Wednesday, August 24, 2016

’ಕರ್ಮ’ ಕಾದಂಬರಿ

ಶ್ರೀ ಕರಣಂ ಪವನ ಪ್ರಸಾದರ ಚೊಚ್ಚಲ ಕಾದಂಬರಿ ’ಕರ್ಮ’ವನ್ನು ಇದೀಗ ಓದಿ ಮುಗಿಸಿದೆ. ಶ್ರೀಕಂಠ ದೀಕ್ಷಿತ ಎಂಬ ಬ್ರಾಹ್ಮಣ ಸತ್ತಾಗ ನಡೆಯುವ ಅವರ ಔರ್ಧ್ವದೈಹಿಕ ಕರ್ಮಗಳ ಸುತ್ತ ಹೆಣೆದ ಕಥಾಹಂದರ ಈ ಕೃತಿ
.
ನಮ್ಮ ಧಾರ್ಮಿಕ ಆಚರಣೆಗಳೆಲ್ಲ ಮೌಢ್ಯ ಎಂದು ಪ್ರತಿಪಾದಿಸುವ ಒಂದು ಪಂಗಡ, ಇಲ್ಲ, ಎಲ್ಲವೂ ವೈಜ್ಞಾನಿಕ ಎಂದು ವಾದಿಸುವ ಇನ್ನೊಂದು ಪಂಗಡ ಇವುಗಳ ಜಗಳದಲ್ಲಿ ಸತ್ಯದ ಕೂಸು ಬಡವಾಗಿದೆ. ಈ ಎರಡೂ ಪಂಗಡಗಳಲ್ಲಿ ಕಾಣಬರುವ ಮುಖ್ಯ ಕೊರತೆ ಅಧ್ಯಯನದ್ದು. ಇಬ್ಬರದ್ದೂ ಪೂರ್ವಗ್ರಹ ವಾದವೇ. ಆಧುನಿಕ ಜೀವನಶೈಲಿಗೆ ಮಾರುಹೋದವರು ತಮ್ಮನ್ನು ತಾವು ಸಮರ್ಥಿಸಿಕೊಳ್ಳುವ ಸಲುವಾಗಿ ಮೊದಲ ಪಂಗಡಕ್ಕೆ ಸೇರಿದರೆ, ಪರಂಪರಾಗತವಾಗಿ ಬಂದಿರುವ ಆಚರಣೆಗಳೇ ನಮ್ಮನ್ನು ಮುಕ್ತಿಯೆಡೆಗೆ ಒಯ್ಯುತ್ತವೆ, ಅವು ನಮ್ಮ ಕರ್ತವ್ಯಕರ್ಮ ಎಂದು ತಿಳಿದವರು ಎರಡನೆಯ ಪಂಗಡಕ್ಕೆ ಸೇರುತ್ತಾರೆ. ಪ್ರಸ್ತುತ ಕಾದಂಬರಿಯ ತಿರುಳೇ ಅದು. ಆಧುನಿಕತೆಯ ಲಕ್ಷಣ ಎಂಬಂತೆ ಪ್ರತಿಪಾದಿತವಾಗುವ ಮಾಂಸ ಭಕ್ಷಣ, ಮದಿರಾಪಾನ, ಹೆಣ್ಣಿನ ಸಹವಾಸ, ಕ್ಲಬ್ಬಿನ ನರ್ತನ ಇವೆಲ್ಲವಕ್ಕೂ ಒಗ್ಗಿಕೊಂಡಿದ್ದ ಬ್ರಾಹ್ಮಣ ಗ್ರಹಸ್ಥ(?)ನೊಬ್ಬ ತನ್ನಪ್ಪನ ಅಪರ ಕ್ರಿಯೆಯನ್ನು ಮಾಡಬೇಕಾಗಿ ಬಂದಾಗ ಅವನಲ್ಲಾಗುವ ತಳಮಳ, ಅಲ್ಲಿನ ಕರ್ಮಾಂಗಗಳನ್ನು ಒಪ್ಪಲಾರದ, ಒಪ್ಪದೇ ಇರಲಾರದ ಸ್ಥಿತಿಯಲ್ಲಿನ ತೊಳಲಾಟಗಳೇ ಕಾದಂಬರಿಯ ಜೀವವಸ್ತು. ಬೇರೆಯವರ ಮೇಲಿನ ನಿನ್ನ ಅವಲಂಬನೆ ನಂಬಿಕೆ, ನಿನ್ನ ಮೇಲಿನ ನಿನ್ನ ಅವಲಂಬನೆ ಶ್ರದ್ಧೆ. ನಂಬಿಕೆ ಚಂಚಲ, ಶ್ರದ್ಧೆ ಅಚಲ ಎಂಬುದು ಲೇಖಕರ ವೈಚಾರಿಕ ಸೂತ್ರ. ಸುರೇಂದ್ರನೆಂಬ ಐ.ಟಿ. ಜೀವಿ, ಅವನಿಗೆ ತಕ್ಕಳಾದ ಸ್ನೇಹಾ ಎಂಬ ಆಧುನಿಕ ಗರತಿ, ನರಹರಿಯೆಂಬ ಹಳ್ಳಿಯ ಬ್ರಾಹ್ಮಣಯುವಕ, ವೈಚಾರಿಕ ನಾಟಕದ ದಿಗ್ದರ್ಶಕ ಪುರುಷೋತ್ತಮ, ವಿದೇಶಕ್ಕೂ ಹೋಗಿಬಂದು ಇಂಗ್ಲೀಷ ಭಾಷೆಯನ್ನೂ ಆಡಬಲ್ಲ ಕರ್ಮಠ ಪುರೋಹಿತ ವೆಂಕಟೇಶ ಭಟ್ಟರು ಇವೆಲ್ಲ ಕೃತಿಕಾರನಿಂದ ಸೃಷ್ಟಿಸಲ್ಪಟ್ಟ ಸುಂದರ ಪಾತ್ರಗಳು.

ಇದನ್ನೊಂದು ವೈಚಾರಿಕ ಕಾದಂಬರಿ ಎನ್ನಬಹುದು. ಹದಿನೈದು ದಿನಗಳ ಕರ್ಮಾಂಗದ ವಿಶದ ನಿರೂಪಣೆ ಗ್ರಂಥಕರ್ತನ ಅಧ್ಯಯನಶೀಲತೆಗೆ ಹಿಡಿದ ಕೈಗನ್ನಡಿ. ಅಲ್ಲಲ್ಲಿ ಉದ್ಧರಿಸಿರುವ ಸಂಸ್ಕೃತ ಶ್ಲೋಕಗಳು ಹಾಗೂ ಕರ್ಮಾಂಗ ಮಂತ್ರಗಳು ಶುದ್ಧವಾಗಿದ್ದು (ಆರ್.ಗಣೇಶರು ತಿದ್ದುವಲ್ಲಿ ಸಹಕರಿಸಿದ್ದಾರೆ ಎಂದು ಲೇಖಕರೇ ಉಲ್ಲೇಖಿಸಿದ್ದಾರೆ) ಸಂಸ್ಕೃತಜ್ಞರಿಗೂ ಕಿರಿಕಿರಿಯನ್ನುಂಟುಮಾಡುವುದಿಲ್ಲ. ಲೇಖಕರ ಮೊದಲ ಕೃತಿಯಾದುದರಿಂದ ನಿರೂಪಣಾ ಶೈಲಿಯಲ್ಲಿನ ಸ್ವಲ್ಪಮಟ್ಟಿನ ಶಿಥಿಲತೆ ಕ್ಷಮಾರ್ಹ. ಈ ಕೃತಿ ಮೂರೇ ವರ್ಷಗಳಲ್ಲಿ ನಾಲ್ಕು ಮುದ್ರಣಗಳನ್ನು ಕಂಡಿದೆ. ಕನ್ನಡ ಸಾಹಿತ್ಯ ಪ್ರಪಂಚದ ಮಟ್ಟಿಗೆ ಇದು ಒಂದು ಸಾಧನೆಯೇ. ಮುದ್ರಾರಾಕ್ಷಸನ ಹಾವಳಿಗೆ ತುತ್ತಾಗದೆ ಓದುಗರ ಮನಗೆಲ್ಲುವ ಈ ಕೃತಿ ನಮ್ಮ ಮಸ್ತಕಕ್ಕೆ ಹಾಗೂ ಪುಸ್ತಕಸಂಗ್ರಹಕ್ಕೆ ಸೇರುವ ಯೋಗ್ಯತೆಯನ್ನು ಹೊಂದಿದೆ. ಪುಟಗಳು ೧೬೧; ಬೆಲೆ ೧೩೫ ರೂ. ಪ್ರಕಾಶನ: ಕೊನ್ ಕೇವ್ ಮೀಡಿಯಾ ಕಂ.,ಬೆಂಗಳೂರು. ವಿದ್ವಾನ್ ನವೀನ ಭಟ್ಟ ಗಂಗೋತ್ರಿಯವರು ಈ ಕಾದಂಬರಿಯನ್ನು ಇಂಗ್ಲೀಷಿಗೆ ಅನುವಾದಿಸಿದ್ದು ಅದೂ ಕೂಡ ಲಭ್ಯವಿದೆ.

नारायण महादेव धोनि

 असङ्ख्यानां वीरयोधानां जन्मभूमिः इयं भारतमाता। अतः एव कश्चन कविः कवयति 'वन्ध्या न भारतजननी शूरसुतानां जन्मभूमिः' इति। प्रायेण सार्ध...