Thursday, August 31, 2017

ಸಂಸ್ಕೃತ ಪ್ರಪಂಚದ ರಸಪ್ರಸಂಗಗಳು* ಪ್ರಸಂಗ – ೨೯ *ಲೋಕನಾಥಾವುಭಾವಪಿ*

*ಸಂಸ್ಕೃತ ಪ್ರಪಂಚದ ರಸಪ್ರಸಂಗಗಳು*

ಪ್ರಸಂಗ – ೨೯

*ಲೋಕನಾಥಾವುಭಾವಪಿ*

ಅಂದು ಭೋಜರಾಜನ ಆಸ್ಥಾನಕ್ಕೆ ನಿರ್ಧನ ಭಿಕ್ಷುಕನೊಬ್ಬ ಆಗಮಿಸಿದ. ಯಾರು ಬಂದರೂ ಅವರಿಗೆ ಕವಿತಾರಚನಾ ಸಾಮರ್ಥ್ಯವಿದೆಯೇ ಎಂದು ಪರೀಕ್ಷಿಸುವುದು ಭೋಜನಿಗೆ ಅಭ್ಯಾಸವಾಗಿ ಹೋಗಿತ್ತು. ಅದರಂತೆ ಆ ಭಿಕ್ಷುಕನನ್ನೂ ಕವಿತೆ ರಚಿಸಲು ಒತ್ತಾಯಿಸಿದ. ಭಿಕ್ಷುಕನಾದರೂ ಸಂಸ್ಕೃತ ಬಲ್ಲವನಾಗಿದ್ದ ಅವನು ಹೀಗೆಂದು ಕವನಿಸಿದ.

ಅಹಂ ಚ ತ್ವಂ ಚ ರಾಜೇಂದ್ರ!
ಲೋಕನಾಥಾವುಭಾವಪಿ |
ಬಹುವ್ರೀಹಿರಹಂ ರಾಜನ್!
ಷಷ್ಠೀತತ್ಪುರುಷೋ ಭವಾನ್ ||

“ಹೇ ರಾಜೇಂದ್ರ! ನಾನು ಹಾಗೂ ನೀನು ಇಬ್ಬರೂ ಲೋಕನಾಥರು” ರಾಜನಿಗೆ ಆಶ್ಚರ್ಯವಾಯಿತು. ’ರಾಜನಾದ ನನ್ನನ್ನು ಭಿಕ್ಷುಕನಾದ ತನಗೆ ಸಮಾನವಾಗಿ ನೋಡುತ್ತಿದ್ದಾನಲ್ಲ’ ಎಂದು ಕೋಪವೂ ಬಂತು. ಅಷ್ಟರಲ್ಲಿ ಭಿಕ್ಷುಕ ಪದ್ಯದ ದ್ವಿತೀಯಾರ್ಧವನ್ನು ಉಸುರಿದ. ’ನಾನು ಬಹುವ್ರೀಹಿ, ನೀನು ಷಷ್ಠೀ ತತ್ಪುರುಷ’. ರಾಜನಿಗೆ ಭಿಕ್ಷುಕನ ಮಾತಿನ ಮರ್ಮ ಅರಿವಾಯಿತು.

ಲೋಕನಾಥಃ ಎಂಬ ಪದವನ್ನು ಲೋಕಸ್ಯ ಅಥವಾ ಲೋಕಾನಾಂ ನಾಥಃ ಎಂದು ಷಷ್ಠೀ ತತ್ಪುರುಷ ಸಮಾಸದ ನಿಯಮವನ್ನನುಸರಿಸಿ ವಿಗ್ರಹಿಸಿದರೆ ಲೋಕದ (ಅಥವಾ ಜನರ) ಒಡೆಯನಾದ ರಾಜನಿಗೆ ಅನ್ವಯವಾಗುತ್ತದೆ. ಲೋಕಾಃ ಏವ ನಾಥಾಃ ಯಸ್ಯ ಸಃ ಎಂದು ಬಹುವ್ರೀಹಿ ಸಮಾಸದಂತೆ ವಿಗ್ರಹಿಸಿದರೆ ಯಾರಿಗೆ ಜನರೇ ಒಡೆಯರೋ ಅವನು ಎಂಬರ್ಥ ಮೂಡಿ ಜನರಿಂದ ಪೋಷಿತನಾದ ಭಿಕ್ಷುಕನಿಗೆ ಅನ್ವಯವಾಗುತ್ತದೆ.

ಭಿಕ್ಷುಕನ ವ್ಯಾಕರಣ ಚಮತ್ಕಾರವನ್ನು ಮೆಚ್ಚಿದ ಅರಸ ಅವನಿಗೆ ಯಥೇಷ್ಟ ಧನಕನಕಾದಿಗಳನ್ನು ನೀಡಿದ.

📝 *ಮಹಾಬಲ ಭಟ್, ಗೋವಾ*
# ಸಂಸ್ಕೃತ ಕಲಿಯಿರಿ, ಸಂಸ್ಕೃತಿ ತಿಳಿಯಿರಿ.

No comments:

नारायण महादेव धोनि

 असङ्ख्यानां वीरयोधानां जन्मभूमिः इयं भारतमाता। अतः एव कश्चन कविः कवयति 'वन्ध्या न भारतजननी शूरसुतानां जन्मभूमिः' इति। प्रायेण सार्ध...