Saturday, March 10, 2018

ಸಂಚಿಕೆ 10 *ಚಂಡಪತ್ನೀ*

ಮಹಿಳಾ ದಿನಾಚರಣೆಗೆ ವಿಶಿಷ್ಟ ಲೇಖನ ಸರಣಿ

*ಸನಾತನ ಭಾರತದ ಸ್ತ್ರೀರತ್ನಗಳು*
ದ್ವಿತೀಯ ಅವತರಣಿಕೆ

ಸಂಚಿಕೆ 10

*ಚಂಡಪತ್ನೀ*

ಚಂಡನೆಂಬ ಭಿಲ್ಲ ಯುವಕ ಪಾಂಚಾಲ ರಾಜ ಸಿಂಹಕೇತುವಿನ ಆಪ್ತನಾಗಿದ್ದ. ಬೇಟೆಯಾಡಲು ಹೋಗುವಾಗಲೆಲ್ಲ ಜೊತೆಯಲ್ಲೇ ಹೋಗುವುದರಿಂದ ರಾಜನೊಂದಿಗೆ ಸಲುಗೆ ಬೆಳೆದಿತ್ತು. ಹಾಗೇ ಒಂದಿನ ಕಾಡಿಗೆ ಹೋದಾಗ ಅಲ್ಲೊಂದು ಶಿವಮಂದಿರ ಗೋಚರವಾಯಿತು. ಅದನ್ನು ನೋಡಿ ಚಂಡನ ಮನಸ್ಸಿನಲ್ಲಿ ವಿಚಿತ್ರ ಭಾವನೆಗಳು ಹುಟ್ಟಿದವು. ಅನಾಥವಾಗಿ ಪೂಜೆಯಿಲ್ಲದೆ ಬಿದ್ದಿದ್ದ ಶಿವಲಿಂಗವನ್ನು ಮನೆಗೆ ತೆಗೆದುಕೊಂಡು ಹೋಗಿ ಪೂಜಿಸುವ ಮನಸ್ಸಾಯಿತು. ರಾಜನನ್ನು ಕೇಳಿದ. ಮಹಾರಾಜ ಸಮ್ಮತಿಯಿತ್ತುದಷ್ಟೇ ಅಲ್ಲ ಅವನಿಗೆ ಪೂಜಾವಿಧಿಯನ್ನೂ ಬೋಧಿಸಿದ.

ಚಂಡನ ಮಡದಿ ಭಿಲ್ಲನಿ ಕೂಡ ಅಷ್ಟೇ ಶ್ರದ್ಧಾವಂತೆ. ಪತಿಪತ್ನಿಯರಿಬ್ಬರೂ ಭಕ್ತಿಭಾವದಿಂದ ಶಿವನನ್ನು ಪೂಜಿಸುತ್ತ ಆನಂದಿಸುತ್ತಿದ್ದರು. ಶಿವಲಿಂಗದ ಮುಂದೆ ಪರವಶರಾಗಿ ಹಾಡುತ್ತಿದ್ದರು, ಕುಣಿಯುತ್ತಿದ್ದರು. ಭಿಲ್ಲ ಪ್ರತಿದಿನ ತಪ್ಪದೆ ಸ್ಮಶಾನಕ್ಕೆ ಹೋಗಿ ಚಿತಾಭಸ್ಮವನ್ನು ತಂದು ಅರ್ಪಿಸುತ್ತಿದ್ದ. ಅದು ಅವನ ಶಿವಪೂಜೆಯ ಅವಿಭಾಜ್ಯ ಅಂಗವಾಗಿತ್ತು.

ಹೀಗಿರುವಾಗ ಒಂದಿನ ಎಷ್ಟು ಪ್ರಯತ್ನಿಸಿದರೂ ಚಿತಾಭಸ್ಮ ಸಿಗಲೇ ಇಲ್ಲ. ಚಂಡ ಚಿಂತಾಕ್ರಾಂತನಾದ. ತನ್ನ ವ್ರತಕ್ಕೆ ಭಂಗ ಬಂತಲ್ಲ ಎಂದು ಪ್ರಲಾಪಿಸಿದ. ಅವನ ಪ್ರಲಾಪವನ್ನೂ ವ್ರತಭಂಗವನ್ನೂ ಸಹಿಸಲಾಗದ ಭಿಲ್ಲನೀ ಒಂದು ದಿಟ್ಟ ನಿರ್ಧಾರವನ್ನು ತೆಗೆದುಕೊಂಡಳು.

ತನ್ನ ಪತಿಯ ಪೂಜೆಗೆ ಚಿತಾಭಸ್ಮವನ್ನು ಒದಗಿಸುವ ಸಲುವಾಗಿ ಚಂಡಪತ್ನಿ ತನ್ನನ್ನೇ ದಹಿಸಿಕೊಂಡಳು. ಭಾವೋದ್ವೇಗಕ್ಕೆ ಒಳಗಾಗಿದ್ದ ಚಂಡ ಅವಳ ದೇಹದ ಭಸ್ಮವನ್ನೇ ಶಿವನಿಗೆ ಅರ್ಪಿಸಿ ಪೂಜಿಸಿದ. ಭಸ್ಮಧರನ ಆರಾಧನೆಯಲ್ಲಿ ಮೈಮರೆತ. ಎಂದಿನಂತೆ ಕುಣಿಯಹತ್ತಿದ. ವಾಡಿಕೆಯಂತೆ ತನ್ನ ಪತ್ನಿಯನ್ನು ಕರೆದ. ಪರವಶತೆಯಿಂದ ಹೊರಬಂದ ಅವನಿಗೆ ತನ್ನೊಂದಿಗೆ ನರ್ತಿಸುತ್ತಿರುವ ಮಡದಿಯನ್ನು ನೋಡಿ ಆಶ್ಚರ್ಯವಾಯಿತು. ಶಿವನ ಮಹಿಮೆಯನ್ನರಿತು ಗಂಡಹೆಂಡಿರು ಪುಳಕಿತರಾದರು.

ಚಂಡಪತ್ನಿ ತನ್ನ ದಿಟ್ಟ ನಿರ್ಧಾರ ಹಾಗೂ ತ್ಯಾಗದಿಂದ ಪತಿಗೂ ಶಿವನ ಅನುಗ್ರಹವನ್ನು ಕೊಡಿಸಿದಳು. 

✍🏻 *ಮಹಾಬಲ ಭಟ್, ಗೋವಾ*
ಸಂಪರ್ಕ: ೯೮೬೦೦೬೦೩೭೩

No comments:

नारायण महादेव धोनि

 असङ्ख्यानां वीरयोधानां जन्मभूमिः इयं भारतमाता। अतः एव कश्चन कविः कवयति 'वन्ध्या न भारतजननी शूरसुतानां जन्मभूमिः' इति। प्रायेण सार्ध...