ನು ಅರಿಯುವ ಹಂಬಲವಿರುವವರಿಗೆ ಅತ್ಯುಪಯುಕ್ತ ಪುಸ್ತಕವಿದು.

ಒಮ್ಮೆ ಓದಿ ಅನುಭವಿಸಿ.

ಆಸಕ್ತರು ಲೇಖಕರನ್ನು 9449086653 ಸಂಖ್ಯೆಯ ಮೂಲಕ ಸಂಪರ್ಕಿಸಬಹುದು.

📖 *_ಪುಸ್ತಕಾವಲೋಕನ:_*
*ಮಹಾಬಲ ಭಟ್, ಗೋವಾ*

*ಅಣ್ವಣೂಪಾಧ್ಯಾಯ* - _ಅಣ್ವವಲೋಕನ_


ಕೃತಿ: ಅಣ್ವಣೂಪಾಧ್ಯಾಯ
ಲೇಖಕರು: ಡಾ. ಎಚ್. ಆರ್. ವಿಶ್ವಾಸ
ಪ್ರಕಾಶಕರು: ಡಿವಿಜಿ ಬಳಗ ಪ್ರತಿಷ್ಠಾನ, ಮಂಗಳೂರು
ಬೆಲೆ: ₹150/-

ಮಿತ್ರ ಕನಕರಾಜು ಅವರ ನೇತೃತ್ವದ ಡಿವಿಜಿ ಬಳಗ ಪ್ರತಿಷ್ಠಾನ ಪ್ರಕಟಿಸಿದ ಡಾ. ವಿಶ್ವಾಸ ಅವರ ಅಣ್ವಣೂಪಾಧ್ಯಾಯ ಕಥಾ ಸಂಗ್ರಹವನ್ನು ಎರಡೇ ದಿನದಲ್ಲಿ ಓದಿ ಮುಗಿಸಿದ್ದು ನನ್ನ ಮಟ್ಟಿಗೆ ಒಂದು ದಾಖಲೆ. ಎಂದಿನಂತೆ ಪುಸ್ತಕದ ಒಳಹೂರಣವನ್ನು ನಿಮ್ಮ ಮುಂದಿಡಲು ಯತ್ನಿಸುತ್ತೇನೆ.

ಕಥಾಸಂಗ್ರಹದ ಶೀರ್ಷಿಕೆಯೇ ವಿಚಿತ್ರ ಅನಿಸಿತ್ತು. ಅದೇ ಶೀರ್ಷಿಕೆಯನ್ನು ಹೊಂದಿರುವ ಕೊನೆಯ ಕಥೆ ವೈಚಿತ್ರ್ಯವನ್ನು ಅನಾವರಣಗೊಳಿಸಿತು.

ಮೊದಲ ಕಥೆ *ದಂಡವಸೂಲಿ* ಅನವಧಾನತೆಯಿಂದ ಗಂಡಹೆಂಡಿರ ಮಧ್ಯೆ ಉಂಟಾಗುವ ಸಂಘರ್ಷವನ್ನು ಲಲಿತಪ್ರಬಂಧದಂತೆ ನಮ್ಮೆದುರಿಗಿಡುತ್ತದೆ.

ನೆರೆಹೊರೆಯ ಕಿರಿಕಿರಿಯನ್ನು ಆಧರಿಸಿ ಬರೆದ *ಹೋದೆಯಾ ಪಿಶಾಚಿ ಅಂದ್ರೆ...* ಎಂಬ ಕಥೆಯು ರಂಜಕವಾಗಿದೆ.

*ಸ್ವಾಮಿಗಳ ಅಂತರಂಗ* ಎಂಬ ಕಥೆ ಕರ್ಮಠ ಮಠಾಧೀಶರೊಬ್ಬರ ಮಾನವೀಯ ಆಂತರ್ಯವನ್ನು ಬಹಿರಂಗಪಡಿಸುತ್ತದೆ.

*ಪುರಸ್ಕಾರದ ರಹಸ್ಯ* ಎನ್ನುವ ಕಥೆ ಖ್ಯಾತನಾಮರ ಸೊಗಲಾಡಿತನದ ದರ್ಶನ ಮಾಡಿಸುತ್ತದೆ.

*ಅರ್ಧಜರತೀ* ಕಥೆಯಲ್ಲಿ ಪರಿಚಿತರೇ ಅಪರಿಚಿತರಾಗಿ ಬಂದು ಕೊನೆಗೆ 'ಓ! ಅವರೇ ಇವರಲ್ಲವೆ' ಎಂಬ ಉದ್ಗಾರ ತೆಗೆವ ವಿಚಿತ್ರ ಸನ್ನಿವೇಶದ ನಿರೂಪಣೆ ಇದೆ.

*ಆಹಾ! ಕಂಡೆನು ತಾಯ್ತನವ!* ಎಂಬ ಕಥೆ ಇಷ್ಟವಾಯಿತು. ಹೆಣ್ಣಿನ ವೇಷಭೂಷಣಗಳು ನಡವಳಿಕೆಗಳು ಹೇಗೇ ಇರಲಿ ನೈಸರ್ಗಿಕವಾಗಿ ಅವರಲ್ಲಿರುವ ಮಾತೃ ವಾತ್ಸಲ್ಯ ಸಂದರ್ಭಬಂದಾಗ ಪ್ರಕಟವಾಗುತ್ತದೆ ಎಂಬ ತತ್ತ್ವ ನಿರೂಪಿತವಾಗಿದೆ.

*ಇದು ಉದಾಹರಣೆ* ಎಂಬುದು ಗೃಹಿಣಿಯರ ಮೌಲ್ಯವನ್ನು ಎತ್ತಿ ಹಿಡಿಯುವ ಕಥನ.

*ಅಪರಾಧ* ವೆಂಬ ಏಳನೆಯ ಕಥೆಯಲ್ಲಿ ಸಾಹಿತ್ಯ ಕ್ಷೇತ್ರದಲ್ಲಿ ಪ್ರಸಿದ್ಧ ಹಾಗೂ ಸಾಮಾನ್ಯ ಬರಹಗಾರರಿಗೆ ಸಮಾಜ ತೋರುವ ತಾರತಮ್ಯದ ವಿಡಂಬನೆ ಇದೆ.

*ಮಾನಸಿಯ ಮನದಳಲು* ಎಂಬ ಕಥನದಲ್ಲಿ ಶೋಷಿತ ಮಹಿಳೆಯೋರ್ವಳ ವೇದನೆಯಿದೆ.

ಕೊನೆಯ ಕಥೆ ಸಂಸ್ಕೃತ ಶಿಕ್ಷಕರೊಬ್ಬರ ಜೀವನದ ಸಂಕಥನ. ಮಹಾ+ಮಹಾ+ಉಪಾಧ್ಯಾಯ (=ಮಹಾಮಹೋಪಾಧ್ಯಾಯ) ಎಂಬ ಉಪಾಧಿಗೆ ಭಾಜನರಾದ ಪಂಡಿತರು ತಮ್ಮನ್ನು ಅದಕ್ಕೆ ವಿರುದ್ಧವಾಗಿ  ಅಣು+ಅಣು+ಉಪಾಧ್ಯಾಯ (=ಅಣ್ವಣೂಪಾಧ್ಯಾಯ) ಎಂದು ಭಾವಿಸುವುದು ಕಥೆಯ ತಿರುಳು.

ಕಥೆಗಾರರದು ಸಂಸ್ಕೃತ ಮತ್ತು ಕನ್ನಡ ಭಾಷೆಯಲ್ಲಿ ಪಳಗಿದ ಕೈ. ಇಲ್ಲಿನ ಕಥೆಗಳು ಸಂಸ್ಕೃತದಿಂದ ಕನ್ನಡಕ್ಕೆ ಬಂದವಾದರೂ ಸಂಸ್ಕೃತ ಶಬ್ದಗಳ ಅನಾವಶ್ಯಕ ಪ್ರಯೋಗಗಳಿಲ್ಲ.

ಕಥೆಗಳನ್ನು ಓದುವಾಗ ಒಂದು ವಿಷಯವನ್ನು ಮನಸ್ಸಿನಲ್ಲಿಡುವುದು ಒಳಿತು. ಇವು ಕನ್ನಡ ಸಾಹಿತ್ಯ ಪ್ರಪಂಚಕ್ಕಾಗಿ ಬರೆದ ಕಥೆಗಳಲ್ಲ. ಸಂಸ್ಕೃತದಲ್ಲಿ ಆಧುನಿಕ ಸಾಹಿತ್ಯ ರಚನೆಯ ಉದ್ದೇಶದಿಂದ ಸಾಮಾನ್ಯ ಓದುಗರನ್ನು ಲಕ್ಷ್ಯದಲ್ಲಿಟ್ಟುಕೊಂಡು ಬರೆದವು. ಹಾಗಾಗಿ ಕಥಾಹಂದರ ಸಂಕೀರ್ಣವಾಗಿಲ್ಲ. ನಿರೂಪಣೆ ಸರಳವಾಗಿದೆ. ಕಥೆ ಹೆಣೆಯುವ ತಂತ್ರವೂ ಸಾಮಾನ್ಯವಾಗಿದೆ. ಭಾವತೀವ್ರತೆಯೂ ಕಾಣದು. ಕೆಲವು ಕಡೆ ವಿಷಯಗಳ ನಿರೂಪಣೆ ವಾಚ್ಯವಾಗಿದೆ ಎನಿಸುತ್ತದೆ.

ಹೀಗಿದ್ದರೂ ಮನದ ರಂಜನೆಗೇನೂ ಕೊರತೆಯಿಲ್ಲ. ಮೊದಲೆಲ್ಲ ಸರಳವಾಗಿ ಓಡುವ ಕಥೆಗಳು ಅನೂಹ್ಯ ಚಮತ್ಕೃತಿಯಲ್ಲಿ ಕೊನೆಗೊಂಡು ಓದುಗರಿಗೆ ಸಂತೃಪ್ತಿಯನ್ನು ಉಂಟುಮಾಡುತ್ತವೆ.

ನಮ್ಮ ನಿಮ್ಮ ನಡುವೆ ಬದುಕುವ ಮಧ್ಯಮವರ್ಗದ ಜನರ ಸುತ್ತ ಹೆಣೆದ ಕಥೆಗಳು ಆಪ್ತವೆನಿಸುತ್ತವೆ.

ಆಸಕ್ತರು ಪ್ರಕಾಶಕರನ್ನು ಚರವಾಣಿ ಸಂಖ್ಯೆ 9448973582 ಮೂಲಕ ಸಂಪರ್ಕಿಸಬಹುದು.

📖 *_ಪುಸ್ತಕಾವಲೋಕನ_*
*ಮಹಾಬಲ ಭಟ್, ಗೋವಾ*

नारायण महादेव धोनि

 असङ्ख्यानां वीरयोधानां जन्मभूमिः इयं भारतमाता। अतः एव कश्चन कविः कवयति 'वन्ध्या न भारतजननी शूरसुतानां जन्मभूमिः' इति। प्रायेण सार्ध...