Sunday, October 18, 2020

ಬ್ರಹ್ಮಚಾರಿಣಿ

ಸರ್ವಮಂಗಲಮಾಂಗಲ್ಯೇ ಶಿವೇ ಸರ್ವಾರ್ಥಸಾಧಿಕೇ|

ಶರಣ್ಯೇ ತ್ರ್ಯಂಬಕೇ ದೇವಿ ನಾರಾಯಣಿ ನಮೋಸ್ತುತೇ||

ಸರ್ವರಿಗೂ ಆದರದ ನಮನಗಳು

ಇಂದು ನವರಾತ್ರಿಯ ಎರಡನೆಯ ದಿನ. ಇಂದಿನ ಅಧಿದೇವತೆ ಬ್ರಹ್ಮಚಾರಿಣೀ ಎಂಬ ಅಭಿಧಾನದ ದುರ್ಗೆ. ನಿನ್ನೆ ಶೈಲಪುತ್ರಿಯ ಸ್ವರೂಪಾನುಸಂಧಾನವನ್ನು ಮಾಡಿದ್ದೇವೆ. ದಕ್ಷಪ್ರಜಾಪತಿಯ ನಿರೀಶ್ವರಯಾಗದಲ್ಲಿ ದೇಹತ್ಯಾಗ ಮಾಡಿದ ದಾಕ್ಷಾಯಣಿ ಪಾರ್ವತಿಯಾಗಿ ಜನ್ಮತಳೆದುದನ್ನು ತಿಳಿದುಕೊಂಡಿದ್ದೇವೆ.

ಪಾರ್ವತಿ ಶಿವನನ್ನು ಸೇರುವುದಕ್ಕೇ ಹುಟ್ಟಿದ್ದಳು. ಆದರೆ ಬಹಿರ್ಮುಖನಾಗುವ ಸೂಚನೆಯನ್ನೇ ತೋರದೆ ಧ್ಯಾನಸ್ಥನಾಗಿದ್ದ ಶಿವನನ್ನು ಸೇರುವುದು ಅಷ್ಟು ಸುಲಭವಾಗಿರಲಿಲ್ಲ. ದೇವರ್ಷಿ ನಾರದರ ಸೂಚನೆಯಂತೆ ಪಾರ್ವತಿ ಶಿವನ ಕುರಿತು ತಪಸ್ಸನ್ನಾಚರಿಸುತ್ತಾಳೆ. ಬ್ರಹ್ಮಚರ್ಯವ್ರತವನ್ನು ಪಾಲನೆ ಮಾಡುತ್ತ ಕಠಿನ ತಪಸ್ಸಿನಲ್ಲಿ ನಿರತಳಾದ ಪಾರ್ವತಿಯ ರೂಪವೇ ಬ್ರಹ್ಮಚಾರಿಣಿ.

ವೇದಸ್ತತ್ತ್ವಂ ತಪೋ ಬ್ರಹ್ಮ ಎಂಬ ಕೋಶದ ಉಕ್ತಿಯನ್ನು ಅನುಸರಿಸಿ ಬ್ರಹ್ಮ ಶಬ್ದಕ್ಕೆ ವೇದ, ತತ್ತ್ವ, ತಪಸ್ಸು ಮುಂತಾದ ಅರ್ಥಗಳನ್ನು ಹೇಳಬಹುದು. ವೇದೇಷು ಚರತೇ ಯಸ್ಮಾತ್ತೇನ ಸಾ ಬ್ರಹ್ಮಚಾರಿಣೀ ಎಂದು ದೇವೀಪುರಾಣದಲ್ಲಿ ವರ್ಣಿಸಲಾಗಿದೆ. ವೇದಗಳಲ್ಲಿ ವರ್ಣಿತಳಾದ ಬ್ರಹ್ಮಸ್ವರೂಪಳೇ ಅವಳು. ತಪಸ್ಸಿನಲ್ಲಿ ನಿರತಳಾಗಿರುವವಳು ಎಂಬರ್ಥದಲ್ಲಿಯೂ ಬ್ರಹ್ಮಚಾರಿಣಿ ಶಬ್ದವನ್ನು ಗ್ರಹಿಸಬಹುದು. ಬ್ರಹ್ಮ ಚಾರಯಿತುಂ ಶೀಲಂ ಯಸ್ಯಾಃ ಸಾ ಬ್ರಹ್ಮಚಾರಿಣೀ | ಚಿದಾನಂದ ಸ್ವರೂಪದ ಬ್ರಹ್ಮತತ್ತ್ವದ ಅನುಸಂಧಾನದಲ್ಲಿ ತೊಡಗಿಸಿಕೊಂಡವಳು ಎಂಬುದೂ ಈ ಪದದ ಇನ್ನೊಂದು ಅರ್ಥ. ಬ್ರಹ್ಮಚರ್ಯ ಎನ್ನುವುದು ಚತುರಾಶ್ರಮಗಳಲ್ಲಿ ಮೊದಲಿನದು. ಗೃಹಸ್ಥಾಶ್ರಮ ಅಂದರೆ ವೈವಾಹಿಕ ಜೀವನವನ್ನು ಪ್ರವೇಶಿಸುವ ಮುನ್ನಿನ ಆಶ್ರಮ. ಮನೋನಿಗ್ರಹ ಈ ಆಶ್ರಮದ ಮುಖ್ಯ ಲಕ್ಷಣ. ಚಿತ್ತಕ್ಷೋಭೆಯನ್ನುಂಟುಮಾಡುವ ಅನೇಕ ದುಷ್ಟ ಆಕರ್ಷಣೆಗಳಿದ್ದರೂ ಮನಸ್ಸನ್ನು ಹಿಡಿತದಲ್ಲಿ ಇಟ್ಟುಕೊಂಡಿರುವವಳೇ ಬ್ರಹ್ಮಚಾರಿಣಿ. ಮನ್ಮಥನ ಬಾಣಗಳಿಗೆ ಎರವಾದರೂ ಸಂಯಮವನ್ನು ಬಿಡದೆ ಶಿವನು ಬಹಿರ್ಮುಖನಾಗುವವರೆಗೂ ಅವನ ಸೇವೆ ಹಾಗೂ ತಪಸ್ಸಿನಲ್ಲಿ ನಿರತಳಾಗಿದ್ದಳು ಪಾರ್ವತೀ. ಅದೂ ಒಂದೆರಡು ವರ್ಷಗಳಲ್ಲ ಸುಮಾರು ಐದುಸಾವಿರವರ್ಷಗಳಷ್ಟು ಕಾಲ. ತಾನು ತಿನ್ನುವ ಆಹಾರವನ್ನೂ ಕಡಿಮೆ ಮಾಡುತ್ತ ಒಂದು ಹಂತದಲ್ಲಿ ಕೇವಲ ಬಿಲ್ವದಳಗಳನ್ನು ಮಾತ್ರ ಸೇವಿಸಿ ತಪಸ್ಸನ್ನು ಆಚರಿಸುತ್ತಿದ್ದಳು. ಆನಂತರ ಅದನ್ನೂ ತ್ಯಜಿಸಿ ’ಅಪರ್ಣಾ’ ಎಂಬ ಅಭಿಧಾನವನ್ನು ಹೊಂದಿದಳು.

ಬ್ರಹ್ಮಚಾರಿಣಿಯ ಸ್ವರೂಪವನ್ನು ಈ ಶ್ಲೋಕ ತಿಳಿಸಿಕೊಡುತ್ತದೆ.

ದಧಾನಾ ಕರಕಮಲಾಭ್ಯಾಮಕ್ಷಮಾಲಾ ಕಮಂಡಲೂ|

ದೇವೀ ಪ್ರಸೀದತು ಮಯಿ ಬ್ರಹ್ಮಚಾರಿಣ್ಯನುತ್ತಮಾ ||

ಬ್ರಹ್ಮಚಾರಿಣಿಯರ ಸಾಮಾನ್ಯ ವೇಷವನ್ನು ಧರಿಸಿದ್ದಾಳೆ ಇವಳು. ತನ್ನ ಒಂದು ಕೈಯಲ್ಲಿ ಜಪಮಾಲೆಯನ್ನು ಹಿಡಿದಿದ್ದಾಳೆ. ಜಪಮಾಲೆಗೆ ಅಕ್ಷಮಾಲೆ ಎಂಬ ಹೆಸರೂ ಇದೆ. ಗೌತಮಮುನಿ ಹೇಳುವಂತೆ

ಪಂಚಾಶಲ್ಲಿಪಿಭಿರ್ಮಾಲಾ ವಿಹಿತಾ ಜಪಕರ್ಮಸು |

ಅಕಾರಾದಿ ಕ್ಷಕಾರಾಂತಾ ಅಕ್ಷಮಾಲಾ ಪ್ರಕೀರ್ತಿತಾ ||

ಅಕಾರದಿಂದ ಕ್ಷ ದ ವರೆಗೆ ಐವತ್ತು ಅಕ್ಷರಗಳಿಂದ ಮಾಡಿರುವ ಮಾಲೆಯೇ ಅಕ್ಷಮಾಲೆ. ಅನಯಾ ಸರ್ವಮಂತ್ರಾಣಾಂ ಜಪಃ ಸರ್ವಸಮೃದ್ಧಿದಃ ಎಂಬ ತಂತ್ರಸಾರದ ಮಾತಿನಂತೆ ಈ ಅಕ್ಷಮಾಲೆಯಿಂದ ಮಾಡುವ ಎಲ್ಲ ಮಂತ್ರಜಪಗಳು ಸಿದ್ಧಿಪ್ರದವಾಗುತ್ತವೆ. ಅಂತಹ ಪವಿತ್ರವಾದ ಅಕ್ಷಮಾಲೆಯನ್ನು ಅವಳು ಬಲಗೈಯಲ್ಲಿ ಧರಿಸಿದ್ದಾಳೆ.

ಎಡಗೈಯಲ್ಲಿ ಕಮಂಡಲು ಇದೆ. ಕಮಂಡಲು ಎಂದರೆ ಜಲಪಾತ್ರೆ. ಸಂನ್ಯಾಸಿಗಳು ಹಾಗೂ ಬ್ರಹ್ಮಚಾರಿಗಳು ತಮ್ಮ ಆಚಮನಾದಿ ಕ್ರಿಯೆಗಳಿಗೆ ಬೇಕಾಗುವ ನೀರನ್ನು ಹೊಂದಿರುವ ಪಾತ್ರೆ. ಇದರಲ್ಲಿರುವ ಪವಿತ್ರಜಲದಿಂದಲೇ ನಿಗ್ರಹಾನುಗ್ರಹಗಳನ್ನೂ ಮಾಡುತ್ತಾರೆ ಅವರು. ಅಂತಹ ಕಮಂಡಲುವನ್ನು ಬ್ರಹ್ಮಚಾರಿಣಿ ಹಿಡಿದಿದ್ದಾಳೆ. ಶ್ವೇತಾಂಬರೆಯಾಗಿ, ಮೆಟ್ಟುಗಳನ್ನು ತೊಡದೆ, ವಾಹನಸವಾರಿಯನ್ನು ಮಾಡದೆ ನೆಲದ ಮೇಲೆ ನಿಂತಿರುವ ಬ್ರಹ್ಮಚಾರಿಣಿ ಪ್ರೀತಿ, ಸಂಯಮ, ಸರಳತೆಗಳ ಪ್ರತೀಕವಾಗಿದ್ದಾಳೆ. ಅಂತಹ ಅತ್ತ್ಯುತ್ತಮ ಬ್ರಹ್ಮಚಾರಿಣಿಯು ನಮ್ಮಲ್ಲಿ ಪ್ರಸನ್ನಳಾಗಲಿ ಎಂಬುದು ಈ ದಿನದ ಪ್ರಾರ್ಥನೆ.

ಸ್ವಾಧಿಷ್ಠಾನಚಕ್ರದ ಅಧಿಷ್ಠಾತ್ರಿಯಾದ ಈ ದುರ್ಗೆ ನಮ್ಮ ಸಕಲ ದುರ್ಗುಣಗಳನ್ನು ನಾಶಮಾಡಲಿ ಎಂದು ಪ್ರಾರ್ಥಿಸುತ್ತ ನಾಳೆ ಚಂದ್ರಘಂಟೆಯ ಅನುಸಂಧಾನಕ್ಕೆ ಅಣಿಯಾಗೋಣ.

No comments:

नारायण महादेव धोनि

 असङ्ख्यानां वीरयोधानां जन्मभूमिः इयं भारतमाता। अतः एव कश्चन कविः कवयति 'वन्ध्या न भारतजननी शूरसुतानां जन्मभूमिः' इति। प्रायेण सार्ध...