Friday, March 9, 2018

ಸಂಚಿಕೆ ೯ *ಸುಮನಾ*

ಮಹಿಳಾ ದಿನಾಚರಣೆಗೆ ವಿಶಿಷ್ಟ ಲೇಖನ ಸರಣಿ

*ಸನಾತನ ಭಾರತದ ಸ್ತ್ರೀರತ್ನಗಳು*
ದ್ವಿತೀಯ ಅವತರಣಿಕೆ

ಸಂಚಿಕೆ ೯

*ಸುಮನಾ*

ನರ್ಮದೆಯ ತೀರದಲ್ಲಿ ಅಮರಕಂಟಕವೆಂಬ ತೀರ್ಥಕ್ಷೇತ್ರ. ಅಲ್ಲೊಬ್ಬ ಸೋಮಶರ್ಮನೆಂಬ ಸದ್ಗುಣಿ ಬ್ರಾಹ್ಮಣ. ಚ್ಯವನಮಹರ್ಷಿಯ ಪುತ್ರಿ ಸುಮನಾ ಅವನ ಧರ್ಮಪತ್ನಿ. ವಿದುಷಿಯೂ ಧರ್ಮಜ್ಞೆಯೂ ಆಗಿದ್ದ ಅವಳು ಒಂದಿನ ಪತಿಯ ಬಾಡಿದ ಮುಖವನ್ನು ಕಂಡು ಕಾರಣವನ್ನು ಕೇಳಿದಳು. ತನ್ನ ದಾರಿದ್ರ್ಯ ಹಾಗೂ ಪುತ್ರಹೀನತೆಯೇ ತನ್ನ ಚಿಂತೆಗೆ ಕಾರಣವೆಂದು ಸೋಮಶರ್ಮ ತಿಳಿಸಿದ. ಅದನ್ನು ಕೇಳಿ ಸುಮನಾ ಅವನಿಗೆ ತತ್ತ್ವೋಪದೇಶ ಮಾಡಿದಳು. ’ಹಣದ ಚಿಂತೆ ಜೀವನವನ್ನೇ ಸುಡುತ್ತದೆ. ಮಕ್ಕಳನ್ನು ಪಡೆಯುವುದೂ ಪೂರ್ವಕರ್ಮದ ಮೇಲೆ ಅವಲಂಬಿತವಾಗಿರುತ್ತದೆ. ಕೆಲವರಿಗೆ ಮಕ್ಕಳು ಕೆಲ ಕಾಲ ನ್ಯಾಸರೂಪವಾಗಿ ಸಿಕ್ಕಿರುತ್ತಾರೆ. ಅವರು ಸಂಪೂರ್ಣ ಜೀವನ ತಂದೆತಾಯಿಯರೊಂದಿಗಿರದೆ ದುಃಖವನ್ನು ನೀಡುತ್ತಾರೆ. ಇನ್ನು ಕೆಲವರಿಗೆ ಹೋದ ಜನ್ಮದ ಸಾಲಗಾರರು ಮಕ್ಕಳಾಗಿ ಹುಟ್ಟಿರುತ್ತಾರೆ. ಅಂತಹ ಮಕ್ಕಳು ಜನ್ಮದಾತರ ಸಂಪತ್ತನ್ನು ಉಪಭೋಗಿಸುತ್ತ ಕಾಲ ಕಳೆಯುತ್ತಾರೆ. ಮತ್ತೆ ಕೆಲವರಿಗೆ ಶತ್ರುಗಳು ಮಕ್ಕಳಾಗಿ ಹುಟ್ಟಿ ಜೀವನವನ್ನು ನರಕವನ್ನಾಗಿಸುತ್ತಾರೆ. ಕೆಲವು ಗೃಹಸ್ಥರಿಗೆ ಕಳೆದ ಜನ್ಮದಲ್ಲಿ ಉಪಕೃತರಾದವರು ಮಕ್ಕಳಾಗಿ ಹುಟ್ಟಿ ಅವರ ಋಣ ಸಂದಾಯ ಮಾಡುತ್ತಾರೆ. ಕೆಲವರು ಮಾತ್ರ ’ಉದಾಸೀನ’ ಮಕ್ಕಳನ್ನು ಪಡೆಯುತ್ತಾರೆ. ಆ ಮಕ್ಕಳು ಏನನ್ನೂ ಕೊಡುವುದೂ ಇಲ್ಲ, ತೆಗೆದುಕೊಳ್ಳುವುದೂ ಇಲ್ಲ. ಸಂತುಷ್ಟರೂ ಆಗಿರುವುದಿಲ್ಲ, ಕೋಪಿಷ್ಠರೂ ಆಗಿರುವುದಿಲ್ಲ. ಪುತ್ರಹೀನತೆಗೆ ಕಾರಣವನ್ನು ತಿಳಿದುಕೊಳ್ಳಲು ನೀವು ಮಹರ್ಷಿ ವಸಿಷ್ಠರನ್ನು ಕಂಡು ಬನ್ನಿ’ ಎಂದು ಕಾಂತಾಸಮ್ಮಿತವಾಗಿ ಉಪದೇಶಿಸಿದಳು.

ಸೋಮಶರ್ಮ ವಸಿಷ್ಠರನ್ನು ಕಂಡು ತನ್ನ ಪೂರ್ವಜನ್ಮಕೃತ ಪಾಪಲೇಶದ ಬಗ್ಗೆ ತಿಳಿದುಕೊಂಡ. ಅವರ ಮಾರ್ಗದರ್ಶನದಂತೆ ಶ್ರೀಮನ್ನಾರಾಯಣನ ಉಪಾಸನೆ ಮಾಡಿ ಸಿರಿತನವನ್ನು ಪಡೆದುಕೊಂಡ, ಅವನ ಪತ್ನಿ ಸುಮನಾ ಅವನ ಉಪಾಸನೆಗೆ ಸಂಪೂರ್ಣ ಸಹಕಾರವನ್ನಿತ್ತಳು. ಕಾಲಕ್ರಮದಲ್ಲಿ ಸುವ್ರತ ಎಂಬ ಮಗನಿಗೆ ಜನ್ಮ ನೀಡಿದಳು. ಸುವ್ರತನು ಮುಂದೆ ವಿದ್ವಾಂಸನಾಗಿ ಮೆರೆದ. ಹೀಗೆ ಸಕಾಲದಲ್ಲಿ ಗಂಡನಿಗೆ ಮಾರ್ಗದರ್ಶನ ಮಾಡಿ 'ಕರಣೇಷು ಮಂತ್ರೀ' ಎಂಬ ಪತ್ನಿಯ ಲಕ್ಷಣವನ್ನು ಸಾರ್ಥಕಪಡಿಸಿದ ಸುಮನಾ ಗೃಹಿಣಿಯರಿಗೆ ಆದರ್ಶಳಾಗಿದ್ದಾಳೆ.

ಮಹಾಬಲ ಭಟ್, ಗೋವಾ
ಸಂಪರ್ಕ: 9860060373

No comments:

नारायण महादेव धोनि

 असङ्ख्यानां वीरयोधानां जन्मभूमिः इयं भारतमाता। अतः एव कश्चन कविः कवयति 'वन्ध्या न भारतजननी शूरसुतानां जन्मभूमिः' इति। प्रायेण सार्ध...