Tuesday, October 20, 2020

ಕೂಷ್ಮಾಂಡಾ

 ನಮೋ ದೇವ್ಯೈ ಮಹಾ ದೇವ್ಯೈ ಶಿವಾಯೈ ಸತತಮ್ ನಮಃ|

ನಮಃ ಪ್ರಕೃತ್ಯೈ ಭದ್ರಾಯೈ ನಿಯತಾಃ ಪ್ರಣತಾಃ ಸ್ಮ ತಾಮ್||

ಸಕಲ ಸಜ್ಜನರಿಗೆ ಅಭಿವಂದನೆಗಳು.

ನವರಾತ್ರೋತ್ಸವದ ನಾಲ್ಕನೆಯ ದಿನವನ್ನು ತಲುಪಿದ್ದೇವೆ. ಈ ದಿನ ಪೂಜಿತಗೊಳ್ಳುವ ದುರ್ಗೆಯ ಅಭಿಧಾನ ಕೂಷ್ಮಾಂಡಾ. ಕುತ್ಸಿತಃ ಊಷ್ಮಾ ಕೂಷ್ಮಾ. ಅಂದರೆ ಕೆಟ್ಟದಾದ ತಾಪ ಎಂದರ್ಥ. ಉಷ್ಮ ಊಷ್ಮಾಗಮಸ್ತಪಃ|  ನಮ್ಮ ಸಂಸಾರ ಆಧಿಭೌತಿಕ, ಆಧಿದೈವಿಕ ಆಧ್ಯಾತ್ಮಿಕ ಎಂಬ ತಾಪತ್ರಯಗಳಿಂದ ಯುಕ್ತವಾಗಿದೆ. ಮೃಗಪಕ್ಷಿಕ್ರಿಮಿಕೀಟಾದಿಗಳಿಂದ ಹಾಗೂ ಪ್ರಕೃತಿವಿಕೋಪದಿಂದ ಬರುವ ದುಃಖ ಆಧಿಭೌತಿಕ. ದೇವತಾಪ್ರಕೋಪದಿಂದ ಬರುವ ದುಃಖ ಆಧಿದೈವಿಕ, ದೇಹಕ್ಕೆ ಬರುವ ವ್ಯಾಧಿ ಹಾಗೂ ಮನಸ್ಸಿಗೆ ಬರುವ ಆಧಿ ಆಧ್ಯಾತ್ಮಿಕ ದುಃಖ. ಈ ತಾಪತ್ರಯಗಳಿಂದ ಕೂಡಿದ ಸಂಸಾರವೇ ಕೂಷ್ಮಾ. ಕೂಷ್ಮಾ ಅಂಡೇ, ಮಾಂಸಪೇಶ್ಯಾಮುದರರೂಪಾಯಾಂ ಯಸ್ಯಾಃ ಸಾ ಕೂಷ್ಮಾಂಡಾ. ಬ್ರಹ್ಮಾಂಡವನ್ನು ತನ್ನ ಉದರದಲ್ಲಿ ಧರಿಸಿದವಳೇ ಕೂಷ್ಮಾಂಡಾ. ಕೂಷ್ಮಾಂಡ ಎಂದರೆ ಕುಂಬಳಕಾಯಿ ಎನ್ನುವ ಅರ್ಥವೂ ಇದೆ. ಕುಂಬಳಕಾಯಿಯ ಬಲಿ ದೇವಿಗೆ ಇಷ್ಟವಾದುದರಿಂದಲೂ ಈ ಹೆಸರು ಬಂದಿದೆ ಎಂಬ ವಾದವೂ ಇದೆ.

ಕೂಷ್ಮಾಂಡಾದೇವಿಯ ಅಧಿಷ್ಠಾನ ಇರುವುದು ತೇಜೋಮಯವಾದ ಸೂರ್ಯಮಂಡಲದಲ್ಲಿ. ತಸ್ಯ ಭಾಸಾ ಸರ್ವಮಿದಮ್ ವಿಭಾತಿ ಎಂಬ ಉಪನಿಷತ್ತಿನಲ್ಲಿ ವರ್ಣಿತವಾದ ಬ್ರಹ್ಮತತ್ತ್ವವೇ ಜಗನ್ಮಾತೆಯಾದುದರಿಂದ ಸೂರ್ಯಮಂಡಲದ ಪ್ರಕಾಶವು ದೇವಿಯಿಂದಲೇ ಪ್ರದತ್ತವಾದುದು ಎಂಬುದನ್ನು ಪ್ರತ್ಯೇಕವಾಗಿ ಹೇಳಬೇಕಿಲ್ಲ. ಈ ಬ್ರಹ್ಮಾಂಡದ ಸೃಷ್ಟಿಗಿಂತ ಮೊದಲು ಎಲ್ಲೆಲ್ಲೂ ಕತ್ತಲೆಯಾವರಿಸಿತ್ತು. ಆಗ ಸೂರ್ಯಮಂಡಲದಿಂದ ಬಂದಂತಹ ಸ್ವರ್ಣರೇಖೆಯಂತಹ ಬೆಳಕಿನ ಕಿರಣವೇ ದೇವಿಯ ಸ್ವರೂಪವನ್ನು ಪಡೆದು ಅವಳ ಮಂದಹಾಸದಿಂದಲೇ ಈ ಜಗತ್ತು ಸೃಷ್ಟಿಯಾಯಿತು ಎಂದು ಪುರಾಣಗಳು ವರ್ಣಿಸುತ್ತವೆ. ಬ್ರಹ್ಮಾಂಡಂ ದರ್ಶಯತ್ಯೇಷಾ ಕೃತ್ವಾ ವೈ ಪರಮಾತ್ಮನೇ|

ದೇವಿಯ ಸ್ವರೂಪವನ್ನು  ತಿಳಿದುಕೊಳ್ಳುವ ಉದ್ದೇಶದಿಂದ ತ್ರಿಮೂರ್ತಿಗಳು ಒಮ್ಮೆ ದಿವ್ಯ ವಿಮಾನಾರೂಢರಾಗಿ ದೇವಿಯ ಶೋಭಾಯಮಾನ ಲೋಕವನ್ನು ಪ್ರವೇಶಿಸಿದರು. ದಿವ್ಯ ಸ್ತ್ರೀಯರಗಡಣದಿಂದ ಸಂಸೇವಿತಳಾದ ಮಹಾದೇವಿಯ ಅರಮನೆಯನ್ನು ಹೊಕ್ಕ ಮರುಕ್ಷಣದಲ್ಲಿ ಮೂರೂ ಪುರುಷೋತ್ತಮರು ನಾರಿಯರಾಗಿ ಬದಲಾದರು. ಮಣಿಮಯ ಪಾದಪೀಠದ ಮೇಲೆ ಶೋಭಿತವಾದ ಮಹಾಮಾತೆಯ ಪಾದಗಳೆಡೆಯಲ್ಲಿ ಕೈಮುಗಿದು ನಿಂತಿರುವ ಬ್ರಹ್ಮ ವಿಷ್ಣು ಮಹೇಶ್ವರರಿಗೆ ಅವಳ ಪಾದದುಗುರಿನಲ್ಲಿ ಬ್ರಹ್ಮಾಂಡವೇ ಗೋಚರವಾಯಿತು. ಸತ್ಯಲೋಕಾದಿ ಹದಿನಾಲ್ಕು ಲೋಕಗಳು, ವೈಕುಂಠ, ಕೈಲಾಸ, ಸಮಸ್ತ ದೇವತೆಗಳು, ಯಕ್ಷ, ನರ ರಾಕ್ಷಸರೆಲ್ಲ ಗೋಚರರಾದರು.

ಬ್ರಹ್ಮಾಂಡಮಖಿಲಂ ಸರ್ವಂ ತತ್ರ ಸ್ಥಾವರಜಂಗಮಮ್|

ನಖದರ್ಪಣಮಧ್ಯೇ ವೈ ದೇವ್ಯಾಶ್ಚರಣಪಂಕಜೇ||

ಕನ್ನಡಿಯಲ್ಲಿ ಕಂಡಂತೆ ದೇವಿಯ ಹೊಳೆಯುವ ನಖಗಳಲ್ಲಿ ಸ್ಥಾವರಜಂಗಮೋಪೇತವಾದ ಬ್ರಹ್ಮಾಂಡವನ್ನು ಕಂಡ ವಿಷ್ಣು ಅವಳನ್ನು ಭಕ್ತಿಯಿಂದ ಸ್ತುತಿಸಿದ.

ಜ್ಞಾತಮ್ ಮಯಾಖಿಲಮಿದಂ ತ್ವಯಿ ಸನ್ನಿವಿಷ್ಟಂ

ತ್ವತ್ತೋಸ್ಯ ಸಂಭವಲಯಾವಪಿ ಮಾತರದ್ಯ |

ಶಕ್ತಿಶ್ಚ ತೇಽಸ್ಯ ಕರಣೇ ವಿತತಪ್ರಭಾವಾ

ಜ್ಞಾತಾಽಧುನಾ ಸಕಲಲೋಕಮಯೀತಿ ನೂನಮ್ ||

ಹೇ, ಅಂಬ, ಅಖಿಲ ಜಗತ್ತು ನಿನ್ನಲ್ಲಿಯೇ ಸನ್ನಿವಿಷ್ಟವಾಗಿದೆ, ನಿನ್ನಿಂದಲೇ ಈ ಜಗತ್ತಿನ ಉತ್ಪತ್ತಿ ಮತ್ತು ನಾಶ. ನಿನ್ನ ಶಕ್ತಿಯಿಂದಲೇ ಇಲ್ಲಿ ಎಲ್ಲವೂ ನಡೆಯುವುದು ನೀನು ಸಕಲಲೋಕಮಯಿ ಎಂದು ತಿಳಿಯಿತು ಎಂದು ನಾರಾಯಣನು ಭಕ್ತಿಯಿಂದ ಪ್ರಾರ್ಥಿಸಿದ. ಅವನನ್ನನುಸರಿಸಿ ಬ್ರಹ್ಮ, ಈಶರೂ ಮಾತೆಯನ್ನು ಸ್ತುತಿಸಿದರು. ಸುಪ್ರಸನ್ನಳಾದ ದೇವಿಯು ಮಹಾಸರಸ್ವತೀ, ಮಹಾಲಕ್ಷ್ಮೀ ಮತ್ತು ಮಹಾಕಾಲೀ ಎಂಬ ತನ್ನ ಮೂರು ಶಕ್ತಿಗಳನ್ನು ಕ್ರಮವಾಗಿ ಬ್ರಹ್ಮವಿಷ್ಣುಮಹೇಶ್ವರರಿಗೆ ಪ್ರದಾನ ಮಾಡಿದಳು ಎಂದು ದೇವೀ ಭಾಗವತ ವರ್ಣಿಸುತ್ತದೆ.

ಕೂಷ್ಮಾಂಡಾ ದೇವಿ ಎಂಟು ಕರಗಳನ್ನು ಹೊಂದಿದ್ದು ಕಮಂಡಲು, ಬಿಲ್ಲು, ಬಾಣ, ಕಲಶ, ಚಕ್ರ, ಗದೆ, ಮತ್ತು ಜಪಮಾಲೆಗಳನ್ನು ಧರಿಸಿದ್ದಾಳೆ. ಇನ್ನೊಂದು ಕೈಯಲ್ಲಿ ಸುರಾಕಲಶವನ್ನು ಹಿಡಿದಿದ್ದಾಳೆ. ಸಿಂಹಾರೂಢಳಾಗಿರುವ ಅವಳನ್ನು ಪೂಜಿಸುವಾಗ ಹೇಳುವ ಮಂತ್ರ

ಸುರಾಸಂಪೂರ್ಣಕಲಶಂ ರುಧಿರಾಪ್ಲುತಮೇವ ಚ|

ದಧಾನಾ ಹಸ್ತಪದ್ಮಾಭ್ಯಾಂ ಕೂಷ್ಮಾಂಡಾ ಶುಭದಾಸ್ತು ಮೇ||

ರಕ್ತಸಿಕ್ತವಾದ ಸುರೆಯ ಕಲಶವನ್ನು ತನ್ನ ಕಾಲಿನಮೇಲಿಟ್ಟುಕೊಂಡು ಕೈಯಲ್ಲಿ ಹಿಡಿದಿರುವ ಕುಷ್ಮಾಂಡಾ ದೇವಿಯು ನನಗೆ ಶುಭವನ್ನು ಉಂಟುಮಾಡಲಿ ಎಂದು ಪ್ರಾರ್ಥಿಸಲಾಗುತ್ತದೆ.

ತಾಮಸಪ್ರವೃತ್ತಿಯ ದೈತ್ಯರನ್ನು ಸಂಹರಿಸಲು ದೇವಿಯು ತಾಮಸರೂಪವನ್ನೇ ತಳೆದಿದ್ದಳು. ಮಹಿಷಾಸುರನ ವಧೆಯ ಸಂದರ್ಭದಲ್ಲಿ ಸುರೆಯನ್ನು ಕುಡಿದು ಅಟ್ಟಹಾಸ ಮಾಡಿದಳು ಎಂದು ದೇವೀಸಪ್ತಶತಿಯಲ್ಲಿ ವರ್ಣಿಸಲಾಗಿದೆ.

ತತಃ ಕ್ರುದ್ಧಾ ಜಗನ್ಮಾತಾ ಚಂಡಿಕಾ ಪಾನಮುತ್ತಮಮ್|

ಪಪೌ ಪುನಃಪುನಶ್ಚೈವ ಜಹಾಸಾರುಣಲೋಚನಾ ||

ಎಂದು ದೇವಿಯ ಭಯಂಕರರೂಪವನ್ನು ವರ್ಣಿಸಲಾಗಿದೆ. ಲಲಿತಾಸಹಸ್ರನಾಮದಲ್ಲಿಯೂ ಮಾಧ್ವೀಪಾನಾಲಸಾಮತ್ತಾ ಎಂದು ದೇವಿಯನ್ನು ಬಣ್ಣಿಸಿರುವುದನ್ನು ಗಮನಿಸಬಹುದು. ಸುರಾ ಎನ್ನುವ ಪದವನ್ನು ಸುಧಾ ಎಂದು ಅರ್ಥೈಸಿ ಅಮೃತಕಲಶವನ್ನು ಹಿಡಿದಿರುವವಳು ಎಂದೂ ತಿಳಿಯಬಹುದು. ದುಷ್ಟನಿಗ್ರಹಕ್ಕಾಗಿಯೇ ಅವತಾರ ಎತ್ತಿದ ದೇವಿಯ ಕೈಗಳು ಸದಾ ರಕ್ತಸಿಕ್ತವಾಗಿಯೇ ಇರುತ್ತವೆ.

ಅನಾಹತಚಕ್ರದಲ್ಲಿ ಮನಸ್ಸನ್ನು ಕೇಂದ್ರೀಕರಿಸಿ ಕುಷ್ಮಾಂಡಾದೇವಿಯ ಉಪಾಸನೆಯನ್ನು ಮಾಡಿದರೆ ಸಕಲ ರೋಗರುಜಿನಗಳೂ ಕ್ಷಯಹೊಂದಿ ತೇಜೋವೃದ್ಧಿಯಾಗುವುದೆಂಬುದು ಆಸ್ತಿಕರ ದೃಢವಿಶ್ವಾಸ. ನಾವೂ ಭಕ್ತಿಯಿಂದ ಅವಳ ಅನುಸಂಧಾನವನ್ನು ಮಾಡಿ ಧನ್ಯರಾಗೋಣ. ನಾಳೆ ದುರ್ಗೆಯ ಐದನೆಯ ಅವತಾರವಾದ ಸ್ಕಂದಮಾತೆಯ ಬಗ್ಗೆ ತಿಳಿದುಕೊಳ್ಳೋಣ.

No comments:

नारायण महादेव धोनि

 असङ्ख्यानां वीरयोधानां जन्मभूमिः इयं भारतमाता। अतः एव कश्चन कविः कवयति 'वन्ध्या न भारतजननी शूरसुतानां जन्मभूमिः' इति। प्रायेण सार्ध...