Monday, June 12, 2017

ನಾಟಕವ ನೋಡ್ ಬ್ರಹ್ಮಾಂಡ ರಂಗಸ್ಥಳದಿ

ಜಗತ್ತು ಒಂದು ನಾಟಕರಂಗ ಅದರಲ್ಲಿ ಅವನು ಸೂತ್ರಧಾರಿ ನಾನು ಪಾತ್ರಧಾರಿ ಎಂಬ ವಿಚಾರ ಇಂದು ನಿನ್ನೆಯದಲ್ಲ. ನಾಟಕದಲ್ಲಿ ನಟನೊಬ್ಬ ತನ್ನಿಚ್ಛೆಯಂತೆ ನಟಿಸಬಹುದು. ಬೇಡವೆಂದರೆ ಬಿಡಬಹುದು. ಸೂತ್ರಧಾರನ ನಿರ್ದೇಶನವಿದ್ದರೂ ಸಹ ನಟನೆಯಲ್ಲಿ ಸ್ವಾತಂತ್ರ್ಯವಿದೆ. ದೃಶ್ಯಗಳ ಮಧ್ಯೆ ವಿಶ್ರಾಂತಿ ಸಿಗುತ್ತದೆ. ಆದರೆ ಈ ಜಗವೆಂಬ ನಾಟಕರಂಗವನ್ನು ಪ್ರವೇಶಿಸಿದ ಜೀವಿ ನಟನೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವೆ? ಒಮ್ಮೆ ರಂಗಸ್ಥಳದಿಂದ ಕಾಲ್ತೆಗೆದರೆ ಮತ್ತೆ ಪ್ರವೇಶವಿಲ್ಲ. ಅಥವಾ ಮತ್ತಾವುದೋ ಪಾತ್ರವಾಗಿ ಮತ್ತೆ ಪ್ರವೇಶ. ಸೂತ್ರಧಾರಿಯ ಆಜ್ಞೆಯನ್ನು ಅತಿಕ್ರಮಿಸಲಾಗದು. ಕುಣಿಕುಣಿದು ಸುಸ್ತಾದರೂ ಸೂತ್ರಧಾರಿ ಇಚ್ಛಿಸದಿದ್ದರೆ ವಿರಮಿಸಲಾರೆವು.

ಈ ನಾಟಕರಂಗದ ಪಾತ್ರಗಳಲ್ಲಿ ಅದೇನು ವೈವಿಧ್ಯತೆ! ಭಿಕ್ಷುಕನಿಂದ ಮುಮುಕ್ಷುವಿನವರೆಗೆ ವಿವಿಧ ರಸಭಾವಗಳ ಪಾತ್ರಗಳು. ದಿನಕ್ಕೆ ಸಾವಿರಾರು ರೂಪಾಯಿಗಳನ್ನು ಸಂಪಾದಿಸುವ ಶ್ರೀಮಂತ ಭಿಕ್ಷುಕನೂ, ಬ್ಯಾಂಕಿನಲ್ಲಿ ಕೋಟಿಗಟ್ಟಲೆ ಸಾಲಹೊಂದಿರುವ ಬಡ ಉದ್ಯಮಿಯೂ ಇಲ್ಲಿನ ವಿಚಿತ್ರ ಪಾತ್ರಧಾರಿಗಳು. ಒಂದೆಡೆ ನಾಗರೀಕತೆಯನ್ನು ಮೈಗೂಡಿಕೊಂಡು ಸುಸಂಸ್ಕೃತರಂತೆ ಬಾಳಲಿಚ್ಛಿಸುವ ಅವಿದ್ಯಾವಂತರಿದ್ದರೆ ಇನ್ನೊಂದೆಡೆ ಪ್ರಾಣಿಗಳಂತೆ ಆಹಾರ ನಿದ್ರಾ ಮೈಥುನಗಳನ್ನಷ್ಟೇ ಜೀವನಕ್ರಮವನ್ನಾಗಿರಿಸಿಕೊಂಡ ವಿದ್ಯಾವಂತರು ಕಾಣಸಿಗುತ್ತಾರೆ. ಬೆಳಿಗ್ಗೆ ೮ ಗಂಟೆಯ ಹೊತ್ತಿಗೆ ಮಾಪುಸಾ ಪಟ್ಟಣವನ್ನು ಪ್ರವೇಶಿಸಿದರೆ ಬಸ್ ನಿಲ್ದಾಣದ ಪಕ್ಕದಲ್ಲಿರುವ ಸರ್ಕಲ್ಲಿನಲ್ಲಿ ಜನಸಂಮರ್ದದಿಂದ ಕೂಡಿದ ’ಕೂಲಿಕಾರ ಮಾರುಕಟ್ಟೆ’ ಕಾಣಿಸುತ್ತದೆ. ಗೋವಾದ ಪ್ರಮುಖ ಪಟ್ಟಣಗಳಲ್ಲೆಲ್ಲ ಈ (ಅ)ವ್ಯವಸ್ಥೆ ಇದೆ. ತಮ್ಮ ದಿನದ ಶ್ರಮವನ್ನು ಮಾರಾಟಮಾಡಲು ತುದಿಗಾಲಲ್ಲಿ ನಿಂತಿರುವ ಶ್ರಮಿಕರನ್ನು ನೋಡಿದರೆ ಹರಿಶ್ಚಂದ್ರ ನೆನಪಾಗುತ್ತಾನೆ. ಬೆಳಿಗ್ಗೆ ಎಂಟಕ್ಕೆ ಮಧ್ಯಾಹ್ನದ ಊಟವನ್ನೂ ಕಟ್ಟಿಕೊಂಡು ಹೆಂಡತಿ ಮಕ್ಕಳೊಂದಿಗೆ ತಮ್ಮ ಶ್ರಮವನ್ನು ಕೊಳ್ಳುವ ಗಿರಾಕಿಗಾಗಿ ಅವರು ಕಾಯುತ್ತಿರುತ್ತಾರೆ. ನೂರಾರು ಜನರಲ್ಲಿ ತಾವೂ ಒಬ್ಬರಾಗಿ ನಿಂತು ಯಾರಾದರೂ ಇವತ್ತಿನ ಅನ್ನ ನೀಡಬಲ್ಲರೆ ಎಂಬ ಕಾತರದ ಕಾಯುವಿಕೆಯದು. ಅಲ್ಲಿಯೇ ಒಂದೆರಡು ತಾಸು ಕಳೆದರೆ ಅಂದಿನ ದಿನದ ಉಪವಾಸದ ಕರಿಛಾಯೆ ಮುಖದ ಮೇಲೆ ಮೂಡಲಾರಂಭಿಸುತ್ತದೆ. ನಿನ್ನೆಯ ಹಣ ಖರ್ಚಾಗಿದೆ, ಇಂದು ಸಂಪಾದನೆಯಿಲ್ಲ, ನಾಳೆ ದೇವರೇ ಗತಿ.

ಇವನ್ನೆಲ್ಲ ನೋಡುತ್ತಿದ್ದರೆ ದೇವರು ನಮಗೆ ಎಂತಹ ಅದ್ಭುತ ಭಾಗ್ಯವನ್ನು ಕರುಣಿಸಿದ್ದಾನೆ ಎನ್ನಿಸದಿರದು. ಸುಸಂಸ್ಕೃತ ಕುಟುಂಬ, ಮನೋಲ್ಲಾಸಕರ ವಿದ್ಯೆ, ಉದ್ಯೋಗ ಮಾಡಿ ಬಂದ ನಂತರವೂನಮ್ಮಿಚ್ಛೆಯಂತೆ ಕೆಲಸ ಮಾಡಲು ಸಾಕಷ್ಟು ಸಮಯ, ಬೆಚ್ಚನೆಯ ಮನೆ, ವೆಚ್ಚಕ್ಕೆ ಹೊನ್ನು..... ಮತ್ತೇನು ಬೇಕು?

ಆಹಾರ ವಿದ್ಯಾ ಭಯ ಮೈಥುನಗಳು ಪ್ರಾಣಿಗಳಿಗೂ ಮನುಷ್ಯರಿಗೂ ಸಮಾನವಾಗಿರುವ ಗುಣಗಳು. ಮನುಷ್ಯ ತನ್ನ ಜೀವನವನ್ನು ಇಷ್ಟಕ್ಕೇ ಸೀಮಿತ ಮಾಡಿಕೊಂಡರೆ ಬಾಲ ಕೋಡುಗಳಿಲ್ಲದ ಪ್ರಾಣಿಯಾಗುತ್ತಾನೆ. ಇಂದು ಮನುಷ್ಯ ಪಾಣಿಗಳೇ ಹೆಚ್ಚಾಗಿದ್ದಾರೆ. ಕೆಲವರು ಅನ್ಯ ವಿಧಿಯಿಲ್ಲದೆ, ಇನ್ನು ಕೆಲವರು ಬುದ್ಧಿ ಹೆಚ್ಚಾಗಿ. ದಿನಕ ಕೋಳಿಗಾಗಿ ದುಡಿಯುವ ಕಾರ್ಮಿಕರು ಇನ್ನೇನು ಮಾಡಬಹುದು? ಹೊಟ್ಟೆ ತುಂಬಿಸಿಕೊಳ್ಳಲೇ ಸಮಯವಿರದ ಅವರಿಗೆ ಉಳಿದ ವಿಷಯಗಳ ಕಡೆಗೆ ಗಮನ ಹೋದೀತೆ? ವಿದ್ಯಾಭ್ಯಾಸವೂ ಇಲ್ಲದೆ, ಜ್ಞಾನವೆಂಬ ಕಣ್ಣುಗಳಿಂದ ವಂಚಿತರಾಗಿ ಕುರುಡರಂತೆ ಅಧಾನುಕರಣದ ಯಾಂತ್ರಿಕ ಜೀವನವನ್ನು ನದೆಸುತ್ತಾರೆ. ಒಂದು ರೀತಿಯಲ್ಲಿ ನೋಡುತ್ತ ಹೋದರೆ ನಮ್ಮ ದೇಶದ ಏಳು ಬೀಳುಗಳಿಗೆ ಇವರ ಕೊಡುಗೆ ಗೌಣ. ಆಗಿನ ಕಾಲದಲ್ಲಿ ರಾಮ ಮನೋಹರ ಲೋಹಿಯಾ ಹೇಳಿದ ಮಾತು ಗಮನಾರ್ಹ. ಸುಮಾರು ೧೫% ನಷ್ಟಿರುವ ವಿದ್ಯಾವಂತರೇ ಈ ದೇಶದ ಏಳ್ಗೆಗೂ ಅವ್ಯವಸ್ಥೆಗೂ ಕಾರಣ. ಇವರು ಬುದ್ಧಿ ಹೆಚ್ಚಾಗಿರುವ ಮನುಷ್ಯ ಪ್ರಾಣಿಗಳು.

ಹೀಗೆ ಯಾವ ಪಾತ್ರ ನಾಯಕ, ಯಾವ ಪಾತ್ರ ಖಳನಾಯಕ, ಯಾರು ಕಳ್ಳ , ಯಾರು ಸುಳ್ಳ, ಯಾರು ಸತ್ಯವಾದಿ ಎಂಬ ಗುಟ್ಟನ್ನು ಬಿಟ್ಟುಕೊಡದ ಈ ನಾಟಕದ ಸೂತ್ರಧಾರಿ ನಿಜಕ್ಕೂ ಅದ್ಭುತ ವ್ಯಕ್ತಿ ಅಲ್ಲ ಶಕ್ತಿ.

೨೮.೦೨.೨೦೦೬ ರಂದು ಬರೆದಿದ್ದು.

नारायण महादेव धोनि

 असङ्ख्यानां वीरयोधानां जन्मभूमिः इयं भारतमाता। अतः एव कश्चन कविः कवयति 'वन्ध्या न भारतजननी शूरसुतानां जन्मभूमिः' इति। प्रायेण सार्ध...