Friday, March 9, 2018

ಸಂಚಿಕೆ ೮ - ಧರಾ

ಮಹಿಳಾ ದಿನಾಚರಣೆಗೆ ವಿಶಿಷ್ಟ ಲೇಖನ ಸರಣಿ
ಸನಾತನ ಭಾರತದ ಸ್ತ್ರೀರತ್ನಗಳು
ದ್ವಿತೀಯ ಅವತರಣಿಕೆ
ಸಂಚಿಕೆ ೮
ಧರಾ
ದ್ರೋಣ ಹಾಗೂ ಧರಾ ಗಂಧಮಾದನಪರ್ವತದಲ್ಲಿ ಸಂತಾನಕ್ಕಾಗಿ ತಪಶ್ಚರ್ಯ ಮಾಡುತ್ತಿದ್ದ ದಂಪತಿಗಳು. ದ್ರೋಣನು ಪ್ರತಿದಿನ ಭಿಕ್ಷಾಟನೆಯಿಂದ ಗಳಿಸಿದ ಆಹಾರದಿಂದ ಅವರ ಉದರಪೋಷಣೆಯಾಗುತ್ತಿತ್ತು.
ಒಂದಿನ ದ್ರೋಣ ಭಿಕ್ಷಾಟನೆಗೆ ಹೋದ ಸಂದರ್ಭದಲ್ಲಿ ಸ್ಫುರದ್ರೂಪಿ ಯುವಕನೊಬ್ಬ ವೃದ್ಧರಾದ ತಂದೆತಾಯಿಯರೊಂದಿಗೆ ಇವರ ಆಶ್ರಮಕ್ಕೆ ಆಗಮಿಸಿ ಹಸಿವಿನ ಉಪಶಮನ ಮಾಡೆಂದು ಕೋರಿಕೊಂಡ. ಆ ಯುವಕನ ತೇಜಸ್ಸನ್ನು ನೋಡಿ ಸಂತುಷ್ಟಳಾದ ಧರಾ ಅವರನ್ನು ಯಥೋಚಿತವಾಗಿ ಸತ್ಕರಿಸಿ ಪತಿಯು ಆಹಾರವನ್ನು ತರುವವರೆಗೆ ಕಾಯಬೇಕೆಂದು ಬಿನ್ನವಿಸಿಕೊಂಡಳು. ಆ ಯುವಕ ಅಸಹನೆಯಿಂದ ಕುದಿಯಹತ್ತಿದ. ತನ್ನ ತಂದೆ ತಾಯಿಯರು ಹಸಿವಿನಿಂದ ಸಾಯುತ್ತಿದ್ದಾರೆಂದೂ ಅವರಿಗೆ ಆಶ್ರಮದಲ್ಲಿ ಸರಿಯಾಗಿ ಕುಳಿತುಕೊಳ್ಳಲೂ ಸ್ಥಳವಿಲ್ಲವೆಂದೂ ಜರೆಯತೊಡಗಿದ. ಧರಾ ದುಃಖದಿಂದ ಪರಿಪರಿಯಾಗಿ ಅವನನ್ನು ಸಮಾಧಾನಪಡಿಸಲು ಯತ್ನಿಸುತ್ತಿದ್ದಳು. ಸಮಯ ಕಳೆದರೂ ದ್ರೋಣ ಬರದೇ ಇದ್ದಾಗ ಆ ಯುವಕ ಕುಪಿತನಾಗಿ ಹೊರಡಲನುವಾದ. ಅವನ ತಂದೆ ತಾಯಿಯರು ಎದ್ದು ನಿಂತ ಕೂಡಲೇ ಮೂರ್ಛಿತರಾಗಿ ಬಿದ್ದರು. ಧರಾ ನೀರನ್ನು ಸಿಂಪಡಿಸಿ ಅವರನ್ನು ಎಚ್ಚರಗೊಳಿಸಿದಳು.
ಪತಿಯನ್ನು ಕಾಯುತ್ತ ಕುಳಿತರೆ ವೃದ್ಧರ ಪ್ರಾಣಪಕ್ಷಿ ಹಾರಿಹೋಗಬಹುದೆಂದು ಯೋಚಿಸಿ ಧರಾ ಸಮೀಪದಲ್ಲಿಯೇ ಇರುವ ವರ್ತಕನಲ್ಲಿಗೆ ಹೋದಳು. ವರ್ತಕನ ಅಂಗಡಿಯು ಪುರುಷರಿಂದ ತುಂಬಿ ತುಳುಕುತ್ತಿತ್ತು. ಮೊದಲಬಾರಿಗೆ ಮನೆಯಿಂದ ಹೊರಬಂದ ಧರಾಳಿಗೆ ಅಲ್ಲಿಯ ವಾತಾವರಣ ಮುಜುಗರವನ್ನುಂಟುಮಾಡುತ್ತಿತ್ತು. ಕುತ್ಸಿತಬುದ್ಧಿಯ ಪುರುಷರ ವಕ್ರದೃಷ್ಟಿ ಅವಳ ಮೇಲೆ ಬಿತ್ತು. ಅಷ್ಟರಲ್ಲಿ ವರ್ತಕನೂ ಅವಳನ್ನು ನೋಡಿ  ಸೌಂದರ್ಯಕ್ಕೆ ಮಾರುಹೋದ. ಅವಳ ಅಸಹಾಯಕತೆಯನ್ನು ಉಪಯೋಗಿಸಿಕೊಳ್ಳುವ ದುರಾಲೋಚನೆಯಿಂದ ’ನಾನು ಆಹಾರವಸ್ತುಗಳನ್ನು ಕೊಟ್ಟರೆ ಪ್ರತಿಯಾಗಿ ನೀನೇನನ್ನು ಕೊಡುವೆ?’ ಎಂದು ಕೇಳಿದ. ಅದಕ್ಕೆ ಧರಾ ನನ್ನಲೇನೂ ಇಲ್ಲ. ಪತಿಯು ಆಗಮಿಸಿದಾಕ್ಷಣ ಕೊಡಿಸುವೆ’ ಎಂದಳು. ನಿನ್ನಲ್ಲಿರುವುದನ್ನು ಕೊಡುವುದಾಗಿ ಭಾಷೆಯನ್ನಿತ್ತರೆ ಕೊಡುವೆನೆಂದ. ’ನನ್ನಲ್ಲೇನಾದರೂ ಇದ್ದರೆ ನಾರಾಯಣನಾಣೆಯಾಗಿಯೂ ಕೊಡುತ್ತೇನೆ’ ಎಂದು ಮಾತನ್ನು ಕೊಟ್ಟಳು. ಪಾತ್ರೆಯ ತುಂಬ ಹಿಟ್ಟು, ತುಪ್ಪ ಹಾಗೂ ಇತರ ವಸ್ತುಗಳನ್ನು ತುಂಬಿ ಅವಳಿಗೆ ಕೊಟ್ಟು ಅವಳೆದೆಯೆಡೆಗೆ ಕಾಮದೃಷ್ಟಿಯನ್ನು ಹರಿಸುತ್ತ ’ನಿನ್ನ ಎದೆಯಲ್ಲಿರುವ ಎರಡು ಅಮೃತಕಲಶಗಳನ್ನು ನೀಡು’ ಎಂದ. ಧರಾಗೆ ಅರ್ಥವಾಯಿತು. ದೇವರ ಆಣೆ ಮಾಡಿ ಕೊಟ್ಟ ಮಾತನ್ನು ತಪ್ಪುವಂತಿಲ್ಲ. ತನ್ನ ಪಾತಿವ್ರತ್ಯಕ್ಕೆ ಭಂಗ ಬರದಂತೆ ಕೊಟ್ಟ ಮಾತನ್ನು ನಡೆಸಿಕೊಡುವ ಉಪಾಯವನ್ನು ಚಿಂತಿಸಿದಳು. ಒಂದು ಉಪಾಯ ಹೊಳೆದು ಅಲ್ಲಿಯೇ ಇದ್ದ ಹರಿತವಾದ ಚಾಕುವಿನಿಂದ ತನ್ನೆರಡೂ ಸ್ತನಗಳನ್ನು ಕತ್ತರಿಸಿ ವರ್ತಕನಿಗೆ ಕೊಟ್ಟಳು. ಏನಾಯಿತೆಂದು ವರ್ತಕ ದಿಗ್ಭ್ರಾಂತನಾಗಿ ನಿಂತಿರುವಾಗಲೇ ಅವನಿತ್ತ ವಸ್ತುವನ್ನು ತೆಗೆದುಕೊಂಡು ಆಶ್ರಮಕ್ಕೆ ಧಾವಿಸಿದಳು. ಅತಿಥಿಗಳಿಗೆ ಆಹಾರವನ್ನು ಒಪ್ಪಿಸಿ ರಕ್ತಸ್ರಾವದಿಂದ ಕುಸಿದು ಬಿದ್ದಳು.
ಆಶ್ರಮವನ್ನು ಆವರಿಸಿದ ಅಭೂತಪೂರ್ವ ಪ್ರಕಾಶ ಅವಳನ್ನು ಎಚ್ಚರಿಸಿತು. ಯುವಕನ ಸ್ಥಾನದಲ್ಲಿ ಅವಳ ಆರಾಧ್ಯಮೂರ್ತಿ ಶ್ರೀಹರಿಯೂ ವೃದ್ಧದಂಪತಿಗಳ ಸ್ಥಾನದಲ್ಲಿ ಪಾರ್ವತೀಪರಮೇಶ್ವರರೂ ಗೋಚರಿಸಿದರು. ಅಷ್ಟರಲ್ಲಿ ಅಲ್ಲಿಗೆ ಆಗಮಿಸಿದ ದ್ರೋಣನೂ ಅನುಗ್ರಹೀತನಾದ. ಧರ್ಮಪಾಲನೆಗಾಗಿ ತನ್ನ ಸ್ತನಗಳನ್ನು ಅರ್ಪಿಸಿದ ಧರಾಳಿಗೆ ಶ್ರೀಹರಿ ವರವನಿತ್ತ - ’ಮುಂದಿನ ಜನ್ಮದಲ್ಲಿ ನಿನ್ನ ಸ್ತನ್ಯಪಾನಮಾಡುತ್ತೇನೆ’. ಈ ಮಹಿಮಾನ್ವಿತ ನಾರಿಯೇ ಮುಂದಿನ ಜನ್ಮದಲ್ಲಿ ಯಶೋದೆಯಾಗಿ ಕೃಷ್ಣನಿಗೆ ಮೊಲೆಹಾಲುಣಿಸುವ ಭಾಗ್ಯವನ್ನು ಪಡೆದಳು.  
ಮಹಾಬಲ ಭಟ್, ಗೋವಾ

No comments:

नारायण महादेव धोनि

 असङ्ख्यानां वीरयोधानां जन्मभूमिः इयं भारतमाता। अतः एव कश्चन कविः कवयति 'वन्ध्या न भारतजननी शूरसुतानां जन्मभूमिः' इति। प्रायेण सार्ध...