Tuesday, August 1, 2017

ಸಂಸ್ಕೃತ ಪ್ರಪಂಚದ ರಸಪ್ರಸಂಗಗಳು - ಪ್ರಸ್ತಾವನೆ

ಆತ್ಮೀಯ ಸ್ನೇಹಿತರೇ,
’ಸನಾತನ ಭಾರತದ ಸ್ತ್ರೀರತ್ನಗಳು’ ಎಂಬ ಲೇಖನ ಸರಣಿಗೆ ನೀವು ಕೊಟ್ಟ ಆತ್ಮೀಯ ಸ್ಪಂದನೆಯಿಂದ ಪ್ರೇರಿತನಾಗಿ ಎರಡನೆಯ ಲೇಖನ ಸರಣಿಯನ್ನು ಆರಂಭಿಸುತ್ತಿದ್ದೇನೆ.
ಸಂಸ್ಕೃತ ಸಾಹಿತ್ಯ ಎಂಬುದು ಹಲವು ಕುತೂಹಲಗಳ ಅನೇಕ ಚಮತ್ಕಾರಗಳ ಆಗರ. ಮೊಗೆದಷ್ಟೂ ಹೊರಚಿಮ್ಮುವ ಈ ರಸಸಾಗರದ ಕೆಲವು ಮುತ್ತುಗಳನ್ನು ನಿಮ್ಮ ಮುಂದಿಡುವ ನನ್ನ ಸವಿನಯ ಪ್ರಯತ್ನವಿದು. ಸಂಸ್ಕೃತ ಕವಿಗಳನೇಕರ ಜೀವನದಲ್ಲಿ ಆಗಿ ಹೋದ ಒಂದೊಂದು ಘಟನೆಗಳೂ ಒಂದೊಂದು ರಸಪ್ರಸಂಗಗಳು. ಅಂತಹ ಪ್ರಸಂಗಗಳನ್ನು ಕಲೆ ಹಾಕಿ ಇಲ್ಲಿ ಹೊರಹೊಮ್ಮಿದ ಚಮತ್ಕಾರಪೂರ್ಣ ಕವಿತೆಗಳನ್ನು ನಿಮ್ಮ ಮುಂದಿಡುವ ಪ್ರಾಮಾಣಿಕ ಯತ್ನ ಮಾಡುತ್ತಿದ್ದೇನೆ. ಈ ಪ್ರಸಂಗಗಳೆಲ್ಲ ಬೇರೆ ಬೇರೆ ಹೊತ್ತಿಗೆಗಳಲ್ಲಿ ಓದಿದ್ದು ಹಾಗೂ ವಿದ್ವನ್ಮಣಿಗಳ ಭಾಷಣಗಳಲ್ಲಿ ಕೇಳಿದ್ದು. ಹಾಗಾಗಿ ಈ ಲೇಖನಗಳ ಮೂಲವಸ್ತು ನನ್ನದಲ್ಲ. ಮಧುಕರವೃತ್ತಿಯಿಂದ ಸಂಗ್ರಹಿಸಿದ ಮಕರಂದವನ್ನು ನನ್ನ ಭಾಷೆಯಲ್ಲಿ ಜೇನಾಗಿಸಲು ಪ್ರಾಮಾಣಿಕವಾಗಿ ಯತ್ನಿಸಿದ್ದೇನೆ. ಅದು ಸಹೃದಯರಾದ ನಿಮಗೆಷ್ಟು ರುಚಿಸುವುದೋ ನಾಕಾಣೆ. ಏನೇ ಇರಲಿ, ನಿಮ್ಮವನೀತ. ಓದಿ, ತಪ್ಪಿದ್ದರೆ ತಿದ್ದಿ, ಮೆಚ್ಚಿದರೆ ಬೆನ್ನುತಟ್ಟಿ.
ಈ ಲೇಖನಗಳಲ್ಲಿರುವ ಘಟನೆಗಳಿಗೆ ಐತಿಹಾಸಿಕ ಮಹತ್ತ್ವವಿಲ್ಲ. ಅನೇಕ ಪ್ರಸಂಗಗಳು ಕಲ್ಪಿತ ಪ್ರಸಂಗಗಳು. ಬಲ್ಲಾಳ ಸೇನನೆಂಬ ಕವಿ ರಚಿಸಿದ್ದ ಭೋಜ ಪ್ರಬಂಧ ಎಂಬ ಕಾವ್ಯದಲ್ಲಿ ಕಾಳಿದಾಸ ಭೋಜರಾಜನ ಆಸ್ಥಾನದಲ್ಲಿದ್ದ ಎಂದು ವರ್ಣಿಸಲಾಗಿದೆ. ಅದು ಇತಿಹಾಸಕಾರರಿಂದ ತಿರಸ್ಕರಿಸಲ್ಪಟ್ಟಿದೆ. ಅದರಂತೆ ಈ ಸರಣಿಯಲ್ಲಿ ವರ್ಣಿಸಲಾದ ಪ್ರಸಂಗಗಳೂ ಐತಿಹ್ಯಗಳೇ ಹೊರತು ಇತಿಹಾಸವಲ್ಲ. ರಸಾಸ್ವಾದನೆಯೇ ಈ ಲೇಖನಗಳ ಪರಮೋದ್ದೇಶವೇ ವಿನಾ ಸತ್ಯಾನ್ವೇಷಣೆಯಲ್ಲ.
ಶ್ರಾವಣ ಪೂರ್ಣಿಮೆಯನ್ನು ’ಸಂಸ್ಕೃತದಿನ’ ಎಂದು ಕೇಂದ್ರ ಸರಕಾರ ಘೋಷಿಸಿದೆ. ಆ ದಿನ, ಹಿಂದಿನ ಮೂರು ದಿನ ಹಾಗೂ ಮುಂದಿನ ಮೂರು ದಿನ ಹೀಗೆ ಏಳು ದಿನಗಳ ಕಾಲ ಸಂಸ್ಕೃತ ಸಪ್ತಾಹ ನಡೆಯುತ್ತದೆ. ಸಂಸ್ಕೃತ ಭಾಷೆಯ ಪ್ರಸಾರದ ಪ್ರಯತ್ನ ಈ ಸಪ್ತಾಹದಲ್ಲಿ ತನ್ನ ವೇಗವನ್ನು ವರ್ಧಿಸಿಕೊಳ್ಳುತ್ತದೆ. ಈ ವರ್ಷ ಅಗಸ್ಟ್ ೪ ರಿಂದ ೧೦ರವರೆಗೆ ಸಂಸ್ಕೃತ ಸಪ್ತಾಹವಿದೆ. ೭ ನೇ ತಾರೀಖಿಗೆ ಸಂಸ್ಕೃತದಿನ. ಈ ಸಂದರ್ಭದಲ್ಲಿ ಸಂಸ್ಕೃತದ ಅನ್ನ ತಿನ್ನುತ್ತಿರುವ ನನ್ನ ಒಂದು ಅಳಿಲು ಸೇವೆ ಈ ಲೇಖನ ಸರಣಿ. ಅಗಸ್ಟ್ ತಿಂಗಳು ಪೂರ್ತಿ ಈ ಸರಣಿಯು ಪ್ರಸಾರವಾಗಲಿದೆ.
ತಮ್ಮ ಸಹಕಾರ, ಪ್ರೋತ್ಸಾಹ ಇರಲಿ
ನಿಮ್ಮವ
ಮಹಾಬಲ ಭಟ್, ಗೋವಾ

1 comment:

Shrinidhi Acharya said...

ಧನ್ಯವಾದಗಳು.. ತುಂಬಾ ಕುತೂಹಲಕಾರಿಯಾಗಿಬರುತ್ತಿದೆ ಸರಣಿ.. ನಿತ್ಯ ಇದಕ್ಕಾಗಿ ಕಾಯುವಂತೆ ಮಾಡುತ್ತಿದೆ.. :)

नारायण महादेव धोनि

 असङ्ख्यानां वीरयोधानां जन्मभूमिः इयं भारतमाता। अतः एव कश्चन कविः कवयति 'वन्ध्या न भारतजननी शूरसुतानां जन्मभूमिः' इति। प्रायेण सार्ध...