Tuesday, March 13, 2018

ಸಂಚಿಕೆ 11 *ಕರ್ಕಟೀ*

ಮಹಿಳಾ ದಿನಾಚರಣೆಗೆ ವಿಶಿಷ್ಟ ಲೇಖನ ಸರಣಿ

*ಸನಾತನ ಭಾರತದ ಸ್ತ್ರೀರತ್ನಗಳು*
ದ್ವಿತೀಯ ಅವತರಣಿಕೆ

ಸಂಚಿಕೆ 11

*ಕರ್ಕಟೀ*

ಸನಾತನ ಭಾರತದ ಬ್ರಹ್ಮವಾದಿನಿಯರಲ್ಲಿ ಒಬ್ಬಳು ರಾಕ್ಷಸಿಯೂ ಇದ್ದಳು. ಘೋರಾಕಾರದ ಅವಳ ಹೆಸರು ಕರ್ಕಟಿ. ಅವಳಿಗೆ ಯಾವಾಗಲೂ ಮುಗಿಯದ ಹಸಿವು. ಹಾಗಾಗಿ ಅವಳಿಗೆ ತನ್ನ ಸ್ಥೂಲದೇಹದ ಮೇಲೆ ಜುಗುಪ್ಸೆ ಬಂತು. ಬ್ರಹ್ಮನ ಕುರಿತು ತಪ್ಪಸ್ಸನ್ನು ಮಾಡಿದಳು. ಬ್ರಹ್ಮ ಅವಳಿಗೆ ಸೂಕ್ಷ್ಮ ಶರೀರವನ್ನು ಕೊಟ್ಟ. ಅವಳು ರೋಗಾಣುವಾದಳು. ಕುಮಾರ್ಗದಲ್ಲಿ ಸಾಗುತ್ತಿರುವ ಮಾನವರ ದೇಹವನ್ನು ಪ್ರವೇಶಿಸಿ ರಕ್ತವನ್ನು ಹೀರಿ ಕೊಲ್ಲುತ್ತಿದ್ದಳು. ಸಜ್ಜನರಿಗೆ ಯಾವುದೇ ಪೀಡೆಯನ್ನು ಕೊಡುತ್ತಿರಲಿಲ್ಲ. ಅಷ್ಟಾದರೂ ಅವಳಿಗೆ ಸಮಾಧಾನವಾಗಲಿಲ್ಲ. ಮತ್ತೆ ಸ್ಥೂಲದೇಹವೇ ಬೇಕೆಂದೆನಿಸಿತು. ಮತ್ತೆ ಹಲವು ವರ್ಷಗಳ ಕಾಲ ತಪಸ್ಸನ್ನು ಆಚರಿಸಿದಳು. ತಪಸ್ಸು ಅವಳ ಮನಸ್ಸನ್ನು ಪರಿವರ್ತಿಸಿತು. ದೈಹಿಕ ಹಸಿವೆಯ ಜೊತೆಗೆ ಆಧ್ಯಾತ್ಮದ ಹಸಿವು ಹೆಚ್ಚುತ್ತಿತ್ತು. ಮನಸ್ಸಿನಲ್ಲಿ ಜೀವನದ ಬಗ್ಗೆ, ಪ್ರಪಂಚದ ಬಗ್ಗೆ ವಿವಿಧ ಪ್ರಶ್ನೆಗಳು ಉದ್ಭವಿಸಿದವು.

ಒಂದಿನ ಆಹಾರವನ್ನು ಅರಸುವ ಕಾಲಕ್ಕೆ ಕಾಡಿನಲ್ಲಿ ಇಬ್ಬರು ಮಾನವರು ಗೋಚರಿಸಿದರು. ಅವರನ್ನು ತಿನ್ನುವ ಬಯಕೆಯಾಯಿತು ಅವಳಿಗೆ. ರಾಕ್ಷಸಿಯ ಘೋರ ರೂಪವನ್ನು ಕಂಡೂ ಆ ವ್ಯಕ್ತಿಗಳು ಹೆದರಲಿಲ್ಲ. ಅದು ರಾಕ್ಷಸಿಗೆ ಸೋಜಿಗವನ್ನುಂಟುಮಾಡಿತು. ತನ್ನ ಪ್ರಶ್ನೆಗೆ ಉತ್ತರಿಸಿದರೆ ಬಿಟ್ಟು ಬಿಡುವುದಾಗಿ ಹೇಳಿದಳು.

ಆ ವ್ಯಕ್ತಿಗಳು ಆ ದೇಶದ ರಾಜ ಹಾಗೂ ಮಂತ್ರಿಯಾಗಿದ್ದರು. ರಾಕ್ಷಸಿಯ ಆಧ್ಯಾತ್ಮ ಜ್ಞಾನದ ಹಸಿವನ್ನು ಅವರು ತಣಿಸಿದರು. ಅವರಿಂದ ಪರಮಾತ್ಮನ ಸ್ವರೂಪದ ಬಗ್ಗೆ ತಿಳಿದುಕೊಂಡ ಕರ್ಕಟಿಗೆ ಸಂತಸವಾಯಿತು. ಅವಳು ಅವರಿಗೆ ನಮಸ್ಕರಿಸುತ್ತ “ನೀವು ನನ್ನ ಗುರುಗಳು ನನ್ನಿಂದ ಏನು ಸಹಾಯ ಆಗಬೇಕು” ಎಂದು ಕೇಳಿದಳು. ರಾಜ ತನ್ನ ರಾಜ್ಯದಲ್ಲಿ ಹರಡಿರುವ ಸಾಂಕ್ರಾಮಿಕ ರೋಗದ ಬಗ್ಗೆ ಹೇಳಿದ. ಅದಕ್ಕೆ ಔಷಧಿ ಗಿಡಮೂಲಿಕೆಯ ಅನ್ವೇಷಣೆಗೇ ತಾವು ಕಾಡಿಗೆ ಬಂದುದಾಗಿ ತಿಳಿಸಿದ. ಕರ್ಕಟಿಯಿಂದಲೇ ಆರಂಭವಾಗಿದ್ದ ಆ ರೋಗಕ್ಕೆ ಅವಳೇ ಔಷಧಿಯನ್ನು ಹುಡುಕಿಕೊಟ್ಟಳು. ರೋಗಹರವಾದ ಮಂತ್ರವನ್ನೂ ಉಪದೇಶಿಸಿದಳು. ಅವಳಿಂದ ಉಪದಿಷ್ಟವಾದ ಮಂತ್ರ ಅಥರ್ವವೇದದ ಭಾಗವಾಗಿದೆ. ಕರ್ಕಟಿಯು ಮಂತ್ರದ್ರಷ್ಟಾರಳಾಗಿದ್ದಾಳೆ.

ಮಂತ್ರೋಪದೇಶವನ್ನು ಪಡೆದ ರಾಜ ಅವಳಿಗೆ ನಮಸ್ಕರಿಸಿ ತನ್ನ ರಾಜ್ಯಕ್ಕೆ ಬಂದು ಗೌರವವನ್ನು ಸ್ವೀಕರಿಸುವಂತೆ ಬಿನ್ನವಿಸಿಕೊಂಡ. ಅವನ ಕೋರಿಕೆಯನ್ನು ಮನ್ನಿಸಿ ಅವನ ರಾಜಧಾನಿಗೆ ಬಂದಳು. ಮರಣದಂಡನೆಗೆ ಒಳಗಾಗಿದ್ದ ಅಪರಾಧಿಗಳು ಅವಳ ಆಹಾರವಾದರು. ತೃಪ್ತಳಾದ ರಾಕ್ಷಸಿ ಕಾಡಿಗೆ ಹೋಗಿ ತಪಸ್ಸಿನಲ್ಲಿ ನಿರತಳಾದಳು. ಹಸಿವೆಯಾದಾಗ ರಾಜಧಾನಿಗೆ ಬಂದು ತನಗಾಗಿ ರಾಜ ಕಾಯ್ದಿರಿಸಿದ್ದ ಅಪರಾಧಿಗಳನ್ನು ತಿಂದು ಮತ್ತೆ ತಪಸ್ಸಿಗೆ ಕುಳಿತುಕೊಳ್ಳುತ್ತಿದ್ದಳು. ಇದು ಅನೇಕ ವರ್ಷಗಳ ಕಾಲ ಮುಂದುವರಿಯಿತು.

ನರಮಾಂಸ ಭಕ್ಷಿಸುವ ರಾಕ್ಷಸಿಯನ್ನೂ ಮಂತ್ರದ್ರಷ್ಟಾರೆಯೆಂದು ಗೌರವಿಸುವ ಸಂಸ್ಕೃತಿ ನಮ್ಮದು.

✍🏻 *ಮಹಾಬಲ ಭಟ್, ಗೋವಾ*
ಸಂಪರ್ಕ: ೯೮೬೦೦೬೦೩೭೩

No comments:

नारायण महादेव धोनि

 असङ्ख्यानां वीरयोधानां जन्मभूमिः इयं भारतमाता। अतः एव कश्चन कविः कवयति 'वन्ध्या न भारतजननी शूरसुतानां जन्मभूमिः' इति। प्रायेण सार्ध...