Monday, April 24, 2017

ದೇಹೋ ದೇವಾಲಯ: ಪ್ರೋಕ್ತ:

ದೇಹೋ ದೇವಾಲಯ: ಪ್ರೋಕ್ತ:
ವೇದಗಳು ಭಾರತೀಯ ತತ್ತ್ವಜ್ಞಾನದ ಅಡಿಗಲ್ಲುಗಳು. ವೇದಪ್ರಾಮಾಣ್ಯವನ್ನೂ ದೇವರ ಅಸ್ತಿತ್ವವನ್ನೂ ನಂಬುವ ಜನರನ್ನು ಆಸ್ತಿಕರೆಂದು ಕರೆಯುತ್ತಾರೆ. ಇದಕ್ಕೆ ವಿರುದ್ಧ ಮನೋಭಾವದವರು ನಾಸ್ತಿಕರು. ನಮ್ಮ ಪರಂಪರೆಯಲ್ಲಿ ಆಸ್ತಿಕರಿಗೆ ವಿಶೇಷವಾದ ಗೌರವವಿದ್ದರೂ ನಾಸ್ತಿಕವಾದವನ್ನು ಕಡೆಗಣಿಸಿಲ್ಲ. ಅವರಿಗೆ ಚಾರ್ವಾಕ(ಸುಂದರ, ಆಕರ್ಷಕ ಮಾತುಳ್ಳವರು) ಎಂಬ ಉಪಾಧಿಯನ್ನು ಕೊಟ್ಟು ಅವರ ’ಋಣಂ ಕೃತ್ವಾ ಘೃತಂ ಪಿಬೇತ್’ ಎಂಬ ವಾದವನ್ನು ಆಸ್ತಿಕದರ್ಶನದ ಪೂರ್ವಪಕ್ಷವಾಗಿ ತೆಗೆದುಕೊಳ್ಳಲಾಗಿದೆ.

’ದೇವರು ಮಾನವರನ್ನು ಸೃಷ್ಟಿಸಿದ್ದಾನೋ ಅಥವಾ ಮಾನವ ದೇವರನ್ನು ಸೃಷ್ಟಿಸಿದ್ದಾನೋ’ ಎಂಬುದು ಆಧುನಿಕ ಯುಗದಲ್ಲಿ ಚರ್ಚಾಸ್ಪದವಾದ ವಿಚಾರ. ದೇವರ ಸರ್ವಶಕ್ತಿಮತ್ವವನ್ನೂ ಜೀವರ ಅಲ್ಪಶಕ್ತಿತ್ವವನ್ನೂ ಒಪ್ಪಿರುವ ಆಸ್ತಿಕರು ಮನುಷ್ಯನನ್ನು ದೇವರು ಸೃಷ್ಟಿಸಿದ್ದಾನೆಂದು ಕೊಂಡಾಡಿದರೆ ನಾಸ್ತಿಕರು ಎರಡನೆಯ ವಾದವನ್ನು ಮುಂದಿಡುತ್ತಾರೆ. ದೇವರುಗಳಿಗೆಲ್ಲ ಸಂಸಾರವನ್ನು ಕಲ್ಪಿಸಿ ವಿವಿಧ ಕಥೆಗಳನ್ನು ಹೆಣೆದಿರುವುದನ್ನು ನೋಡಿದರೆ ದೇವರು ಮನುಷ್ಯನ ಕಲ್ಪನೆಯ ಫಲವೆಂದೇ ಹೇಳಬೇಕಾಗುವುದು. ಏನೇ ಆದರೂ ದೇವರ ಕಲ್ಪನೆಯೇ ಒಂದು ಅದ್ಭುತ. ದುಷ್ಪ್ರವೃತ್ತಿಯ ತ್ಯಾಗಕ್ಕಾಗಿ ಸತ್ಪ್ರವೃತ್ತಿಯ ಉಪಾಸನೆಗಾಗಿ ದೇವರನ್ನು ಉಪಯೋಗಿಸಿಕೊಂಡರೆ ಕಲ್ಪನೆಯೇ ಆದರೂ ಸಾಧು. ಕೆಲವೊಂದು ಸಂದರ್ಭಗಳಲ್ಲಿ ಈ ’ದೇವರು” ಜನರನ್ನು ಮೋಸಗೊಳಿಸುವುದಕ್ಕೂ ಉಪಯೋಗಿಸಲ್ಪಡುತ್ತಾನೆ ಎನ್ನುವುದು ವಿಷಾದಕರ.

ಆಧ್ಯಾತ್ಮ ಪ್ರಪಂಚದಲ್ಲಿ ಸಗುಣೋಪಾಸನೆ ಹಾಗೂ ನಿರ್ಗುಣೋಪಾಸನೆ ಎಂದು ಉಪಾಸನೆಯಲ್ಲಿ ಎರಡು ವಿಧಗಳಿವೆ. ಪ್ರಪಂಚದ ಚರಾಚರಗಳನ್ನೂ ನಿಯಂತ್ರಿಸುವ ನಿಯಾಮಕ ಶಕ್ತಿ ನಿರ್ಗುಣ ಎಂಬುದೊಂದು ವಾದವಾದರೆ, ಅದನ್ನೇ ಕೈಕಾಲುಗಳಿಂದ ಕೂಡಿದ ಮಾನವ ದೇಹದ ಕಲ್ಪನೆಯಲ್ಲಿ ಒಡಮೂಡಿಸಿ ಉಪಾಸಿಸುವ ಪಂಥ ಇನ್ನೊಂದಿದೆ. ನಿರ್ಗುಣೋಪಾಸನೆ ಸುಲಭದ ಮಾತಲ್ಲ. ಆಧ್ಯಾತ್ಮ ಕ್ಷೇತ್ರದಲ್ಲಿ ವಿಶೇಷ ಸಾಧನೆ ಮಾಡಿದವರಿಗೆ ಮಾತ್ರ ಅದು ಸಾಧ್ಯ. ಸಾಮಾನ್ಯರಿಗೆ ಭಜಿಸಲು ಕಣ್ಣ ಮುಂದೊಂದು ಆಕೃತಿ ಬೇಕು. ನಿರ್ಗುಣೋಪಾಸನೆಯ ಮೂಲತತ್ತ್ವ-
ದೇಹೋ ದೇವಾಲಯ: ಪ್ರೋಕ್ತ: ಜೀವೋ ದೇವ: ಸದಾಶಿವ:|
ತ್ಯಜೇದಜ್ಞಾನನಿರ್ಮಾಲ್ಯಂ ಸೋಹಂಭಾವೇನ ಪೂಜಯೇತ್ ||
ದೇಹವನ್ನೇ ದೇವಾಲಯವೆಂದು ಗಣಿಸಿ, ಒಳಗಿರುವ ಆತ್ಮವನ್ನೇ ಸದಾಶಿವನೆಂದು ಗ್ರಹಿಸುವ ಕಲ್ಪನೆಯೇ ಅದ್ಭುತ. ಈ ವಿಚಾರ ನನ್ನ ಮನದಲ್ಲಿ ಹರಿದಾಡತೊಡಗಿದ ಮೇಲೆ ದೇವಾಲಯಗಮನವೇ ಕಡಿಮೆಯಾಗಿದೆ. ಆದರೆ ಮಾನಸಿಕವಾದ ಕ್ಲೇಶಗಳುಂಟಾದಾಗ ದೈವೀ ಪ್ರಕೋಪವೇ ಇರಬಹುದೆಂಬ ಚಿಂತನೆ ಗರಿಗೆದರಿ ಮತ್ತೆ ನನ್ನನ್ನು ದೇವರ ಮೂರ್ತಿಯ ಮುಂದೆ ನಿಲ್ಲುವಂತೆ ಮಾಡುತ್ತದೆ. ಗೋವಾಕ್ಕೆ ಬಂದ ಮೇಲೆ ಶಿವರಾತ್ರಿಯ ದಿನಗಳಂದು ಯಾವುದೇ ದೇವಾಲಯಕ್ಕೆ ಹೋಗದೆ ಮನೆಯಲ್ಲಿಯೇ ಉಪವಾಸ ಮಾಡಿದ್ದೆ. ಮೊನ್ನೆ ಸಹೋದ್ಯೋಗಿಯೊಬ್ಬರು ’ಶಿವರಾತ್ರಿಯಂದು ಎಲ್ಲಿಗೆ ಹೋಗುವೆ?’ ಎಂದು ಕೇಳಿದಾಗ ಮೇಲಿನ ಶ್ಲೋಕವನ್ನೇ ಹೇಳಿದ್ದೆ. ಅದೇ ದಿನ ಸಂಜೆ ಅಕಸ್ಮಾತ್ತಾಗಿ ಮಿತ್ರ ಚಿನ್ಮಯನ ದೂರವಾಣಿ ಕರೆ ಬಂತು. ಆ ದಿನ ಶಾಲೆಗೆ ಬಿಡುವಿರುವುದರಿಂದ ಪುಸ್ತಕದ ಕೆಲಸವನ್ನು ಮುಗಿಸೋಣ ಎಂದು ಅವನ ಮನೆಗೆ ಕರೆದ. ಅವನ ಮನೆ ಇರುವುದು ಕಾಣಕೋಣ ಎಂಬ ಊರಿನಲ್ಲಿ ಮಲ್ಲಿಕಾರ್ಜುನ ದೇವರ ಸನ್ನಿಧಿಯಲ್ಲಿ. ಹಾಗಾಗಿ ಅಯಾಚಿತವಾಗಿ ಜ್ಯೋತಿರ್ಲಿಂಗವನ್ನು ಬಿಲ್ವದಳಗಳಿಂದ ಅರ್ಚಿಸುವ ಅವಕಾಶ ಒದಗಿತು. ನಾನು ಈ ಅವಕಾಶವನ್ನು ಬಯಸಿರದಿದ್ದರೂ ಶಿವನೇ ನನ್ನನ್ನು ಅಲ್ಲಿಗೆ ಎಳೆದನೆ? ನನ್ನಿಂದ ಪೂಜೆ ಪಡೆಯಬೇಕೆಂಬ ಬಯಕೆ ಅವನಿಗೇ ಇದ್ದರೆ ನಾನೆಷ್ಟರವನು ತಿರಸ್ಕರಿಸಲಿಕ್ಕೆ?

ದೇವರಿಗೆ ಹರಕೆ ಹೊತ್ತುಕೊಳ್ಳುವುದೂ ಒಮ್ಮೊಮ್ಮೆ ಸ್ವಾರ್ಥದಿಂದ ಕೂಡಿದ ಮೂರ್ಖತೆ ಎಂದೆನಿಸುತ್ತದೆ. ಅದೊಂದು ರೀತಿಯ ಲಂಚಾವತಾರ ಎಂದು ಅದೆಷ್ಟೋ ಬಾರಿ ಅನಿಸಿದ್ದಿದೆ. ಆದರೆ ಕಷ್ಟಗಳು ಬಂದಾಗ ಹರಕೆ ಹೊತ್ತುಕೊಂಡು ಸಮಸ್ತ ಭಾರವನ್ನೂ ದೇವರ ಮೇಲೆ ಹಾಕಿ ಮಾನಸಿಕ ಸಮಾಧಾನ ಹಾಗೂ ಕಷ್ಟದ ಪರಿಹಾರ ಎರಡೂ ಆಗಿರುವ ಅನುಭವವಿದೆ. ದೇವಾಲಯಗಮನ, ಭಜನೆ ಇವೆಲ್ಲ ವ್ಯರ್ಥವಲ್ಲ. ಡಿ.ವಿ.ಜಿ. ಎನ್ನುವಂತೆ-
ದೇವಮಂದಿರ ಭಜನೆ ಪೂಜೆ ಪ್ರಸಾದಗಳು
ಜೀವನದಲಂಕಾರ ಮನಸಿನುದ್ಧಾರ |
ಭಾವವಂ ಕ್ಷುಲ್ಲಜಗದಿಮ್ ಬಿಡಿಸಿ ಮೇಲಕೊಯ್ವ
ದಾವುದಾದೊಡಮೊಳಿತು – ಮಂಕುತಿಮ್ಮ ||
ನಾನು ಅದ್ವೈತ ಪರಂಪರೆಯನ್ನು ಮೆಚ್ಚುವುದು ಒಂದೇ ಕಾರಣಕ್ಕಾಗಿ - ಅದು ಸಮಾನತೆಯನ್ನು ಪ್ರತಿಪಾದಿಸುತ್ತದೆ. ’ಜೀವರೆಲ್ಲ ಚೈತನ್ಯದ ಕಣಗಳು; ಎಲ್ಲ ಜೀವರೂ ಒಂದೇ ದೇವರ ಅಂಶ’ ಎಂಬ ತತ್ತ್ವ ”ವಸುಧೈವ ಕುಟುಂಬಕಮ್’ ಎಂಬ ತತ್ತ್ವಕ್ಕೆ ನೆಲಗಟ್ಟಾಗಿ ದೀನದಲಿತರಲ್ಲೂ ದೇವರನ್ನು ಕಾಣುವ ಉದಾರಕಲ್ಪನೆಗೆ ನಾಂದಿಯನ್ನು ಹಾಡುತ್ತದೆ. ಭಜನೆ ನನ್ನ ಉದ್ಧಾರಕ್ಕೆ, ಸೇವೆ ಪರರ ಏಳ್ಗೆಗೆ. ನಮ್ಮ ಮಾನಸಿಕ ನೆಮ್ಮದಿಗೆ ಅವಶ್ಯವಿರುವಷ್ಟೇ ಸಮಯವನ್ನು ಪೂಜೆಗಾಗಿ ಮೀಸಲಿಟ್ಟು ಉಳಿದ ಸಮಯವನ್ನು ಸಮಾಜಸೇವೆಗಾಗಿ ಮುಡಿಪಾಗಿಟ್ಟು ’ಯದ್ಯತ್ಕರ್ಮ ಕರೋಮಿ ತತ್ತದಖಿಲಂ ಶಂಭೋ ತವಾರಾಧನಮ್’ ಎಂದು ಕರ್ಮಯೋಗವನ್ನು ಸಾಧಿಸಿದರೆ ಅದೇ ಜೀವನದ ನಿಜವಾದ ಆಸ್ತಿಕತೆ. ಪ್ರಪಂಚದಲ್ಲಿ ಅವಶ್ಯವಿರುವುದೂ ಇದೇ

೨೭-೦೨-೨೦೦೬ ರಂದು ಬರೆದಿದ್ದು.

Monday, April 10, 2017

ಭಾವಸ್ಪಂದನ ೧

ಆತ್ಮೀಯರೇ,
ಯಾವುದೇ ಭಾಷೆಯ ಸಾಹಿತ್ಯದಲ್ಲಿ ಭಾವಗೀತೆಗಳ ಪಾತ್ರ ಮಹತ್ತ್ವದ್ದು. ಹೃದಯದ ಭಾವವನ್ನು ಅಕ್ಷರರೂಪದಲ್ಲಿ ವ್ಯಕ್ತಪಡಿಸುವ ಕವಿ ಓದುಗರ ಹೃದಯದಲ್ಲೂ ಅನಿರ್ವಚನೀಯ ಭಾವವೊಂದನ್ನು ಹುಟ್ಟು ಹಾಕುತ್ತಾನೆ. ನಮ್ಮ ಹೆಮ್ಮೆಯ ಕನ್ನಡ ಭಾಷೆಯಲ್ಲೂ ಭಾವಗೀತೆಗಳ ಸಂಖ್ಯೆ ವಿಪುಲವಾಗಿದೆ. ಅನೇಕ ಪ್ರಸಿದ್ಧ ಸಂಗೀತಗಾರರ ಮೂಲಕ ಇವು ಜನಮನದಲ್ಲಿ ಭಾವದ ಮುದ್ರೆಯನ್ನೊತ್ತಿವೆ. ಅಂತಹ ಭಾವಗೀತೆಗಳ ಹಾಗೂ ಭಾವಕವಿಗಳ ಪರಿಚಯವನ್ನು ಮಾಡಿಕೊಡುವ ಒಂದು ಸಣ್ಣ ಪ್ರಯತ್ನ ಈ ಭಾವಸ್ಪಂದನ.

ವಸಂತ ಋತು ಕಾಲಿಟ್ಟು ಕೆಲವು ದಿನಗಳು ಕಳೆದು ಹೋದವು. ಹೊಂಗೆ ಮರದ ಹೂವಿನಲ್ಲಿ, ಮಾವಿನ ತಳಿರಿನಲ್ಲಿ, ಅರಳಿ ನಿಂತ ಸುಮಗಳಲ್ಲಿ ವಸಂತನ ವೈಭವ ಕಾಣುತ್ತಾ ಇದೆ. ವಸಂತನ ಸೊಬಗು ಯಾವ ಕವಿಯ ಹೃದಯವನ್ನು ತಟ್ಟದಿದ್ದೀತು? ಪ್ರಕೃತಿಯ ಸೊಬಗು ಹೃದಯವನ್ನು ಹೊಕ್ಕು ಹೊರಬರುವಾಗ ಕವಿತೆಯ ರೂಪವನ್ನು ತಾಳಿರುತ್ತದೆ. ಅಂತಹ ಒಂದು ಕವಿತೆ ನಮ್ಮ ಭಾವಸ್ಪಂದನ ಧ್ವನಿ ಸರಣಿಯ ಮೊದಲ ಗೀತೆ. ಇದು ಕವಿ ಎನ್.ಎಸ್. ಲಕ್ಷ್ಮೀನಾರಾಯಣ ಭಟ್ಟರು ಬರೆದ ’ಬಾರೋ ವಸಂತ’ ಎಂಬ ಋತುರಾಜನ ಸ್ವಾಗತಗೀತೆ.

ಲಕ್ಷ್ಮೀನಾರಾಯಣ ಭಟ್ಟರು ಶಿವರಾಮ ಭಟ್ ಹಾಗೂ ಮೂಕಾಂಬಿಕಾ ದಂಪತಿಗಳ ಮಗನಾಗಿ ೧೯೩೬ ರ ಅಕ್ಟೋಬರ್ ೨೯ರಂದು ಶಿವಮೊಗ್ಗೆಯಲ್ಲಿ ಜನಿಸಿದರು. ಮೈಸೂರು ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಮಾಡಿ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ  ಡಾ. ಲಕ್ಷ್ಮೀನಾರಾಯಣ ಭಟ್ಟರು ತೀನಂಶ್ರೀಯವರ ಶಿಷ್ಯರು. ತಮ್ಮ ಗುರುಗಳಂತೆ ಕನ್ನಡ, ಸಂಸ್ಕೃತ ಹಾಗೂ ಇಂಗ್ಲೀಷ್ ಭಾಷೆಗಳಲ್ಲಿ ಅಪಾರ ಪ್ರಭುತ್ವವನ್ನು ಹೊಂದಿದ್ದ ಭಟ್ಟರು ಅನೇಕ ಕೃತಿಗಳನ್ನು ಇಂಗ್ಲೀಷ್ ಹಾಗೂ ಸಂಸ್ಕೃತದಿಂದ ಕನ್ನಡಕ್ಕೆ ಭಾಷಾಂತರಿಸಿದ್ದಾರೆ. ಕನ್ನಡನಾಡಿನ ಸಹೃದಯ ಭಾವಗೀತಕಾರರಾದ ಇವರ ದೀಪಿಕಾ, ಬಾರೋ ವಸಂತ, ನಂದ ಕಿಶೋರಿ ಮುಂತಾದ ಕವನಸಂಕಲನಗಳು ಹಾಗೂ ಧ್ವನಿಸುರಳಿಗಳು ಅಪಾರ ಜನಪ್ರಿಯತೆಯನ್ನು ಪಡೆದಿವೆ. ಶಿಶು ಸಾಹಿತ್ಯ, ವಿಮರ್ಶೆ, ಅನುವಾದ ಸಾಹಿತ್ಯಗಳ ನಿರ್ಮಾಣದಲ್ಲಿ ಸಕ್ರಿಯರಾದ ಭಟ್ಟರನ್ನು ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಅನಕೃ ಪ್ರಶಸ್ತಿ ಮುಂತಾದ ಅನೇಕ ಪುರಸ್ಕಾರಗಳು ಅರಸಿ ಬಂದಿವೆ.
ಬಾರೋ ವಸಂತ ಬಾರೋ ಬಾ... ಬಾರೋ
ಹೊಸ ಹೊಸ ಹರುಷದ ಹರಿಕಾರ
ಹೊಸ ಭಾವನೆಗಳ ಹೊಸ ಕಾಮನೆಗಳ
ಎದೆಯಲಿ ಬರೆಯುವ ನುಡಿಕಾರ || ಬಾರೋ ||

ಬಾರೋ ಸಂಕಲೆಗಳ ಕಳಚಿ
ಹೆಜ್ಜೆಗಳಿಗೆ ತಾಳವನುಣಿಸಿ
ದಣಿದ ಮೈಗೆ ತಂಗಾಳಿಯ
ಮನಸಿಗೆ ನಾಳೆಯ ಸುಖದೃಶ್ಯವ ಸಲಿಸಿ || ಬಾರೋ ||

ಮೊಗಚುತ ನೆನ್ನೆಯ ದು:ಖಗಳ
ತೆರೆಯುತ ಹೊಸ ಅಧ್ಯಾಯಗಳ
ಅರಸುತ ಎಲ್ಲರ ಮೇಲು ಕೀಳಿರದೆ
ಸಲಿಸುತ ಭವಿಷ್ಯದಾಸೆಗಳ || ಬಾರೋ ||

ಎಳೆ ಕಂದನ ದನಿ ಗೆಜ್ಜೆಯಲಿ
ಇನಿಯಳ ಮಲ್ಲಿಗೆ ಲಜ್ಜೆಯಲಿ
ಗೋಳು ಬಾಳಿನಲಿ ಹಸಿರ ಚಿಮ್ಮಿಸುವ
ಸೃಷ್ಟಿ ಶೀಲ ಹೊಸ ಹೆಜ್ಜೆಯಲಿ || ಬಾರೋ ||

”ಬಾರೋ ವಸಂತ’ ಕವಿತೆಯಲ್ಲಿ ಲಕ್ಷ್ಮಿನಾರಾಯಣ ಭಟ್ಟರು ವಸಂತನ ಆಗಮನದಿಂದ ಪ್ರಕೃತಿಯಲ್ಲಿ ಹಾಗೂ ಹೃದಯದಲ್ಲಿ ಆಗುವ ಬದಲಾವಣೆಗಳನ್ನು ಸೂಚ್ಯವಾಗಿ ನಮೂದಿಸಿದ್ದಾರೆ. ಶಿಶಿರದಲ್ಲಿ ತನ್ನ ಸಂಪತ್ತನ್ನು ಕಳೆದುಕೊಂಡ ಮರಗಿಡಗಳು ವಸಂತದಲ್ಲಿ ಮತ್ತೆ ನವ ಪಲ್ಲವಗಳಿಂದ ಮನೋಹರ ಸುಮಗಳಿಂದ ಮಧುರವಾದ ಹಣ್ಣುಗಳಿಂದ ಸಂಪದ್ಭರಿತವಾಗುತ್ತವೆ. ಅವನ್ನೆಲ್ಲ ನೋಡಿದ ನಮ್ಮ ಎದೆಯ ಭಾವನೆಯಲ್ಲೂ ಏನೋ ಹೊಸತನ ಏನೋ ಹರುಷ ಒಡಮೂಡುತ್ತದೆ. ಹಾಗಾಗಿ ವಸಂತ ಹೊಸ ಭಾವನೆಗಳನ್ನು ಹೊಸ ಕಾಮನೆಗಳನ್ನು ಮೂಡಿಸಿ ಹರುಷದ ಹರಿಕಾರನಾಗುತ್ತಾನೆ.

ಕುಣಿದು ಕುಪ್ಪಳಿಸಬೇಕೆಂಬ ನಮ್ಮ ಬಯಕೆಗೆ ಜಗತ್ತು ಅನೇಕ ಸಂಕೋಲೆಗಳನ್ನು ತೊಡಿಸಿರುತ್ತದೆ. ವಸಂತ ಆ ಸಂಕೋಲೆಗಳನ್ನೆಲ್ಲ ಕಳಚುವುದಲ್ಲದೆ ನಮ್ಮ ಕುಣಿತಕ್ಕೆ ತಾಳವನ್ನೂ ಹಾಕಲಿ ಎಂಬ ಆಶಾಭಾವನೆ ಕವಿಯದ್ದು. ವಸಂತ ತನ್ನೊಂದಿಗೆ ಕರೆತರುವ ಮಂದಮಾರುತ ವರ್ಷವಿಡೀ ದುಡಿದು ದಣಿದ ದೇಹಕ್ಕೆ ತಂಪನ್ನು ನೀಡಿ ಆ ಸುಖಸ್ಪರ್ಶದಲ್ಲಿ ಮನಸ್ಸಿನಲ್ಲಿ ನಾಳಿನ ಸುಖದೃಶ್ಯ ಮೂಡುವಂತೆ ಮಾಡುವನೆಂಬ ಹಂಬಲ ಅವನದ್ದು.

ಚಕ್ರವತ್ ಪರಿವರ್ತಂತೇ ಸುಖಾನಿ ಚ ದು:ಖಾನಿ ಚ ಎಂಬ ನುಡಿಯಂತೆ ಮಾನವ ಜೀವನ ಎನ್ನುವುದು ಸುಖ ದು:ಖಗಳ ಸಮ್ಮಿಶ್ರಣ. ನಾಳೆ ಸುಖ ಬರುವುದೆಂಬ ಆಶಾಭಾವನೆಯೇ ಇಂದು ದು:ಖದಲ್ಲಿರುವವನಿಗೆ ಆಲಂಬನೆ. ಪ್ರಕೃತಿಯು ತನ್ನ ಕಷ್ಟವನ್ನು ಕಳೆದುಕೊಂಡು ನಳನಳಿಸುತ್ತಿರುವಂತೆ ತನ್ನ ದು:ಖಗಳೂ ಕಳೆದು ಸುಖದ ಅಧ್ಯಾಯ ಆರಂಭವಾಗಲಿ. ಆ ಅಧ್ಯಾಯದಲ್ಲಿ ಮೇಲು ಕೀಳುಗಳೆಂಬ ಭಾವ ಇರದೆ ವಸುಧೈವ ಕುಟುಂಬಕಮ್ ಎಂಬ ಪಾಠ ಇರಲಿ ಎಂಬ ಬಯಕೆಯನ್ನು ಕವಿ ವ್ಯಕ್ತಪಡಿಸುತ್ತಾನೆ.

ವಸಂತ ಕೇವಲ ಹೊರಗಿನ ಪ್ರಕೃತಿಯಲ್ಲಿ ಬದಲಾವಣೆಯನ್ನು ತಂದರೆ ಸಾಲದು. ನಮ್ಮ ಜೀವನದ ಹೆಜ್ಜೆ ಹೆಜ್ಜೆಯಲ್ಲಿ ಆ ವಸಂತನ ಅನುಭವವಾಗಬೇಕು. ಎಳೆಕಂದನ ಗೆಜ್ಜೆಯ ದನಿ, ಇನಿಯಳ ಲಜ್ಜೆಯ ಕಟಾಕ್ಷಗಳಲ್ಲೂ ವಸಂತನ ಹೊಸತನವನ್ನು ಅನುಭವಿಸುವ ಇರಾದೆ ಕವಿಯದ್ದು. ಗೋಳುಗಳೇ ತುಂಬಿರುವ ಬಾಳಿನಲ್ಲಿ ಇವು ಸಂತಸದ ಹಸಿರನ್ನು ಸೃಷ್ಟಿಸಬಹುದು ಎಂಬ ಪ್ರತ್ಯಾಶೆಯೊಂದಿಗೆ ಕವಿ ಕವಿತೆಯನ್ನು ಮುಗಿಸುತ್ತಾನೆ.


ಈ ಸುಂದರ ಗೀತೆಯನ್ನು ಎಚ್.ಕೆ.ನಾರಾಯಣ ಅವರ ರಾಗಸಂಯೋಜನೆಯಲ್ಲಿ, ಸುಲೋಚನಾ ಅವರ ದನಿಯಲ್ಲಿ ಕೇಳಿ ಆನಂದಿಸಿ.

ನಿರೂಪಣೆ: ಮಹಾಬಲ ಭಟ್, ಗೋವಾ

नारायण महादेव धोनि

 असङ्ख्यानां वीरयोधानां जन्मभूमिः इयं भारतमाता। अतः एव कश्चन कविः कवयति 'वन्ध्या न भारतजननी शूरसुतानां जन्मभूमिः' इति। प्रायेण सार्ध...