Monday, March 5, 2018

ಸಂಚಿಕೆ ೩ - ಧರ್ಮವ್ರತಾ


ಮಹಿಳಾ ದಿನಾಚರಣೆಗೆ ವಿಶಿಷ್ಟ ಲೇಖನ ಸರಣಿ
ಸನಾತನ ಭಾರತದ ಸ್ತ್ರೀರತ್ನಗಳು
ದ್ವಿತೀಯ ಅವತರಣಿಕೆ
ಸಂಚಿಕೆ ೩
ಧರ್ಮವ್ರತಾ
ಧರ್ಮ ಹಾಗೂ ವಿಶ್ವರೂಪೆಯರ ಮಗಳಾದ ಧರ್ಮವ್ರತಾ ಕೌಮಾರ್ಯದಲ್ಲಿಯೇ ತಪಸ್ಸಿನಲ್ಲಿ ನಿರತಳಾಗಿದ್ದಳು. ಬ್ರಹ್ಮಮಾನಸಪುತ್ರನಾದ ಮರೀಚಿಯು ಅವಳ ತಪಸ್ಸನ್ನು ನೋಡಿ ಮೆಚ್ಚಿ ಪತ್ನಿಯೆಂದು ಅಂಗೀಕರಿಸಿದನು. ಧರ್ಮಿಷ್ಠೆಯಾದ ಅವಳು ಪತಿಯಲ್ಲಿ ದೇವರನ್ನು ಕಾಣುತ್ತ ಆಧ್ಯಾತ್ಮ ಸಾಧನೆಯಲ್ಲಿ ನಿರತಳಾಗಿದ್ದಳು.
ಒಂದಿನ ಪತಿಯ ಸೇವೆಯಲ್ಲಿ ನಿರತಳಾಗಿದ್ದ ಸಮಯದಲ್ಲಿ ಮಾವನಾದ ಬ್ರಹ್ಮದೇವ ಅಲ್ಲಿಗೆ ಆಗಮಿಸಿದ. ಗೃಹಿಣಿಯಾಗಿ ಅವನನ್ನು ಸ್ವಾಗತಿಸುವುದು ಕರ್ತವ್ಯವೆಂದು ಯೋಚಿಸಿದ ಧರ್ಮವ್ರತಾ ಪತಿಸೇವೆಯನ್ನು ಬಿಟ್ಟು ಮಾವನನ್ನು ಉಪಚರಿಸಿದಳು. ಇದು ಮರೀಚಿಗೆ ರುಚಿಸಲಿಲ್ಲ. ಅವಳ ಮೇಲೆ ಸಿಟ್ಟುಗೊಂಡು ಕಲ್ಲಾಗೆಂದು ಶಾಪ ಕೊಟ್ಟ. ಆಗ ಅವಳು ’ಬ್ರಹ್ಮದೇವ ನಿಮ್ಮ ತಂದೆ ಹಾಗೂ ಗುರು. ಅವರು ಮನೆಗೆ ಬಂದಾಗ ಅವರನ್ನು ಉಪಚರಿಸಬೇಕಾದ್ದು ನಿಮ್ಮ ಕರ್ತವ್ಯವಾಗಿತ್ತು. ನಿಮ್ಮ ಸಹಧರ್ಮಚಾರಿಣಿಯಾಗಿ ನಾನು ಅದನ್ನು ಮಾಡಿದ್ದೇನೆ. ಆದರೆ ನೀವು ವಿನಾಕಾರಣ ನನ್ನನ್ನು ಶಪಿಸಿದ್ದೀರಿ. ನಿಮ್ಮನ್ನು ನಾನು ಗುರುವೆಂದು ಸ್ವೀಕರಿಸಿದ್ದೇನೆ. ಹಾಗಾಗಿ ಪ್ರತಿಶಾಪ ನೀಡುವ ಶಕ್ತಿಯಿದ್ದರೂ ಕೊಡಲಾರೆ.’  ಎಂದಳು. ತನ್ನ ಸತೀತ್ವಶಕ್ತಿಯಿಂದ ಶಾಪವನ್ನು ತಡೆಹಿಡಿದು ವಿಷ್ಣುವನ್ನು ಕುರಿತು ತಪಸ್ಸನ್ನು ಮಾಡಿದಳು. ಸಂಪ್ರೀತನಾದ ನಾರಾಯಣ ಪ್ರತ್ಯಕ್ಷನಾದಾಗ ತನ್ನನ್ನು ಶಾಪದಿಂದ ಪಾರು ಮಾಡೆಂದು ಬೇಡಿಕೊಂಡಳು. ತಪಸ್ವಿ ಮರೀಚಿಯ ಶಾಪ ಸುಳ್ಳಾಗದೆಂದು ತಿಳಿಸಿದ ವಿಷ್ಣು ಶಿಲೆಯ ರೂಪದಲ್ಲಿ ಇರುವ ಅವಳಲ್ಲಿ ಸಕಲದೇವತೆಗಳೂ ನೆಲೆಸುವರೆಂದು ಅನುಗ್ರಹಿಸಿದನು.
ಇಂದು ಗಯಾಕ್ಷೇತ್ರದಲ್ಲಿ ಪೂಜೆಗೊಳ್ಳುತ್ತಿರುವ ಕಲ್ಲು ಇದೇ ಎಂದು ಅಗ್ನಿಪುರಾಣ ನಮಗೆ ತಿಳಿಸಿಕೊಡುತ್ತದೆ.
ಮಹಾಬಲ ಭಟ್, ಗೋವಾ

No comments:

नारायण महादेव धोनि

 असङ्ख्यानां वीरयोधानां जन्मभूमिः इयं भारतमाता। अतः एव कश्चन कविः कवयति 'वन्ध्या न भारतजननी शूरसुतानां जन्मभूमिः' इति। प्रायेण सार्ध...