Thursday, August 31, 2017

ಸಂಸ್ಕೃತ ಪ್ರಪಂಚದ ರಸಪ್ರಸಂಗಗಳು* ಪ್ರಸಂಗ – ೨೭ *ಭೋಜರಾಜನ ಪಟ್ಟಾಭಿಷೇಕ*

*ಸಂಸ್ಕೃತ ಪ್ರಪಂಚದ ರಸಪ್ರಸಂಗಗಳು*

ಪ್ರಸಂಗ – ೨೭

*ಭೋಜರಾಜನ ಪಟ್ಟಾಭಿಷೇಕ*

ಭೋಜರಾಜ ಪಟ್ಟಕ್ಕೆ ಬಂದುದೇ ಒಂದು ರೋಚಕ ಕಥೆ. ತಂದೆ ತಾಯಿಯರ ಜೀವನದ ಕೊನೆಯ ಘಟ್ಟದಲ್ಲಿ ಹುಟ್ಟಿದ ಒಬ್ಬನೇ ಮಗ ಅವನು. ಅವನಿಗೆ ೫ ವರ್ಷಗಳಾದಾಗ ತಂದೆ ಅವನನ್ನು ತನ್ನ ತಮ್ಮ ಮುಂಜನ ಆಶ್ರಯದಲ್ಲಿ ಬಿಟ್ಟು ವಾನಪ್ರಸ್ಥಕ್ಕೆ ಹೋದ. ಒಂದಿನ ಆಸ್ಥಾನಕ್ಕೆ ಆಗಮಿಸಿದ ಜ್ಯೋತಿಷಿಯೊಬ್ಬ ’ಭೋಜನು ೫೫ ವರ್ಷ, ೭ತಿಂಗಳು, ೩ ದಿನಗಳ ಕಾಲ ಗೌಡ ದೇಶ ಸಹಿತ ದಕ್ಷಿಣಾಪಥವನ್ನು ಆಳುತ್ತಾನೆ’ ಎಂದು ಭವಿಷ್ಯ ನುಡಿದ. ರಾಜ್ಯವನ್ನು ಕಬಳಿಸಬೇಕೆಂದು ಹೊಂಚು ಹಾಕುತ್ತಿದ್ದ ಮುಂಜ ಭೋಜನನ್ನು ಕೊಲ್ಲುವ ಯೋಜನೆ ರೂಪಿಸಿದ. ರಾಜನಿಂದ ಆಜ್ಞಪ್ತನಾದ ವತ್ಸರಾಜನೆಂಬ ಮಾಂಡಲಿಕ ಭೋಜನನ್ನು ಕೊಲ್ಲಲೆಂದು ಕಾಡಿಗೆ ಕರೆದುಕೊಂಡು ಹೋಗಿ ಅವನಿಗೆ ವಿಷಯವನ್ನು ತಿಳಿಸಿದ. ಭೋಜರಾಜ ತನ್ನ ಕೊನೆಯ ಸಂದೇಶವೆಂಬಂತೆ ಒಂದು ಎಲೆಯ ಮೇಲೆ ರಕ್ತದಿಂದ ಶ್ಲೋಕವೊಂದನ್ನು ಬರೆದು ವತ್ಸರಾಜನ ಕೈಗಿಟ್ಟ. ವತ್ಸರಾಜನಿಗೆ ಆ ಪದ್ಯವನ್ನು ಓದಿ ಭೋಜನ ಮೇಲೆ ಕನಿಕರ ಮೂಡಿತು. ಅವನನ್ನು ಕೊಲ್ಲದೆ ರಹಸ್ಯವಾಗಿ ಬಚ್ಚಿಟ್ಟು ಕೊಂದುದಾಗಿ ರಾಜನಿಗೆ ಸುಳ್ಳು ಹೇಳಿದ.

ಪತ್ರವನ್ನು ತೆರೆದ ರಾಜ ಅದರಲ್ಲಿರುವ ಪದ್ಯವನ್ನು ಓದಿ ಚಕಿತನಾದ.
ಮಾಂಧಾತಾ ಚ ಮಹೀಪತಿಃ ಕೃತಯುಗಾಲಂಕಾರಭೂತೋ ಗತಃ
ಸೇತುರ್ಯೇನ ಮಹೋದಧೌ ವಿರಚಿತಃ ಕ್ವಾಸೌ ದಶಾಸ್ಯಾಂತಕಃ |
ಅನ್ಯೇ ಚಾಪಿ ಯುಧಿಷ್ಠಿರಪ್ರಭೃತಯಃ ಯಾತಾ ದಿವಂ ಭೂಪತೇ!
ನೈಕೇನಾಪಿ ಸಮಂ ಗತಾ ವಸುಮತೀ ಮುಂಜ ತ್ವಯಾ ಯಾಸ್ಯತಿ ||

ಕೃತಯುಗದ ಅಲಂಕಾರದಂತಿದ್ದ ಮಾಂಧಾತನೆಂಬ ರಾಜ (ಸತ್ತು)ಹೋದ. (ತ್ರೇತಾಯುಗದಲ್ಲಿ)ಸಮುದ್ರಕ್ಕೆ ಸೇತುವೆಯನ್ನು ನಿರ್ಮಿಸಿ ಹತ್ತು ತಲೆಯ ರಾವಣನನ್ನು ಕೊಂದವನು ಎಲ್ಲಿದ್ದಾನೆ? (ದ್ವಾಪರಯುಗದ) ಯುಧಿಷ್ಠಿರಾದಿ ರಾಜರೂ ಸ್ವರ್ಗಕ್ಕೆ ಹೋದರು. ಈ ಭೂಮಿ(ರಾಜ್ಯ) ಅವರಾರೊಂದಿಗೂ ಹೋಗಿಲ್ಲ. ನಿನ್ನೊಂದಿಗೆ ನಿಶ್ಚಯವಾಗಿಯೂ ಬರಲಿದೆ.

ಕವಿತೆಯಲ್ಲಿದ್ದ ’ಈ ನಶ್ವರವಾದ ರಾಜ್ಯಕ್ಕಾಗಿ ನನ್ನನ್ನು ಕೊಲ್ಲಿಸುತ್ತಿರುವೆಯಲ್ಲ’ ಎಂಬ ತೀಕ್ಷ್ಣವಾದ ವ್ಯಂಗ್ಯ ಮುಂಜನ ಮನಸ್ಸಿನ ಮೇಲೆ  ಬಲವಾದ ಪ್ರಹಾರವನ್ನೇ ಮಾಡಿತು. ತನ್ನ ತಪ್ಪಿಗೆ ಪ್ರಾಯಶ್ಚಿತ್ತವಾಗಿ ಅಗ್ನಿಪ್ರವೇಶವನ್ನು ಮಾಡಲು ನಿಶ್ಚಯಿಸಿದ. ಆಗ ವತ್ಸರಾಜ ಇಕ್ಕಟ್ಟಿಗೆ ಸಿಲುಕಿದ. ಭೋಜ ಬದುಕಿರುವಾಗಲೇ ರಾಜ ವೃಥಾ ಪ್ರಾಣ ಕಳೆದುಕೊಳ್ಳುವನಲ್ಲ ಎಂದು ಚಿಂತಿಸಿದ. ಮಂತ್ರಿ ಬುದ್ಧಿಸಾಗನೊಂದಿಗೆ ಸೇರಿ ಉಪಾಯವೊಂದನ್ನು ಮಾಡಿದ. ಅವರ ಯೋಜನೆಯಂತೆ ರಾಜಸಭೆಗೆ ಆಗಮಿಸಿದ ಮಂತ್ರವಾದಿಯೊಬ್ಬ ಭೋಜನನ್ನು ತಾನು ಬದುಕಿಸಬಲ್ಲೆ ಎಂದಾಗ ರಾಜ ಹಾಗೆ ಮಾಡಲು ಅವನನ್ನು ವಿನಂತಿಸಿಕೊಂಡ. ಶ್ಮಶಾನದಲ್ಲಿ ಹೋಮದ ನಾಟಕವಾಡಿ ಬಚ್ಚಿಟ್ಟಿದ್ದ ಭೋಜನನ್ನು ರಾಜನ ಮುಂದೆ ತಂದು ನಿಲ್ಲಿಸಿದರು. ರಾಜ ಅವನಿಗೆ ರಾಜ್ಯವನ್ನು ಒಪ್ಪಿಸಿ ಕಾಡಿನೆಡೆಗೆ ಸಾಗಿದ.

📝 *ಮಹಾಬಲ ಭಟ್, ಗೋವಾ*
# ಸಂಸ್ಕೃತ ಕಲಿಯಿರಿ, ಸಂಸ್ಕೃತಿ ತಿಳಿಯಿರಿ.

No comments:

नारायण महादेव धोनि

 असङ्ख्यानां वीरयोधानां जन्मभूमिः इयं भारतमाता। अतः एव कश्चन कविः कवयति 'वन्ध्या न भारतजननी शूरसुतानां जन्मभूमिः' इति। प्रायेण सार्ध...