Thursday, August 31, 2017

ಸಂಸ್ಕೃತ ಪ್ರಪಂಚದ ರಸಪ್ರಸಂಗಗಳು* ಪ್ರಸಂಗ – ೨೬ *ಕಾದಂಬರಿಯ ಕಥೆ*

*ಸಂಸ್ಕೃತ ಪ್ರಪಂಚದ ರಸಪ್ರಸಂಗಗಳು*

ಪ್ರಸಂಗ – ೨೬

*ಕಾದಂಬರಿಯ ಕಥೆ*

ಸಂಸ್ಕೃತದ ಗದ್ಯಕವಿ ಚಕ್ರವರ್ತಿಯೆಂದು ಪ್ರಖ್ಯಾತನಾಗಿದ್ದ ಬಾಣನ ಹರ್ಷಚರಿತೆ ಮತ್ತು ಕಾದಂಬರಿ ಈ ಎರಡು ಕೃತಿಗಳು ಅಜರಾಮರವಾಗಿವೆ. ಕಾದಂಬರಿಯಂತೂ ಮುಂದೆ ದೊಡ್ಡ ಕಥೆಗೆ ಕಾದಂಬರಿ ಎಂದೇ ಹೆಸರಾಗುವಷ್ಟು ಜನಪ್ರಿಯವಾಗಿದೆ. ಕೆಲವೆಡೆ ಸುಂದರ ಸುಲಲಿತ ಪದಪುಂಜಗಳನ್ನು ಹೊಂದಿ, ಇನ್ನು ಕೆಲವೆಡೆ ಗೊಂಡಾರಣ್ಯದಂತಹ ಓಜಸ್ವೀ ವಾಕ್ಯಗಳಿಂದ ಕಂಗೊಳಿಸುವ ಕಾದಂಬರಿಗೆ ಸರಿಸಾಟಿಯಿಲ್ಲ.

ಕಾದಂಬರಿಯನ್ನು ಅರ್ಧ ಬರೆದು ಮುಗಿಸಿದಾಗಲೇ ಬಾಣನ ಆರೋಗ್ಯ ಹದಗೆಟ್ಟಿತು. ತಾನಿದನ್ನು ಪೂರ್ತಿಗೊಳಿಸಲಾರೆ ಎಂದು ಅಮನವರಿಕೆಯಾದಾಗ ತನ್ನಿಬ್ಬರು ಮಕ್ಕಳನ್ನು ಕರೆದ. ಅವರಲ್ಲಿ ಒಬ್ಬರಿಗೆ ಗ್ರಂಥವನ್ನು ಪುರ್ತಿಗೊಳಿಸುವ ಹೊಣೆಯನ್ನು ಹೊರಿಸುವುದು ಅವನ ಉದ್ದೇಶವಾಗಿತ್ತು. ಆ ಮಹೋನ್ನತ ಕೃತಿಯನ್ನು ಪೂರ್ಣಗೊಳಿಸಲು ಮಹಾಪ್ರತಿಭೆಯ ಆವಶ್ಯಕತೆಯಿತ್ತು. ಅವರನ್ನು ಪರೀಕ್ಷಿಸಲೋಸುಗ ಮನೆಯ ಮುಂದಿರುವ ಸರ್ಪವೊಂದು ಸುತ್ತಿಕೊಂಡಿರುವ ಒಣಗಿದ ಮರವನ್ನು ತೋರಿಸಿ ಅದನ್ನು ವರ್ಣಿಸಲು ಸೂಚಿಸಿದ. ಮೊದಲನೆಯ ಮಗ *’ಶುಷ್ಕೋ ವೃಕ್ಷಸ್ತಿಷ್ಠತ್ಯಗ್ರೇ ತದುಪರಿ ಕಶ್ಚಿತ್ ಸರ್ಪೋಽಪ್ಯಸ್ತಿ’* ಎಂದು ವರ್ಣಿಸಿದ. ಒಣಗಿದ ಮರವೊಂದು ಮುಂದೆ ನಿಂತಿದೆ. ಅದರ ಮೇಲೊಂದು ಸರ್ಪವೂ ಇದೆ ಎಂದು ವಾರ್ತೆಯನ್ನು ಒಪ್ಪಿಸಿದಂತಿತ್ತು ಅವನ ರಚನೆ. ಎರಡನೆಯ ಮಗ ಭೂಷಣಭಟ್ಟ ಅದನ್ನೇ ಬೇರೆ ರೀತಿಯಲ್ಲಿ ಹೇಳಿದ-

ನೀರಸತರುರಿಹ ವಿಲಸತಿ ಪುರತಃ
ತದುಪರಿ ಮಣಿಮಯಕುಟಿಲಭುಜಂಗಃ

ಇವನ ವಾಕ್ಯದ ಅರ್ಥವೂ ಅದೇ ಆಗಿದ್ದರೂ ಶಬ್ದ ಚಮತ್ಕಾರ ಆಕರ್ಷಕವಾಗಿತ್ತು. ನೀರಸ, ಮಣಿಮಯ, ಕುಟಿಲ ಮುಂತಾದ ಪದಪ್ರಯೋಗ ವಾಕ್ಯಕ್ಕೆ ರಮಣೀಯತೆಯನ್ನು ತಂದಿತ್ತು. ಬಾಣಭಟ್ಟ ಅವನಿಗೇ ಗ್ರಂಥಸಮಾಪ್ತಿಯ ಹೊಣೆಯನ್ನೊಪ್ಪಿಸಿ ನಿರಾಳವಾಗಿ ಕಣ್ಮುಚ್ಚಿದ. ಭೂಷಣಭಟ್ಟ ತಂದೆಯಷ್ಟು ಪ್ರತಿಭಾಸಂಪನ್ನನಾಗಿರದಿದ್ದರೂ ಅವನ ಶೈಲಿಯನ್ನು ಅನುಸರಿಸುವಲ್ಲಿ ಸಾಕಷ್ಟು ಸಫಲನಾಗಿದ್ದಾನೆ.

📝 *ಮಹಾಬಲ ಭಟ್, ಗೋವಾ*

# ಸಂಸ್ಕೃತ ಕಲಿಯಿರಿ, ಸಂಸ್ಕೃತಿ ತಿಳಿಯಿರಿ

No comments:

नारायण महादेव धोनि

 असङ्ख्यानां वीरयोधानां जन्मभूमिः इयं भारतमाता। अतः एव कश्चन कविः कवयति 'वन्ध्या न भारतजननी शूरसुतानां जन्मभूमिः' इति। प्रायेण सार्ध...