Sunday, January 22, 2017

ತಿಂಗಳಿಗೊಂದು ಪುಸ್ತಕ - ೫ - ನಮ್ಮಮ್ಮ ಅಂದ್ರೆ ನಂಗಿಷ್ಟ


ಇದು ಕನ್ನಡದ ಬಹುಮಾನ್ಯ ಲೇಖಕ ವಸುಧೇಂದ್ರರ ಸುಲಲಿತ ಪ್ರಬಂಧಗಳ ಗುಚ್ಛ. ಮೊದಲ ಪ್ರಬಂಧದ ಹೆಸರೇ ಪುಸ್ತಕದ್ದೂ ಕೂಡ. ಅಮ್ಮನ ಬಗ್ಗೆ ಸಾಮಾನ್ಯವಾಗಿ ಎಲ್ಲ ಬರಹಗಾರರೂ ಒಂದಾದರೂ ಲೇಖನವನ್ನೋ ಕವಿತೆಯನ್ನೋ ಬರೆದಿರುತ್ತಾರೆ. ಅವರ ವ್ಯಕ್ತಿತ್ವನಿರ್ಮಾಣದಲ್ಲಿ ಅಮ್ಮನ ಪಾತ್ರವನ್ನು ವರ್ಣಿಸದಿದ್ದರೆ ಅದು ಅವರ ಲೇಖಕತ್ವಕ್ಕೇ ಒಂದು ಕುಂದು ಎನಿಸುವುದು ಸಹಜ ಭಾವನೆ.
ವಸುಧೇಂದ್ರರ ಈ ಪ್ರಬಂಧ ಬಿಚ್ಚುಮನಸ್ಸಿನ ಬರಹ ಎನಿಸಿತು ನನಗೆ. ಎಳವೆಯಲ್ಲಿ ಮಕ್ಕಳಿಗಿರುವ ಅಸಹಾಯಕತೆಯೇ ವೃದ್ಧರಿಗೆ ಮುಪ್ಪಿನಲ್ಲಿ ಒದಗುತ್ತದೆ ಎನ್ನುವ ಸತ್ಯವನ್ನು ಲಲಿತವಾದ ಶೈಲಿಯಲ್ಲಿ ಮನಮುಟ್ಟುವಂತೆ ಚಿತ್ರಿಸಿದ್ದಾರೆ. ತಮ್ಮ ಮೇಲೆಯೇ ಅವಲಂಬಿತರಾದ ಮಕ್ಕಳನ್ನು ತಂದೆ ತಾಯಿಗಳು ಪ್ರೇಮದಿಂದ ಸಲಹಿದಂತೆ ಮಕ್ಕಳು ತಂದೆ ತಾಯಿಯರನ್ನು ಅವರ ಮುಪ್ಪಿನಲ್ಲಿ ನೋಡಿಕೊಳ್ಳಬೇಕು ಎಂಬ ನೀತಿ ಈ ಪ್ರಬಂಧದಲ್ಲಿ ಧ್ವನಿಸಿದೆ.

ಮುಂದಿನ ನಾಲ್ಕು ಪ್ರಬಂಧಗಳೂ ಅವರಮ್ಮನನ್ನು ಕೇಂದ್ರೀಕರಿಸಿಯೇ ಬರೆದವು. ಅವು ಲೇಖಕರ ತಾಯಿಯ ವಿಭಿನ್ನ ವ್ಯಕ್ತಿತ್ವವನ್ನು ತೆರೆದಿಟ್ಟಿವೆ.

ಅಮ್ಮನ ಬಗೆಗಿನ ಈ ಪ್ರಬಂಧಗಳ ಜೊತೆಗೆ ಲೇಖಕರು ತಮ್ಮ ಜೀವನದ ಅನೇಕ ಅನುಭವಗಳನ್ನು ಎರಕಹೊಯ್ದು ಬರೆದ ಪ್ರಬಂಧಗಳನ್ನೂ ಸೇರಿಸಿದ್ದಾರೆ. ಅದರಲ್ಲಿ ಕೆಲವು ವಿವಿಧ ಘಟನೆಗಳ, ವಿವಿಧ ವ್ಯಕ್ತಿಗಳ ಜೀವನದ ಸಂಕಲನ. ”ಮುಸ್ಸಂಜೆ ಮುರಳಿ’ ಎಂಬ ಲೇಖನ ಇಳಿವಯಸ್ಸಿನವರು ಬೆಂಗಳೂರಿನಲ್ಲಿ ಕಾಲಕಳೆಯುವ ವಿಭಿನ್ನ ವಿಧಾನಗಳನ್ನು ತೆರೆದಿಟ್ಟಿದೆ. ”ತತ್ತಿ ಇಡದ ಹಕ್ಕಿಗಳ ತಂಗುದಾಣದಲ್ಲಿ’ ಎಂಬ ಪ್ರಬಂಧ ವಿಮಾನನಿಲ್ದಾಣದ ವಿನೋದಸನ್ನಿವೇಶಗಳ ಸಂಗ್ರಹವಾಗಿದೆ.


ಅಷ್ಟೇನೂ ಪ್ರೌಢವಾಗಿಲ್ಲದ ಈ ಕೃತಿ ಆರಂಭಿಕ ಓದುಗರಿಗೆ ಮುದನೀಡುವುದಂತೂ ನಿಜ. ವಸುಧೇಂದ್ರರ ಸುಂದರ ಲಲಿತ ಶೈಲಿ ಕೃತಿಯನ್ನು ಓದಿಸಿಕೊಂಡು ಹೋಗುತ್ತದೆ. ೨೦೦೬ರಲ್ಲಿ ರಚಿತವಾಗಿ ಈವರೆಗೆ ಹದಿನೈದು ಮುದ್ರಣ ಕಂಡ ಈ ಕಿರು ಹೊತ್ತಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪುಸ್ತಕ ಬಹುಮಾನಕ್ಕೆ ಪಾತ್ರವಾಗಿದೆ. ೧೧೬ ಪುಟಗಳ ಪುಸ್ತಕದ ಬೆಲೆ ೮೦ ರೂಪಾಯಿಗಳು.

नारायण महादेव धोनि

 असङ्ख्यानां वीरयोधानां जन्मभूमिः इयं भारतमाता। अतः एव कश्चन कविः कवयति 'वन्ध्या न भारतजननी शूरसुतानां जन्मभूमिः' इति। प्रायेण सार्ध...