Monday, October 15, 2018

ಧಾನ್ಯಪಲಾಲನ್ಯಾಯ


ಈ ಸಂಸಾರವೇ ಹೀಗೆ. ಅಸಾರದ ಮಧ್ಯೆ  ಅಡಗಿ ಕುಳಿತಿರುವ ’ಸಾರ’ ಕಾಣದೆ ಭ್ರಮೆಯಲ್ಲಿ ತೇಲಾಡುತ್ತಿರುತ್ತೇವೆ. ಪರದೆ ಸರಿದಾಗ ಒಳಗಿರುವ ತಥ್ಯದ ಅನುಭವವಾಗುತ್ತದೆ.
ಸಾಮಾನ್ಯನಿಗೆ ಕಲ್ಲೊಂದನ್ನು ಕಂಡಾಗ ಅದು ಕೇವಲ ಕಲ್ಲಾಗಿ ಕಾಣಿಸುತ್ತದೆ. ಅದನ್ನೇ ಶಿಲ್ಪಿಯೊಬ್ಬ ನೋಡಿದಾಗ ಅವನಿಗೆ ಅದರೊಳಗೊಂದು ಮೂರ್ತಿ ಕಾಣಿಸುತ್ತದೆ. ಬೇಡವಾದ ಭಾಗವನ್ನು ಕತ್ತರಿಸಿ ಹಾಕಿದಾಗ ಅದೇ ಕಲ್ಲು ಮೂರ್ತಿಯಾಗಿ ಪೂಜೆಗೊಳ್ಳುತ್ತದೆ.
ಮಾವಿನ ಹಣ್ಣನ್ನು ತಿನ್ನುವಾಗ ಸಿಪ್ಪೆ ಮತ್ತು ಓಟೆಯನ್ನು ಎಸೆಯುತ್ತೇವೆ.
ಕೃಷಿಕನ ಕಠಿಣಪರಿಶ್ರಮದಿಂದ ಬೆಳೆದ ಧಾನ್ಯ ಸಸ್ಯದಿಂದ ಬೇರ್ಪಡಿಸಿದ ಮೇಲೂ ಉಪಯೋಗಕ್ಕೆ ಯೋಗ್ಯವಾಗಿರುವುದಿಲ್ಲ. ಮೇಲಿನ ಸಿಪ್ಪೆಯನ್ನು ತೆಗೆದ ಮೇಲೆಯೇ ಧಾನ್ಯವನ್ನು ಉಪಯೋಗಿಸಬಹುದು. ಧಾನ್ಯ ದೊರೆತ ಮೇಲೆ ಅದರ ಚರ್ಮ ಕಸವೇ.
ಜ್ಞಾನಾರ್ಜನೆಗೆ ಶಾಸ್ತ್ರಗ್ರಂಥದ ಅಧ್ಯಯನ ಆವಶ್ಯಕ. ಆದರೆ ಗ್ರಂಥದಲ್ಲಿರುವ ಪ್ರತಿಯೊಂದು ಶಬ್ದವೂ ಗ್ರಾಹ್ಯವೆಂದೇನೂ ಇಲ್ಲ. ಗ್ರಂಥದ ಸಾರವನ್ನು ಗ್ರಹಿಸಿ ಉಳಿದದ್ದನ್ನು ತ್ಯಜಿಸಬೇಕಾಗುತ್ತದೆ. ಬ್ರಹ್ಮಪದವನ್ನು ಮುಟ್ಟಿದವಂಗೆ ಅದನ್ನು ತೋರಿಸಿದ ಶಾಸ್ತ್ರಗಳೂ ತ್ಯಾಜ್ಯಗಳೇ. ದಾರ್ಶನಿಕ ಕವಿ ಡಿವಿಜಿಯವರೆಂದಂತೆ – ’

ವೇದಗಳು ಶಾಸ್ತ್ರಗಳು ಲೋಕನೀತಿಗಳೆಲ್ಲ
ಹಾದಿ ತೋರಲು ನಿಶಿಯೊಳುರಿವ ಪಂಜುಗಳು,
ಸೌಧವೇರಿದವಂಗೆ ನಭವ ಸೇರಿದಂಗೆ
ಬೀದಿ ಬೆಳಕಿಂದೇನೊ? – ಮಂಕುತಿಮ್ಮ ||

ಬ್ರಹ್ಮಬಿಂದೂಪನಿಷತ್ ಇದೇ ನ್ಯಾಯವನ್ನು ಹೀಗೆ ನಿರೂಪಿಸಿದೆ-

ಗ್ರಂಥಮಭ್ಯಸ್ಯ ಮೇಧಾವೀ ಜ್ಞಾನವಿಜ್ಞಾನತತ್ಪರಃ |
ಪಲಾಲಮಿವ ಧಾನ್ಯಾರ್ಥೀ ತ್ಯಜೇತ್ ಗ್ರಂಥಮಶೇಷತಃ ||

ಸಾರವನ್ನು ಗ್ರಹಿಸಿ, ಅಸಾರವನ್ನು ತ್ಯಜಿಸಿ ಸಂಸಾರವನ್ನು ನಡೆಸೋಣ.

Thursday, October 4, 2018

ದುಡ್ಡೇ ದೊಡ್ಡಪ್ಪ

ಹಿಂದೊಂದು ಕಾಲದಲ್ಲಿ ವಸ್ತು ವಿನಿಮಯ ಪದ್ಧತಿ ಚಾಲ್ತಿಯಲ್ಲಿತ್ತು. ಕಾಲಾಂತರದಲ್ಲಿ ’ಹಣ’ ಎಂಬ ಮಾಧ್ಯಮವೊಂದು ಸೃಷ್ಟಿಯಾಯಿತು. ನಮ್ಮ ಅನುಕೂಲಕ್ಕಾಗಿ ಸೃಷ್ಟಿಸಿಕೊಂಡ ಆ ದುಡ್ಡು ಇಂದು ನಮ್ಮ ತಲೆಯ ಮೇಲೇ ಕುಳಿತು ನಮ್ಮನ್ನು ಆಳುತ್ತಿದೆ. ಅಪ್ಪನಿಗಿಂತ ದೊಡ್ಡದಾಗಿ ದೊಡ್ಡಪ್ಪನಾದ ಆ ಹಣದ ಬಗ್ಗೆ ಇರುವ ಗಾದೆ ಇದು.
ಪಂಚತಂತ್ರದಲ್ಲೊಂದು ಕಥೆಯಿದೆ. ಹಿರಣ್ಯಕನೆಂಬ ಇಲಿಯೊಂದು ತಾಮ್ರಚೂಡನೆಂಬ ಸಂನ್ಯಾಸಿ ಎತ್ತರದ ನಾಗಂದಿಕೆಯ ಮೇಲಿಟ್ಟ ಭಿಕ್ಷಾನ್ನವನ್ನು ಜಿಗಿದು ತಿನ್ನುತ್ತಿತ್ತು. ತನ್ನ ಮಿತ್ರನ ಸಲಹೆಯಂತೆ ತಾಮ್ರಚೂಡ ಇಲಿಯ ಬಿಲವನ್ನು ಶೋಧಿಸಿ ಅಲ್ಲಿದ್ದ ಹಣದ ರಾಶಿಯನ್ನು ವಶಪಡಿಸಿಕೊಂಡ ಮೇಲೆ ಇಲಿಯ ಹಾರುವ ಸಾಮರ್ಥ್ಯವೇ ಕುಸಿಯಿತು. ತನ್ನಲ್ಲಿದ್ದ ದುಡ್ಡೇ ಇಲಿಗೆ ಆ ಸಾಮರ್ಥ್ಯವನ್ನು ಒದಗಿಸಿತ್ತು.  
ಸಂಸ್ಕೃತದ ಸುಭಾಷಿತವೊಂದು ಹಣದ ಮಹಿಮೆಯನ್ನು ಸುಂದರವಾಗಿ ವರ್ಣಿಸುತ್ತದೆ.
ಯಸ್ಯಾಸ್ತಿ ವಿತ್ತಂ ಸ ನರಃ ಕುಲೀನಃ
ಸ ಪಂಡಿತಃ ಸ ಶ್ರುತವಾನ್ ಗುಣಜ್ಞಃ |
ಸ ಏವ ವಕ್ತಾ ಸ ಚ ದರ್ಶನೀಯಃ
ಸರ್ವೇ ಗುಣಾಃ ಕಾಂಚನಮಾಶ್ರಯಂತಿ ||
ಯಾರಲ್ಲಿ ಹಣವಿದೆಯೋ ಅವನೇ ಕುಲವಂತ, ಪಂಡಿತ, ಗುಣಜ್ಞ, ವಾಗ್ಮಿ, ಸುಂದರ. ಹೀಗೆ ಈ ಎಲ್ಲ ಗುಣಗಳು ಹಣವನ್ನೇ ಆಶ್ರಯಿಸಿರುತ್ತವೆ. ಬೆಲ್ಲಕ್ಕೆ ಇರುವೆ ಮುತ್ತುವಂತೆ ಹಣವಿರುವ ಮನುಷ್ಯನನ್ನು ಜನರು ಸುತ್ತುವರಿದಿರುತ್ತಾರೆ. ಒಣಗಿದ ಮರವನ್ನು ಪಕ್ಷಿಗಳು ತ್ಯಜಿಸುವಂತೆ ನಿರ್ಧನನಾದ ವ್ಯಕ್ತಿಯಿಂದ ಎಲ್ಲರೂ ದೂರವಾಗುತ್ತಾರೆ.
ಹೊರಗಿನ ಜನರನ್ನು ಬಿಡಿ. ನಮ್ಮದೇ ಕುಟುಂಬದಲ್ಲೂ ಹಣವನ್ನು ಅರ್ಜಿಸುವವನಿಗೇ ಮೊದಲ ಮಣೆ. ಹಣ ಸಂಪಾದನೆ ನಿಂತ ಮೇಲೆ ಆ ವ್ಯಕ್ತಿ ತನ್ನ ಮನೆಯಲ್ಲೇ ಮೂಲೆಗುಂಪಾಗುತ್ತಾನೆ. ಆಚಾರ್ಯ ಶಂಕರರು ಮೋಹ ಮುದ್ಗರದಲ್ಲಿ ಅದನ್ನೇ ಮಾರ್ಮಿಕವಾಗಿ ಹೇಳಿದ್ದಾರೆ.
ಯಾವದ್ವಿತ್ತೋಪಾರ್ಜನಸಕ್ತಃ ತಾವನ್ನಿಜಪರಿವಾರೋ ರಕ್ತಃ |
ಪಶ್ಚಾಜ್ಜೀವತಿ ಜರ್ಜರದೇಹೇ ವಾರ್ತಾಂ ಕೋಽಪಿ ನ ಪೃಚ್ಛತಿ ಗೇಹೇ||
ಸರ್ವಜ್ಞ ಕವಿಯು ತನ್ನ ಒಂದು ವಚನದಲ್ಲಿ ಈ ರೀತಿಯ ಭಾವವನ್ನೇ ವ್ಯಕ್ತಪಡಿಸಿದ್ದಾನೆ.
ಧನಕನಕವುಳ್ಳವನ ದಿನಕರನ ವೋಲಕ್ಕು |
ಧನಕನಕ ಹೋದ ಮರುದಿನವೆ
ಹಾಳೂರ ಶುನಕದಂತಿಕ್ಕು – ಸರ್ವಜ್ಞ ||
ಇನ್ನೊಂದು ವಚನದಲ್ಲಿ ಸಿರಿಯಣ್ಣ ಇರುವ ತನಕ ಅವನು ಹಿರಿಯಣ್ಣ, ಸಿರಿಯಣ್ಣ ಹೋದ ಮರುದಿನ ಅವನು ನರಿಯಣ್ಣ ಎಂದು ಗೇಲಿ ಮಾಡಿದ್ದಾನೆ.
ದಟ್ಟ ದಾರಿದ್ರ್ಯದಲ್ಲೇ ತಮ್ಮ ಜೀವನವನ್ನು ಯಾಪಿಸಿದ ವರಕವಿ ಬೇಂದ್ರೆಯವರು ’ಕುರುಡು ಕಾಂಚಾಣ ಕುಣಿಯುತಲಿತ್ತೋ ಕಾಲಿಗೆ ಬಿದ್ದವರ ತುಳಿಯುತಲಿತ್ತೋ’ ಎನ್ನುತ್ತ ದುಡ್ಡಿನ ರುದ್ರ ನರ್ತನವನ್ನು ತಮ್ಮ ಶಬ್ದಗಳಲ್ಲಿ ವರ್ಣಿಸಿದ್ದಾರೆ. ಲಕ್ಷ್ಮೀವಂತರಿಗೆ ಇತರರ ಕಷ್ಟ ತಿಳಿಯದು. ತನ್ನ ವಕ್ಷಸ್ಥಲದಲ್ಲಿ ಲಕ್ಷ್ಮಿಯನ್ನು ಧರಿಸಿದ ವಿಷ್ಣು ಈಗಾಗಲೇ ಭೂಮಿಯನ್ನು ಹೊತ್ತು ಬಳಲಿರುವ ಶೇಷನ ಮೇಲೆಯೇ ಮಲಗುವುದಿಲ್ಲವೆ ಎಂದು ಸುಭಾಷಿತಕಾರನೊಬ್ಬ ಚುಚ್ಚಿದ್ದಾನೆ. ಮೃಚ್ಛಕಟಿಕದ ನಾಯಕ ಚಾರುದತ್ತ ದಾರಿದ್ರ್ಯ ಎಂಬುದು ಆರನೆಯ ಪಾತಕವೋ ಎಂಬಂತೆ ಜನರು ವರ್ತಿಸುತ್ತಾರೆ ಎಂದು ಹಳಹಳಿಸುತ್ತಾನೆ.  
ನಿಜ. ಹಣದಿಂದ ಎಲ್ಲವನ್ನೂ ಸಾಧಿಸಲಾಗದು. ಹಸಿವೆಯಾದರೆ ಹಣವನ್ನು ತಿನ್ನಲಾಗದು ಆದರೆ ಆಹಾರವನ್ನು ಕೊಂಡುಕೊಳ್ಳಬಹುದು. ನೀರಡಿಕೆಯಾದರೆ ದುಡ್ಡನ್ನು ಕುಡಿಯಲಾಗದು, ಆದರೆ ನೀರನ್ನು ಕೊಳ್ಳಬಹುದಲ್ಲ. ಹಣದಿಂದ ಆರೋಗ್ಯವನ್ನು ಕೊಳ್ಳಲಾಗದು ಆದರೆ ಉತ್ತಮ ಚಿಕಿತ್ಸೆಯನ್ನು ಪಡೆಯಲು ಹಣ ಬೇಕೇ ಬೇಕು. ಇಂದು ಅಪೇಕ್ಷಿತ ಶಿಕ್ಷಣವನ್ನು ಪಡೆಯಲೂ ಹಣ ಬೇಕು. ’ಧನಾದ್ಧರ್ಮಃ ತತಃ ಸುಖಂ’ ಎಂಬ ಉಕ್ತಿ ಹೇಳುವಂತೆ ದಾನಾದಿ ಧರ್ಮ ಕಾರ್ಯಗಳನ್ನು ಮಾಡಲೂ ಹಣ ಬೇಕು.  ಹಾಗಾಗಿ ಪುರುಷಾರ್ಥ ಚತುಷ್ಟಯದಲ್ಲಿ ಅರ್ಥಕ್ಕೆ ಎರಡನೆಯ ಸ್ಥಾನ. ಒಟ್ಟಿನಲ್ಲಿ ಆಧುನಿಕಯುಗದಲ್ಲಿ ದುಡ್ಡು ದೊಡ್ಡಪ್ಪನಾಗಿರುವುದರಲ್ಲಿ ಯಾವ ಸಂಶಯವೂ ಇಲ್ಲ.

ಹೊತ್ತು ಹೋದರೆ ಮತ್ತೆ ಬಾರದು

ನಮ್ಮ ಜೀವನದಲ್ಲಿ ಸಮಯವೆಂಬುದು ದುಡ್ಡು ಕೊಟ್ಟರೂ ಸಿಗದ ಅಮೂಲ್ಯ ವಸ್ತು. ಅದನ್ನು ಅಜ್ಞಾನದಿಂದ ಕಳೆದುಕೊಂಡರೆ ಮತ್ತೆ ಸಿಗದು ಎಂಬುದನ್ನು ಈ ಗಾದೆ ತಿಳಿಸಿಕೊಡುತ್ತದೆ.
ನಾವು ಹುಟ್ಟಿದ್ದು ಯಾವಾಗ ಎಂಬುದು ನಮಗೆ ತಿಳಿದಿದೆ. ಆದರೆ ಸಾವು ಯಾವಾಗ ಬರುತ್ತದೆ ಎಂಬುದು ತಿಳಿದಿಲ್ಲ. ಪ್ರತಿಕ್ಷಣವೂ ನಮ್ಮ ಆಯುಷ್ಯ ಕಡಿಮೆಯಾಗುತ್ತಲೇ ಸಾಗುತ್ತದೆ. ಹಾಗಾಗಿ ಒಂದು ವರ್ಷವಾಗಲಿ, ಮಾಸವಾಗಲಿ, ದಿನವಾಗಲಿ, ಗಂಟೆಯೇ ಆಗಲಿ ಅಥವಾ ನಿಮೇಷವೇ ಆಗಲಿ ಅತ್ಯಂತ ಅಮೂಲ್ಯವಾದದ್ದು. ಅದನ್ನೇ ’ಶಿವರಾಜ್ಯೋದಯಃ’ ಎಂಬ ಮಹಾಕಾವ್ಯದ ಶಿವಶಿಕ್ಷಣ ಎಂಬ ಅಧ್ಯಾಯದಲ್ಲಿ ಜಿಜಾಮಾತೆ ಬಾಲಶಿವಾಜಿಗೆ ಹೀಗೆ ಹೇಳುತ್ತಾಳೆ-
ಪ್ರತಿಕ್ಷಣಂ ಕ್ಷೀಯತ ಆಯುರೇತತ್ ನಾಯಾತಿ ಯಾತೋಽವಸರಃ ಕದಾಪಿ |
ತನ್ಮಾ ಕೃಥಾ ಜಾತು ವೃಥಾ ಸ್ವಮಾಯುಃ ಪಲೇ ಕ್ಷಣೇ ದಿವಸೇತಿ ಮಾಸೇ ||

ಅರ್ಥಾರ್ಥಿಗೆ ಹೇಗೆ ಪ್ರತಿಯೊಂದು ಕಣವೂ ಮುಖ್ಯವೋ ಹಾಗೆಯೇ ವಿದ್ಯಾರ್ಥಿಗೆ ಪ್ರತಿಯೊಂದು ಕ್ಷಣವೂ ಮುಖ್ಯ. ವಿದ್ಯಾರ್ಥಿಜೀವನದಲ್ಲಿ ವ್ಯಸನಗಳಿಂದ ಸಮಯವನ್ನು ವ್ಯರ್ಥಗೊಳಿಸಿಕೊಂಡರೆ ಆ ಕಾಲ ಮತ್ತೆ ದೊರಕದು.

ಧರ್ಮಾಚರಣೆಯ ಕಾಲಕ್ಕೆ ನಾಳೆಯೇ ತನ್ನ ಮರಣ ಎಂದು ಯೋಚಿಸಿ ತಕ್ಷಣ ಮಾಡಿ ಮುಗಿಸಬೇಕಂತೆ. ಪುರಂದರ ದಾಸರು ತಮ್ಮ ಒಂದು ಕೀರ್ತನೆಯಲ್ಲಿ “ಬರಿದೆ ಹೋಯಿತು ಹೊತ್ತು, ನರಜನ್ಮ ಸ್ಥಿರವೆಂದು ನಾನಿದ್ದೆನೋ ರಂಗ” ಎಂದು ಪರಿತಪಿಸುತ್ತಾರೆ.

ಹಿಡಿದ ಕೆಲಸವನ್ನು ಬೇಗ ಮುಗಿಸದೆ ಎಳೆಯುತ್ತಾ ಹೋಗುವ ದೀರ್ಘಸೂತ್ರತೆ ಅನೇಕರ ಸ್ವಭಾವವಾಗಿದೆ. ದೀರ್ಘಸೂತ್ರತೆ. ಯಶಸ್ಸಿಗೆ ಪ್ರತಿಬಂಧಕವಾದ ಶತ್ರುಗಳಲ್ಲಿ ಇದೂ ಒಂದು. ಸುಭಾಷಿತವೊಂದು ಅದನ್ನು ಸುಂದರವಾಗಿ ನಿರೂಪಿಸುತ್ತದೆ.

ಆದಾನಸ್ಯ ಪ್ರದಾನಸ್ಯ ಕರ್ತವ್ಯಸ್ಯ ಚ ಕರ್ಮಣಃ |
ಕ್ಷಿಪ್ರಮಕ್ರಿಯಮಾಣಸ್ಯ ಕಾಲಃ ಪಿಬತಿ ತದ್ರಸಮ್ ||

ಕೊಡುವ, ತೆಗೆದುಕೊಳ್ಳುವ ಹಾಗೂ ಮಾಡಲೇಬೇಕಾದ ಕೆಲಸಗಳನ್ನು ಸಮಯಕ್ಕೆ ಸರಿಯಾಗಿ ಮಾಡದಿದ್ದರೆ ಕಾಲವೇ ಅದರ ರಸವನ್ನು ಕುಡಿದುಬಿಡುತ್ತದೆ. ”ಶ್ವಃ ಕರಣೀಯಾನಿ ಕುರ್ಯಾದದ್ಯೈವ ಬುದ್ಧಿಮಾನ್” ಎಂಬ ಸೂಕ್ತಿ ನಾಳೆ ಎಂದವನ ಮನೆ ಹಾಳು ಎಂಬ ಗಾದೆಯನ್ನು ನೆನಪಿಸುತ್ತದೆ.
ಮಾರ್ಕ್ ಲೇವಿ ಎಂಬ ಚಿಂತಕ ಒಂದೆಡೆ ಬರೆಯುತ್ತಾನೆ – “ಒಂದು ವರ್ಷದ ಮಹತ್ತ್ವವನ್ನು ತಿಳಿಯಬೇಕೆಂದರೆ ವಾರ್ಷಿಕ ಪರೀಕ್ಷೆಯಲ್ಲಿ ಅನುತ್ತೀರ್ಣನಾದ ವಿದ್ಯಾರ್ಥಿಯನ್ನು ಕೇಳು. ಒಂದು ತಿಂಗಳ ಮಹತ್ತ್ವವನ್ನು ಅರಿಯಬೇಕೆಂದರೆ ಎಂಟನೆಯ ಮಾಸದಲ್ಲಿ ಗರ್ಭಪಾತವಾದ ತಾಯಿಯನ್ನು ಕೇಳು. ಒಂದು ತಾಸಿನ ಮಹತ್ತ್ವವನ್ನು ಭೇಟಿಯಾಗಲು ಕಾಯುತ್ತಿರುವ ಪ್ರೇಮಿಗಳನ್ನು ಕೇಳು. ಒಂದು ನಿಮಿಷದ ಮಹತ್ತ್ವವನ್ನು ಸ್ವಲ್ಪದರಲ್ಲೇ ಬಸ್ಸನ್ನು ತಪ್ಪಿಸಿಕೊಂಡ ವ್ಯಕ್ತಿ ಹೇಳಬಲ್ಲ. ಒಂದು ಸೆಕೆಂಡಿನ ಮಹತ್ತ್ವವನ್ನು ಅಪಘಾತದಿಂದ ಕೂದಲೆಳೆಯಂತರದಲ್ಲಿ ಪಾರಾದ ವ್ಯಕ್ತಿ ಚೆನ್ನಾಗಿ ತಿಳಿದಿರುತ್ತಾನೆ. ಸೆಕೆಂಡಿನ ನೂರನೆಯ ಒಂದಂಶದ ಮಹತ್ತ್ವನ್ನು ಒಲಂಪಿಕ್ ನ ಓಟದ ಸ್ಪರ್ಧೆಯಲ್ಲಿ ಬೆಳ್ಳಿಯ ಪದಕವನ್ನು ಪಡೆದ ಸ್ಪರ್ಧಾಳು ಅರಿತಿರುತ್ತಾನೆ.”
ಹೆಚ್ಚು ಕೆಲಸಗಳನ್ನು ಹೊಂದಿರುವವನಿಗೆ ಎಲ್ಲ ಕೆಲಸಗಳಿಗೂ ಸಮಯವಿರುತ್ತದೆ ಎನ್ನುತ್ತದೆ ಇನ್ನೊಂದು ನುಡಿ. ಕೆಲಸ ಮಾಡದವನಿಗೆ ಯಾವುದಕ್ಕೂ ಸಮಯವೇ ಇರುವುದಿಲ್ಲ. ’ಸಮಯಯೋಜನೆ’ ಎನ್ನುವುದು ಯಶಸ್ಸಿಗೆ ಅನಿವಾರ್ಯವಾದ ಅಂಶ.
ನವ್ಯಜೀವಿ ಅಂಕಿತದ ಶ್ರೀ ಸತ್ಯೇಶ್ ಬೆಳ್ಳೂರು ತಮ್ಮ ಒಲಮೆಯ ಹೊನಲು ಕೃತಿಯಲ್ಲಿ ಬರೆಯುತ್ತಾರೆ-
ಮಹಿಮರಿಗೆ ದಿನದೊಳಗೆ ತಾಸುಗಳು ಹೆಚ್ಚಿತ್ತೆ?
ಅಹನಿವಿಡಿ ದುಡಿದರೆಲೊ ಇದ್ದ ಸಮಯದೊಳೆ |
ಬಹುತೇಕ ತಮ್ಮೆಲ್ಲ ಗುರಿಗೈದು ತೋರಿಹರು
ಸಹಜ ಸಮಯಪ್ರಜ್ಞೆ – ನವ್ಯಜೀವಿ ||
ಕೆಲವರು ತಾವು ಸಮಯಹರಣ ಮಾಡುವುದಲ್ಲದೆ ಇನ್ನಿತರರ ಸಮಯವನ್ನೂ ಹಾಳು ಮಾಡುತ್ತಾರೆ. ಆಧುನಿಕ ಯುಗದಲ್ಲಂತೂ ಮೊಬೈಲ್, ಸಾಮಾಜಿಕ ಜಾಲತಾಣಗಳಲ್ಲಿ ನಮ್ಮ ಅಮೂಲ್ಯ ಸಮಯ ಹರಿದು ಹೋಗುತ್ತಿದೆ. ತಂತ್ರಜ್ಞಾನವನ್ನು ಸಮಯ ಉಳಿಸಲು ಬಳಸಬೇಕೇ ಹೊರತು ಸಮಯಹರಣಕ್ಕಲ್ಲ ಎಂಬುದನ್ನು ಅರಿತರೆ ಶ್ರೇಯಸ್ಕರ.

ನ್ಯಾಯಪಥ *ದೇಹಲೀದೀಪನ್ಯಾಯ*


ಮಾನವ ಜನ್ಮ ದೊಡ್ಡದು. ಅದನ್ನು ಹಾನಿ ಮಾಡಿಕೊಂಡರೆ ಹುಚ್ಚಪ್ಪಗಳಾಗುತ್ತೇವೆ. ಏನು ಮಾನವ ಜನ್ಮದ ಸಾರ್ಥಕತೆ? ಲೌಕಿಕ ಅಭ್ಯುದಯವೊ, ಇಲ್ಲ ಪಾರಮಾರ್ಥಿಕ ನಿಃಶ್ರೇಯಸ್ಸೋ? ಎರಡೂ ಆವಶ್ಯಕ ತಾನೆ? ಅವೆರಡನ್ನೂ ಸಾಧಿಸುವ ಎಕೈಕ ಮಾರ್ಗ ’ಧರ್ಮ’ ಧರ್ಮದ ವ್ಯಾಖ್ಯೆಯೇ ಅದು-’ಯತೋಽಭ್ಯುದಯನಿಶ್ಶ್ರೇಯಸಿದ್ಧಿಃ ಸ ಧರ್ಮಃ’

ಎಷ್ಟೋ ಬಾರಿ ಎರಡು ಧರ್ಮಗಳ ಮಧ್ಯೆ ಸಂಘರ್ಷ, ಎರಡು ಕರ್ಮಗಳ ಮಧ್ಯೆಯೂ ಸಂಘರ್ಷ ಎದುರಾಗುತ್ತದೆ. ಕುಟುಂಬ ಹೆಚ್ಚೋ, ಸಮಾಜ ಹೆಚ್ಚೋ; ಆತ್ಮೋದ್ಧಾರ ಮೊದಲೊ, ಲೋಕೋದ್ಧಾರವೊ ಎಂಬೆಲ್ಲ ಪ್ರಶ್ನೆಗಳು ಎದುರಾಗುತ್ತವೆ. ಅಂತಹ ಸಂದರ್ಭದಲ್ಲಿ ಅನುಸರಿಸಬೆಕಾದ ಧರ್ಮ ಕರ್ಮಗಳು ’ಆತ್ಮನೋ ಮೋಕ್ಷಾರ್ಥಂ ಜಗದ್ಧಿತಾಯ ಚ’ ಎಂಬಂತಿರಬೇಕು ಎನ್ನುತ್ತಾರೆ ಪ್ರಾಜ್ಞರು.

ಅದೊಂದು ಸಣ್ಣ ಮನೆ. ಹೊರಜಗುಲಿ ಅಡುಗೆ ಮನೆ ಎರಡೇ. ಅವುಗಳ ಮಧ್ಯೆ ಒಂದು ಬಾಗಿಲು. ಕೂಲಿ ಮಾಡಿ ಬದುಕುವ ದಂಪತಿ. ಅವರಿಗೊಬ್ಬಳೇ ಮಗಳು. ರಾತ್ರಿ ಸಮಯ. ಅನಿರೀಕ್ಷಿತ ಅತಿಥಿಗಳ ಆಗಮನ. ಇರುವುದೊಂದೇ ದೀಪ. ಜಗುಲಿಯಲ್ಲಿಟ್ಟರೆ ಅಡುಗೆ ಮಾಡಲಾಗದು. ಅಡುಗೆಮನೆಗೆ ಕೊಂಡೊಯ್ದರೆ ಜಗುಲಿಯಲ್ಲಿರುವ ಅತಿಥಿಗಳನ್ನು ಕತ್ತಲೆಯಲ್ಲೇ ಮಾತನಾಡಿಸುವ ಪರಿಸ್ಥಿತಿ.

ಮಗಳು ಬುದ್ಧಿವಂತೆ. ದೀಪವನ್ನು ಹೊಸ್ತಿಲ ಮೇಲಿಟ್ಟಳು. ಒಳಗೂ ಬೆಳಕು, ಹೊರಗೂ ಪ್ರಕಾಶ. ದೇಹಲೀದೀಪನ್ಯಾಯ ಉಭಯಸಂಕಟವನ್ನು ನಿವಾರಿಸಿತು.

ಹೊಸ್ತಿಲ ಮೇಲಿಟ್ಟ ದೀಪ ಒಳವನ್ನೂ ಹೊರವನ್ನೂ ಬೆಳಗುವಂತೆ ನಮ್ಮ ಕರ್ಮ ಪ್ರಾಪಂಚಿಕ ಸುಖವನ್ನೂ ಪರಮಾರ್ಥವನ್ನೂ ಸಾಧಿಸುವಂತಿರಲಿ.

✍🏻 *ಮಹಾಬಲ ಭಟ್, ಗೋವಾ*

ನ್ಯಾಯಪಥ *ತಮೋದೀಪನ್ಯಾಯ*


ಪರಸ್ಪರ ವಿರುದ್ಧ ಸ್ವಭಾವದ ಅದೆಷ್ಟು ವಸ್ತುಗಳು ಈ ಜಗತ್ತಿನಲ್ಲಿಲ್ಲ? ಈ ವಿಶ್ವದಲ್ಲಿ ದುಷ್ಟ-ಶಿಷ್ಟ, ಒಳಿತು-ಕೆಡುಕು, ದೇವ-ದಾನವ ಹಾಗೆಯೇ ಕತ್ತಲೆ-ಬೆಳಕು ಎಲ್ಲವಕ್ಕೂ ಸ್ಥಾನವಿದೆ, ಅವರದ್ದೇ ಆದ ಕೆಲಸವಿದೆ. ಎಲ್ಲವೂ ಇದ್ದಾಗಲೇ ಪ್ರಪಂಚ ಸುಂದರವಾಗಿ ಕಾಣಿಸುವುದು. ’ರಾಮನಿರ್ದಂದು ರಾವಣನೊಬ್ಬನಿರ್ದನಲ’ ಎಂದ ಮಂಕುತಿಮ್ಮನಿಗೂ ಅದು ಜಗದ ನಿಯಮವಾಗಿ ತೋರಿದೆ.

ಈ ರೀತಿ ಪರಸ್ಪರ ವಿರುದ್ಧಗುಣಗಳ ವಸ್ತುಗಳೋ ವ್ಯಕ್ತಿಗಳೋ ಒಂದೇ ದೇಶಕಾಲದಲ್ಲಿರುವುದು ಪ್ರಕೃತಿಗೆ ಸಹಜವಾದ ಗುಣ. ಆದರೆ ಅವುಗಳಲ್ಲಿ ಕತ್ತಲೆ ಬೆಳಕುಗಳು ಮಾತ್ರ ವಿಶಿಷ್ಟವಾದವು. ಬೆಳಕಿದ್ದಲ್ಲಿ ಕತ್ತಲೆಯಿಲ್ಲ, ಕತ್ತಲೆಯಿದೆಯೆಂದರೆ ಬೆಳಕಿಲ್ಲವೆಂದೇ ಅರ್ಥ. ಅಂಧಕಾರವಿನಾಶವೇ ದೀಪದ ಹೇತು. ಕತ್ತಲೆಯನ್ನು ಶಪಿಸುವುದನ್ನು ಬಿಟ್ಟು ದೀಪವೊಂದನ್ನು ಹಚ್ಚು ಎನ್ನುತ್ತದೊಂದು ನಾಣ್ಣುಡಿ.
ಬೆಳಕು-ಕತ್ತಲೆಗಳಂತೆ ಜ್ಞಾನ-ಅಜ್ಞಾನಗಳು. ಹೃದಯದಲ್ಲಿ ಅಜ್ಞಾನ ಮನೆ ಮಾಡಿದವನಿಗೆ ಜಗತ್ತೇ ಕತ್ತಲೆ. ಜ್ಞಾನಮಯ ಪ್ರದೀಪ ಪ್ರಜ್ವಲಿಸಿದಾಗ ಅಜ್ಞಾನದ ಅಂಧಕಾರ ಪಲಾಯನವನ್ನು ಮಾಡುತ್ತದೆ.
ಇದು ವಿಚಿತ್ರವಾದರೂ ಸತ್ಯ.

ಬೆಳಕಿನಿಂದ ಎಲ್ಲವನ್ನೂ ನೋಡಬಹುದು ಆದರೆ ಕತ್ತಲೆಯನ್ನು ನೋಡಲಾಗದು. ಯಾರಾದರೂ ಅಜ್ಞಾನವನ್ನು ತಿಳಿದುಕೊಳ್ಳಬೇಕೆಂದು ಬಯಸಿದರೆ ಅವರು ದೀಪದಿಂದ ಕತ್ತಲೆಯನ್ನು ನೋಡಲು ಬಯಸುವವರಂತೆ ಮೂರ್ಖರು ಎನ್ನುತ್ತದೆ ಈ ಸುಭಾಷಿತ.

ಅಜ್ಞಾನಂ ಜ್ಞಾತುಮಿಚ್ಛೇದ್ಯೋ
ಮಾನೇನಾತ್ಯಂತಮೂಢಧೀಃ |
ಸ ತು ನೂನಂ ತಮಃ ಪಶ್ಯೇದ್ ದೀಪೇನೋತ್ತಮತೇಜಸಾ ||

ಇದೇ ತಮೋದೀಪನ್ಯಾಯ.

नारायण महादेव धोनि

 असङ्ख्यानां वीरयोधानां जन्मभूमिः इयं भारतमाता। अतः एव कश्चन कविः कवयति 'वन्ध्या न भारतजननी शूरसुतानां जन्मभूमिः' इति। प्रायेण सार्ध...