Thursday, August 31, 2017

*ಸಂಸ್ಕೃತ ಪ್ರಪಂಚದ ರಸಪ್ರಸಂಗಗಳು* ಪ್ರಸಂಗ – ೨೮ *ಬೋಪದೇವ*

*ಸಂಸ್ಕೃತ ಪ್ರಪಂಚದ ರಸಪ್ರಸಂಗಗಳು*

ಪ್ರಸಂಗ – ೨೮

*ಬೋಪದೇವ*
ಆಂಧ್ರಪ್ರದೇಶದ ಒಂದು ಗುರುಕುಲ. ಅಲ್ಲೊಬ್ಬ ದಡ್ಡಶಿಖಾಮಣಿ ವಿದ್ಯಾರ್ಥಿ. ಅವನ ಹೆಸರು ಬೋಪದೇವ. ಹತ್ತಾರು ಸಲ ಹೇಳಿಕೊಟ್ಟರೂ ವಿದ್ಯೆ ತಲೆಗೆ ಹತ್ತುತ್ತಿರಲಿಲ್ಲ. ಗುರುಗಳಿಂದ ಸದಾ ಬೈಗುಳ, ಸಹಪಾಠಿಗಳಿಂದ ಅವಮಾನ ಇವುಗಳನ್ನು ಸಹಿಸಲಾರದೆ ಒಂದಿನ ರಾತ್ರಿ ಗುರುಕುಲವನ್ನು ಬಿಟ್ಟು ಪಲಾಯನ ಗೈದ. ರಾತ್ರಿಯೆಲ್ಲ ನಡೆದು ನಡೆದು ಬೆಳಗು ಹರಿಯುವಷ್ಟರಲ್ಲಿ ಹಳ್ಳಿಯೊಂದನ್ನು ತಲುಪಿದ. ಬಾಯಾರಿಕೆಯಿಂದ ಬಳಲುತ್ತ ಬಾವಿಯೊಂದನ್ನು ಕಂಡು ಸಮೀಪಿಸಿದ. ಬೆಳಗಿನ ಸಮಯದಲ್ಲಿ ನೀರು ತೆಗೆದುಕೊಂಡು ಹೋಗಲು ಊರಿನ ಮಹಿಳೆಯರು ಅಲ್ಲಿಗೆ ಬಂದಿದ್ದರು. ತನಗೆ ನೀರು ಕೊಡೆಂದು ಅವರಲ್ಲೊಬ್ಬಳನ್ನು ವಿನಂತಿಸಿಕೊಂಡ. ಆ ಮಹಿಳೆ ಅವನ ಬೊಗಸೆಗೆ ನೀರು ಸುರಿಯುತ್ತ ಮುಖವನ್ನು ಗಮನಿಸಿದಳು. ನಿದ್ದೆಯಿಲ್ಲದೆ ನಡೆದ ಶ್ರಮವು ಮನದ ದುಗುಡವನ್ನು ಸೇರಿಕೊಂಡು ಮುಖವು ಬಾಡಿ ಬಸವಳಿದಿತ್ತು. ಆಪ್ಯಾಯತೆಯಿಂದ ಕಾರಣವನ್ನು ಕೇಳಿದ ಮಹಿಳೆಗೆ ಬೋಪದೇವ ತನ್ನ ಕಥೆಯನ್ನರುಹಿದ.

ಅವನ ವ್ಯಥೆಯನ್ನು ಕೇಳಿದ ಆ ಚತುರಮತಿ ಮಹಿಳೆ ಅವನನ್ನು ಬಾವಿಗೆ ಇನ್ನಷ್ಟು ಸಮೀಪ ಕರೆದೊಯ್ದಳು. ಅಲ್ಲೊಂದು ಅಗಲವಾದ ಕಲ್ಲಿತ್ತು. ಮಹಿಳೆಯರು ನೀರು ಸೇದಿದ ಮಣ್ಣಿನ ಮಡಕೆಗಳನ್ನು ಅದರ ಮೇಲಿಟ್ಟು ನಂತರ ತಮ್ಮ ಸೊಂಟಕ್ಕೇರಿಸುತ್ತಿದ್ದಳು. ಮತ್ತೆ ಮತ್ತೆ ಕೊಡಗಳನ್ನಿಡುವುದರಿಂದ ಆ ಕಲ್ಲಿಗೆ ಸವಕಳಿ ಬಂದಿತ್ತು. ಅದನ್ನು ತೋರಿಸುತ್ತ ಆ ಮಹಿಳೆಯೆಂದಳು – ’ವತ್ಸ! ಮೃದುವಾದ ಮಣ್ಣಿನ ಕೊಡಗಳನ್ನು ಮತ್ತೆ ಮತ್ತೆ ಇಡುವುದರಿಂದ ಗಟ್ಟಿಯಾದ ಕಲ್ಲೇ ಸವೆಯುತ್ತದೆಂದಾದರೆ ಪುನಃ ಪುನಃ ಅಭ್ಯಾಸ ಮಾಡಿದರೆ ಬುದ್ಧಿ ತೀಕ್ಷ್ಣವಾಗದೆ?’

ಅವಳ ಮಾತು ಬೋಪದೇವನ ಅಂತರಂಗಕ್ಕೆ ನಾಟಿತು. ಆ ನಾರಿಗೆ ನಮಿಸಿ ಅವನು ಮತ್ತೆ ಗುರುಕುಲದ ಹಾದಿ ತುಳಿದ. ಶ್ರದ್ಧೆಯಿಂದ ವಿದ್ಯಾಭ್ಯಾಸ ಮಾಡಿ ಕಠಿಣ ಪರಿಶ್ರಮದಿಂದ ಪಾಂಡಿತ್ಯವನ್ನು ಸಂಪಾದಿಸಿದ. ಮಂದಮತಿಗಳ ಅನುಕೂಲಕ್ಕಾಗಿಯೇ ಸರಳ ಭಾಷೆಯಲ್ಲಿ ’ಮುಗ್ಧಬೋಧ’ ಎಂಬ ವ್ಯಾಕರಣಗ್ರಂಥವನ್ನು ರಚಿಸಿದ.

📝 *ಮಹಾಬಲ ಭಟ್, ಗೋವಾ*

# ಸಂಸ್ಕೃತ ಕಲಿಯಿರಿ, ಸಂಸ್ಕೃತಿ ತಿಳಿಯಿರಿ

   

No comments:

नारायण महादेव धोनि

 असङ्ख्यानां वीरयोधानां जन्मभूमिः इयं भारतमाता। अतः एव कश्चन कविः कवयति 'वन्ध्या न भारतजननी शूरसुतानां जन्मभूमिः' इति। प्रायेण सार्ध...