Thursday, August 31, 2017

ಸಂಸ್ಕೃತ ಪ್ರಪಂಚದ ರಸಪ್ರಸಂಗಗಳು* *"ಸಮಾರೋಪ"*

*ಸಂಸ್ಕೃತ ಪ್ರಪಂಚದ ರಸಪ್ರಸಂಗಗಳು*

*"ಸಮಾರೋಪ"*

ಆತ್ಮೀಯ ಮಿತ್ರರೇ,

ಸಂಸ್ಕೃತ ಸಪ್ತಾಹದ ಅಂಗವಾಗಿ ಅಗಸ್ಟ್ ೧ ರಂದು ಆರಂಭಿಸಿದ್ದ ’ಸಂಸ್ಕೃತಪ್ರಪಂಚದ ರಸಪ್ರಸಂಗಗಳು’ ಎಂಬ ಲೇಖನಸರಣಿ ಕೊನೆಯಹಂತವನ್ನು ತಲುಪಿದೆ. ಇನ್ನೂ ಅನೇಕ ಪ್ರಸಂಗಗಳು ಬಾಕಿ ಉಳಿದಿವೆಯಾದರೂ ’ಇನ್ನೂ ಸ್ವಲ್ಪ ಬೇಕು ಅನ್ನಿಸುತ್ತಿರುವಾಗಲೇ ಊಟವನ್ನು ನಿಲ್ಲಿಸಬೇಕು’ ಎಂಬ ಮಾತನ್ನನುಸರಿಸಿ ತಮಗೆಲ್ಲ ಮೊದಲೇ ತಿಳಿಸಿದಂತೆ ಅಗಸ್ಟ್ ತಿಂಗಳಿನೊಂದಿಗೆ ಲೇಖನಸರಣಿಯೂ ಅಂತ್ಯಗೊಳ್ಳುತ್ತಿದೆ.

ಈ ಲೇಖನ ಸರಣಿಯ ಆರಂಭದಿಂದ ನೀವು ತೋರಿದ ಆತ್ಮೀಯತೆ, ಪ್ರೀತಿ, ಸ್ನೇಹಗಳು ಅವರ್ಣನೀಯ. ಕೆಲವರು ಪ್ರತಿದಿನ ತಪ್ಪದೇ ಪ್ರತಿಕ್ರಿಯಿಸಿದ್ದೀರಿ, ಇನ್ನು ಕೆಲವರು ಸಮಯ ಸಿಕ್ಕಾಗಲೆಲ್ಲ ಪ್ರತಿಸ್ಪಂದಿಸಿದ್ದೀರಿ. ಹಲವರು ದೂರವಾಣಿ ಕರೆಯನ್ನು ಮಾಡಿ ನನ್ನನ್ನು ಹುರಿದುಂಬಿಸಿದ್ದೀರಿ. ಸ್ವಭಾವತಃ ಮೌನಿಗಳಾದ ಕೆಲವರು ಬಳಗದಲ್ಲಿ ಸಂದೇಶಗಳ ಪ್ರವಾಹವನ್ನು ಹೆಚ್ಚಿಸುವ ಮನಸ್ಸಿಲ್ಲದೆ ಮೌನವಾಗಿ ಆಸ್ವಾದಿಸಿದ್ದೀರಿ. ಅನೇಕರು ತಮ್ಮ ಮಿತ್ರಮಂಡಳಿಯಲ್ಲೆಲ್ಲ ಇವನ್ನು ಹಂಚಿಕೊಂಡು ಸಂಭ್ರಮಿಸಿದ್ದೀರಿ. ತನ್ಮೂಲಕ ನನಗೆ ಹೊಸ ಸಾಹಿತ್ಯಾಭಿಮಾನೀ ಮಿತ್ರರನ್ನು ಒದಗಿಸಿಕೊಟ್ಟಿದ್ದೀರಿ. ಎಲ್ಲ ಬಳಗಗಳಲ್ಲಿರುವ ನನಗಿಂತ ವಯಸ್ಸಿನಲ್ಲಿ ಹಾಗೂ ಜ್ಞಾನದಲ್ಲಿ ಹಿರಿಯರಾಗಿರುವ ಅನೇಕರು ಘಟನೆಗಳ ಸತ್ಯಾಸತ್ಯತೆಯ ಬಗ್ಗೆ ಅಮೂಲ್ಯ ವಿಚಾರಗಳನ್ನೂ, ಇತರ ಸಾಧ್ಯತೆಗಳನ್ನೂ ಮಂಡಿಸಿ ನನ್ನ ಜ್ಞಾನದ ಹರವು ವಿಸ್ತಾರಗೊಳ್ಳಲು ಕಾರಣರಾಗಿದ್ದೀರಿ. ಸಣ್ಣ ಪುಟ್ಟ ದೋಷಗಳು ಕಂಡುಬಂದರೂ ಅವನ್ನು ವಿಮರ್ಶೆಗೊಳಪಡಿಸದೆ ನನ್ನ ಉತ್ಸಾಹಭಂಗ ಆಗದಂತೆ ನೋಡಿಕೊಂಡಿದ್ದೀರಿ. ಇಷ್ಟೆಲ್ಲ ಮಾಡಿದ ನಿಮಗೆ ನಾನು ಕೃತಜ್ಞತಾಭಾವದಿಂದ ಕೈಜೋಡಿಸಿ ನಮಿಸುವುದನ್ನು ಬಿಟ್ಟರೆ ಮತ್ತೇನನ್ನೂ ಮಾಡಲಾರೆ.

ಈ ಸರಣಿಯ ತಯಾರಿಗಾಗಿ ಕೆಲವು ಪುಸ್ತಕಗಳನ್ನೂ, ಅಂತರ್ಜಾಲಪುಟಗಳನ್ನೂ ಪರಿಶೀಲಿಸಿದ್ದೇನೆ. ಅವುಗಳಲ್ಲಿ ಈ ಕೆಳಗಿನವು ಮುಖ್ಯವಾಗಿವೆ.

೧. ಕವಿತೆಗೊಂದು ಕಥೆ – ಶತಾವಧಾನಿ ಆರ್. ಗಣೇಶ
೨. ಬ್ರಹ್ಮಪುರಿಯ ಭಿಕ್ಷುಕ – ಶತಾವಧಾನಿ ಆರ್. ಗಣೇಶ
೩. ಸೌಮಿತ್ರಸೀಮಾ(ಮರಾಠಿ) – ಶ್ರೀ ಲಕ್ಷ್ಮಣ ಪಿತ್ರೆ
೪. ಪಂಡಿತರಾಜ ಜಗನ್ನಾಥ – ಪದ್ಮನಾಭ ಸೋಮಯಾಜಿ
೫. ಗೀತಾಪ್ರವೇಶಃ – ಸಂಸ್ಕೃತಭಾರತೀ
೬. ಭಾಸ್ವತೀ – ಸಂಸ್ಕೃತ ಪಠ್ಯಪುಸ್ತಕ, ಗೋವಾ ಶಿಕ್ಷಣ ಮಂಡಲ
೭. ಮಣಿಕಾ – ಸಂಸ್ಕೃತ ಪಠ್ಯಪುಸ್ತಕ, ಸಿ.ಬಿ.ಎಸ್.ಸಿ.
೮. ತಿಳಿರುತೋರಣ (ಅಂಕಣಬರಹ) – ಶ್ರೀವತ್ಸ ಜೋಶಿ
೯. ವಿಕಿಪೀಡಿಯಾ (ಅಂತರ್ಜಾಲಪುಟ)
೧೦. ಫೇಸ್ ಬುಕ್ ನಲ್ಲಿ ದೊರೆತ ಸರೋಜಿನಿ ಮಹಿಷಿ ಅವರ ಲೇಖನ.

ಈ ಪುಸ್ತಕಗಳ/ಲೇಖನಗಳ ಲೇಖಕರಿಗೂ ಪ್ರಕಾಶಕರಿಗೂ ನಾನು ಆಭಾರಿ. ಈ ಎಲ್ಲ ಪುಸ್ತಕ/ಲೇಖನಗಳಿಂದ ಕೆಲವು ಘಟನೆಗಳನ್ನೂ ಶ್ಲೋಕಗಳನ್ನೂ ಎತ್ತಿಕೊಂಡಿದ್ದೇನೆಯೇ ಹೊರತು ಯಾವುದೇ ವಾಕ್ಯವನ್ನೂ ಶೈಲಿಯನ್ನೂ ನಕಲಿಸಿಲ್ಲ ಎಂದು ಧೈರ್ಯವಾಗಿ ಹೇಳಬಲ್ಲೆ. ಏನಾದರೂ ಸಾಮ್ಯತೆ ಕಂಡುಬಂದರೆ ಅದು ಕಾಕತಾಳೀಯ. ತಮ್ಮ ಅಧ್ಯಾಪನಕಾಲದಲ್ಲಿ ಇಂತಹ ರಮಣೀಯ ಪ್ರಸಂಗಗಳನ್ನು ಉಲ್ಲೇಖಿಸುತ್ತ ನನ್ನ ಸಂಸ್ಕೃತಾಧ್ಯಯನ ರಸಮಯವಾಗಲು ಕಾರಣೀಕರ್ತರಾದ ನನ್ನ ಪ್ರಾಧ್ಯಾಪಕವೃಂದಕ್ಕೆ ನಾನು ಚಿರಋಣಿ.

ನಿಮ್ಮೆಲ್ಲರ ಆತ್ಮೀಯತೆಯ ಪ್ರವಾಹದೊಂದಿಗೆ ಒಂದು ಜನಪ್ರಿಯ ಸರಣಿಯನ್ನು ಸಮಾರೋಪಗೊಳಿಸುತ್ತಿರುವ ಈ ಸಂದರ್ಭದಲ್ಲೂ ಸರಣಿಯ ಉದ್ದೇಶದೆಡೆಗೆ ಮತ್ತೊಮ್ಮೆ ತಮ್ಮೆಲ್ಲರ ಗಮನವನ್ನು ಸೆಳೆಯಬಯಸುತ್ತೇನೆ. ಈ ಸರಣಿಯ ಯಶಸ್ಸಿಗೆ ಸಂಸ್ಕೃತಭಾಷೆಯ ಸೌಂದರ್ಯ ವೈಶಿಷ್ಟ್ಯಗಳೇ ಕಾರಣವೇ ಹೊರತು ನನ್ನ ಬರವಣಿಗೆಯಲ್ಲ. ಇಂತಹ ಅಸಂಖ್ಯ ರತ್ನಗಳನ್ನು ಸಂಸ್ಕೃತವನ್ನು ಕಲಿತ ಎಲ್ಲರೂ ಪಡೆಯಬಲ್ಲರು. ಹಾಗಾಗಿ ನನ್ನದೊಂದು ವಿನಮ್ರ ಪ್ರಾರ್ಥನೆ – ಜೀವನದಲ್ಲಿ ಸ್ವಲ್ಪಮಟ್ಟಿಗಾದರೂ ಸಂಸ್ಕೃತವನ್ನು ಕಲಿಯಿರಿ. ಅದು ಆನಂದದ ಕಾಮಧೇನು. ಅದು ನಿಮ್ಮನ್ನು ರಸಾಸ್ವಾದದೊಂದಿಗೆ ತತ್ತ್ವಚಿಂತನೆಯೆಡೆಗೆ ಒಯ್ಯಬಲ್ಲದು. ನಿಮ್ಮನ್ನು ಸಂಸ್ಕೃತ ಕಲಿಯಲು ಈ ಸರಣಿ ಪ್ರೇರೇಪಿಸಿದರೆ ಮಾತ್ರ ಯಶಸ್ವಿಯಾಯಿತು ಎಂದು ನಾನು ಭಾವಿಸುತ್ತೇನೆ.

ಕೊನೆಯಲ್ಲಿ ಇದು ನಾನು ಬರೆದಿದ್ದಲ್ಲ, ನೀವೆಲ್ಲ ನನ್ನಿಂದ ಬರೆಸಿದ್ದು ಎಂಬ ವಿಧೇಯ ಭಾವದೊಂದಿಗೆ ಸರಣಿಯನ್ನು ಮುಗಿಸುತ್ತಿದ್ದೇನೆ. ಇನ್ನೊಂದು ಸರಣಿಯ ನಿರೀಕ್ಷೆಯಲ್ಲಿರಿ. ನಿಮ್ಮ ಪ್ರೀತಿಯ ಸಹಕಾರ ಮುಂದೆಯೂ ಇರಲಿ.


ಧನ್ಯತಾ ಭಾವದೊಂದಿಗೆ

ತಮ್ಮವ

📝 *ಮಹಾಬಲ ಭಟ್, ಗೋವಾ*

# ಸಂಸ್ಕೃತ ಕಲಿಯಿರಿ, ಸಂಸ್ಕೃತಿ ತಿಳಿಯಿರಿ.

4 comments:

Unknown said...

Sir,
Samskrita Rasaprasangagalu are very interesting.... Initially I was getting a forwarded msg from my friend and later I found your blog. I found many interesting information in your blog. I was forwarding Samskrita Rasaprasangagalu on daily basis to family & friends (approx to 200 persons). Some events were told by my lecturers while studying in National Collage, Bengaluru. Thanks for giving me an opportunity to recollect the same. Everyone enjoyed your posts. Thanks once again.

Regards,
S.R.Raghu, Kolkata

ಕವನತನಯ said...

ಈ ಸರಣಿಯು ಅದ್ಭುತವಾಗಿ ಮೂಡಿ ಬಂತು ಸರ್. ಇನ್ನೂ ಬೇಕು ಎನ್ನುವ ಬಯಕೆ ಮಾತ್ರ ಹೋಗಿಲ್ಲ... ತುಂಬಾ ಕುತೂಹಲ ಹಾಗೂ ರಸಭರಿತ ಪ್ರಸಂಗಗಳನ್ನು ಪರಿಚಯಿಸಿದ್ದಕ್ಕೆ ಧನ್ಯವಾದಗಳು _/\_

Mahabal Bhat said...

ನಿಮ್ಮ ಪ್ರತಿಕ್ರಿಯೆಯನ್ನು ತಡವಾಗಿ ಓದಿದೆ. ನಿಮ್ಮ ಸಹೃದಯ ಪ್ರತಿಕ್ರಿಯೆಗೆ ಆಭಾರಿ. ಮುಂದಿನ ಸಲ ಮತ್ತೆ ಹೊಸ ಸರಣಿಯೊಂದಿಗೆ ಬರುವೆ. ಸಂಪರ್ಕದಲ್ಲಿರಿ.

Mahabal Bhat said...

Thank u sir. I felt elevated by your reply. It was very nice of u to forward it to your friends. Your wishes are valuable to me.

नारायण महादेव धोनि

 असङ्ख्यानां वीरयोधानां जन्मभूमिः इयं भारतमाता। अतः एव कश्चन कविः कवयति 'वन्ध्या न भारतजननी शूरसुतानां जन्मभूमिः' इति। प्रायेण सार्ध...