ಕವಿಕುಲಗುರುವಿನ ಮಾಸ್ಟರ್ ಪೀಸ್ ಎಂದು ಕರೆಯಿಸಿಕೊಳ್ಳುವ ಅಭಿಜ್ಞಾನಶಾಕುಂತಲಮ್ ಗ್ರಂಥದಲ್ಲಿಯೂ ಕಥಾನಾಯಕ ದುಷ್ಯಂತ ಶಕುಂತಲೆಯ ಪಾದಕ್ಕೆರಗುವ ಸನ್ನಿವೇಶ ಇದೆ. ಕಣ್ವಾಶ್ರಮದಲ್ಲಿ ಕಾಮಜ್ವರದಿಂದ ಬಳಲುತ್ತಿರುವ ಶಕುಂತಲೆಯ ಉಪಚಾರ ಮಾಡಲು ಮುಂದಾದ ದುಷ್ಯಂತ ’ಕಮಲದಂತೆ ಕೆಂಪಾಗಿರುವ ನಿನ್ನ ಚರಣಗಳನ್ನು ನನ್ನ ತೊಡೆಯಮೇಲಿರಿಸಿಕೊಂಡು ಒತ್ತಲೇನು?’ (ಅಂಕೇ ನಿಧಾಯ ಕರಭೋರು ಯಥಾಸುಖಂ ತೇ | ಸಂವಾಹಯಾಮಿ ಚರಣಾವುತ ಪದ್ಮತಾಮ್ರೌ || ಅಭಿಜ್ಞಾನಶಾಕುಂತಲಮ್, ತೃತೀಯೋಂಕಃ, ೧೯)
ಎಂದು ಕೇಳುತ್ತಾನೆ.
ದುರ್ವಾಸಮುನಿಯ ಶಾಪದಿಂದಾಗಿ ಶಕುಂತಲೆಯನ್ನು ತಿರಸ್ಕರಿಸಿದ ದುಷ್ಯಂತ ನಿಜವನ್ನು ತಿಳಿದಾಗ ಅತ್ಯಂತ ದುಃಖಕ್ಕೆ ಒಳಗಾಗುತ್ತಾನೆ. ಇಂದ್ರನ ಸಹಾಯಕ್ಕಾಗಿ ದೇವಲೋಕಕ್ಕೆ ಹೋಗಿ ಹಿಂದಿರುಗಿ ಬರುವಾಗ ಮಾರೀಚಾಶ್ರಮದಲ್ಲಿ ಶಕುಂತಲೆಯ ದರ್ಶನವಾಗುತ್ತದೆ. ಆಗ ತನ್ನ ಕೃತ್ಯಕ್ಕೆ ಪ್ರಾಯಶ್ಚಿತ್ತರೂಪವಾಗಿ ಶಕುಂತಲೆಯ ಕಾಲಿಗೆ ಬಿದ್ದು ಕ್ಷಮೆಯನ್ನು ಯಾಚಿಸುತ್ತಾನೆ.
ಸುತನು ಹೃದಯಾತ್ಪ್ರತ್ಯಾದೇಶವ್ಯಲೀಕಮಪೈತು ತೇ
ಕಿಮಪಿ ಮನಸಃ ಸಂಮೋಹೋ ಮೇ ತದಾ ಬಲವಾನಭೂತ್|
ಪ್ರಬಲತಮಸಾಮೇವಂಪ್ರಾಯಾಃ ಶುಭೇಷು ಹಿ ವೃತ್ತಯಃ
ಸ್ರಜಮಪಿ ಶಿರಸ್ಯಂಧಃ ಕ್ಷಿಪ್ತಾಂ ಧುನೋತ್ಯಹಿಶಂಕಯಾ ||
(ಸುತನು ಬಿಡು ನೀ ಕೆಮ್ಮನಿನಿಯನುತೊರೆದನೆನುವೊಂದಳಲನು
ಏನೋ ಬಲವತ್ತರದ ಸಮ್ಮೋಹನವು ಮುಸುಕಿತ್ತೆದೆಯನು |
ತಮವು ದಟ್ಟೈಸಿರ್ಪರಿಂತಾಡುವರು ಕುರಿತಹ ಶುಭವನು
ಭ್ರಮಿಸಿ ಹಾವೆಂದೆಸೆವನಂಧನು ಕೊರಳಿಗಿರಿಸಿದ ಸರವನು || )
ಶಕುಂತಲೆಯು ಇದು ತನ್ನ ಜನ್ಮಾಂತರ ಪಾಪದ ಫಲವಾಗಿರಬಹುದು, ನಿನ್ನದೇನು ತಪ್ಪಿಲ್ಲ ಎನ್ನುತ್ತ ಪತಿಯನ್ನು ಆದರಿಸುತ್ತಾಳೆ.
ಮಹಾಬಲ ಭಟ್ಟ, ಗೋವಾ
No comments:
Post a Comment