Tuesday, August 1, 2017

ಅದ್ಯ ಧಾರಾ ನಿರಾಧಾರಾ.......

ಸಂಸ್ಕೃತ ಸಪ್ತಾಹ ನಿಮಿತ್ತ ವಿಶಿಷ್ಟ ಲೇಖನ ಸರಣಿ

*ಸಂಸ್ಕೃತ ಪ್ರಪಂಚದ ರಸಪ್ರಸಂಗಗಳು*

ಪ್ರಸಂಗ - ೧

*ಅದ್ಯ ಧಾರಾ ನಿರಾಧಾರಾ.......*

ಕಾಳಿದಾಸನನ್ನು ತಿಳಿಯದಿರುವವರಾರು? ಕವಿಕುಲಗುರುವೆಂಬ ಕೀರ್ತಿ ಹೊತ್ತ ಅಪ್ರತಿಮ ಶೃಂಗಾರ ಕವಿ. ಪ್ರತ್ಯುತ್ಪನ್ನ ಮತಿಯೂ ಆಗಿದ್ದ ಅವನು ಕ್ಷಣಾರ್ಧದಲ್ಲಿ ಕವಿತೆಯನ್ನು ರಚಿಸಬಲ್ಲವನಾಗಿದ್ದ. ಅವನು ಭೋಜರಾನ ಆಸ್ಥಾನದ ನವಮಣಿಗಳಲ್ಲಿ ಒಬ್ಬನಾಗಿದ್ದ ಎಂದು ಭೋಜ ಪ್ರಬಂಧದಲ್ಲಿ ಹೇಳಲಾಗಿದೆ.

ಸ್ವತ: ಕವಿಯೂ, ಪಂಡಿತರಿಗೆ ಆಶ್ರಯದಾತನೂ ಆಗಿದ್ದ ಭೋಜರಾಜ ಕಾಳಿದಾಸನ ಪರಮಮಿತ್ರನೂ ಆಗಿದ್ದ. ಅಂತಹ ಭೋಜರಾಜನಿಗೆ ಒಮ್ಮೆ ಒಂದು ವಿಚಿತ್ರ ಕೋರಿಕೆಯುಂಟಾಯಿತು. ತಾನು ಸತ್ತಾಗ ಕಾಳಿದಾಸ ಯಾವ ರೀತಿಯಲ್ಲಿ ಚರಮಗೀತೆಯನ್ನು ಬರೆಯಬಹುದು ಎಂಬ ಜಿಜ್ಞಾಸೆ ಕಾಡಹತ್ತಿತು. ಅದನ್ನು ಕಾಳಿದಾಸನಲ್ಲಿ ತೋಡಿಕೊಂಡ. ದಿಗ್ಭ್ರಾಂತನಾದ ಕಾಳಿದಾಸ ಅದಕ್ಕೆ ಒಪ್ಪಲಿಲ್ಲ. ವಾಗ್ದೇವಿಯ ವರಪುತ್ರನಾದ ತನ್ನ ಶಬ್ದಗಳ ಶಕ್ತಿಯ ಅರಿವು ಅವನಿಗಿತ್ತು. ಎಷ್ಟು ಹೇಳಿದರೂ ಒಪ್ಪದ ಅವನ ಮೇಲೆ ಸಿಟ್ಟುಗೊಂಡ ಭೋಜ ತನ್ನ ಆಸ್ಥಾನವನ್ನು ಬಿಟ್ಟು ತೊಲಗುವಂತೆ ಆಜ್ಞಾಪಿಸಿದ.

ಕಾಳಿದಾಸನಿಲ್ಲದ ಭೋಜರಾಜನ ಆಸ್ಥಾನ ಚಂದ್ರನಿಲ್ಲದ ರಾತ್ರಿಯಂತಾಗಿತ್ತು. ಬೇಸರಗೊಂಡ ಅರಸ ಕವಿಯನ್ನರಸಿ ಮಾರುವೇಷದಲ್ಲಿ ಹೊರಟೇ ಬಿಟ್ಟ. ಬಲುದಿನಗಳ ಅನ್ವೇಷಣೆಯ ನಂತರ ಕಾಳಿದಾಸನನ್ನು ಸಂಧಿಸಿ ಭೋಜರಾಜ ದಿವಂಗತನಾದ ಎಂದು ಸುಳ್ಳನ್ನು ಹೇಳಿದ. ಕವಿಚಕ್ರವರ್ತಿಯು ಕಂಬನಿ ತುಂಬಿ ಅಗಲಿದ ಮಿತ್ರನಿಗಾಗಿ ಚರಮಗೀತೆಯನ್ನು ಹಾಡಿದ.

ಅದ್ಯ ಧಾರಾ ನಿರಾಧಾರಾ
ನಿರಾಲಂಬಾ ಸರಸ್ವತೀ |
ಪಂಡಿತಾ: ಖಂಡಿತಾ: ಸರ್ವೇ
ಭೋಜರಾಜೇ ದಿವಂಗತೇ ||

(ಭೋಜರಾಜ ಸ್ವರ್ಗಸ್ಥನಾದ್ದರಿಂದ ಇಂದು ಧಾರಾನಗರಿಯು ಆಧಾರವನ್ನು ಕಳೆದುಕೊಂಡಿತು. ಸರಸ್ವತಿಯು ಆಶ್ರಯವನ್ನು ಕಳೆದುಕೊಂಡಳು. ಪಂಡಿತರು ಗೌರವವನ್ನು ಕಳೆದುಕೊಂಡರು.)

ಋಷಿತುಲ್ಯನಾದ ಕವಿಯ ಮಾತುಗಳು ಸುಳ್ಳಾಗಲು ಸಾಧ್ಯವೇ. ಮಾರುವೇಷದಲ್ಲಿದ್ದ ಭೋಜರಾಜ ನಿಶ್ಚೇಷ್ಟಿತನಾಗಿ ಬಿದ್ದ. ಕಾಳಿದಾಸನಿಗೆ ಪರಿಸ್ಥಿತಿಯ ಅರಿವಾಯಿತು; ದುಃಖ ಇಮ್ಮಡಿಸಿತು. ತಕ್ಷಣ ಶ್ಲೋಕವನ್ನು ಮಾರ್ಪಡಿಸಿ ಪಠಿಸಿದ.

ಅದ್ಯ ಧಾರಾ ಸದಾಧಾರಾ
ಸದಾಲಂಬಾ ಸರಸ್ವತೀ |
ಪಂಡಿತಾ ಮಂಡಿತಾ ಸರ್ವೇ
ಭೋಜರಾಜೇ ಭುವಂ ಗತೇ ||

(ಭೋಜರಾಜ ಈ ಭೂಮಿಯಲ್ಲಿರಲು ಧಾರಾ ನಗರವಿಂದು ಉತ್ತಮ ಆಧಾರವನ್ನು ಹೊಂದಿತು. ಸರಸ್ವತಿಗೆ ಒಳ್ಳೆಯ ಆಶ್ರಯ ಸಿಕ್ಕಿತು. ಪಂಡಿತರೆಲ್ಲರೂ ಸಮ್ಮಾನಿತರಾದರು.)

ಭೋಜರಾಜ ನಿದ್ದೆಯಿಂದೆಂಬಂತೆ ಎದ್ದು ಕುಳಿತ. ಕವಿಕುಲಗುರುವಿನ ವಾಕ್ ಶಕ್ತಿಯನ್ನರಿತು ಆದರಿಸಿದ.

ಕಾಳಿದಾಸನಿಗೆ ಕಾಳಿದಾಸನೇ ಸಾಟಿ.!

📝 ಮಹಾಬಲ ಭಟ್, ಗೋವಾ

No comments:

नारायण महादेव धोनि

 असङ्ख्यानां वीरयोधानां जन्मभूमिः इयं भारतमाता। अतः एव कश्चन कविः कवयति 'वन्ध्या न भारतजननी शूरसुतानां जन्मभूमिः' इति। प्रायेण सार्ध...