Tuesday, August 8, 2017

ಸಂಸ್ಕೃತ ಪ್ರಪಂಚದ ರಸಪ್ರಸಂಗಗಳು* ಪ್ರಸಂಗ – ೮ *ದಿಲ್ಲೀಶ್ವರೋ ವಾ ಜಗದೀಶ್ವರೋ ವಾ.....*

ಸಂಸ್ಕೃತ ಸಪ್ತಾಹ ನಿಮಿತ್ತ ವಿಶಿಷ್ಟ ಲೇಖನ ಸರಣಿ

*ಸಂಸ್ಕೃತ ಪ್ರಪಂಚದ ರಸಪ್ರಸಂಗಗಳು*

ಪ್ರಸಂಗ – ೮

*ದಿಲ್ಲೀಶ್ವರೋ ವಾ ಜಗದೀಶ್ವರೋ ವಾ.....*

ಸಂಸ್ಕೃತ ಸಾಹಿತ್ಯಪ್ರಪಂಚದಲ್ಲಿ ’ಪಂಡಿತರಾಜ’ ಎಂಬ ಖ್ಯಾತಿಗೆ ಪಾತ್ರನಾದ ಘನ ವಿದ್ವಾಂಸ ಜಗನ್ನಾಥ ಪಂಡಿತ. ಮೊಘಲ್ ದೊರೆ ಷಾಹಜಾನನ ಆಸ್ಥಾನಪಂಡಿತನಾಗಿ ತನ್ನ ಹರಿತ ಪಾಂಡಿತ್ಯದಿಂದ ವಿರೋಧಿಗಳಿಗೆ ಸಿಂಹಸ್ವಪ್ನನಾಗಿದ್ದ. ಮೊಘಲರ ದರಬಾರಿನಲ್ಲೇ ಇಸ್ಲಾಂ ಮತವನ್ನು ಖಂಡಿಸಬಲ್ಲ ಜಗಜಟ್ಟಿಯಾಗಿದ್ದ. ಷಾಹಜಹಾನ್ ಹಾಗೂ ಅವನ ಪುತ್ರ ದಾರಾಷುಕೋ ಅವನನ್ನು ಆದರದಿಂದ ನೋಡಿಕೊಳ್ಳುತ್ತಿದ್ದರು. ಪರಿಸರದ ಪ್ರಭಾವದಿಂದ ’ಲವಂಗಿ’ ಎಂಬ ಮುಸ್ಲಿಂ ತರುಣಿಯಲ್ಲಿ ಅನುರಕ್ತನಾಗಿ ಮದುವೆಯಾದ. ಪಂಡಿತರಾಜ ಜಗನ್ನಾಥನನ್ನು ಜನರು ಲವಂಗೀಜಗನ್ನಾಥ ಎಂದು ಕರೆಯುವಷ್ಟು ಅವಳಲ್ಲಿ ಅನುರಕ್ತನಾಗಿದ್ದ. ಅವಳೇ ಅವನ ಕಾವ್ಯಕನ್ನಿಕೆಯಾದಳು.

ಯವನೀ ನವನೀತಕೋಮಲಾಂಗೀ
ಶಯನೀಯೇ ಯದಿ ಲಭ್ಯತೇ ಕದಾಚಿತ್ |
ಅವನೀತಲಮೇವ ಸಾಧು ಮನ್ಯೇ
ನಾವನೀ ಮಾಘವನೀ ವಿನೋದಹೇತುಃ ||

ಬೆಣ್ಣೆಯಂತಹ ಕೋಮಲ ದೇಹವುಳ್ಳ ಯವನತರುಣಿ ಹಾಸಿಗೆಯಲ್ಲಿ ಸಿಗುವುದಾದರೆ ಸ್ವರ್ಗಕ್ಕಿಂತ ಭೂಮಿಯೇ ಮೇಲು ಎಂದು ಕವನಿಸಿದ ಮಹಾತ್ಮ ಅವನು!

ಷಹಜಹಾನನ ಆಶ್ರಯ ಅವನಿಗೆ ಅಪಾರ ಸಂಪತ್ತನ್ನು ಒದಗಿಸಿತ್ತು. ಜಗನ್ನಾಥ ಆಶ್ರಯಕ್ಕಾಗಿ ಅಲೆದಾಡುತ್ತಿದ್ದಾಗ ತಿರಸ್ಕರಿಸಿದ ಹಿಂದೂ ರಾಜರು ಅವನು ಕೀರ್ತಿಯನ್ನು ಗಳಿಸಿದ ಮೇಲೆ ತಮ್ಮ ಆಸ್ಥಾನಕ್ಕೆ ಬರಬೇಕೆಂದು ಒತ್ತಾಯಿಸುತ್ತಿದ್ದರು. ಅಂಥವರಲ್ಲಿ ನೇಪಾಳ ಮಹಾರಾಜ ವೀರವಿಕ್ರಮನೂ ಒಬ್ಬ. ತನ್ನ ಆಸ್ಥಾನಪಂಡಿತನನ್ನೇ ಜಗನ್ನಾಥನನ್ನು ಸೆಳೆಯಲು ಪತ್ರದೊಂದಿಗೆ ಕಳಿಸಿದ್ದ. ಯವನರ ಮುಂದೆ ಕೈಚಾಚುವುದನ್ನು ಬಿಟ್ಟು ಹಿಂದೂ ರಾಜನ ಆಸ್ಥಾನವನ್ನು ಅಲಂಕರಿಸಿ ಸ್ವಾಭಿಮಾನಿಯಾಗು ಮುಂತಾಗಿ ದೀರ್ಘವಾದ ಪತ್ರವನ್ನೇ ಬರೆದಿದ್ದ. ಅದನ್ನು ಓದಿದ ಜಗನ್ನಾಥ ಒಂದೇ ಕವನದ ಮೂಲಕ ತನ್ನ ಮನದಿಂಗಿತವನ್ನು ಅರುಹಿದ.

ದಿಲ್ಲೀಶ್ವರೋ ವಾ ಜಗದೀಶ್ವರೋ ವಾ
ಮನೋರಥಂ ಮೇ ಪೂರಯಿತುಂ ಸಮರ್ಥಃ |
ಅನ್ಯೇನ ರಾಜ್ಞಾ ಪರಿದೀಯಮಾನಂ
ಶಾಕಾಯ ವಾ ಸ್ಯಾತ್ ಲವಣಾಯ ವಾ ಸ್ಯಾತ್ ||

ನನ್ನ ಆವಶ್ಯಕತೆಯನ್ನು ಪೂರೈಸಲು ದಿಲ್ಲೀಶ್ವರ ಮತ್ತು  ಜಗದೀಶ್ವರ ಇಬ್ಬರೇ ಸಮರ್ಥರು. ಅನ್ಯ ರಾಜರಿಂದ ಕೊಡಲ್ಪಡುವ ಹಣವು ನನ್ನ ತರಕಾರಿಗೋ ಉಪ್ಪಿಗೋ ಸಾಕಾಗಬಹುದು.

ಇದು ಜಗನ್ನಾಥನ ಸ್ವಾಭಿಮಾನವೋ, ನಿಷ್ಠೆಯೋ, ಭೋಗಲಾಲಸೆಯೋ ಆ ಜಗನ್ನಾಥನೇ ಬಲ್ಲ.

(ಮಾಹಿತಿ ಕೃಪೆ: ಶ್ರೀ ಪದ್ಮನಾಭ ಸೋಮಯಾಜಿಯವರ ‘ಪಂಡಿತರಾಜ ಜಗನ್ನಾಥ’ ಕೃತಿ)

📝 *ಮಹಾಬಲ ಭಟ್, ಗೋವಾ*

# ಸಂಸ್ಕೃತ ಕಲಿಯಿರಿ, ಸಂಸ್ಕೃತಿ ತಿಳಿಯಿರಿ

No comments:

नारायण महादेव धोनि

 असङ्ख्यानां वीरयोधानां जन्मभूमिः इयं भारतमाता। अतः एव कश्चन कविः कवयति 'वन्ध्या न भारतजननी शूरसुतानां जन्मभूमिः' इति। प्रायेण सार्ध...