Thursday, August 3, 2017

ಸಂಸ್ಕೃತ ಪ್ರಪಂಚದ ರಸಪ್ರಸಂಗಗಳು - ಕ ಖ ಗ ಘ

ಸಂಸ್ಕೃತ ಸಪ್ತಾಹ ನಿಮಿತ್ತ ವಿಶಿಷ್ಟ ಲೇಖನ ಸರಣಿ

*ಸಂಸ್ಕೃತ ಪ್ರಪಂಚದ ರಸಪ್ರಸಂಗಗಳು*

ಪ್ರಸಂಗ - 3

*ಕ ಖ ಗ ಘ*

ಒಮ್ಮೆ ಭೋಜರಾಜನ ಆಸ್ಥಾನಕ್ಕೊಬ್ಬ ಪಂಡಿತ ಆಗಮಿಸಿದ. ರಾಜನಿಂದ ಯಥೋಚಿತ ಸತ್ಕಾರ ಪಡೆದು ಪಂಡಿತರ ಮುಂದೆ ಸಮಸ್ಯಾಪೂರ್ತಿಯ ವಾಕ್ಯವನ್ನುಸುರಿದ. ’ಕಖಗಘ’ ಎಂಬುದನ್ನು ಕೊನೆಯ ಪಾದದ ಅಂತಿಮ ಭಾಗವನ್ನಾಗಿರಿಸಿಕೊಂಡು ಕವಿತೆಯೊಂದನ್ನು ರಚಿಸಬೇಕೆಂಬುದೇ ಅವನ ಪಂಥಾಹ್ವಾನವಾಗಿತ್ತು. ನವಮಣಿಗಳು ತಿಣುಕಾಡಿದರೂ ಮಾಡಲಾಗದೆ ತಲೆಯನ್ನು ಕೆಳಗೆ ಹಾಕಿದರು. ನವ ನವೋನ್ಮೇಷಶಾಲಿ ಪ್ರತಿಭೆಯ ಕಾಳಿದಾಸನೂ ಅಪ್ರತಿಭನಾದ. ಒಂದು ದಿನದ ಸಮಾಯಾವಕಾಶ ಕೇಳಿ ಹೊರಬಿದ್ದ.

ತಲೆಯನ್ನು ಕಖಗಘ ಹುಳು ಕೊರೆಯುತ್ತಿತ್ತು. ದಾರಿಯಲ್ಲಿ ಸಾಗುತ್ತಿರುವಾಗ ಮುಗ್ಧ ಬಾಲಿಕೆಯೊಬ್ಬಳನ್ನು ನೋಡಿ ಆಕರ್ಷಿತನಾದ. ಅವಳೊಂದಿಗೆ ಸಂಭಾಷಣೆಗಿಳಿದ. ಅವರ ಸಂಭಾಷಣೆ ಹೀಗಿತ್ತು....

ಕಾಳಿದಾಸ – ಕಾ ತ್ವಂ ಬಾಲೇ? (ಎಲೈ ಬಾಲೆಯೇ ನೀನಾರು?)

ಬಾಲೆ – ಕಾಂಚನಮಾಲಾ

ಕಾಳಿದಾಸ – ಕಸ್ಯಾಃ ಪುತ್ರೀ? (ಯಾವಳ ಮಗಳು?)

ಬಾಲೆ – ಕನಕಲತಾಯಾಃ | (ಕನಕಲತೆಯ ಮಗಳು.)

ಕಾಳಿದಾಸ – ಹಸ್ತೇ ಕಿಂ ತೇ? (ನಿನ್ನ ಕೈಯಲ್ಲೇನಿದೆ?)

ಬಾಲೆ – ತಾಲೀಪತ್ರಮ್ | (ತಾಳೆಯ ಗರಿಗಳು.)

ಕಾಳಿದಾಸ – ಕಾ ವಾ ರೇಖಾ? (ಏನು ಬರೆದಿದೆ ಅದರಲ್ಲಿ?)

ಬಾಲೆ – ಕ ಖ ಗ ಘ


ತಾನು ಯೋಚಿಸುತ್ತಿರುವುದೇ ಅವಳ ಬಾಯಿಂದ ಬಂದಾಗ ಸಾವಿರ ದೀಪಗಳು ಹೊತ್ತಿದಂತಾಯ್ತು ಕಾಳಿದಾಸನ ಮಿದುಳಲ್ಲಿ. ಅವನ ಕವನ ಸಿದ್ಧವಾಗಿ ಹೋಯ್ತು.

ಕಾ ತ್ವಂ ಬಾಲೇ? ಕಾಂಚನಮಾಲಾ
ಕಸ್ಯಾಃ ಪುತ್ರೀ? ಕನಕಲತಾಯಾಃ |
ಹಸ್ತೇ ಕಿಂ ತೇ? ತಾಲೀಪತ್ರಂ
ಕಾ ವಾ ರೇಖಾ? ಕಖಗಘ ||


ಸರಳ ಸುಂದರ ಪದ್ಯಕ್ಕೆ ಬೇರೆ ಉದಾಹರಣೆ ಬೇಕೆ ?!

📝 *ಮಹಾಬಲ ಭಟ್, ಗೋವಾ

# ಸಂಸ್ಕೃತ ಕಲಿಯಿರಿ, ಸಂಸ್ಕೃತಿ ತಿಳಿಯಿರಿ.

No comments:

नारायण महादेव धोनि

 असङ्ख्यानां वीरयोधानां जन्मभूमिः इयं भारतमाता। अतः एव कश्चन कविः कवयति 'वन्ध्या न भारतजननी शूरसुतानां जन्मभूमिः' इति। प्रायेण सार्ध...