Thursday, March 1, 2018

ಸನಾತನ ಭಾರತದ ಸ್ತ್ರೀರತ್ನಗಳು-ದ್ವಿತೀಯ ಅವತರಣಿಕೆ

ಪ್ರಸ್ತಾವನೆ

ಆತ್ಮೀಯ ಮಿತ್ರರೇ,

ಕಳೆದ ವರ್ಷ ಮಾರ್ಚ್ ತಿಂಗಳಿಡೀ ಸನಾತನ ಭಾರತದ ಸ್ತ್ರೀರತ್ನಗಳನ್ನು ಕುರಿತು ನಾನು ಹಂಚಿಕೊಂಡ ಮಾಹಿತಿಯನ್ನು ತಾವೆಲ್ಲ ಓದಿ, ಓದಿಸಿ ನನ್ನನ್ನು ಪ್ರೋತ್ಸಾಹಿಸಿದ್ದೀರಿ. ಈ ವರ್ಷವೂ ಅಂತಹ ಕೆಲವು ರತ್ನಗಳನ್ನು ಹಂಚಿಕೊಳ್ಳುವ ಇಚ್ಛೆ ನನ್ನದು. ವಿವಿಧ ಮೂಲಗಳಿಂದ ಇನ್ನಷ್ಟು ನಾರೀಮಣಿಗಳ ಮಾಹಿತಿಯನ್ನು ಕಲೆ ಹಾಕಲು ಪ್ರಯತ್ನಿಸುತ್ತಿದ್ದೇನೆ. ಇವರೆಲ್ಲ ನಿಜವಾಗಿಯೂ ಇದ್ದರೆ ಅಥವಾ ಕೇವಲ ಕಾಲ್ಪನಿಕ ವ್ಯಕ್ತಿಗಳೇ ಎಂಬುದರ ಬಗ್ಗೆ ನಿಖರವಾಗಿ ಹೇಳುವಷ್ಟು ಆಳವಾದ ಸಂಶೋಧನೆಯನ್ನಂತೂ ನಾನು ಮಾಡಿಲ್ಲ. ಅವರು ಕಾಲ್ಪನಿಕರೇ ಆದರೂ ಸಿನಿಮಾ ಅಥವಾ ಧಾರಾವಾಹಿಯ ಪಾತ್ರಗಳನ್ನೋ, ಕಥೆ ಕಾದಂಬರಿಗಳಲ್ಲಿ ಬರುವ ವ್ಯಕ್ತಿಗಳನ್ನೋ ನಮ್ಮ ಜೀವನದೊಂದಿಗೆ ಸಮನ್ವಯಿಸಿ ನೋಡುವಂತೆ ಈ ಮಹಿಳೆಯರ ಚರಿತ್ರೆಯಿಂದಲೂ ಪ್ರೇರಣೆಯನ್ನು ಪಡೆದರೆ ತಪ್ಪೇನಲ್ಲ. ಇದು ಇಂದು ನಿನ್ನೆಯೋ ಕಲ್ಪಿಸಿ ಬರೆದದ್ದೇನೂ ಅಲ್ಲ. ಶತಮಾನಗಳ ಹಿಂದೆ ರಚಿತವಾದ ಗ್ರಂಥಗಳಲ್ಲಿ ಉಲ್ಲಿಖಿತವಾದದ್ದು. ಅಂದಿನ ಕಾಲದಲ್ಲಿಯೂ ಮಹಿಳೆಯರ ಸ್ಥಾನಮಾನದ ಬಗ್ಗೆ ಇಂತಹ ಕಲ್ಪನೆಗಳಿದ್ದವು ಎಂಬುದೇ ಸಾಕಷ್ಟು ಹೆಮ್ಮೆ ಪಡುವ ಸಂಗತಿಯಾಗುತ್ತದೆ. ಏನೇ ಇರಲಿ ಮಾಹಿತಿಯ ಸತ್ಯಾಸತ್ಯತೆಯ ಬಗ್ಗೆ ಚರ್ಚಿಸದೆ, ಧ್ಯೇಯವನ್ನು ಮಾತ್ರ ಸ್ವೀಕರಿಸಬೇಕೆಂದು ನನ್ನ ಸವಿನಯ ಬಿನ್ನಹ.

ಇಂದು ಸಾಮಾಜಿಕ ಜಾಲತಾಣಗಳು ಕೂಡ ಜ್ಞಾನದ ಆಗರಗಳಾಗಿವೆ. ನಿಮ್ಮ ಸಾಹಿತ್ಯಿಕ ಹಾಗೂ ಹರಟೆಯ ಬಳಗಗಳಲ್ಲಿ ಇದನ್ನು ಹಂಚಿಕೊಂಡು ಜ್ಞಾನಪ್ರಸಾರದಲ್ಲಿ ಕೈಜೋಡಿಸಿ.

ಇತಿ ತಮ್ಮವ

ಮಹಾಬಲ ಭಟ್, ಗೋವಾ

(ಈ ಲೇಖನಸರಣಿಯ ಮೊದಲ ಹಾಗೂ ಈ ಅವತರಣಿಕೆಗಳ ಲೇಖನಗಳು www.sujnanam.blogspot.com ನಲ್ಲಿ ಲಭ್ಯ.)

ಸಂಚಿಕೆ ೧

ಚೂಡಾಲಾ

ಸೌರಾಷ್ಟ್ರದ ರಾಜಕನ್ಯೆ ಚೂಡಾಲಾ ವೇದಶಾಸ್ತ್ರಗಳಲ್ಲಿ ಪಾರಂಗತಳೂ ಯೋಗಸಿದ್ಧಿಯನ್ನು ಪಡೆದವಳೂ ಆಗಿದ್ದಳು. ಮಾಲವ ನರೇಶ ಶಿಖಿಧ್ವಜನನ್ನು ವರಿಸಿ, ಸಂಸಾರ ಸುಖವನ್ನು ಅನುಭವಿಸುತ್ತಲೇ ಪತಿಯನ್ನು ಆಧ್ಯಾತ್ಮಮಾರ್ಗದಲ್ಲಿ ಕರೆದೊಯ್ದಳು. ಶಿಖಿಧ್ವಜನಿಗೆ ದೇಹದಂಡನೆಯ ಮೂಲಕ ಸಾಧನೆ ಮಾಡುವ ತಪಶ್ಚರ್ಯಾದಿಗಳಲ್ಲಿ ಶ್ರದ್ಧೆಯಿತ್ತು. ಒಂದಿನ ರಾತ್ರಿ ಅರಮನೆಯನ್ನು ಬಿಟ್ಟ ಅರಸ ವನದಲ್ಲಿ ತಪಸ್ಸನ್ನಾರಂಭಿಸಿದ. ಅವನನ್ನು ಹುಡುಕಿಕೊಂಡು ಬಂದ ಚೂಡಾಲಾ ಅಲುಗಾಡಿಸಿದರೂ ಸಮಾಧಿ ಸ್ಥಿತಿಯಿಂದ ಏಳಲಿಲ್ಲ. ಚೂಡಾಲಾ ಅರಮನೆಗೆ ಹಿಂದಿರುಗಿ ಬಂದು ರಾಜ್ಯಸೂತ್ರವನ್ನು ಕೈಗೆತ್ತಿಕೊಂಡಳು. ಕೆಲ ದಿನಗಳ ನಂತರ ಮಂತ್ರಿಗಳಿಗೆ ರಾಜ್ಯದ ಜವಾಬ್ದಾರಿಯನ್ನು ವಹಿಸಿ ತನ್ನ ಯೌಗಿಕ ಶಕ್ತಿಯಿಂದ ಕುಂಭನೆಂಬ ಪುರುಷನಾಗಿ ಪರಿವರ್ತನೆಯನ್ನು ಹೊಂದಿ ಪತಿಯೆಡೆಗೆ ಬಂದಳು. ಬೆಳಗಿನ ಹೊತ್ತು ಅವನನ್ನು ಸಂಧಿಸಿ ಅವನೊಂದಿಗೆ ಇರಲು ಅನುಮತಿಯನ್ನು ಪಡೆದಳು.  ಸಂಜೆಯಾಗುತ್ತಲೇ ಹಗಲಿನಲ್ಲಿ ಗಂಡಾಗಿಯೂ ರಾತ್ರಿಯಲ್ಲಿ ಹೆಣ್ಣಾಗಿಯೂ ಇತುವಂತೆ ದುರ್ವಾಸರ ಶಾಪ ತನಗೆ ತಟ್ಟಿದೆಯೆಂದು ತಿಳಿಸಿ ರಾತ್ರಿಯೂ ಅಲ್ಲಿರಲು ಅವಕಾಶವನ್ನು ಬೇಡಿದಳು. ಈಗಾಗಲೇ ಗಂಡು-ಹೆಣ್ಣು ಎಂಬ ಭೇದಭಾವವನ್ನು ಮೆಟ್ಟಿ ನಿಂತಿದ್ದ ಶಿಖಿಧ್ವಜ ನಿರಾಕರಿಸಲಿಲ್ಲ. ರಾತ್ರಿಯಲ್ಲಿ ಮದನಿಕೆ ಎಂಬ ಸುಂದರ ಸ್ತ್ರೀಯಾಗಿ ಪರಿವರ್ತನೆಯನ್ನು ಹೊಂದಿ ಶಿಖಿಧ್ವಜನನ್ನು ಕಾಮೋದ್ರೇಕಕ್ಕೆ ಒಳಪಡಿಸಲೂ ಯತ್ನಿಸಿದಳು. ಆದರೆ ಶಿಖಿಧ್ವಜ ಯಾವುದೇ ಪ್ರಚೋದನೆಗೊಳಗಾಗಲಿಲ್ಲ. ಅವಳು ಮಾಡುವ ಯಾವ ಕ್ರಿಯೆಯನ್ನೂ ವಿರೋಧಿಸಲೂ ಇಲ್ಲ. ನಿರ್ಲಿಪ್ತ ಭಾವದಿಂದ ಪತ್ನಿಯ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ.

ಕುಂಭನ ವೇಷದಲ್ಲಿದ್ದ ತನ್ನ ಹೆಂಡತಿಯ ಮಾರ್ಗದರ್ಶನದಂತೆ ತಾನಂಟಿಕೊಂಡಿರುವ ಒಂದೊಂದೇ ವಸ್ತುವನ್ನು ಶಿಖಿಧ್ವಜ ತ್ಯಜಿಸಿದ, ಆಶ್ರಮ, ದಂಡ, ಕಮಂಡಲ, ಆಸನ, ಜಪಮಾಲೆ ಎಲ್ಲವನ್ನೂ ಬಿಟ್ಟಾಯಿತು. ಕೊನೆಗೆ ದೇಹವನ್ನೂ ತ್ಯಜಿಸುವ ಹಂತಕ್ಕೆ ಬಂದ. ಆಗ ಚೂಡಾಲಾ ಅವನಿಗೆ ದೇಹಧಾರಣೆ ಮಾಡಿಯೂ ಜೀವನ್ಮುಕ್ತನಾಗಿ ಉಳಿಯುವ ಬಗೆಯನ್ನು ತೋರಿಸಿಕೊಟ್ಟಳು. ಅವನು ಆ ಸ್ಥಿತಿಯನ್ನು ತಲುಪಿದ ಮೇಲೆ ಮತ್ತೆ ಅವನನ್ನು ರಾಜ್ಯಕ್ಕೆ ಕರೆತಂದು ಕರ್ತವ್ಯದಲ್ಲಿ ತೊಡಗಿಸಿದಳು. ಪದ್ಮಪತ್ರದ ಮೇಲಿನ ನೀರ ಹನಿಗಳಂತೆ ನಿರ್ಲಿಪ್ತರಾಗಿ ಅನೇಕ ವರ್ಷಗಳ ಕಾಲ ರಾಜ್ಯಭಾರವನ್ನು ನಡೆಸಿ ಪರಂಧಾಮವನ್ನು ಸೇರಿದರು. (ಯೋಗವಾಸಿಷ್ಠದಲ್ಲಿರುವ ಕಥೆ. ವಾಲ್ಮೀಕಿರಾಮಾಯಣದ ಒಂದು ಭಾಗವೆಂದು ಪ್ರತೀತಿ)

ಮಹಾಬಲ ಭಟ್, ಗೋವಾ
ಸಂಪರ್ಕ: ೯೮೬೦೦೬೦೩೭೩

No comments:

नारायण महादेव धोनि

 असङ्ख्यानां वीरयोधानां जन्मभूमिः इयं भारतमाता। अतः एव कश्चन कविः कवयति 'वन्ध्या न भारतजननी शूरसुतानां जन्मभूमिः' इति। प्रायेण सार्ध...