Monday, March 5, 2018

ಸಂಚಿಕೆ 4 - ಆತ್ರೇಯಿ


ಮಹಿಳಾ ದಿನಾಚರಣೆಗೆ ವಿಶಿಷ್ಟ ಲೇಖನ ಸರಣಿ
ಸನಾತನ ಭಾರತದ ಸ್ತ್ರೀರತ್ನಗಳು
ದ್ವಿತೀಯ ಅವತರಣಿಕೆ
ಸಂಚಿಕೆ 4
ಆತ್ರೇಯಿ
ಸಪ್ತರ್ಷಿಗಳಲ್ಲಿ ಒಬ್ಬನಾದ ಅತ್ರಿ ಮಹರ್ಷಿ ಹಾಗೂ ಅನಸೂಯಾರ ಮಗಳು ಆತ್ರೇಯಿ. ತಾಯಿಯಂತೆ ಸಕಲವಿದ್ಯಾಪಾರಂಗತೆಯೂ ಕಲ್ಯಾಣಗುಣಸಂಪನ್ನೆಯೂ ಆಗಿದ್ದಳು. ಅಗ್ನಿಯ ಮಗ ಅಂಗಿರ ಮಹರ್ಷಿಯನ್ನು ವರಿಸಿದ ಅವಳು ಅನುಕೂಲ ಸತಿಯಾಗಿ ಅವನ ಧರ್ಮಕಾರ್ಯಗಳಲ್ಲಿ ಸಹಚರಿಸುತ್ತಿದ್ದಳು. ಆದರೆ ಅಂಗಿರನು ಅಗ್ನಿಯ ಮಗನಾದುದರಿಂದ ಸದಾ ಅವಳ ಮೇಲೆ ಉರಿಯುತ್ತಿದ್ದ. ಕಠೋರವಚನಗಳಿಂದ ನಿಂದಿಸುತ್ತಿದ್ದ. ಆಂಗೀರಸನೇ ಮೊದಲಾದ ಮಕ್ಕಳು ಅವನಿಗೆ ತಿಳಿ ಹೇಳಿದರೂ ಬದಲಾಗಲಿಲ್ಲ. ಅಪಮಾನದಿಂದ ಬೇಸತ್ತ ಆತ್ರೇಯಿ ಅಗ್ನಿದೇವನ ಮೊರೆ ಹೋದಳು. ಅಗ್ನಿಗೆ ಪರಿಸ್ಥಿತಿಯ ಅರಿವಾಯಿತು. ಅವನು ತನ್ನ ಸೊಸೆಗೆಂದ ’ಮಗಳೆ, ನನ್ನ ಮಗನಾದುದರಿಂದಲೇ ಅವನಿಗೆ ಈ ಸ್ವಭಾವ ಬಂದಿದೆ. ಆದರೆ ನನ್ನಷ್ಟೇ ಪವಿತ್ರಳಾಗಿರುವ ನಿನಗೆ ಅದನ್ನು ಬದಲಾಯಿಸುವ ಶಕ್ತಿಯಿದೆ. ನಾನು ನನ್ನ ಮಗನನ್ನು ಅಗ್ನಿಯಲ್ಲಿ ಕುಳಿತು ತಪಸ್ಸನ್ನಾಚರಿಸಲು ಪ್ರೇರೇಪಿಸುತ್ತೇನೆ. ಆಗ ನೀನು ನದೀರೂಪದಲ್ಲಿ ಅವನನ್ನು ಆವರಿಸು. ಆಗ ಅವನ ಉಗ್ರ ಸ್ವಭಾವ ಶಾಂತವಾಗುತ್ತದೆ.’
ಗಂಡ ಅಗ್ನಿಪ್ರವೇಶ ಮಾಡುವುದು ಆತ್ರೇಯಿಗೆ ಹೆದರಿಕೆಯನ್ನು ಹುಟ್ಟಿಸಿತು. ಅಗ್ನಿಯೇ ಅವಳ ಭಯವನ್ನು ನಿವಾರಿಸಿದ. ’ಪಂಚ ಮಹಾಭೂತಗಳು ಅವನನ್ನು ಏನೂ ಮಾಡಲಾರವು. ಹೆದರದಿರು. ನೀನು ಅವನನ್ನು ಆವರಿಸಿಕೊಳ್ಳುವುದರಲ್ಲಿಯೂ ದೋಷವಿಲ್ಲ. ’ಆತ್ಮಾ ವೈ ಪುತ್ರನಾಮಾಸಿ’ ಎಂಬ ಶ್ರುತಿವಚನದಂತೆ ಅವನ ಮಕ್ಕಳಿಗೆ ನೀನು ತಾಯಿಯಾಗಿರುವುದರಿಂದ ಅವನಿಗೂ ಮಾತೃಸಮಾನಳೇ ಆಗಿದ್ದೀಯೆ. ಪುತ್ರವತಿಯಾದ ಮಡದಿ ತಾಯಿಗೆ ಸಮಾನಳು. ಶಂಕೆಯಿಲ್ಲದೆ ನದೀರೂಪದಿಂದ ಅವನನ್ನು ಆವರಿಸು’ ಎಂದು ಧೈರ್ಯ ತುಂಬಿದನು.
ಅನತಿ ಕಾಲದಲ್ಲಿಯೇ ಅಂಗಿರಮಹರ್ಷಿ ಅಗ್ನಿಯಲ್ಲಿ ಕುಳಿತು ತಪಸ್ಸನ್ನಾರಂಭಿಸಿದ. ಆತ್ರೇಯಿ ನದಿಯಾಗಿ ಅವನನ್ನು ಆವರಿಸಿದಳು. ಅಂಗಿರನ ಸ್ವಭಾವ ಬದಲಾಯಿತು. ಶಾಂತಸ್ವಭಾವದಿಂದ ಪತ್ನಿಯೊಡನೆ ಸಂಸಾರಯಾತ್ರೆಯನ್ನು ಮುಂದುವರಿಸಿದ.
ಗಂಡನ ಪರುಷ ಸ್ವಭಾವವನ್ನು ಬದಲಿಸಿದ ಈ ನದಿ ’ಪರುಷ್ಣಿ’ ಎಂದು ಹೆಸರಾಯಿತು. ಈಗ ಅದನ್ನು ರಾವೀ ನದಿಯೆಂದು ಕರೆಯಲಾಗುತ್ತದೆ.

ಮಹಾಬಲ ಭಟ್, ಗೋವಾ

No comments:

नारायण महादेव धोनि

 असङ्ख्यानां वीरयोधानां जन्मभूमिः इयं भारतमाता। अतः एव कश्चन कविः कवयति 'वन्ध्या न भारतजननी शूरसुतानां जन्मभूमिः' इति। प्रायेण सार्ध...