Wednesday, October 21, 2020

ಸ್ಕಂದಮಾತೆ:

ನಮೋ ದೇವಿ ಮಹಾವಿದ್ಯೇ ನಮಾಮಿ ಚರಣೌ ತವ|

ಸದಾ ಜ್ಞಾನಪ್ರಕಾಶಂ ಮೇ ದೇಹಿ ಸರ್ವಾರ್ಥದೇ ಶಿವೇ||

ಇಂದು ನವರಾತ್ರಪರ್ವದ ಐದನೆಯ ದಿನ. ಲಲಿತಾಪಂಚಮಿ ಎಂದು ಕರೆಸಿಕೊಳ್ಳುವ ಈ ದಿನ ವಿಶೇಷವಾಗಿ ಲಲಿತಾತ್ರಿಪುರಸುಂದರಿದೇವಿಯ ಉಪಾಸನೆ ನಡೆಯುತ್ತದೆ. ಇಂದು ಪೂಜಿತಗೊಳ್ಳುವ ದುರ್ಗೆ ಸ್ಕಂದಮಾತೆ. ’ಪಾರ್ವತೀನಂದನಃ ಸ್ಕಂದಃ ಸೇನಾನೀರಗ್ನಿಭೂರ್ಗುಹಃ’ ಅಮರಕೋಶದನ್ವಯ ಸ್ಕಂದನೆಂದರೆ ಷಣ್ಮುಖ. ಕಾರ್ತಿಕೇಯ ಎಂಬುದು ಅವನ ಇನ್ನೊಂದು ಅಭಿಧಾನ. ಶಿವನ ರೇತಸ್ಸನ್ನು ಅಪಹರಿಸಿದ ಅಗ್ನಿ ಅದರ ತೇಜಸ್ಸನ್ನು ತಾಳಲಾರದೆ ಗಂಗೆಯಲ್ಲಿ ಬಿಟ್ಟ. ಗಂಗೆಯಲ್ಲಿ ಸ್ನಾನಮಾಡಿದ ಕೃತ್ತಿಕೆಯರು ಗರ್ಭಧರಿಸಿದರು. ಪತಿಭಯದಿಂದ ಅವರು ತಮ್ಮ ಗರ್ಭವನ್ನು ಶರವಣ ಹುಲ್ಲಿನ ಮೇಲೆ ಚೆಲ್ಲಿದಳು. ಅಲ್ಲಿ ಹುಟ್ಟಿದ ಮಗು ಆರುಮುಖಗಳನ್ನು ಪಡೆದುಕೊಂಡಿತು. ಅದರಿಂದ ಆರು ಕೃತ್ತಿಕೆಯರ ಸ್ತನ್ಯವನ್ನು ಒಮ್ಮೆಲೇ  ಕುಡಿಯಲು ಸಾಧ್ಯವಾಯಿತು. ಹೀಗೆ ಶರಜನ್ಮಾ, ಷಡಾನನ, ಕಾರ್ತಿಕೇಯ ಮುಂತಾದ ಹೆಸರುಗಳನ್ನು ಪಡೆದುಕೊಂಡ ಕುಮಾರ ಪಾರ್ವತೀಕುಮಾರನಾಗಿ ಸ್ಕಂದ ಎಂಬ ಅಭಿಧಾನವನ್ನು ಹೊಂದಿದ. ಸ್ಕಂದ ಇತ್ಯೇವ ವಿಖ್ಯಾತೋ ಗೌರೀಪುತ್ರೋ ಭವಿಷ್ಯತಿ ಎಂದು ಶಿವನೇ ಉದ್ಘೋಷಿಸಿದ್ದಾನೆ ಎಂದು ವಾಮನಪುರಾಣ ಹೇಳುತ್ತದೆ.

ಸ್ಕಂದ ಶಬ್ದಕ್ಕೆ ಶಬ್ದ ಕಲ್ಪದ್ರುಮವು ಸ್ಕಂದತೇ ಉತ್ಪ್ಲುತ್ಯ ಗಚ್ಛತಿ ಇತಿ ಸ್ಕಂದಃ ಎಂದು ಎಂಬ ವ್ಯುತ್ಪತ್ತಿಯನ್ನು ನೀಡಿದೆ. ನೆಗೆಯುತ್ತ ಹೋಗುವವನು ಎಂದರ್ಥ. ಶಿವನ ರೇತಸ್ಸು ಒಂದೆಡೆಯಿಂದ ಇನ್ನೊಂದೆಡೆಗೆ ಸಾಗಿದ್ದರಿಂದ ಆ ಹೆಸರು. ರಾಕ್ಷಸರನ್ನು ಶೋಷಿಸುವವನು, ಶಿಕ್ಷಿಸುವವನು ಎಂಬರ್ಥದಲ್ಲಿ

ಸ್ಕಂದತಿ ಶೋಷಯತಿ ದೈತ್ಯಾನ್ ವಾ ಎಂಬ ನಿರ್ವಚನೆಯೂ ಇದೆ. ತಾರಕನೆಂಬ ದೈತ್ಯನ ಸಂಹಾರಕ್ಕಾಗಿಯೇ ಸ್ಕಂದನ ಜನನವಾದುದು. ದೇವಸೈನ್ಯದ ನಾಯಕತ್ವವನ್ನು ವಹಿಸಿ ತಾರಕವಧೆಯನ್ನು ಮಾಡಿ ಲೋಕಕ್ಕೆ ಒದಗಿದ್ದ ಕಂಟಕವನ್ನು ನಿವಾರಿಸಿದವನು ಸ್ಕಂದ.

ಛಾಂದೋಗ್ಯ ಉಪನಿಷತ್ತಿನಲ್ಲಿ ಬ್ರಹ್ಮಮಾನಸಪುತ್ರನಾದ ಸನತ್ಕುಮಾರನೇ ಸ್ಕಂದನಾಗಿ ಹುಟ್ಟಿಬಂದಿದ್ದಾನೆ ಎಂದು ಉಲ್ಲೇಖಿಸಲಾಗಿದೆ.

ಮಾನ್ಯತೇ ಪೂಜ್ಯತೇ ಯಾ ಸಾ ಮಾತಾ. ಮಾತೆ ಎಂಬ ಶಬ್ದಕ್ಕೆ ಪೂಜ್ಯಳು ಅಂತಲೇ ಅರ್ಥ. ಒಟ್ಟಿನಲ್ಲಿ ಸ್ಕಂದಸ್ಯ ಮಾತಾ ಸ್ಕಂದಮಾತಾ. ಸ್ಕಂದನ ತಾಯಿ ಸಸ್ಸ್ಕಂದಮಾತೆ.

ಪಾರ್ವತಿಯು ಶಿವನೊಂದಿಗೆ ದಿವ್ಯವಿಮಾನದಲ್ಲಿ ಬಂದು ಸ್ಕಂದನನ್ನು ತನ್ನ ತೊಡೆಯ ಮೇಲೆ ಕೂಡ್ರಿಸಿಕೊಂಡ ಸನ್ನಿವೇಶವನ್ನು ಕಾಲಿದಾಸ ತನ್ನ ಕುಮಾರಸಂಭವಮ್ ಗ್ರಂಥದಲ್ಲಿ ರಮ್ಯವಾಗಿ ವರ್ಣಿಸಿದ್ದಾನೆ.

ವಿನಮ್ರದೇವಾಸುರಪೃಷ್ಟಗಾಭ್ಯಾಮಾದಾಯ ತಂ ಪಾಣಿಸರೋರುಹಾಭ್ಯಾಮ್|

ನವೋದಯಂ ಪಾರ್ವಣಚಂದ್ರಚಾರುಂ ಗೌರೀ ಸಮುತ್ಸುಂಗತಲಂ ನಿನಾಯ||

ನಮಸ್ಕರಿಸಿದ ದೇವಾಸುರರ ಬೆನ್ನುಗಳನ್ನು ನೇವರಿಸಿದ ತನ್ನ ಕರಕಮಲಗಳಿಂದ ಈಗಷ್ಟೇ ಉದಿಸಿದ ಪೂರ್ಣಿಮೆಯ ಚಂದ್ರನಂತೆ ಸುಂದರನಾಗಿರುವ ಆ ಮಗುವನ್ನು ಅವಳು ತನ್ನ ತೊಡೆಯ ಮೇಲೆ ಇರಿಸಿಕೊಂಡಳು.

ಸ್ವಮಂಕಮಾರೋಪ್ಯಸುಧಾನಿಧಾನಮಿವಾತ್ಮನೋ ನಂದನಮಿಂದುವಕ್ತ್ರಾ|

ತಮೇಕಮೀಷಾಂ ಜಗದೇಕವೀರಂ ಬಭೂವ ಪೂಜ್ಯಾ ಧುರಿ ಪುತ್ರಿಣೀನಾಮ್||

ಸುಧಾಕರನಂತಿರುವ ಜಗದೇಕವೀರನಾದ ತನ್ನ ಮಗನನ್ನು ತನ್ನ ತೊಡೆಯೇರಿಸಿಕೊಂಡು ಆ ಇಂದುವದನೆ ತಾಯಿಯರ ಸಾಲಿನಲ್ಲಿ ಪೂಜ್ಯಳಾದಳು.

ಕಾಳಿದಾಸ ವರ್ಣಿಸಿದಂತೆಯೇ ಸ್ಕಂದಮಾತೆ ಸ್ಕಂದನನ್ನು ತನ್ನ ತೊಡೆಯ ಮೇಲೆ ಕುಳ್ಳಿರಿಸಿಕೊಂಡು ಒಂದು ಕೈಯಲ್ಲಿ ಅವನನ್ನು ಹಿಡಿದಿದ್ದಾಳೆ. ಚತುರ್ಭುಜೆಯಾದ ಅವಳ ಇನ್ನೊಂದು ಕೈ ಅಭಯಹಸ್ತವಾದರೆ ಇನ್ನೆರಡು ಕೈಗಳಲ್ಲಿ ಕಮಲಪುಷ್ಪವನ್ನು ಹಿಡಿದಿದ್ದಾಳೆ. ಸಿಂಹದ ಮೇಲೆ ಸವಾರಿ ಮಾಡುತ್ತಿರುವ ಅವಳು ನಮಗೆ ಶುಭವನ್ನುಂಟುಮಾಡಲಿ ಎಂಬ ಪ್ರಾರ್ಥನೆ ಈ ದಿನದ್ದು.

ಸಿಂಹಾಸನಗತಾ ನಿತ್ಯಂ ಪದ್ಮಾಂಚಿತಕರದ್ವಯಾ|

ಶುಭದಾಸ್ತು ಸದಾ ದೇವೀ ಸ್ಕಂದಮಾತಾ ಯಶಸ್ವಿನೀ||

ವಿಶುದ್ಧಚಕ್ರದಲ್ಲಿ ನಮ್ಮ ಮನಸ್ಸನ್ನು ನೆಲೆಗೊಳಿಸಿ ಸ್ಕಂದಮಾತೆಯ ಆರಾಧನೆ ಮಾಡೋಣ. ತನ್ನ ಪುತ್ರ ಕಾರ್ತಿಕೇಯನಿಗೆ ತೋರಿದ ಮಾತೃವಾತ್ಸಲ್ಯವನ್ನು ನಮಗೂ ತೋರಲಿ ಎಂದು ಆಶಿಸುತ್ತ, ಕುಪುತ್ರೋ ಜಾಯೇತ ಕ್ವಚಿದಪಿ ಕುಮಾತಾ ನ ಭವತಿ ಎಂಬ ಶ್ರೀ ಶಂಕರಭಗವತ್ಪಾದರ ಮಾತುಗಳನ್ನು ಸ್ಮರಿಸುತ್ತ ತಿಳಿದೋ ತಿಳಿಯದೆಯೋ ಮಾಡಿದ ಸಕಲ ಅಪರಾಧಗಳನ್ನೂ ಮನ್ನಿಸೆಂದು ಅವಳಲ್ಲಿ ಭಕ್ತಿಯಿಂದ ಪ್ರಾರ್ಥಿಸೋಣ.

 

No comments:

नारायण महादेव धोनि

 असङ्ख्यानां वीरयोधानां जन्मभूमिः इयं भारतमाता। अतः एव कश्चन कविः कवयति 'वन्ध्या न भारतजननी शूरसुतानां जन्मभूमिः' इति। प्रायेण सार्ध...