Friday, August 4, 2017

ಸಂಸ್ಕೃತ ಪ್ರಪಂಚದ ರಸಪ್ರಸಂಗಗಳು - ಜೀವವನ್ನುಳಿಸಿದ ಕವಿತೆ......

ಸಂಸ್ಕೃತ ಸಪ್ತಾಹ ನಿಮಿತ್ತ ವಿಶಿಷ್ಟ ಲೇಖನ ಸರಣಿ

*ಸಂಸ್ಕೃತ ಪ್ರಪಂಚದ ರಸಪ್ರಸಂಗಗಳು*

ಪ್ರಸಂಗ – ೪


*ಜೀವವನ್ನುಳಿಸಿದ ಕವಿತೆ......*


ಭರತಭೂಮಿಯ ಶಿಖರವಾದ ಕಾಶ್ಮೀರ ಸರಸ್ವತಿಯ ತವರೂರಾಗಿತ್ತು. ಹಾಗಾಗಿಯೇ ಆಚಾರ್ಯ ಶಂಕರರು ಸರಸ್ವತಿಯನ್ನು ಕಾಶ್ಮೀರಪುರವಾಸಿನಿ ಎಂದು ಸ್ತುತಿಸಿದ್ದಾರೆ. ಅಂತಹ ಪುಣ್ಯಭೂಮಿಯಲ್ಲಿ ಜನಿಸಿದ್ದ ಬಿಲ್ಹಣನೆಂಬ ಕವಿ ಗುಜರಾತ ಪ್ರಾಂತದ ರಾಜನ ಕುವರಿಗೆ ಸಂಸ್ಕೃತ ಕಲಿಸುತ್ತಿದ್ದ. ಕ್ರಮೇಣ ಅವನು ರಾಜಕುಮಾರಿಯ ಪ್ರೇಮಪಾಶಕ್ಕೆ ಸಿಲುಕಿದ. ಇದನ್ನು ತಿಳಿದ ರಾಜ ತನ್ನ ಪ್ರತಿಷ್ಠೆಗೆ ಕುಂದೆಂದು ಭಾವಿಸಿ ಬಿಲ್ಹಣನಿಗೆ ಮರಣದಂಡನೆಯನ್ನು ವಿಧಿಸಿದ. ವಧಸ್ಥಾನಕ್ಕೆ ಒಯ್ಯುವಾಗ ಬಿಲ್ಹಣನು ಸುಂದರವಾದ ವಿರಹಪದ್ಯಗಳನ್ನು ರಚಿಸಿ ಹಾಡತೊಡಗಿದ. ಈ ಪದ್ಯಗಳ ಸಂಗ್ರಹ ಮುಂದೆ ’ಚೋರ ಪಂಚಾಶಿಕಾ’ ಎಂದು ಪ್ರಸಿದ್ಧವಾಗಿದೆ. ಆಗಲೇ ಒಂದು ಪದ್ಯದ ಮೂಲಕ ರಾಜನಿಗೊಂದು ಸಂದೇಶವನ್ನು ಕಳಿಸಿದ.


ಭಟ್ಟಿರ್ನಷ್ಟೋ ಭಾರವಿಶ್ಚಾಪಿ ನಷ್ಟೋ
ಭಿಕ್ಷುರ್ನಷ್ಟೋ ಭೀಮಸೇನೋಽಪಿ ನಷ್ಟಃ |
ಭುಕ್ಕುಂಡೋಽಹಂ ಭೂಪತಿಸ್ತ್ವಂ ಚ ರಾಜನ್
ಭಂಭಾವಲ್ಯಾಮಂತಕಃ ಸನ್ನಿವಿಷ್ಟಃ ||


ಭಟ್ಟಿ(ಕವಿ), ಭಾರವಿ(ಕವಿ), ಭಿಕ್ಷು(ಬುದ್ಧ), ಭೀಮಸೇನ ಇವರೆಲ್ಲ ಯಮನ ವಶರಾಗಿದ್ದಾರೆ. ಈಗ ಭುಕ್ಕುಂಡ(ಬಿಲ್ಹಣನ ಇನ್ನೊಂದು ಹೆಸರು)ನಾದ ನನ್ನವರೆಗೆ ಯಮ ತಲುಪಿದ್ದಾನೆ. ಭಕಾರದ ವರ್ಣಮಾಲೆಯನ್ನು ಪ್ರವೇಶಿಸಿದ ಯಮ ಭ, ಭಾ, ಭಿ, ಭೀ ಗಳನ್ನು ಮುಗಿಸಿ ’ಭು’ವನ್ನು ತಲುಪಿದ್ದಾನೆ. ನೀನು ಭೂಪತಿ. ಮುಂದಿನ ಸರದಿ ನಿನ್ನದು. ನನ್ನ ಮರಣ ತಡವಾದಷ್ಟು ನಿನ್ನ ಮರಣ ಮುಂದೂಡಲ್ಪಡುತ್ತದೆ. ಎಂಬುದು ಈ ಪದ್ಯದ ತಾತ್ಪರ್ಯ. ಅದನ್ನು ಅರಿತ ರಾಜ ಕವಿಯ ಚಾತುರ್ಯವನ್ನು ಮೆಚ್ಚಿ ಅವನಿಗೇ ತನ್ನ ಮಗಳನ್ನು ಧಾರೆಯೆರೆದು ಕೊಟ್ಟ.


📝 ಮಹಾಬಲ ಭಟ್, ಗೋವಾ

# ಸಂಸ್ಕೃತ ಕಲಿಯಿರಿ, ಸಂಸ್ಕೃತಿ ತಿಳಿಯಿರಿ.

No comments:

नारायण महादेव धोनि

 असङ्ख्यानां वीरयोधानां जन्मभूमिः इयं भारतमाता। अतः एव कश्चन कविः कवयति 'वन्ध्या न भारतजननी शूरसुतानां जन्मभूमिः' इति। प्रायेण सार्ध...