Friday, October 30, 2020

ಮಹಾಗೌರಿ

ಸರ್ವಾಧಿಷ್ಠಾನರೂಪಾಯೈ ಕೂಟಸ್ಥಾಯೈ ನಮೋ ನಮಃ|

ಅರ್ಧಮಾತ್ರಾರ್ಥಭೂತಾಯೈ ಹೃಲ್ಲೇಖಾಯೈ ನಮೋ ನಮಃ||

ನವರಾತ್ರ ಮಹೋತ್ಸವದ ಎಂಟನೆಯ ದಿನ ಪೂಜೆಗೊಂಬ ದೇವಿ ಮಹಾಗೌರಿ. ಗೌರ ಅಂದ್ರೆ ಬಿಳಿ. ಅವದಾತಃ ಸಿತೋ ಗೌರೋ ವಲಕ್ಷೋ ಧವಲೋರ್ಜುನಃ| ಬೆಳ್ಳಗಿರುವವಳೇ ಗೌರಿ. ಧವಳವರ್ಣದ ಹಿಮವತ್ಪರ್ವತದ ಪುತ್ರಿಯಾದ ಪಾರ್ವತಿಯೂ ಶ್ವೇತವರ್ಣೆಯೇ ಆಗಿದ್ದಳು. ಅವಳ ಬಿಳಿಯ ಬಣ್ಣ ಅನುಪಮವಾಗಿತ್ತು. ಹಾಗಾಗಿ ಅವಳು ಮಹಾಗೌರಿ. ಆದಿಶಕ್ತಿಸ್ವರೂಪಿಣಿಯೂ ಆಗಿರುವುದರಿಂದ ಅವಳನ್ನು ಮಹಾಗೌರಿಯೆಂದು ಕರೆಯುವುದು ಯುಕ್ತವೇ ಆಗಿದೆ.

ದಕ್ಷನ ಯಜ್ಞದಲ್ಲಿ ದಾಕ್ಷಾಯಣಿ ದಹಿಸಿಹೋದದ್ದನ್ನು ಕೇಳಿ ಕ್ರುದ್ಧನಾದ ಶಿವ ತನ್ನ ಗಣಗಳೊಂದಿಗೆ ಯಜ್ಞಶಾಲೆಯನ್ನು ಪ್ರವೇಶಿಸಿ ಯಜ್ಞವನ್ನು ಧ್ವಂಸಗೊಳಿಸಿದ. ದಾಕ್ಷಾಯಣಿಯ ಕುರಿತಾದ ಅಪ್ರತಿಮ ಪ್ರೀತಿಯಿಂದ ವಿಲಪಿಸುತ್ತ ಅವಳ ಅರ್ಧಬೆಂದ ದೇಹವನ್ನು ತನ್ನ ಹೆಗಲಮೇಲೇರಿಸಿಕೊಂಡು ಉನ್ಮತ್ತನಂತೆ ತಿರುಗಲು ಆರಂಭಿಸಿದ. ಇದನ್ನು ನೋಡಿ ಬ್ರಹ್ಮಾದಿದೇವತೆಗಳು ಚಿಂತಿತರಾದರು. ಆಗ ವಿಷ್ಣುವು ತನ್ನ ಶಾರ್ಙ್ಗಧನುವಿಗೆ ಬಾಣಗಳನ್ನು ಹೂಡಿ ಆ ಶರೀರವನ್ನು ಛಿದ್ರಗೊಳಿಸಿದ. ಆಗ ಸತಿಯ ಅವಯವಗಳು ಬೇರೆ ಬೇರೆ ಪ್ರದೇಶಗಳಲ್ಲಿ ಬಿದ್ದವು. ಆ ಪ್ರದೇಶಗಳಲ್ಲೆಲ್ಲ ಶಿವ ಬೇರೆ ಬೇರೆ ರೂಪಗಳಲ್ಲಿ ನೆಲೆನಿಂತ. ಈ ಸ್ಥಾನಗಳಲ್ಲಿ ದೇವಿಯ ಶಕ್ತಿ ಜಾಗ್ರತವಾಗಿರುವುದು ಹಾಗೂ ಇಲ್ಲಿ ಮಾಡುವ ಜಪತಪಾನುಷ್ಠಾನಗಳು ಹೆಚ್ಚು ಸಿದ್ಧಿಯನ್ನು ಪಡೆಯುವವು ಎಂದು ಶಂಕರನು ಅನುಗ್ರಹವನ್ನೂ ಮಾಡಿದ.

ಈ ಕಥೆಯನ್ನು ಜನಮೇಜಯನಿಗೆ ಹೇಳಿದ ವ್ಯಾಸಮಹರ್ಷಿಗಳು ಅಂತಹ ಸಿದ್ಧಿಪೀಠಗಳ ಹೆಸರುಗಳನ್ನೂ ಹೇಳುತ್ತಾರೆ. ವಾರಾಣಸ್ಯಾಂ ವಿಶಾಲಾಕ್ಷೀ ಗೌರೀಮುಖನಿವಾಸಿನೀ ಎಂದು ಆರಂಭಿಸಿ, ನೈಮಿಷಾರಣ್ಯದಲ್ಲಿ ಲಿಂಗಧಾರಿಣಿ, ಪ್ರಯಾಗದಲ್ಲಿ ಲಲಿತಾ, ಗಂಧಮಾದನದಲ್ಲಿ ಕಾಮುಕೀ, ಮಾನಸಸರೋವರ ಪರಿಸರದಲ್ಲಿ ಕುಮುದಾ, ಗೋಮಂತದಲ್ಲಿ ಗೋಮತಿ, ಮಂದರದಲ್ಲಿ ಕಾಮಚಾರಿಣೀ, ಚೈತ್ರರಥದಲ್ಲಿ ಮದೋತ್ಕಟಾ, ಹಸ್ತಿನಾಪುರದಲ್ಲಿ ಜಯಂತಿ ಹೀಗೆ ಹೇಳುತ್ತ ಗೌರೀ ಪ್ರೋಕ್ತಾ ಕಾನ್ಯಕುಬ್ಜೇ ಎನ್ನುತ್ತಾರೆ. ಕಾನ್ಯಕುಬ್ಜದಲ್ಲಿರುವ ಸತಿಯಶಕ್ತಿಗೆ ಗೌರಿ ಎಂದು ಹೆಸರು. ಇದು ದೇವೀಭಾಗವತದ ಸಪ್ತಮ ಸ್ಕಂಧದ ಒಂದು ಉಲ್ಲೇಖ.

ಶೈಲಪುತ್ರಿಯು ಬ್ರಹ್ಮಚಾರಿಣಿಯಾಗಿ ಶಿವನನ್ನು ಹೊಂದಲು ಕಠಿನತಪಸ್ಸನ್ನಾಚರಿಸಿದ್ದು ನಮಗೆಲ್ಲ ತಿಳಿದಿದೆ. ವ್ರಿಯೇಽಹಂ ವರದಂ ಶಂಭುಂ ನಾನ್ಯಂ ದೇವಂ ಮಹೇಶ್ವರಾತ್ ಎಂದು ಅವಳು ಪ್ರತಿಜ್ಞೆ ಮಾಡಿದ್ದಳು. ಅವಳ ಗೌರವರ್ಣವನ್ನೂ ಸೌಂದರ್ಯವನ್ನೂ ನೋಡಿದ ಮನ್ಮಥ ತನ್ನ ಕೆಲಸ ಸುಲಭವಾಗಬಹುದೆಂದು ತರ್ಕಿಸಿದ. ಮಹಾಕವಿ ಕಾಲಿದಾಸ ಪಾರ್ವತಿಯನ್ನು ಅನೇಕಕಡೆ ಗೌರಿಯೆಂದೇ ಸಂಬೋಧಿಸಿದ್ದಾನೆ. ಶಿವನಸೇವೆಯಲ್ಲಿ ನಿರತಳಾಗಿದ್ದ ಗೌರಿಯ ವರ್ಣನೆಯನ್ನು ಅತ್ಯಂತ ಮನೋಹರವಾಗಿ ಮಾಡಿದ್ದಾನೆ.

ಅಥೋಪನಿನ್ಯೇ ಗಿರಿಶಾಯ ಗೌರೀ ತಪಸ್ವಿನೇ ತಾಮ್ರರುಚಾ ಕರೇಣ|

ವಿಶೋಷಿತಾಂ ಭಾನುಮತೋ ಮಯೂಖೈರ್ಮಂದಾಕಿನೀಪುಷ್ಕರಬೀಜಮಾಲಾಮ್||

ತನ್ನ ಕೆಂಪಾದ ಕೈಗಳಿಂದ ಮಂದಾಕಿನಿಯಲ್ಲಿ ಸೂರ್ಯಕಿರಣಗಳಿಂದ ಒಣಗಿದ ಕಮಲಗಳ ಬೀಜಗಳಿಂದ ಮಾಡಿದ ಜಪಮಾಲೆಯನ್ನು ಶಿವನಿಗೆ ಸಮರ್ಪಿಸಿದಳು.

ಮಹಾಗೌರಿಯ ಆರಾಧನೆಯ ಮಂತ್ರ ಹೀಗಿದೆ

ಶ್ವೇತೇ ವೃಷೇ ಸಮಾರೂಢಾ ಶ್ವೇತಾಂಬರಧರಾ ಶುಚಿಃ|

ಮಹಾಗೌರೀ ಶುಭಂ ದದ್ಯಾನ್ಮಹಾದೇವಪ್ರಮೋದದಾ||

ಮಹಾಗೌರಿ ಬಿಳಿಯ ವೃಷಭವನ್ನು ಏರಿದ್ದಾಳೆ. ಬಿಳಿಯಬಣ್ಣ ಶುದ್ಧತೆಯ ಸಂಕೇತ. ಶುದ್ಧಚಾರಿತ್ರ್ಯದ ಪ್ರತೀಕವಾದ ಶ್ವೇತವಸ್ತ್ರವನ್ನು ಧರಿಸಿದ್ದಾಳೆ. ಮಹಾದೇವನಿಗೆ ಸದಾ ಸಂತಸವನ್ನು ನೀಡುವ ಮಹಾಗೌರಿ ನಮಗೆ ಶುಭವನ್ನು ನೀಡಲಿ ಎಂಬ ಪ್ರಾರ್ಥನೆ ಈ ಶ್ಲೋಕದಲ್ಲಿದೆ.

ಚತುರ್ಭುಜೆಯಾದ ಇವಳ ಒಂದು ಕೈಯಲ್ಲಿ ತ್ರಿಶೂಲ, ಇನ್ನೊಂದು ಕೈಯಲ್ಲಿ ಡಮರು ಇವೆ. ಓಂದುಕೈ ಅಭಯಮುದ್ರೆಯಲ್ಲಿದ್ದರೆ ಮತ್ತೊಂದು ಹಸ್ತ ವರದಹಸ್ತವಾಗಿದೆ.

ಮಹಾಗೌರಿಯ ಉಪಾಸನೆಯಿಂದ ನಮ್ಮ ಕಲ್ಮಶಗಳೆಲ್ಲ ದೂರವಾಗುತ್ತದೆ. ಪಾಪ. ಸಂತಾಪ, ದೈನ್ಯ ದುಃಖಗಳೆಲ್ಲ ದೂರಾಗಿ ಅಕ್ಷಯಸುಖದ ಜೀವನ ನಮ್ಮದಾಗುತ್ತದೆ ಎಂಬ ನಂಬಿಕೆ ಆಸ್ತಿಕಜನರದ್ದು. ನಾವೂ ಮಹಾಗೌರಿಯ ಆರಾಧನೆಯನ್ನು ಮಾಡಿ ಧನ್ಯರಾಗೋಣ.ನಾಳೆ ದುರ್ಗೆಯ ಕೊನೆಯ ರೂಪವಾದ ಸಿದ್ಧಿಧಾತ್ರಿಯ ಬಗ್ಗೆ ತಿಳಿದುಕೊಳ್ಳೋಣ.


No comments:

नारायण महादेव धोनि

 असङ्ख्यानां वीरयोधानां जन्मभूमिः इयं भारतमाता। अतः एव कश्चन कविः कवयति 'वन्ध्या न भारतजननी शूरसुतानां जन्मभूमिः' इति। प्रायेण सार्ध...