Thursday, August 31, 2017

ಸಂಸ್ಕೃತ ಪ್ರಪಂಚದ ರಸಪ್ರಸಂಗಗಳು* ಪ್ರಸಂಗ – ೨೫ *ಕ್ರಿಯಾಸಿದ್ಧಿ: ಸತ್ತ್ವೇ ಭವತಿ*

*ಸಂಸ್ಕೃತ ಪ್ರಪಂಚದ ರಸಪ್ರಸಂಗಗಳು*

ಪ್ರಸಂಗ – ೨೫

*ಕ್ರಿಯಾಸಿದ್ಧಿ: ಸತ್ತ್ವೇ ಭವತಿ*

ಭೋಜರಾಜ ಕೇವಲ ಕವಿಪಕ್ಷಪಾತಿಯಾಗಿರದೆ ಪ್ರತಿಭಾಪಕ್ಷಪಾತಿಯೂ ಆಗಿದ್ದ. ಪ್ರತಿಭಾವಂತ ಕವಿಗಳು ಎಂದಿಗೂ ಅವನಿಂದ ನಿರಾಶರಾಗಿ ಹೋಗುತ್ತಿರಲಿಲ್ಲ. ಆದರೆ ಸ್ವತ: ಪಂಡಿತನೂ ಕವಿಯೂ ಆಗಿದ್ದ ಭೋಜ ಅವರನ್ನು ಒರೆಗೆ ಹಚ್ಚದೇ ಬಿಡುತ್ತಿರಲಿಲ್ಲ. ಒಂದಿನ ಒಬ್ಬ ಬ್ರಾಹ್ಮಣ ತನ್ನ ಪರಿವಾರದೊಂದಿಗೆ ಬಂದು ತನ್ನ ಪಾಂಡಿತ್ಯ ಪ್ರದರ್ಶನಕ್ಕೆ ಅವಕಾಶ ನೀಡಬೇಕೆಂದು ಬಿನ್ನವಿಸಿಕೊಂಡ. ಆಗಿನ ಕಾಲದಲ್ಲಿ ’ಸಮಸ್ಯಾಪೂರ್ತಿ’ಯು ಆಶುಕವಿತ್ವದ ನಿಕಷವಾಗಿತ್ತು. ಈ ಬ್ರಾಹ್ಮಣನ ಮುಂದೆಯೂ ಅಂತಹ ಒಂದು ಸಮಸ್ಯೆಯನ್ನು ಮುಂದಿಟ್ಟ. ಆ ಸಾಲು ’ಕ್ರಿಯಾಸಿದ್ಧಿಃ ಸತ್ತ್ವೇ ಭವತಿ ಮಹತಾಂ ನೋಪಕರಣೇ’ ಎಂಬುದಾಗಿತ್ತು.

ಆ ಬ್ರಾಹ್ಮಣ ಮಹಾಪಂಡಿತನೇ ಆಗಿದ್ದ. ಕೂಡಲೇ ಒಂದು ಪದ್ಯವನ್ನು ರಚಿಸಿ ಪಠಿಸಿದ.

ವಿಜೇತವ್ಯಾ ಲಂಕಾ ಚರಣತರಣೀಯೋ ಜಲನಿಧಿಃ
ವಿಪಕ್ಷಃ ಪೌಲಸ್ತ್ಯೋ ರಣಭುವಿ ಸಹಾಯಾಶ್ಚ ಕಪಯಃ |
ತಥಾಪ್ಯೇಕೋ ರಾಮಃ ಸಕಲಮವಧೀತ್ ರಾಕ್ಷಸಕುಲಂ
ಕ್ರಿಯಾಸಿದ್ಧಿಃ ಸತ್ತ್ವೇ ಭವತಿ ಮಹತಾಂ ನೋಪಕರಣೇ ||

(ಗೆಲ್ಲಬೇಕಾದದ್ದು ಲಂಕೆ, ದಾಟಬೇಕಾದದ್ದು ಸಮುದ್ರ, ವೈರಿಯಾದರೋ ಸಾಮಾನ್ಯನಲ್ಲ ಪುಲಸ್ತ್ಯವಂಶಜ. ಯುದ್ಧಭೂಮಿಯಲ್ಲಿ ಇವನಿಗೆ ಸಹಾಯಕರಾಗಿರುವವರು ಕಪಿಗಳು. ಆದರೂ ರಾಮ ಒಬ್ಬನೇ ರಾಕ್ಷಸಕುಲವನ್ನು ಸಂಪೂರ್ಣ ನಾಶಮಾಡಿದನು. ಮಹಾನುಭಾವರ ಕಾರ್ಯದ ಸಾಫಲ್ಯ ಅವರ ಸಾಮರ್ಥ್ಯವನ್ನು ಅವಲಂಬಿಸಿರುವುದೇ ಹೊರತು ಉಪಕರಣಗಳನ್ನಲ್ಲ.)

ಆ ಬ್ರಾಹ್ಮಣನ ಪ್ರತಿಭೆಗೆ ಭೋಜರಾಜ ತಲೆದೂಗುತ್ತಿರುವಾಗಲೇ ಅವನ ಬ್ರಾಹ್ಮಣಪತ್ನಿಯ ಬಾಯಿಂದ ಪದ್ಯವೊಂದು ಹೊರಬಿತ್ತು.

ಘಟೋ ಜನ್ಮಸ್ಥಾನಂ ಮೃಗಪರಿಜನೋ ಭೂರ್ಜವಸನೋ
ವನೇ ವಾಸಃ ಕಂದಾದಿಕಮಶನಮೇವಂವಿಧಗುಣಃ |
ಅಗಸ್ತ್ಯಃ ಪಾಥೋಧಿಂ ಯದಕೃತ ಕರಾಂಭೋಜಕುಹರೇ
ಕ್ರಿಯಾಸಿದ್ಧಿಃ ಸತ್ತ್ವೇ ಭವತಿ ಮಹತಾಂ ನೋಪಕರಣೇ ||

(ಜನ್ಮಸ್ಥಾನ ಕೊಡ. ಪ್ರಾಣಿಗಳೊಂದಿಗೆ ಒಡನಾಟ, ಹಾಕಿಕೊಳ್ಳಲು ಎಲೆಯ ವಸ್ತ್ರ, ಕಾಡಿನಲ್ಲಿ ವಾಸ, ಕಂದಮೂಲಗಳೇ ಆಹಾರ. ಇಂತಹ ಅಗಸ್ತ್ಯ ಸಮುದ್ರವನ್ನೇ ಆಪೋಶನ ತೆಗೆದುಕೊಂಡ. ಮಹಾನುಭಾವರ ಕಾರ್ಯದ ಸಾಫಲ್ಯ ಅವರ ಸಾಮರ್ಥ್ಯವನ್ನು ಅವಲಂಬಿಸಿರುವುದೇ ಹೊರತು ಉಪಕರಣಗಳನ್ನಲ್ಲ.)

ಸಾಮಾನ್ಯ ಗೃಹಿಣಿಯ ಬಾಯಿಂದ ಇಂತಹ ವಿದ್ವತ್ಪೂರ್ಣ ಪದ್ಯವನ್ನು ಕೇಳಿ ಆಶ್ಚರ್ಯಪಡುತ್ತಿರುವಷ್ಟರಲ್ಲಿ ಆ ಬ್ರಾಹ್ಮಣನ ಮಗನ ಮುಖದಿಂದ ಒಂದು ಪದ್ಯ ಬಾಣದಂತೆ ಭೋಜನತ್ತ ನುಗ್ಗಿತು.

ರಥಸ್ಯೈಕಂ ಚಕ್ರಂ ಭುಜಗಯಮಿತಾಃ ಸಪ್ತತುರಗಾಃ
ನಿರಾಲಂಬೋ ಮಾರ್ಗಃ ಚರಣವಿಕಲಃ ಸಾರಥಿರಪಿ |
ರವಿರ್ಯಾತ್ಯೇವಾಂತಂ ಪ್ರತಿದಿನಮಪಾರಸ್ಯ ನಭಸ:
ಕ್ರಿಯಾಸಿದ್ಧಿಃ ಸತ್ತ್ವೇ ಭವತಿ ಮಹತಾಂ ನೋಪಕರಣೇ ||

(ರಥಕ್ಕೆ ಒಂದೇ ಚಕ್ರ, ಏಳು ಕುದುರೆಗಳು (ಚಾಂಚಲ್ಯಕ್ಕೆ ಹೆಸರಾದವು). ಅವನ್ನು ನಿಯಂತ್ರಿಸುವ ಹಗ್ಗಗಳು (ವಕ್ರಗಾಮಿಗಳಾದ) ಹಾವುಗಳು. ಚಲಿಸುವ ಮಾರ್ಗ ನಿರಾಧಾರ, ಕುಂಟನಾದ ಸಾರಥಿ ಹೀಗಿದ್ದರೂ ಅಪಾರವಾದ ಆಕಾಶಮಾರ್ಗವನ್ನು ಸೂರ್ಯ ಪ್ರತಿದಿನ ಕ್ರಮಿಸುತ್ತಾನೆ. ಮಹಾನುಭಾವರ ಕಾರ್ಯದ ಸಾಫಲ್ಯ ಅವರ ಸಾಮರ್ಥ್ಯವನ್ನು ಅವಲಂಬಿಸಿರುವುದೇ ಹೊರತು ಉಪಕರಣಗಳನ್ನಲ್ಲ.)

ಇಲ್ಲಿಗೇ ಮುಗಿಯಿತೇನೋ ಅಂದುಕೊಂಡರೆ ಇಲ್ಲ. ಪಂಡಿತನ ಮಗಳು ಆರಂಭಿಸಿದಳು.

ಧನುಃ ಪೌಷ್ಪಂ ಮೌರ್ವೀ ಮಧುಕರಮಯೀ ಚಂಚಲದೃ-
ಶಾಂ ಕೊಣೋ ಬಾಣಃ ಸುಹೃದಪಿ ಜಡಾತ್ಮಾ ಹಿಮಕರಃ |
ತಥಾಪ್ಯೇಕೋಽನಂಗಃ ಭುವನಮಪಿ ವ್ಯಾಕುಲಯತೇ
ಕ್ರಿಯಾಸಿದ್ಧಿಃ ಸತ್ತ್ವೇ ಭವತಿ ಮಹತಾಂ ನೋಪಕರಣೇ ||

(ಹೂವಿನ ಬಿಲ್ಲು, ದುಂಬಿಗಳ ಸಾಲೇ ಅದಕ್ಕೆ ಬಿಗಿದ ಹಗ್ಗ, ಚಂಚಲ ಕಡೆಗಣ್ಣ ನೋಟವೇ ಬಾಣ. ಗೆಳೆಯನಾದರೋ ಜಡಾತ್ಮನಾದ ಚಂದ್ರ. ತಾನು ಸ್ವತ: ದೇಹವನ್ನು ಕಳೆದುಕೊಂಡ ಅನಂಗ. ಇಷ್ಟಿದ್ದರೂ ಇಡೀ ಲೋಕವನ್ನೇ ಪ್ರೇಮವ್ಯಾಕುಲತೆಗೆ ತಳ್ಳುತ್ತಾನೆ.

ಸಂಪೂರ್ಣ ಕುಟುಂಬದ ಪ್ರತಿಭಾವಿಲಾಸವನ್ನು ನೋಡಿ ಭೋಜನ ಹೃದಯತುಂಬಿ ಬಂತು. ಅವರಿಗೆ ಧನ, ಕನಕ ರತ್ನಗಳ ಮಳೆ ಹರಿಸಿದ ಎಂಬುದನ್ನು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲವಷ್ಟೆ.

📝 *ಮಹಾಬಲ ಭಟ್, ಗೋವಾ*

# ಸಂಸ್ಕೃತ ಕಲಿಯಿರಿ, ಸಂಸ್ಕೃತಿ ತಿಳಿಯಿರಿ

   

No comments:

नारायण महादेव धोनि

 असङ्ख्यानां वीरयोधानां जन्मभूमिः इयं भारतमाता। अतः एव कश्चन कविः कवयति 'वन्ध्या न भारतजननी शूरसुतानां जन्मभूमिः' इति। प्रायेण सार्ध...