Sunday, October 18, 2020

ಶೈಲಪುತ್ರೀ

 

ಎಲ್ಲರಿಗೂ ನಮಸ್ಕಾರ.

ದುರ್ಗೇ ಸ್ಮೃತಾ ಹರಸಿ ಭೀತಿಮಶೇಷಜಂತೋಃ ಸ್ವಸ್ಥೈಃ ಸ್ಮೃತಾ ಮ್ತಿಮತೀವಶುಭಾಂ ದದಾಸಿ|

ದಾರಿದ್ರ್ಯದುಃಖಭಯಹಾರಿಣಿ ಕಾ ತ್ವದನ್ಯಾ ಸರ್ವೊಪಕಾರಕರಣಾಯ ಸದಾಽಽರ್ದ್ರಚಿತ್ತಾ||

ಇಂದು ನವರಾತ್ರಿಯ ಮೊದಲದಿನ. ಘಟಸ್ಥಾಪನೆಯ ಮೂಲಕ ನವರಾತ್ರವ್ರತದ ಶುಭಾರಂಭ ಮಾಡುವ ದಿನ. ಘಟ ಅಂದರೆ ಕೊಡ. ಒಂದು ಕೊಡದಲ್ಲೋ, ಸ್ಥಾಲಿಯಲ್ಲೋ ಮಣ್ಣನ್ನು ತುಂಬಿ ಅದರಲ್ಲಿ ಸಪ್ತಧಾನ್ಯಗಳನ್ನು ಹಾಕಿ ಪವಿತ್ರಜಲವನ್ನು ಸಿಂಪಡಿಸಬೇಕು. ಯವ(ಬಾರ್ಲಿ), ಗೋಧಿ, ಭತ್ತ, ಎಳ್ಳು, ಹೆಸರು, ಉದ್ದು, ಕಡಲೆ ಇವು ಸಪ್ತಧಾನ್ಯಗಳು.

ಮೊದಲನೆಯ ದಿನ ಪ್ರಥಮಂ ಶೈಲಪುತ್ರೀ ಚ ಎಂಬ ನುಡಿಯನ್ನು ಅನುಸರಿಸಿ ಶೈಲಪುತ್ರೀ ಎಂಬ ದುರ್ಗೆಯ ಆರಾಧನೆ ನಡೆಯುತ್ತದೆ. ಶೈಲಪುತ್ರೀ ಎಂದರೆ ಪರ್ವತದ ಮಗಳು ಎಂದರ್ಥ. ಅರ್ಥಾತ್ ಪಾರ್ವತೀದೇವಿಯ ಆರಾಧನೆ ಅಂದು ನಡೆಯುತ್ತದೆ.

ಒಮ್ಮೆ ತ್ರಿಮೂರ್ತಿಗಳಲ್ಲಿ ಒಬ್ಬನಾದ ಶಂಕರನ ಅಧ್ಯಕ್ಷತೆಯಲ್ಲಿ ಜ್ಞಾನಸತ್ರವೊಂದು ಏರ್ಪಾಡಾಗಿತ್ತು. ಸಭೆ ನಡೆಯುತ್ತಿರುವಾಗ ಅಲ್ಲಿಗೆ ಆಗಮಿಸಿದ ದಕ್ಷ ಪ್ರಜಾಪತಿ ಎಲ್ಲರಿಂದಲೂ ವಂದನೆಯನ್ನು ಸ್ವೀಕರಿಸಿದ. ಅಧ್ಯಕ್ಷತೆಯನ್ನು ವಹಿಸಿದ್ದ ಶಿವ ಸಭಾಮರ್ಯಾದೆಯಂತೆ ಆಸನವನ್ನು ಬಿಟ್ಟೇಳಲಿಲ್ಲ. ಅದರಿಂದ ಸಿಟ್ಟುಗೊಂಡ ದಕ್ಷಪ್ರಜಾಪತಿ ಶಿವನನ್ನು ಬಗೆ ಬಗೆಯಾಗಿ ನಿಂದಿಸಿ ತನ್ನ ರಾಜಧಾನಿಗೆ ತೆರಳಿ ನಿರೀಶ್ವರಯಾಗವನ್ನು ಆರಂಭಿಸಿದ. ಎಲ್ಲ ದೇವಾನುದೇವತೆಗಳನ್ನು ಆಹ್ವಾನಿಸಿದ. ಶಂಕರನನ್ನು ಕರೆಯಲಿಲ್ಲ. ಇದನ್ನು ತಿಳಿದ ಶಿವ ಧ್ಯಾನಸ್ಥನಾದ. ತನ್ನಪ್ಪನ ಕೌಟಿಲ್ಯವನ್ನು ಅರಿಯದ ದಾಕ್ಷಾಯಣಿ ಶಿವನಾಜ್ಞೆಯನ್ನೂ ಮೀರಿ ತವರುಮನೆಗೆ ಬಂದಳು. ಆದರೆ ಅವಳನ್ನು ಅಲ್ಲಿ ಯಾರೂ ಆದರಿಸಲಿಲ್ಲ. ಅಪ್ಪ ಮಾಡುತ್ತಿರುವುದು ನಿರೀಶ್ವರಯಾಗವೆಂದು ಅರಿತು ಆ ಯಜ್ಞವನ್ನು ಕೆಡಿಸುವುದಕ್ಕೋಸ್ಕರ ತನ್ನನ್ನೇ ತಾನು ದಹಿಸಿಕೊಂಡು ಪ್ರಾಣಾರ್ಪಣೆ ಮಾಡಿದಳು.

ಹೀಗೆ ಗತಿಸಿದ ದಾಕ್ಷಾಯಣಿಯೇ ಹಿಮವಂತ ಮತ್ತು ಮೈನಾದೇವಿಯರ ಮಗಳಾಗಿ ಹುಟ್ಟಿಬಂದಳು. ಅತ್ತ ತಾರಕಾಸುರ ಅಟ್ಟಹಾಸದಿಂದ ಮೆರೆಯುತ್ತಿದ್ದ. ಶಿವನ ಮಗನಿಂದಲೇ ಅವನ ಮರಣ ಎಂಬುದು ನಿಶ್ಚಿತವಾಗಿತ್ತು. ಹಾಗಾಗಿ ದಾಕ್ಷಾಯಣಿಯ ಪುನರ್ಜನ್ಮ ಅನಿವಾರ್ಯವಾಗಿತ್ತು.

ಮಹಾಕವಿ ಕಾಲಿದಾಸ ತನ್ನ ಕುಮಾರಸಂಭವಮ್ ಎಂಬ ಮಹಾಕಾವ್ಯದಲ್ಲಿ ಪಾರ್ವತಿಯ ಜನನ ವೃತ್ತಾಂತವನ್ನು ಸುಂದರವಾಗಿ ವರ್ಣಿಸಿದ್ದಾನೆ.

ಅಥಾವಮಾನೇನ ಪಿತುಃ ಪ್ರಯುಕ್ತಾ ದಕ್ಷಸ್ಯ ಕನ್ಯಾ ಭವಪೂರ್ವಪತ್ನೀ|

ಸತೀ ಸತೀ ಯೋಗವಿಸೃಷ್ಟದೇಹಾ ತಾಂ ಜನ್ಮನೇ ಶೈಲವಧೂಂ ಪ್ರಪೇದೇ||

ಸರಸ್ವತಿ ಲಕ್ಷ್ಮಿ ಪಾರ್ವತಿಯರು ಆದಿಶಕ್ತಿಯ ಅಂಶಸಂಭೂತರೇ ಆಗಿದ್ದರೂ ಪಾರ್ವತಿಯನ್ನು ಪರಾಶಕ್ತಿಯ ಪೂರ್ಣಾವತಾರವೆಂದು ತಿಳಿದು ವರ್ಣಿಸುವುದನ್ನು ನಾವು ಅನೇಕ ಕಡೆ ನೋಡಬಹುದು. ಶ್ರೀ ಶಂಕರಭಗವತ್ಪಾದರು ತಮ್ಮ ಸೌಂದರ್ಯಲಹರಿಯಲ್ಲೂ ಅದೇ ರೀತಿಯಲ್ಲಿ ದೇವಿಯನ್ನು ಸ್ತುತಿಸಿದ್ದಾರೆ. ಪಾರ್ವತಿಯನ್ನೇ ದುರ್ಗೆ, ಚಂಡಿಕೆ ಮುಂತಾದ ಹೆಸರುಗಳಿಂದ ಕರೆಯುತ್ತಾರೆ.

ಶೈಲಪುತ್ರೀ ಎನ್ನುವ ಹೆಸರು ಹಿಮವಂತನ ಮಗಳಾದುದರಿಂದ ಬಂದುದು ಎಂಬುದು ಒಂದು ಕಾರಣವಾದರೆ ಈ ಹೆಸರಿನ ಹಿಂದೆ ಇನ್ನೊಂದು ಕಥೆಯೂ ಇದೆ ಎಂದು ಅಂತರ್ಜಾಲದಲ್ಲಿ ಈ ವಿಷಯವನ್ನು ಹುಡುಕುವಾಗ ತಿಳಿಯಿತು.

ಪಾರ್ವತಿಯು ಒಮ್ಮೆ ಕಮಲಗಳಿಂದ ಶೋಭಿತವಾದ ಸರೋವರಕ್ಕೆ ವಿಹಾರಾರ್ಥವಾಗಿ ಹೋಗಿದ್ದಳು. ಅಲ್ಲಿಗೆ ಎಲ್ಲಿಂದಲೋ ಬಂದ ಹಸುವೊಂದು ಅವಳನ್ನು ಒಂದು ಹುಲ್ಲುಗಾವಲಿಗೆ ಒಯ್ದಿತು. ಅಲ್ಲಿ ಅವಳು ದನಗಳ ಎಲುಬಿನ ದೊಡ್ಡ ಗುಡ್ಡೆಯನ್ನು ನೋಡಿದಳು. ಅದನ್ನು ನೋಡಿ ಆಶ್ಚರ್ಯಪಡುತ್ತಿರುವಾಗಲೇ ಘೋರಾಕಾರದ ರಾಕ್ಷಸಿಯೊಬ್ಬಳು ಪ್ರತ್ಯಕ್ಷಳಾದಳು. ಅವಳು ತಾರಕಾಸುರನ ಸೋದರಿಯಾದ ತಾರಿಕೆ. ಅವಳೇ ಗೋವುಗಳನ್ನೆಲ್ಲ ತಿಂದು ಹಾಕುತ್ತಿದ್ದಳು. ಪಾರ್ವತಿಯನ್ನು ನೋಡಿದ ರಾಕ್ಷಸಿಯು ಮೈಮೇಲೆ ಏರಿ ಬಂದಳು. ಆಗ ಪಾರ್ವತಿಯು ಸಣ್ಣ ಪರ್ವತದ ಆಕಾರವನ್ನು ತಳೆದು ಗೋವುಗಳನ್ನು ತನ್ನ ಹಿಂದೆ ಇಟ್ಟು ರಕ್ಷಿಸಿದಳು. ತಾರಿಕೆಯು ಇದನ್ನು ಕಂಡು ಪರ್ವತವನ್ನು ಪುಡಿಗೈಯಹೊರಟಳು. ಅವಳ ಸತತ ಹೊಡೆತಕ್ಕೆ ಸಿಕ್ಕು ಪರ್ವತವು ಒಡೆದುಹೋಯಿತು. ಅಲ್ಲಿಂದ ಸ್ವರ್ಣಕಿರೀಟವನ್ನೂ ಒಂದು ಕೈಯಲ್ಲಿ ತ್ರಿಶೂಲವನ್ನೂ ಇನ್ನೊಂದು ಕೈಯಲ್ಲಿ ಕಮಲಪುಷ್ಪವನ್ನೂ ಹಿಡಿದಿರುವ ಪಾರ್ವತಿಯು ಆವಿರ್ಭವಿಸಿದಳು. ತಾರಿಕೆಯನ್ನು ಸಂಹರಿಸಿದ ಅವಳನ್ನು ಪರ್ವತರಾಜನೇ ಶೈಲಪುತ್ರಿಯೆಂದು ಕರೆದ.

ಶೈಲಪುತ್ರಿಯ ಪ್ರಾರ್ಥನೆಗೆ ಬಳಸುವ ಶ್ಲೋಕ ಇದು-

ವಂದೇ ವಾಂಛಿತಲಾಭಾಯ ಚಂದ್ರಾರ್ಧಕೃತಶೇಖರಾಂ |

ವೃಷಾರೂಢಾಂ ಶೂಲಧರಾಂ ಶೈಲಪುತ್ರೀಂ ಯಶಸ್ವಿನೀಂ ||

ಶೈಲಪುತ್ರಿಯು ಅರ್ಧಚಂದ್ರನನ್ನು ತನ್ನ ತಲೆಯಲ್ಲಿ ಧರಿಸಿದ್ದಾಳೆ. ಚಂದ್ರ ಆಹ್ಲಾದಕತೆಯ ಸಂಕೇತ. ಮನೋಕಾರಕನೂ ಹೌದು. ಅರ್ಧಚಂದ್ರ ವೃದ್ಧಿಯ ಸಂಕೇತ. ವೃಷಭವನ್ನು ತನ್ನ ವಾಹನವನ್ನಾಗಿ ಮಾಡಿಕೊಂಡಿದ್ದಾಳೆ. ಸೊಕ್ಕಿನ ಮೇಲೆ ಸವಾರಿ ಮಾಡಿ ಅದನ್ನು ದಮನಿಸುವುದರ ಸಂಕೇತವದು. ವೃಷಭವು ಪಾವಿತ್ರ್ಯದ ಸಂಕೇತವೂ ಹೌದು. ಬಲಗೈಯಲ್ಲಿ ತ್ರಿಶೂಲವಿದೆ. ನಮ್ಮ ಆಧಿದೈವಿಕ, ಆಧಿಭೌತಿಕ ಆಧ್ಯಾತ್ಮಿಕ ಎಂಬ ತಾಪತ್ರಯಗಳನ್ನು ಹೋಗಲಾಡಿಸುವ ಪರಮ ಆಯುಧ ಅದು. ಎಡಗೈಯಲ್ಲಿರುವ ಕಮಲದ ಹೂವು ಪ್ರೀತಿ ಹಾಗೂ ಶಾಂತಿಯ ಸಂಕೇತ. ಯಶಸ್ವಿಯಾಗಿ ದೈತ್ಯದಮನವನ್ನು ಮಾಡಿ ನಮ್ಮ ಬಾಳಿನ ಯಶಸ್ಸಿಗೂ ಅನುಗ್ರಹ ಮಾಡುವ ಪರಮ ಕೃಪಾಳು ದೇವಿ. ಮೂಲಾಧಾರ ಚಕ್ರದ ಅಧಿಷ್ಠಾತ್ರಿಯಾಗಿ ಯೋಗಮಾರ್ಗದ ಮೂಲವೂ ಆಗಿದ್ದಾಳೆ. ಅವಳನ್ನು ಭಜಿಸಿ, ಪೂಜಿಸಿ ಅನುಸಂಧಾನಿಸಿ ನಮ್ಮ ಅಭೀಷ್ಟವನ್ನು ಪೂರೈಸಿಕೊಂಡು ಧನ್ಯರಾಗೋಣ. ನಾಳೆ ಎರಡನೆಯ ದಿನ. ಬ್ರಹ್ಮಚಾರಿಣಿ ದುರ್ಗೆಯ ಅನುಸಂಧಾನವನ್ನು ಮಾಡೋಣ. ನಮಸ್ಕಾರ.

No comments:

नारायण महादेव धोनि

 असङ्ख्यानां वीरयोधानां जन्मभूमिः इयं भारतमाता। अतः एव कश्चन कविः कवयति 'वन्ध्या न भारतजननी शूरसुतानां जन्मभूमिः' इति। प्रायेण सार्ध...