Thursday, August 31, 2017

ಸಂಸ್ಕೃತ ಪ್ರಪಂಚದ ರಸಪ್ರಸಂಗಗಳು* ಪ್ರಸಂಗ – ೩೧ *ಡಿವಿಜಿ ರಸಪ್ರಸಂಗ*

*ಸಂಸ್ಕೃತ ಪ್ರಪಂಚದ ರಸಪ್ರಸಂಗಗಳು*

ಪ್ರಸಂಗ – ೩೧

*ಡಿವಿಜಿ ರಸಪ್ರಸಂಗ*

ಕನ್ನಡದ ಋಷಿತುಲ್ಯ ಸಾಹಿತಿ ಡಿ.ವಿ.ಗುಂಡಪ್ಪನವರ ಒಂದು ರಸಪ್ರಸಂಗದೊಂದಿಗೆ ಈ ಸರಣಿಯನ್ನು ಮುಕ್ತಾಯಗೊಳಿಸುತ್ತಿದ್ದೇನೆ.

ಕನ್ನಡದಲ್ಲಿ ಅನೇಕ ಮೇರುಕೃತಿಗಳನ್ನು ಬರೆದ ಡಿವಿಜಿಯವರು ಸಂಸ್ಕೃತ, ಇಂಗ್ಲೀಷ್, ತೆಲುಗು ಭಾಷೆಗಳಲ್ಲಿ ಪ್ರಗಲ್ಭ ಪಂಡಿತರಾಗಿದ್ದರು.

ಒಮ್ಮೆ ಶ್ರೀ ಎಸ್. ವಿ. ಪರಮೇಶ್ವರ ಭಟ್ಟರು ಸಹ್ಯಾದ್ರಿ ಮಹಾವಿದ್ಯಾಲಯಕ್ಕೆ ಡಿವಿಜಿಯವರನ್ನು ಆಹ್ವಾನಿಸಿದ್ದರು. ಕಾರ್ಯಕ್ರಮದ ನಂತರ ಭೂರಿ ಭೋಜನದ ವ್ಯವಸ್ಥೆಯೂ ಆಗಿತ್ತು. ತಮ್ಮ ಪಕ್ಕದಲ್ಲೇ ಊಟಕ್ಕೆ ಕುಳಿತ ಭಟ್ಟರನ್ನು ನೋಡುತ್ತ ಎಲೆಯಲ್ಲಿರುವ ಊಟವನ್ನು ಡಿವಿಜಿಯವರು ವರ್ಣಿಸಿದ ಪರಿ ಹೀಗಿದೆ.

ಅನ್ನಸಿಂಹಾಸನಾಸೀನೋ
ಘೃತಮಂತ್ರಿಸಮನ್ವಿತಃ |
ಸೋಪಸ್ಕರಪರೀವಾರಃ
ಸೂಪಭೂಪೋ ವಿರಾಜತೇ ||

ಅನ್ನವೆಂಬ ಸಿಂಹಾಸನದ ಮೇಲೆ ಕುಳಿತಿರುವ ತುಪ್ಪವೆಂಬ ಮಂತ್ರಿಯೊಡಗೂಡಿರುವ ಉಳಿದ ಸಂಭಾರಗಳ ಪರಿವಾರದೊಂದಿಗೆ ಸೂಪರಾಜನು ರಾರಾಜಿಸುತ್ತಿದ್ದಾನೆ.

ಊಟವಾಯಿತು. ಊಟವೆಂದರೆ ಹಬ್ಬವೆಂದು ಗಣಿಸುತ್ತಿದ್ದ ಡಿವಿಜಿಯವರು ಎಲೆಯಲ್ಲಿ ಏನನ್ನೂ ಬಿಡದೆ ಚೊಕ್ಕವಾಗಿ ಎಲ್ಲವನ್ನೂ ತಿಂದಿದ್ದರು. ಭಟ್ಟರು ಊಟಕ್ಕೆ ನ್ಯಾಯವನ್ನು ಒದಗಿಸಲಿಲ್ಲ. ಆಗ ಮತ್ತೆ ಅವರನ್ನು ಕೆಣಕುತ್ತ ಪದ್ಯವೊಂದನ್ನು ರಚಿಸಿದರು.

ಅಗಸ್ತಿತುಲ್ಯಾ ಘೃತವಾರ್ಧಿಶೋಷಣೇ
ದಂಭೋಲಿತುಲ್ಯಾ ವಟಕಾದ್ರಿಭೇದನೇ |
ಶಾಕಾವಲೀಕಾನನದಾವಕೀಲಾ
ಭಟ್ಟಾ ವಯಂ ಕುತ್ರ ಭಟಾಃ ಪುರಸ್ತಾತ್ ||

ತುಪ್ಪದ ಸಮುದ್ರವನ್ನು ಒಣಗಿಸುವ ಅಗಸ್ತ್ಯರು ನಾವು. ವಡೆಯ ಪರ್ವತಕ್ಕೆ ವಜ್ರಾಘಾತರು. ತರಕಾರಿಗಳ ಕಾಡಿಗೆ ಕಾಳ್ಗಿಚ್ಚು. ನಾವು ಭಟ್ಟರು. ನಮ್ಮ ಮುಂದೆ ಯಾವ ಭಟರು ನಿಲ್ಲುವರು?

ಡಿವಿಜಿಯವರು ಒಮ್ಮೆ ಸಂಸ್ಕೃತಾಧ್ಯಯನಕ್ಕಾಗಿ ಗರಣಿ ಕೃಷ್ಣಾಚಾರ್ಯರನ್ನು ಆಶ್ರಯಿಸಿದ್ದರಂತೆ. ಆದರೆ ಸಂಸ್ಕೃತ ಅವರ ತಲೆಗೆ ಹತ್ತಲಿಲ್ಲ ಎಂಬುದನ್ನು ವಿದ್ವಾನ್ ರಂಗನಾಥಶರ್ಮರಲ್ಲಿ ಹೇಳುತ್ತ ಕನ್ನಡಮಿಶ್ರಿತವಾದ ಸಂಸ್ಕೃತಪದ್ಯವೊಂದನ್ನು ರಚಿಸಿದರು.

ನ ವೇದಾಂತೇ ಗಾಢಾ ನ ಪರಿಚಿತಂ ಶಬ್ದಶಾಸ್ತ್ರಂ
ನ ವಾ ತರ್ಕೇ ವೇದೇ ನ ಚ ಸರಸತಾ ಕಾವ್ಯನಿವಹೇ |
ವಯಂ ಶ್ರೀಮದ್ಬ್ಯಾಳೀಹುಳಿಪಳದ್ಯಕೋಸಂಬ್ರಿತೊವ್ವೀ
ಹಯಗ್ರೀವಾಂಬೋಡೀಕರಿಗಡಬುದಧ್ಯನ್ನರಸಿಕಾಃ ||

ವೇದಾಂತದಲ್ಲಿ ಆಳಜ್ಞಾನವಿಲ್ಲ. ವ್ಯಾಕರಣದ ಪರಿಚಯವೇ ಇಲ್ಲ. ತರ್ಕದಲ್ಲಾಗಲೀ ವೇದದಲ್ಲಾಗಲೀ, ಕಾವ್ಯಗಳಲ್ಲಾಗಲೀ ಗತಿಯಿಲ್ಲ. ನಾವು ಬೇಳೆಯ ಹುಳಿ, ಪಳದ್ಯ, ಕೋಸಂಬ್ರಿ, ತೊವ್ವೆ, ಹಯಗ್ರೀವ, ಅಂಬೋಡೆ, ಕರಿಗಡಬು ಮತ್ತು ಮೊಸರನ್ನ ರಸಿಕರು.

ಇನ್ನೊಮ್ಮೆ ವಿದ್ವಾನ್ ರಂಗನಾಥ ಶರ್ಮರು ಹಲ್ಲುನೋವಿನಿಂದ ಬಳಲುತ್ತಿದ್ದಾಗ ಡಿವಿಜಿಯವರು ಅವರಲ್ಲಿಗೆ ಹೋಗಿದ್ದರು. ವೈದ್ಯರ ದರ್ಶನಕ್ಕೆ ಹೊರಟಿದ್ದ ಶರ್ಮರಿಗೆ ಶುಭ ಹಾರೈಸುತ್ತ ’ಏಕದಂತಸ್ಯ ವೋ ಕುರ್ಯಾದದ್ಯ ವೈ ದಂತಮಂಗಲಮ್’ ಏಕದಂತನು ನಿಮಗೆ ದಂತಮಂಗಲವನ್ನುಂಟುಮಾಡಲಿ ಎಂದರು. ರಂಗನಾಥ ಶರ್ಮರು ನೋವಿನಲ್ಲೂ ನಕ್ಕು ತೆರಳಿದರು.

ಮರುದಿನ ಡಿವಿಜಿಯವರನ್ನು ಭೆಟ್ಟಿಯಾಗಿ ಅವರ ಶ್ಲೋಕಾರ್ಧಕ್ಕೆ ತನ್ನ ಶ್ಲೋಕದ ಅರ್ಧವನ್ನು ಸೇರಿಸಿ ಪೂರ್ತಿಗೊಳಿಸಿದರು. ’ಅಸೂಯಯೈವ ಪೂರ್ವೇದ್ಯುರ್ದಂತದ್ವಯಮಪಾಹರತ್’ ಅಸೂಯೆಯಿಂದಲೋ ಏನೋ ಅವನು ನನ್ನ ಎರಡು ಹಲ್ಲುಗಳನ್ನು ಅಪಹರಿಸಿದನು.

’ಕಾವ್ಯಶಾಸ್ತ್ರವಿನೋದೇನ ಕಾಲೋ ಗಚ್ಛತಿ ಧೀಮತಾಮ್’ ಎನ್ನುವ ಸುಭಾಷಿತಕ್ಕೆ ಬೇರೆ ಉದಾಹರಣೆ ಬೇಕೆ?

(ಆಧಾರ: ಆರ್.ಗಣೇಶ ಅವರ ’ಬ್ರಹ್ಮಪುರಿಯ ಭಿಕ್ಷುಕ’)

📝 *ಮಹಾಬಲ ಭಟ್, ಗೋವಾ*
#ಸಂಸ್ಕೃತ ಕಲಿಯಿರಿ, ಸಂಸ್ಕೃತಿ ತಿಳಿಯಿರಿ.

No comments:

नारायण महादेव धोनि

 असङ्ख्यानां वीरयोधानां जन्मभूमिः इयं भारतमाता। अतः एव कश्चन कविः कवयति 'वन्ध्या न भारतजननी शूरसुतानां जन्मभूमिः' इति। प्रायेण सार्ध...