Saturday, March 31, 2018

ಅತಿ ಆಸೆ ಗತಿಗೇಡು

ಧರ್ಮಭಾರತೀ ಮಾಸಪತ್ರಿಕೆಯ ಎಪ್ರಿಲ್ ಸಂಚಿಕೆಯ *ಸೂಕ್ತಿ-ಸಂವಾದಿ* ಅಂಕಣದ ಬರಹ

*ಅತಿ ಆಸೆ ಗತಿಗೇಡು*

ಮಾನವನೆಂದ ಮೇಲೆ ಆಸೆ ಇರದಿರುತ್ತದೆಯೆ? ಅದರೆ ಅದು ಅತಿಯಾದರೆ ಪ್ರಾಣಕ್ಕೇ ಸಂಚಕಾರ ಎಂಬುದನ್ನು ತಿಳಿಸುತ್ತದೆ ಈ ಗಾದೆ.

ಭಗವದ್ಗೀತೆಯಲ್ಲಿ ಶ್ರೀಕೃಷ್ಣ ಆಸೆ ಹುಟ್ಟುವ ಬಗೆ ಹಾಗೂ ಅದರ ಪರಿಣಾಮಗಳನ್ನು ಸುಂದರವಾಗಿ ವಿಶ್ಲೇಷಿಸಿದ್ದಾನೆ.

*ಧ್ಯಾಯತೋ ವಿಷಯಾನ್ ಪುಂಸಃ*
*ಸಂಗಸ್ತೇಷೂಪಜಾಯತೇ |*
*ಸಂಗಾತ್ಸಂಜಾಯತೇ ಕಾಮಃ* *ಕಾಮಾತ್ಕ್ರೋಧೋಭಿಜಾಯತೇ||*

ವಸ್ತುವಿನ ಬಗ್ಗೆ ಯೋಚಿಸುತ್ತಿರುವಂತೆ ಬೆಳೆಯುವ ಭಾವನಾತ್ಮಕ ಸಂಬಂಧವೇ ಆ ವಸ್ತುವನ್ನು ಪಡೆದುಕೊಳ್ಳುವ ಆಸೆಯನ್ನು ಹುಟ್ಟಿಸುತ್ತದೆ. ಆ ಆಸೆ ಈಡೇರದಿದ್ದರೆ ಅದರಿಂದ ಸಿಟ್ಟು, ಮತಿಭ್ರಷ್ಟತೆ, ಬುದ್ಧಿನಾಶ, ಮುಂದೆ ಸರ್ವನಾಶ ಉಂಟಾಗುತ್ತದೆ.

ಸಂಸ್ಕೃತ ಸುಭಾಷಿತವೊಂದು ಆಸೆಯೆಂಬುದು ವಿಚಿತ್ರವಾದ ಸರಪಣಿಯೆಂದು ಬಣ್ಣಿಸುತ್ತದೆ.

*ಆಶಾ ನಾಮ ಮನುಷ್ಯಾಣಾಂ*
*ಕಾಚಿದಾಶ್ಚರ್ಯಶೃಂಖಲಾ |*
*ಯಯಾ ಬದ್ಧಾಃ ಪ್ರಧಾವಂತಿ*
*ಮುಕ್ತಾಸ್ತಿಷ್ಠಂತಿ ಪಂಗುವತ್ ||*

ಇದು ವಿಚಿತ್ರ ಯಾಕೆಂದರೆ ಇದರಿಂದ ಬಂಧಿಸಲ್ಪಟ್ಟವರು ಜೀವನದಲ್ಲಿ ಓಡುತ್ತಲೇ ಇರುತ್ತಾರೆ. ಮುಕ್ತರಾದವರು ಸ್ಥಿರವಾಗಿ ನಿಲ್ಲುತ್ತಾರೆ.

ಚಿನ್ನದ ಮೊಟ್ಟೆಯನ್ನು ಕೊಡುವ ಕೋಳಿಯನ್ನು ಅತಿ ಆಸೆಯಿಂದ ಕಳೆದುಕೊಂಡ ಮೂರ್ಖನ ಕಥೆ ನಮಗೆ ತಿಳಿದಿದೆ. ದಿನಕ್ಕೊಂದು ಚಿನ್ನದ ನಾಣ್ಯವನ್ನು ಕೊಡುತ್ತಿದ್ದ ನಾಗರಾಜನನ್ನು ಅತಿಯಾದ ಆಸೆಯಿಂದ ಕೊಂದು ತಾನೇ ಮರಣಹೊಂದಿದ ಬ್ರಾಹ್ಮಣಕುವರನ ಕಥೆ ಪಂಚತಂತ್ರದಲ್ಲಿದೆ. ಅತ್ಯಾಶೆಯಿಂದ ಮುಟ್ಟಿದ್ದೆಲ್ಲ ಚಿನ್ನವಾಗಬೇಕೆಂದು ಬಯಸಿ ಕಷ್ಟವನ್ನನುಭವಿಸಿದ ಮೈದಾಸನ ನಿದರ್ಶನ ನಮ್ಮ ಮುಂದಿದೆ. ಚಿನ್ನದ ಜಿಂಕೆಯ ಆಸೆಯಿಂದ ಯಾತನೆಪಟ್ಟ ಸೀತೆಯ ದೃಷ್ಟಾಂತವನ್ನು ನೋಡಿದ್ದೇವೆ. ಇಷ್ಟೆಲ್ಲ ಓದಿ, ಕೇಳಿ ತಿಳಿದೂ ಆಸೆಯನ್ನು ಮೆಟ್ಟಿ ನಿಲ್ಲಲು ನಮ್ಮಿಂದ ಸಾಧ್ಯವಾಗುವುದಿಲ್ಲ.

ಆಸೆಯ ಮುಖಗಳು ಹಲವು. ರುಚಿಯಾದ ಪದಾರ್ಥಗಳನ್ನು ತಿನ್ನುವ ಆಸೆ ಹಲವರಿಗೆ, ಸುಂದರವಾದದ್ದನ್ನು ಅನುಭವಿಸುವ ಕಾಮ ಮತ್ತೆ ಕೆಲವರಿಗೆ. ಇನ್ನು ಕೆಲವರು ಕೀರ್ತಿಯ ಬೆನ್ನು ಬಿದ್ದವರು. ಅದನ್ನೇ ಡಿ.ವಿ.ಜಿ. ಸುಂದರವಾಗಿ ಕಗ್ಗಿಸಿದ್ದಾರೆ.

*ಅನ್ನದಾತುರಕಿಂತ ಚಿನ್ನದಾತುರ ತೀಕ್ಷ್ಣ |*
*ಚಿನ್ನದಾತುರಕಿಂತ ಹೆಣ್ಣುಗಂಡೊಲವು ||*
*ಮನ್ನಣೆಯದಾಹವೀಯೆಲ್ಲಕಂ ತೀಕ್ಷ್ಣತಮ |*
*ತಿನ್ನುವುದಾತ್ಮವನೆ – ಮಂಕುತಿಮ್ಮ ||*

ಇನ್ನೊಂದೆಡೆ *’ಆಶೆ ಮಂಥರೆ, ನರವಿವೇಚನೆಯೆ ಕೈಕೇಯಿ’* ಎನ್ನುತ್ತಾರೆ ಡಿವಿಜಿ. ನರನ ವಿವೇಚನೆಯನ್ನು ಭ್ರಷ್ಟಗೊಳಿಸಿ ಆತ್ಮನನ್ನು ವನವಾಸಕ್ಕೆ ಕಳಿಸುವ ಶಕ್ತಿ ಆಶೆಗಿದೆ. ಹಾಗಾಗಿ *’ಆಶೆಗಳ ಕೆಣಕದಿರು’* ಎಂದು ದೇವರಲ್ಲಿ ಬೇಡಿಕೊಳ್ಳುತ್ತಾರೆ. ಅಲ್ಲಮ ಪ್ರಭುಗಳು *ಹೊನ್ನು ಮಾಯೆಯಲ್ಲ, ಹೆಣ್ಣು ಮಾಯೆಯಲ್ಲ, ಮಣ್ಣು ಮಾಯೆಯಲ್ಲ ಮನದ ಮುಂದಣ ಆಸೆಯೇ ಮಾಯೆ ಕಣಾ ಗುಹೇಶ್ವರಾ.....* ಎಂದು ವಚನಿಸಿದ್ದಾರೆ.

ಆಸೆಗೆ ಕೊನೆಯೆಂಬುದಿಲ್ಲ. ಅದಕ್ಕೆ ವಯಸ್ಸು, ಲಿಂಗ, ಜಾತಿ, ಬಡವ, ಬಲ್ಲಿದ ಎಂಬ ಬೇಧವಿಲ್ಲ. ಶ್ರೀಶಂಕರಭಗವತ್ಪಾದರು ಮೋಹಮುದ್ಗರದಲ್ಲಿ ಹೇಳಿದ್ದು ಮಾರ್ಮಿಕವಾಗಿದೆ.

*ಅಂಗಂ ಗಲಿತಂ ಪಲಿತಂ ಮುಂಡಂ*
*ದಶನವಿಹೀನಂ ಜಾತಂ ತುಂಡಮ್ |*
*ವೃದ್ಧೋ ಯಾತಿ ಗೃಹೀತ್ವಾ ದಂಡಂ*
*ತದಪಿ ನ ಮುಂಚತಿ ಆಶಾಪಿಂಡಮ್ ||*

ಜೀರ್ಣದೇಹ, ಬಿಳಿಯಾದ ಕೂದಲು, ಬೊಚ್ಚು ಬಾಯಿ, ಕೈಯಲ್ಲಿ ಕೋಲು ಇಷ್ಟು ಅವಸ್ಥೆಯ ವೃದ್ಧನನ್ನೂ ಆಶೆ ಬಿಡದು.

ಬೆಟ್ಟದಷ್ಟು ಸಂಪತ್ತಿದ್ದರೂ ಅಸಂತುಷ್ಟನಾಗಿದ್ದ ರಾಜನೊಬ್ಬ ಮರದ ಕೆಳಗೆ ಪ್ರಸನ್ನವದನನಾಗಿ ಕುಳಿತಿರುವ ಸಂನ್ಯಾಸಿಯನ್ನು ಕೇಳಿದಂತೆ. ’ಇಷ್ಟಿದ್ದರೂ ನಾನು ಸುಖಿಯಲ್ಲ, ಏನೂ ಇಲ್ಲದ ನಿನ್ನ ಸಂತೋಷದ ಗುಟ್ಟೇನು?’ ಎಂದು. ಆಗ ಆ ಯೋಗಿ ಹೇಳಿದ ಮಾತು ಹೃದಯವನ್ನು ತಟ್ಟುವಂಥದ್ದು.

*ಸ ತು ಭವತಿ ದರಿದ್ರೋ ಯಸ್ಯ ತೃಷ್ಣಾ ವಿಶಾಲಾ|*
*ಮನಸಿ ಚ ಪರಿತುಷ್ಟೇ ಕೋರ್ಥವಾನ್ ಕೋ ದರಿದ್ರಃ ||*

ಯಾರ ಆಸೆ ದೊಡ್ಡದೊ ಅವರು ಬಡವರು. ಮನಸ್ಸು ತೃಪ್ತವಾದರೆ ಬಡತನವೆಲ್ಲಿ? ಸಿರಿವಂತಿಕೆಯ ಅಳತೆಗೋಲು ಆಶೆಯೇ ಹೊರತು ಸಂಪತ್ತಲ್ಲ. ಆಸೆಯನ್ನು ಗೆದ್ದವನೇ ನಿಜವಾದ ಸಿರಿವಂತ.

*ಮಹಾಬಲ ಭಟ್, ಗೋವಾ*

2 comments:

Unknown said...

Not sure of ur answer

Unknown said...

super excellent information

नारायण महादेव धोनि

 असङ्ख्यानां वीरयोधानां जन्मभूमिः इयं भारतमाता। अतः एव कश्चन कविः कवयति 'वन्ध्या न भारतजननी शूरसुतानां जन्मभूमिः' इति। प्रायेण सार्ध...