Monday, August 7, 2017

ಸಂಸ್ಕೃತ ಪ್ರಪಂಚದ ರಸಪ್ರಸಂಗಗಳು* ಪ್ರಸಂಗ – ೭ *ಕವಯಾಮಿ ವಯಾಮಿ ಯಾಮಿ*

ಸಂಸ್ಕೃತ ಸಪ್ತಾಹ ನಿಮಿತ್ತ ವಿಶಿಷ್ಟ ಲೇಖನ ಸರಣಿ

*ಸಂಸ್ಕೃತ ಪ್ರಪಂಚದ ರಸಪ್ರಸಂಗಗಳು*

ಪ್ರಸಂಗ – ೭

*ಕವಯಾಮಿ ವಯಾಮಿ ಯಾಮಿ*

ಭೋಜರಾಜನ ಭವ್ಯ ಆಸ್ಥಾನ. ಸಿಂಹಾಸನದ ಮೇಲೆ ವಿರಾಜಮಾನನಾಗಿದ್ದಾನೆ ಮಹಾರಾಜ. ನವರತ್ನಗಳೂ ಯಥೋಚಿತ ಆಸನಗಳನ್ನು ಭೂಷಿಸಿದ್ದಾರೆ. ಆಶ್ರಯವನ್ನು ಬಯಸಿ ಬಂದ ಪಂಡಿತರನ್ನು ಎಂದೂ ಹಿಂದೆ ಕಳಿಸಿದವನಲ್ಲ ಧಾರಾ ನರೇಶ. ಅಂದೂ ಒಬ್ಬ ಘನವಿದ್ವಾಂಸ ಆಸ್ಥಾನವನ್ನು ಪ್ರವೇಶಿಸಿ ತನ್ನ ವಿದ್ವತ್ತನ್ನು ಪ್ರದರ್ಶಿಸಿದ. ಸುಪ್ರೀತನಾದ ಭೋಜರಾಜ ಆ ಪಂಡಿತನಿಗೆ ವಾಸ ವ್ಯವಸ್ಥೆಯನ್ನು ಮಾಡುವಂತೆ ಮಂತ್ರಿಗಳಿಗೆ ಆಜ್ಞಾಪಿಸಿದ. ಮಂತ್ರಿಗಳು ನಗರದಲ್ಲೆಲ್ಲ ಸುತ್ತಾಡಿ ಎಲ್ಲಿಯೂ ಮನೆ ಇಲ್ಲವೆಂದು ಅರುಹಿದರು. ಅದನ್ನರಿತ ರಾಜ ನಗರದಲ್ಲಿರುವ ನಿರಕ್ಷರನನ್ನು ಅವನ ಮನೆಯಿಂದ ಹೊರ ಹಾಕಿ ಆ ಮನೆಯಲ್ಲಿ ಪಂಡಿತನ ವಾಸವ್ಯವಸ್ಥೆಯನ್ನು ಮಾಡಲು ಆದೇಶಿಸಿದ. ಮಂತ್ರಿಗಳು ಮತ್ತೆ ನಗರವನ್ನು ಸುತ್ತಿ ಬಂದರು. ಈಗಲೂ ಆಗಿದ್ದು ನಿರಾಶೆಯೇ. ಆ ಮಹಾಪಂಡಿತನನ್ನು ಹಿಂದಕ್ಕೆ ಕಳಿಸಲು ಭೋಜರಾಜನಿಗೆ ಮನಸ್ಸಿರಲಿಲ್ಲ. ಈಗ ಹೊಸ ಆದೇಶವನ್ನು ಹೊರಡಿಸಿದ. ಯಾರು ಪದ್ಯ ರಚನೆಯನ್ನು ಮಾಡಲು ಅಸಮರ್ಥರೋ ಅವನನ್ನು ಮನೆಯಿಂದ ಹೊರ ಹಾಕಿ ಅಲ್ಲಿ ಪಂಡಿತನ ವಾಸಕ್ಕೆ ಅನುವುಮಾಡಿ ಎಂದು ಮಂತ್ರಿಗಳನ್ನು ಕಳಿಸಿದ. ಮಂತ್ರಿಗಳು ಮತ್ತೆ ಹುಡುಕಿದರು. ಸುಲಭಕ್ಕೆ ಸಿಗಲಿಲ್ಲ. ಕೊನೆಯಲ್ಲಿ ನೇಕಾರನೊಬ್ಬನ ಮನೆಯನ್ನು ಹೊಕ್ಕರು. ಪದ್ಯರಚನೆ ಮಾಡಬಲ್ಲೆಯಾ? ಎಂದು ಅವನನ್ನು ಕೇಳಿದರು. ಅವನು ’ನಾನೊಬ್ಬ ನೇಕಾರ ಸ್ವಾಮಿ. ವಸ್ತ್ರವನ್ನು ನೇಯ್ದು ಮಾರಾಟಮಾಡಿ ಬದುಕು ಸಾಗಿಸುತ್ತಿದ್ದೇನೆ. ಕವನವನ್ನು ರಚಿಸುವ ಶಕ್ತಿ ನನಗೆಲ್ಲಿ ಬರಬೇಕು?’ ಎಂದ. ’ಹಾಗಾದರೆ ಹೊರಡು ಮನೆ ಬಿಟ್ಟು’ ಅಂದರು ಮಂತ್ರಿಗಳು. ನೇಕಾರ ದಿಗ್ಭ್ರಾಂತನಾದ. ’ಬೇಡ ಸ್ವಾಮಿ! ಬಡವ ನಾನು. ಹೇಗಾದರೂ ಬದುಕಿಕೊಳ್ಳುತ್ತೇನೆ. ದಯೆ ತೋರಿ’ ಎಂದು ಅಂಗಲಾಚಿದ. ಮಂತ್ರಿಗಳು ರಾಜಾಜ್ಞೆಗೆ ಕಟ್ಟು ಬಿದ್ದಿದ್ದರು. ’ಅದೇನಿದ್ದರೂ ರಾಜನಿಗೇ ಹೇಳು’ ಎಂದು ಆಸ್ಥಾನಕ್ಕೆ ಎಳೆತಂದರು. ’ಏನಪ್ಪ! ನೇಕಾರ! ಕವಿತೆಯನ್ನು ರಚಿಸುತ್ತೀಯಾ?’ ಎಂದು ಕೇಳಿದ ರಾಜ. ತನ್ನ ಮನೆಯನ್ನು ಉಳಿಸಿಕೊಳ್ಳಲು ಕವಿತೆಯನ್ನು ರಚಿಸುವುದು ಅನಿವಾರ್ಯವಾಗಿತ್ತು.

ಕಾವ್ಯಂ ಕರೋಮಿ ನ ಹಿ ಚಾರುತರಂ ಕರೋಮಿ
ಯತ್ನಾತ್ ಕರೋಮಿ ಯದಿ ಚಾರುತರಂ ಕರೋಮಿ |
ಭೂಪಾಲಮೌಲಿಮಣಿಮಂಡಿತಪಾದಪೀಠ
ಹೇ ಸಾಹಸಾಂಕ! ಕವಯಾಮಿ ವಯಾಮಿ ಯಾಮಿ ||

ಕವಿತೆಯನ್ನು ರಚಿಸಬಲ್ಲೆ, ಆದರೆ ಸುಂದರವಾಗದು. ಸ್ವಲ್ಪ ಹೆಚ್ಚು ಪ್ರಯತ್ನಿಸಿದರೆ ಸುಂದರವಾಗಬಲ್ಲದು. ಅರಸರ ತಲೆಯ ಮುಕುಟಮಣಿಗಳಿಂದ ಅಲಂಕೃತವಾದ ಪಾದಪೀಠವನ್ನು ಹೊಂದಿರುವ ಹೇ ಸಾಹಸಿಯೇ, ನಾನು ಕವನಿಸುತ್ತೇನೆ, ನೇಯುತ್ತೇನೆ, ಹೋಗುತ್ತೇನೆ.

’ಕವಯಾಮಿ ವಯಾಮಿ ಯಾಮಿ’ ಎಂಬಲ್ಲಿನ ಶಬ್ದ ಚಮತ್ಕಾರವನ್ನು ಗಮನಿಸಿ. ಅನುವಾದದಲ್ಲಿ ಆ ಚಮತ್ಕಾರ ಬರಲು ಸಾಧ್ಯವಿಲ್ಲ. ಸಾಮಾನ್ಯ ನೇಕಾರನೊಬ್ಬನ ಬಾಯಿಯಿಂದ ಇಂತಹ ಚಮತ್ಕಾರಪೂರ್ಣ ಕವಿತೆಯನ್ನು ಕೇಳಿ ಭೋಜರಾಜನಿಗೆ ಅತ್ಯಾನಂದವಾಯಿತು. ಅವನನ್ನು ಸಮ್ಮಾನಿಸಿದ. ಪಂಡಿತನಿಗೆ ಹೊಸ ಮನೆಯನ್ನು ನಿರ್ಮಿಸಿಕೊಡಲು ಆಜ್ಞಾಪಿಸಿದ.

ಹೀಗಿತ್ತು ನಮ್ಮ ಹನ್ನೊಂದನೆಯ ಶತಮಾನದ ಭಾರತ. ಸಾಮಾನ್ಯ ಪ್ರಜೆಗಳೂ ಸಂಸ್ಕೃತದಲ್ಲಿ ಮಾತನಾಡುವುದಷ್ಟೇ ಅಲ್ಲ, ಕಾವ್ಯರಚನೆಯಲ್ಲೂ ಸಮರ್ಥರಾಗಿದ್ದರು.

📝 *ಮಹಾಬಲ ಭಟ್, ಗೋವಾ*
# ಸಂಸ್ಕೃತ ಕಲಿಯಿರಿ, ಸಂಸ್ಕೃತಿ ತಿಳಿಯಿರಿ
*# ಅದ್ಯ ಸಂಸ್ಕೃತದಿನಮ್*

No comments:

नारायण महादेव धोनि

 असङ्ख्यानां वीरयोधानां जन्मभूमिः इयं भारतमाता। अतः एव कश्चन कविः कवयति 'वन्ध्या न भारतजननी शूरसुतानां जन्मभूमिः' इति। प्रायेण सार्ध...