Thursday, August 31, 2017

ಸಂಸ್ಕೃತ ಪ್ರಪಂಚದ ರಸಪ್ರಸಂಗಗಳು* ಪ್ರಸಂಗ – ೨೪ *ದೇಹಿ ಪದಪಲ್ಲವಮುದಾರಮ್*

*ಸಂಸ್ಕೃತ ಪ್ರಪಂಚದ ರಸಪ್ರಸಂಗಗಳು*

ಪ್ರಸಂಗ – ೨೪

*ದೇಹಿ ಪದಪಲ್ಲವಮುದಾರಮ್*

ಹನ್ನೆರಡನೆಯ ಶತಮಾನದಲ್ಲಿ ವಂಗದೇಶದ ಲಕ್ಷ್ಮಣಸೇನನ ಆಸ್ಥಾನಕವಿಯಾಗಿದ್ದ ಜಯದೇವ ತನ್ನ ’ಗೀತಗೋವಿಂದಮ್’ ಕಾವ್ಯದ ಮೂಲಕ ಆಚಂದ್ರಾರ್ಕಕೀರ್ತಿಯನ್ನು ಗಳಿಸಿದ್ದಾನೆ. ಆತ ತನ್ನ ಕಾವ್ಯರಚನೆಯಲ್ಲಿ ತೊಡಗಿದ್ದಾಗ ನಡೆದ ಒಂದು ಘಟನೆ.

ರಾಧಾಕೃಷ್ಣರ ಪ್ರೇಮವೇ ಜಯದೇವನ ಗೀತಗೋವಿಂದದ ಮುಖ್ಯವಸ್ತು. ಕೃಷ್ಣರಾಧೆಯರ ಪ್ರೇಮದ ಕುರಿತಾದ ಮುಂದಿನ ಎಲ್ಲ ಸಾಹಿತ್ಯಕ್ಕೆ ಈ ಕಾವ್ಯವೇ ಪ್ರೇರಣೆಯಾಗಿ ನಿಂತಿದೆ. ಈ ಕಾವ್ಯದಲ್ಲಿ ಕೃಷ್ಣನಿಗೆ ರಾಧೆಯ ಮೇಲಿರುವ ಪ್ರೇಮದ ಪರಾಕಾಷ್ಠತೆಯನ್ನು ವರ್ಣಿಸುತ್ತ ಹೀಗೆ ಬರೆಯುತ್ತಾನೆ-

ಸ್ಮರಗರಲಖಂಡನಂ
ಮಮ ಶಿರಸಿ ಮಂಡನಂ
ದೇಹಿ ಪದಪಲ್ಲವಮುದಾರಮ್ |
ಜ್ವಲತಿ ಮಯಿ ದಾರುಣೋ
ಮದನಕಲನಾನಲೋ
ಹರತು ತದುಪಾಹಿತವಿಕಾರಮ್ ||

ಮನ್ಮಥನೆಂಬ ವಿಷವನ್ನು ತೊಲಗಿಸುವ ಮೃದುವಾದ ನಿನ್ನ ಪಾದಗಳನ್ನು ನನ್ನ ತಲೆಯ ಮೇಲಿರಿಸು. ನನ್ನೊಳಗೆ ಕಾಮಾಗ್ನಿ ಸುಡುತ್ತಿದೆ. ಅದರ ಪರಿಣಾಮವನ್ನು ಶಾಂತಗೊಳಿಸು.

ಬರೆದ ಮೇಲೆ ಅವನಿಗೆ ಅನಿಸಿತು –’ದೇವನಾಗಿರುವ ಕೃಷ್ಣ ರಾಧೆಯಲ್ಲಿ ಅವಳ ಪಾದವನ್ನು ತನ್ನ ತಲೆಯ ಮೇಲೆ ಇರಿಸು ಎನ್ನುವಂತೆ ಬರೆಯುವುದು ಅವನ ದೇವತ್ವಕ್ಕೆ ಬಗೆವ ಅಪಚಾರ ಅಲ್ಲವೆ?’  ಹೀಗೆಂದು ಯೋಚಿಸಿ ತಾನು ಬರೆದ ಹಾಳೆಯನ್ನು ಹರಿದು ಹಾಕಿದ. ಆಗಲೇ ಬ್ರಾಹ್ಮೀ ಮುಹೂರ್ತ ಸಮೀಪಿಸಿದ್ದರಿಂದ ಬರೆಯುವುದನ್ನು ನಿಲ್ಲಿಸಿ ಸ್ನಾನಕ್ಕೆಂದು ನದಿಗೆ ತೆರಳಿದ.

ಕೆಲವೇ ಕ್ಷಣಗಳಲ್ಲಿ ಹಿಂದಿರುಗಿದ ಪತಿಯನ್ನು ನೋಡಿ ಜಯದೇವನ ಪತ್ನಿಗೆ ಆಶ್ಚರ್ಯವಾಯಿತು. ’ಸ್ನಾನಕ್ಕೆ ಹೋಗಿಲ್ಲವೆ?’ ಎಂದು ಪ್ರಶ್ನಿಸಿದಳು. ’ಅಕಸ್ಮಾತ್ ಕಾವ್ಯದ ಸಾಲೊಂದು ಸ್ಫುರಿಸಿತು. ಬರೆದು ಹೋಗೋಣವೆಂದು ಬಂದೆ' ಎಂದು ಭೂರ್ಜಪತ್ರವನ್ನೂ ಲೇಖನಿಯನ್ನೂ ತೆಗೆದುಕೊಂಡು ಬರೆಯತೊಡಗಿದ. ಬರೆದು ಮುಗಿಸಿ ಮತ್ತೆ ಸ್ನಾನಕ್ಕೆ ತೆರಳಿದ. ಸ್ನಾನ ಮುಗಿಸಿ ಬಂದ ಜಯದೇವ ನಿತ್ಯಾಹ್ನಿಕಗಳನ್ನು ಮುಗಿಸಿ ಬರೆಯಲು ಕೂತಾಗ ನೋಡುತ್ತಾನೆ – ಹಿಂದಿನ ದಿನ ಹರಿದು ಹಾಕಿದ್ದ ಕವಿತೆ ಪೀಠದ ಮೇಲಿತ್ತು. ಆಶ್ಚರ್ಯಗೊಂಡು ಪತ್ನಿಯನ್ನು ಪ್ರಶ್ನಿಸಿದಾಗ ಅವಳು ’ನೀವೇ ಕೆಲ ಸಮಯದ ಹಿಂದೆ ಬಂದು ಏನೋ ಬರೆದು ಹೋದಿರಲ್ಲ’ ಎಂದಳು. ಜಯದೇವ ತನ್ನ ಕಿವಿಯನ್ನೇ ತಾನು ನಂಬದಾದ. ’ತಾನು ಬಂದೇ ಇಲ್ಲ, ಆದದ್ದಾದರೂ ಏನು?’ ಎಂದು ಯೋಚಿಸಿದ. ಶ್ರೀಕೃಷ್ಣನೇ ತನ್ನ ರೂಪದಲ್ಲಿ ಬಂದು ಹೀಗೆ ಬರೆದು ಹೋಗಿದ್ದಾನೆ ಎಂದು ಅರಿಯಲು ಬಹಳ ಸಮಯ ಹಿಡಿಯಲಿಲ್ಲ. ತಾನು ಬರೆಯಲು ಹಿಂಜರಿದ ಸಾಲನ್ನು ಭಗವಂತನೇ ಒಪ್ಪಿಕೊಂಡಿದ್ದಾನೆ ಎಂದು ತಿಳಿದು ಆನಂದತುಂದಿಲನಾದ. ಇಂದಿಗೂ ಆ ಸಾಲು ರಾಧಾಕೃಷ್ಣರ ಅಗಾಧ ಪ್ರೇಮದ ಕುರುಹಾಗಿ ಅಮರವಾಗಿದೆ.

📝 *ಮಹಾಬಲ ಭಟ್, ಗೋವಾ*

# ಸಂಸ್ಕೃತ ಕಲಿಯಿರಿ, ಸಂಸ್ಕೃತಿ ತಿಳಿಯಿರಿ.

No comments:

नारायण महादेव धोनि

 असङ्ख्यानां वीरयोधानां जन्मभूमिः इयं भारतमाता। अतः एव कश्चन कविः कवयति 'वन्ध्या न भारतजननी शूरसुतानां जन्मभूमिः' इति। प्रायेण सार्ध...