Friday, October 23, 2020

ಕಾಲರಾತ್ರಿ

ಏಳನೆಯ ದಿನ ಕಾಲರಾತ್ರಿಯ ದಿನ.

ನಮೋ ದೇವಿ ವಿಶ್ವೇಶ್ವರಿ ಪ್ರಾಣನಾಥೇ

ಸದಾನಂದರೂಪೇ ಸುರಾನಂದದೇ ತೇ|

ನಮೊ ದಾನವಾನ್ತಪ್ರದೇ ಮಾನವಾನಾ-

ಮನೇಕಾರ್ಥದೇ ಭಕ್ತಿಗಮ್ಯಸ್ವರೂಪೇ||

ಸುಜನವೃಂದಕ್ಕೆ ಸವಿನಯ ನಮಸ್ಕಾರ.

ಏಳನೆಯ ದಿನ ಕಾಲರಾತ್ರಿಯ ದಿನ. ಕಾಲಃ ಕಾಲರೂಪಾ ಬ್ರಹ್ಮೈಕದಿನೇ ಚತುರ್ದಶಮನೂನಾಮಧಿಕಾರಾವಸಾನೇ ಸೃಷ್ಟಿಸಂಹಾರಹೇತುಭೂತಾ ರಾತ್ರಿಃ ಎಂದು ಶಬ್ದಕಲ್ಪದ್ರುಮ ಕಾಲರಾತ್ರಿಶಬ್ದವನ್ನು ವಿವರಿಸುತ್ತದೆ. ಹದಿನಾಲ್ಕು ಮನುಗಳ ಕಾಲ ಅಂದರೆ ಒಂದು ಕಲ್ಪ ಅದುವೇ ಬ್ರಹ್ಮನ ಒಂದು ದಿನ. ಈ ದಿನ ಮುಗಿದಾಕ್ಷಣ ಬರುವ ರಾತ್ರಿಯಲ್ಲಿ ಸಮಸ್ತ ಸೃಷ್ಟಿಯ ನಾಶವಾಗುತ್ತದೆ. ಆ ರಾತ್ರಿಗೆ ಕಾಲರಾತ್ರಿ ಎಂದು ಹೆಸರು. ದೇವೀಮಾಹಾತ್ಮ್ಯಗ್ರಂಥದ ಟೀಕಾಕಾರರಾದ ವಿದ್ಯಾವಿನೋದರ ಪ್ರಕಾರ ಮರಣಂ ತದುಪಲಕ್ಷಿತಾ ರಾತ್ರಿಃ  ಕಲ್ಪಾಂತರಾತ್ರಿಃ ಇತ್ಯರ್ಥಃ| ಒಟ್ಟಿನಲ್ಲಿ ಕಾಲರಾತ್ರಿ ಎಂದರೆ ನಾಶಕರ್ತ್ರೀ ಎಂದೇ ಅರ್ಥ.

ದೇವೀ ಭಾಗವತದ ಪಂಚಮಸ್ಕಂದದ ಇಪ್ಪತ್ಮೂರನೆಯ ಅಧ್ಯಾಯದಲ್ಲಿ ಕಾಲರಾತ್ರಿಯ ಪ್ರಾದುರ್ಭಾವವನ್ನು ವರ್ಣಿಸಲಾಗಿದೆ. ಶುಂಭನೆಂಬ ದೈತ್ಯರಾಜ ತನ್ನ ತಮ್ಮನಾದ ನಿಶುಂಭನೊಂದಿಗೆ ಸ್ವರ್ಗವನ್ನು ಆಕ್ರಮಿಸಿದಾಗ ಸ್ವರ್ಗವಾಸಿಗಳು ಕೈಲಾಸಕ್ಕೆ ದೌಡಾಯಿಸಿದರು. ಜಗನ್ಮಾತೆ ಪಾರ್ವತಿಯನ್ನು ಭಕ್ತಿಯಿಂದ ಸ್ತುತಿಸಿ ತಮ್ಮ ದುಃಖವನ್ನು ತೋಡಿಕೊಂಡರು. ಅವರ ಪ್ರಾರ್ಥನೆಯನ್ನು ಆಲಿಸಿದ ಶಿವಜಾಯೆ ತನ್ನ ಶರೀರದಿಂದ ಇನ್ನೊಂದು ರೂಪವನ್ನು ಹೊರಹಾಕಿದಳು. ಅಂಬಿಕೆಯೆಂಬ ಆ ರೂಪ ಹೊರಬಿದ್ದಾಕ್ಷಣ ಗೌರವರ್ಣದ ಗೌರಿ ಕಪ್ಪು ಬಣ್ಣಕ್ಕೆ ತಿರುಗಿ ಕಾಲಿಕೆಯಾದಳು. ಕಾಲರಾತ್ರಿ ಅಂತಲೂ ಕರೆಸಿಕೊಳ್ಳುವ ಅವಳ ವರ್ಣನೆ ಹೀಗಿದೆ.

ಮಷೀವರ್ಣಾ ಮಹಾಘೋರಾ ದೈತ್ಯಾನಾಂ ಭಯವರ್ಧಿನೀ|

ಕಾಲರಾತ್ರೀತಿ ಸಾ ಪ್ರೋಕ್ತಾ ಸರ್ವಕಾಮಫಲಪ್ರದಾ ||

ಕಪ್ಪುಬಣ್ಣದವಳಾಗಿ, ಘೋರಾಕಾರವನ್ನು ಹೊಂದಿ ದೈತ್ಯರ ಭಯವನ್ನು ವರ್ಧಿಸಿದಳು. ಸರ್ವಕಾಮಪ್ರದೆಯಾದ ಅವಳನ್ನು ಕಾಲರಾತ್ರಿ ಎಂದು ಕರೆಯಲ್ಪಡುತ್ತಾಳೆ ಎಂಬುದಾಗಿ ದೇವೀಭಾಗವತ ವರ್ಣಿಸುತ್ತದೆ. ಮುಂದೆ ಘಟಿಸಿದ ಘೋರವಾದ ಯುದ್ಧದಲ್ಲಿ ಅಂಬಿಕೆಯ ಸೂಚನೆಯಂತೆ ಕಾಲರಾತ್ರಿಯು ಚಂಡಮುಂಡರ ರುಂಡವನ್ನು ಚೆಂಡಾಡಿ ರಕ್ತವನ್ನು ಹೀರುತ್ತಾಳೆ. ಚಕರ್ತ ತರಸಾ ಕಾಲೀ ಪಪೌ ಚ ರುಧಿರಂ ಮುದಾ|

ಆನಂತರ ಆಗಮಿಸಿದ ರಕ್ತಬೀಜನ ರಕ್ತ ನೆಲಕ್ಕೆ ಬೀಳದಂತೆ ಅವನನ್ನು ಕೃತ್ರಿಮ ರಕ್ತಬೀಜರನ್ನೂ ಭಕ್ಷಿಸಿದವಳು ಕಾಲರಾತ್ರಿ.ಶುಂಭ ನಿಶುಂಭವಧೆಯನ್ನೂ ಮಾಡಿ ಲೋಕಕಲ್ಯಾಣವನ್ನು ಮಾಡಿದ ಜಗದಂಬಿಕೆ ಇವಳು.

ಮಹಾಭಾರತದ ಸೌಪ್ತಿಕಪರ್ವದಲ್ಲೂ ಕಾಲರಾತ್ರಿಯ ಉಲ್ಲೇಖವಿದೆ. ಮಹಾಭಾರತದ ಯುದ್ಧಕೊನೆಗೊಂಡ ರಾತ್ರಿ ಅಶ್ವತ್ಥಾಮ ಪಾಂಡವಶಿಬಿರವನ್ನು ಹೊಕ್ಕು ಧೃಷ್ಟದ್ಯುಮ್ನನನ್ನೂ ಉಪಪಾಂಡವರನ್ನೂ ತರಿದು ರಾಕ್ಷಸವೃತ್ತಿಯನ್ನು ತಳೆದಿದ್ದಾಗ ಅಲ್ಲಿ ಕಾಣಿಸಿದ ಕಾಲರಾತ್ರಿ ಎಲ್ಲರನ್ನೂ ಪಾಶದಲ್ಲಿ ಬಂಧಿಸಿ ಕರೆದೊಯ್ಯುತ್ತಿದ್ದಳು.

ದದೃಶುಃ ಕಾಲರಾತ್ರಿಂ ತೇ ಸ್ಮಯಮಾನಾಮವಸ್ಥಿತಾಂ|

ನರಾಶ್ವಕುಂಜರಾನ್ಪಾಶೈರ್ಬದ್ಧ್ವಾ ಘೋರೈಃ ಪ್ರತಸ್ಥುಷೀಂ|

ಹರಂತೀಂ ವಿವಿಧಾನ್ಪ್ರೇತಾನ್ಪಾಶಬದ್ಧಾನ್ವಿಮೂರ್ಧಜಾನ್|

ಎಂದು ಅಲ್ಲಿ ಕಾಲರಾತ್ರಿಯನ್ನು ವರ್ಣಿಸಲಾಗಿದೆ.

ಮಾರ್ಕಂಡೇಯಪುರಾಣದ ದುರ್ಗಾಸಪ್ತಶತಿಯಲ್ಲಿ

ಪ್ರಕೃತಿಸ್ತ್ವಂಚ ಸರ್ವಸ್ಯ ಗುಣತ್ರಯವಿಭಾವಿನೀ|

ಕಾಲರಾತ್ರಿರ್ಮಹಾರಾತ್ರಿರ್ಮೋಹರಾತ್ರಿಶ್ಚ ದಾರುಣಾ||

ಎಂದು ಕಾಲರಾತ್ರಿದೇವಿಯನ್ನು ವರ್ಣಿಸಲಾಗಿದೆ. ನೀನೇ ಎಲ್ಲರ ಪ್ರಕೃತಿ ಅಂದರೆ ಮೂಲ ಬೀಜ. ಗುಣತ್ರಯರೂಪಿಣಿ. ಘೋರವಾದ ಕಾಲರಾತ್ರಿ, ಮಹಾರಾತ್ರಿ ಮತ್ತು ಮೋಹರಾತ್ರಿ.

ಸ್ಕಂದಪುರಾಣದಲ್ಲಿ ದುರ್ಗಾಸುರನ ಸಂಹಾರಕಳು ಕಾಲರಾತ್ರಿ ಎಂದು ಹೇಳಲಾಗಿದೆ. ವಿಷ್ಣುಧರ್ಮೋತ್ತರಪುರಾಣದಲ್ಲಿ ಕಾಲನಾದ ಯಮನ ಅರ್ಧಾಂಗಿ ಕಾಲರಾತ್ರಿ ಎನ್ನಲಾಗಿದೆ. ಬ್ರಹ್ಮಾಂಡಪುರಾಣದ ಲಲಿತಾಸಹಸ್ರನಾಮದಲ್ಲೂ ಈ ಹೆಸರಿನ ಉಲ್ಲೇಖವಿದೆ.

ಕಾಶೀಖಂಡದಲ್ಲಿ ಕಾಲರಾತ್ರಿಸ್ವರೂಪರಾದ ದುರ್ಗೆಯ ಶಕ್ತಿಗಳೇ ಕಾಶಿಯನ್ನು ರಕ್ಷಿಸುತ್ತಿವೆ ಎಂದು ವರ್ಣಿಸಲಾಗಿದೆ.

ಸಾ ದುರ್ಗಾ ಶಕ್ತಿಭಿಃ ಸಾರ್ಧಂ ಕಾಶೀಂ ರಕ್ಷತಿ ಸರ್ವತಃ|

ತಾಃ ಪ್ರಯತ್ನೇನ ಸಂಪೂಜ್ಯಾಃ ಕಾಲರಾತ್ರಿಮುಖಾ ನರೈಃ||

ಕಾಲರಾತ್ರಿಯು ನಾಲ್ಕು ಕೈಗಳನ್ನು ಹೊಂದಿದ್ದಾಳೆ, ಒಂದು ಕೈಯಲ್ಲಿ ಖಡ್ಗವನ್ನೂ ಇನ್ನೊಂದರಲ್ಲಿ ವಜ್ರಾಯುಧವನ್ನೂ ಹಿಡಿದಿದ್ದಾಳೆ. ಇನ್ನೆರಡು ಕೈಗಳಲ್ಲಿ ಅಭಯಮುದ್ರೆಯನ್ನೂ ವರದಮುದ್ರೆಯನ್ನೂ ತೋರಿದ್ದಾಳೆ. ಕೂದಲನ್ನು ಹರಡಿಕೊಂಡು, ಕತ್ತೆಯನ್ನು ವಾಹನವನ್ನಾಗಿ ಮಾಡಿಕೊಂಡಿದ್ದಾಳೆ.

ಜಗತ್ತಿನ ದುಷ್ಟಶಕ್ತಿಗಳನ್ನು ನಾಶಮಾಡುವ, ನಮ್ಮಲ್ಲಿರುವ ದುಷ್ಟತನವನ್ನೂ ಹೋಗಲಾಡಿಸುವ ಕಾಲರಾತ್ರಿಯನ್ನು ಧ್ಯಾನಿಸಿ ಧನ್ಯಾರಾಗೋಣ. ನಾಳೆ ಮಹಾಗೌರಿಯ ಅನುಸಂಧಾನಕ್ಕಾಗಿ ಮತ್ತೆ ಭೇಟಿಯಾಗೋಣ.


No comments:

नारायण महादेव धोनि

 असङ्ख्यानां वीरयोधानां जन्मभूमिः इयं भारतमाता। अतः एव कश्चन कविः कवयति 'वन्ध्या न भारतजननी शूरसुतानां जन्मभूमिः' इति। प्रायेण सार्ध...