Wednesday, August 2, 2017

ಸಂಸ್ಕೃತ ಪ್ರಪಂಚದ ರಸಪ್ರಸಂಗಗಳು-ವಿದ್ಯಾಹೀನಾ ನ ಶೋಭಂತೇ…...

ಸಂಸ್ಕೃತ ಸಪ್ತಾಹ ನಿಮಿತ್ತ ವಿಶಿಷ್ಟ ಲೇಖನ ಸರಣಿ

ಸಂಸ್ಕೃತ ಪ್ರಪಂಚದ ರಸಪ್ರಸಂಗಗಳು

ಪ್ರಸಂಗ - ೨

ವಿದ್ಯಾಹೀನಾ ನ ಶೋಭಂತೇ…...


ಆಂಧ್ರಪ್ರದೇಶದ ಒಂದು ಅಗ್ರಹಾರ. ಅಲ್ಲಿ ದೇವಶರ್ಮಾ ಎಂಬ ಪಂಡಿತನಿದ್ದ. ಅವನಿಗೊಬ್ಬ ಮಗ ಜನಿಸಿದ. ಅವನ ಹೆಸರು ಮಲ್ಲೀನಾಥ. ಆಲಸಿಯಾಗಿದ್ದ ಮಗನನ್ನು ವಿದ್ಯಾಸಂಪನ್ನನನ್ನಾಗಿ ಮಾಡುವ ತಂದೆಯ ಪ್ರಯತ್ನ ಫಲಿಸದೆ ಮಗ ನಿರಕ್ಷರಿಯಾಗಿಯೇ ಉಳಿದ. ಮದುವೆಯ ವಯಸ್ಸು ಬಂದಾಗ ಮಲ್ಲೀನಾಥನಿಗೆ ಮದುವೆಯೂ ಆಯಿತು. ಅವನ ಪತ್ನಿ ಹಾಗೂ ಅವಳ ಅಣ್ಣತಮ್ಮಂದಿರೆಲ್ಲ ವಿದ್ಯಾವಂತರಾಗಿದ್ದರು. ಅವರೆಲ್ಲ ಇವನನ್ನು ಮೂದಲಿಸುತ್ತಿದ್ದರು. ಒಮ್ಮೆ ಮಲ್ಲೀನಾಥ ಮಾವನ ಮನೆಗೆ ಹೋದಾಗ ಅವನ ಬಾವ ಮೈದುನರು ಅವನ ಅಜ್ಞಾನವನ್ನು ನೋಡಿ ಗೇಲಿ ಮಾಡಿದರು. ಅದರಿಂದ ಮಲ್ಲೀನಾಥನಿಗಿಂತ ಅವನ ಮಡದಿಗೆ ಹೆಚ್ಚು ಅವಮಾನವಾಯಿತು. ಅವನನ್ನು ಕರೆದುಕೊಂಡು ಮನೆಗೆ ಹೊರಟಳು. ದಾರಿಯಲ್ಲಿ ಮಲ್ಲೀನಾಥ ಪಲಾಶ(ಮುತ್ತುಗ) ವೃಕ್ಷವೊಂದರಲ್ಲಿ ಅರಳಿದ ಸುಂದರವಾದ ಹೂವಗಳನ್ನು ಪತ್ನಿಗೆ ತೋರಿಸಿದ. ಆಗ ಪತ್ನಿಯು ಚಾಣಕ್ಯನ ಸೂಕ್ತಿಯೊಂದನ್ನು ಅವನಿಗೆ ಹೇಳಿದಳು.

ರೂಪಯೌವನಸಂಪನ್ನಾ
ವಿಶಾಲಕುಲಸಂಭವಾಃ |
ವಿದ್ಯಾಹೀನಾ ನ ಶೋಭಂತೇ
ನಿರ್ಗಂಧಾ ಇವ ಕಿಂಶುಕಾಃ||

ಶ್ರೇಷ್ಠವಾದ ಕುಲದಲ್ಲಿ ಹುಟ್ಟಿ ರೂಪ, ಯೌವ್ವನಗಳಿಂದ ಕೂಡಿದ್ದರೂ ವಿದ್ಯೆಯಿಲ್ಲದವರು ಸುಗಂಧವಿಲ್ಲದ ಸುಂದರ ಪಾಲಾಶಕುಸುಮದಂತೆ ಜೀವನವನ್ನು ವ್ಯರ್ಥವಾಗಿ ಕಳೆಯುವರು.

ವಿದುಷಿ ಪತ್ನಿಯ ಮಾತು ಅವಮಾನದಿಂದ ಜರ್ಜರಿತನಾಗಿದ್ದ ಮಲ್ಲೀನಾಥನ ಹೃದಯಕ್ಕೆ ನಾಟಿತು. ಮನೆಗೆ ಹೋಗದೆ ನೇರವಾಗಿ ಗುರುಕುಲವನ್ನು ತಲುಪಿದ. ಗುರುಗಳು ಕನಿಕರದಿಂದ ಅವನನ್ನು ಶಿಷ್ಯನನ್ನಾಗಿ ಸ್ವೀಕರಿಸಿದರು. ಶ್ರದ್ಧೆಯಿಂದ ಅಧ್ಯಯನ ಮಾಡಿದ ಮಲ್ಲೀನಾಥ ಜ್ಞಾನಸಂಪನ್ನನಾದ.


ಅನೇಕ ವರ್ಷಗಳ ಅಧ್ಯಯನದ ನಂತರ ಒಂದಿನ ಗುರುಮಾತೆ ನೀಡಿದ ಭೋಜನವನ್ನು ಸ್ವೀಕರಿಸುವಾಗ ಮಲ್ಲೀನಾಥ ಕೇಳಿದ ’ಅಮ್ಮಾ! ಇಂದೇಕೋ ಊಟ ಕಹಿಯಾಗಿದೆಯಲ್ಲ. ಏನಾದರೂ ಕಹಿ ಪದಾರ್ಥ ಬಿದ್ದಿರಬಹುದೆ?’ ಆಗ ಗುರುಗಳು ಹೇಳಿದರು – ’ಮಲ್ಲೀನಾಥ! ಇಂದಿಗೆ ನಿನ್ನ ವಿದ್ಯಾಭ್ಯಾಸ ಮುಗಿಯಿತು. ಪ್ರತಿದಿನವೂ ನಿನ್ನ ಊಟದಲ್ಲಿ ಬೇವಿನ ಎಣ್ಣೆಯನ್ನು ಬೆರೆಸಲು ನಾನೇ ಸೂಚಿಸಿದ್ದೆ. ಆದರೆ ಅಧ್ಯಯನದಲ್ಲಿ ಮುಳುಗಿಹೋಗಿದ್ದ ನಿನಗೆ ಇನ್ನ್ಯಾವ ಪರಿವೆಯೂ ಇರಲಿಲ್ಲ. ಇಂದು ನಿನಗೆ ಕಹಿ ತಿಳಿಯಿತು. ಇದು ನಿನ್ನ ವಿದ್ಯಾಭ್ಯಾಸ ಪೂರ್ತಿಯಾದ ಲಕ್ಷಣ’ ಎಂದರು. ಗುರುವಿಗೆ ಯಥಾಶಕ್ತಿ ಗುರುದಕ್ಷಿಣೆಯನ್ನು ಅರ್ಪಿಸಿ ಮಲ್ಲೀನಾಥ ಮನೆಗೆ ಬಂದ. ತಾನು ಗಳಿಸಿದ ವಿದ್ವತ್ತಿನಿಂದ ಭರತಖಂಡದ ಅನೇಕ ಪಂಡಿತರನ್ನು ವಾದದಲ್ಲಿ ಸೋಲಿಸಿ ಮಹಾಮಹೋಪಾಧ್ಯಾಯ ಎಂಬ ಬಿರುದನ್ನು ಸಂಪಾದಿಸಿದ. ಮಲ್ಲಿನಾಥ ಸೂರಿ ಎಂದು ಖ್ಯಾತನಾಗಿ ಸಂಸ್ಕೃತದ ಪಂಚ ಮಹಾಕಾವ್ಯಗಳಿಗೆ ಪಾಂಡಿತ್ಯಪೂರ್ಣ ಟೀಕೆಯನ್ನು ಬರೆದುದಲ್ಲದೆ ಅನೇಕ ಸ್ವತಂತ್ರ ಕೃತಿಗಳನ್ನೂ ರಚಿಸಿ ಅಜರಾಮರ ಕೀರ್ತಿಯನ್ನು ಗಳಿಸಿದ. ಇಂದಿಗೂ ಮಹಾಕಾವ್ಯಗಳ ಅಧ್ಯಯನಕ್ಕೆ ಮಲ್ಲಿನಾಥನ ಟೀಕೆ ಅತ್ಯುತ್ತಮ ಮಾಧ್ಯಮವಾಗಿದೆ.

📝 ಮಹಾಬಲ ಭಟ್, ಗೋವಾ

# ಸಂಸ್ಕೃತ ಕಲಿಯಿರಿ, ಸಂಸ್ಕೃತಿ ತಿಳಿಯಿರಿ.

No comments:

नारायण महादेव धोनि

 असङ्ख्यानां वीरयोधानां जन्मभूमिः इयं भारतमाता। अतः एव कश्चन कविः कवयति 'वन्ध्या न भारतजननी शूरसुतानां जन्मभूमिः' इति। प्रायेण सार्ध...