Monday, August 7, 2017

ಸಂಸ್ಕೃತ ಪ್ರಪಂಚದ ರಸಪ್ರಸಂಗಗಳು - ಪ್ರಸಂಗ – ೬ ಶ್ವಶುರಗೃಹನಿವಾಸಃ......

ಸಂಸ್ಕೃತ ಸಪ್ತಾಹ ನಿಮಿತ್ತ ವಿಶಿಷ್ಟ ಲೇಖನ ಸರಣಿ
ಸಂಸ್ಕೃತ ಪ್ರಪಂಚದ ರಸಪ್ರಸಂಗಗಳು
ಪ್ರಸಂಗ – ೬

ಶ್ವಶುರಗೃಹನಿವಾಸಃ......
ಭಾರವಿ ಸಂಸ್ಕೃತದ ಮಹಾಕಾವ್ಯಕರ್ತೃಗಳಲ್ಲಿ ಒಬ್ಬ. ಅವನ ಮೊದಲ ಹೆಸರು ದಾಮೋದರ ಎಂದಾಗಿತ್ತು. ಅವನು ಕಲಿಕೆಯಲ್ಲಿ ಹಿಂದುಳಿದವನಲ್ಲ. ಆದರೂ ಅವನ ತಂದೆ ಯಾವಾಗಲೂ ಅವನನ್ನು ಹೆಡ್ಡನೆಂದು ಬಯ್ಯುತ್ತಿದ್ದ. ದಿನವೂ ಮೂದಲಿಕೆಯನ್ನು ಕೇಳಿ ದಾಮೋದರ ಬೇಸತ್ತು ಹೋಗಿದ್ದ. ಒಂದಿನ ಅವನ ಸಹನೆಯ ಕಟ್ಟೆಯೊಡೆದು ತಂದೆಯನ್ನು ಕೊಲ್ಲಬೇಕೆಂದು ನಿರ್ಧರಿಸಿದ. ಒಂದು ದೊಡ್ಡದಾದ ಶಿಲೆಯನ್ನು ತೆಗೆದುಕೊಂಡು ಅಟ್ಟದ ಮೇಲೆ ಅಡಗಿ ಕುಳಿತ. ತಂದೆ ಮಲಗಿದಾಗ ಅದನ್ನು ಅವನ ತಲೆಯ ಮೇಲೆ ಎಸೆದು ಕೊಲ್ಲಬೇಕೆಂಬುದು ಅವನ ಹವಣಿಕೆಯಾಗಿತ್ತು. ಆದರೆ ಮಲಗುವಾಗ ತಂದೆ ದಾಮೋದರನ ತಾಯಿಯಲ್ಲಿ ಮಗನನ್ನು ಬಾಯ್ತುಂಬಾ ಹೊಗಳಿದ. ’ಪರೋಕ್ಷೇ ತನಯಾಃ ಸ್ತುತ್ಯಾ’ ಎಂಬ ಸೂತ್ರವನ್ನು ತಂದೆ ಅನುಸರಿಸುತ್ತಿದ್ದಾನೆ ಎಂದು ದಾಮೋದರ ಅರಿತ. ತಕ್ಷಣ ಕೆಳಗಿಳಿದು ಬಂದು ತಂದೆಯಲ್ಲಿ ಕ್ಷಮೆ ಕೇಳಿದ. ಇಂತಹ ಕ್ರೂರ ಆಲೋಚನೆಗೆ ಯಾವ ಶಿಕ್ಷೆ ಎಂದು ತಂದೆಯನ್ನೇ ಕೇಳಿದ. ಆಗ ತಂದೆಯು ’ ಆರು ತಿಂಗಳುಗಳ ಕಾಲ ಮಾವನ ಮನೆಯಲ್ಲಿ ವಾಸವಾಗಿರು’ ಎಂದು ಹೇಳಿದ. ದಾಮೋದರನಿಗೆ ಆಶ್ಚರ್ಯವಾಯಿತು. ಮಾವನ ಮನೆಯಲ್ಲಿ ಸಿಗುವ ರಾಜೋಪಚಾರವನ್ನು ನೆನೆದು ಇದು ಶಿಕ್ಷೆಯಲ್ಲ ವರ ಎಂದು ಸಂತಸದಿಂದ ಮಾವನ ಮನೆಗೆ ತೆರಳಿದ. ಒಂದಿನ ಕಳೆಯಿತು, ಎರಡು ದಿನ ಕಳೆಯಿತು..... ಒಂದು ವಾರ ಕಳೆಯುವಷ್ಟರಲ್ಲಿ ಶಿಕ್ಷೆಯ ಅನುಭವವಾಗುತ್ತ ಬಂತು. ಅಕ ಮಣೆ, ತಕ ಮಣೆ ತಾ ಮಣೆ (ಇದು ಗ್ರಾಮ್ಯ ಭಾಷೆ. ಶಿಷ್ಟ ಭಾಷೆಯಲ್ಲಿ ಹಾಕು ಮಣೆ-ನೂಕುಮಣೆ-ತಳ್ಳುಮಣೆ) ಪ್ರಯೋಗವಾಯಿತು. ಆಗ ಅವನ ಕವಿಹೃದಯ ಶ್ಲೋಕರೂಪದಲ್ಲಿ ಗೋಳಿಟ್ಟಿತು.

ಶ್ವಶುರಗೃಹನಿವಾಸಃ ಸ್ವರ್ಗತುಲ್ಯೋ ನರಾಣಾಂ
ಯದಿ ವಸತಿ ದಿನಾನಿ ತ್ರೀಣಿ ಪಂಚಾಥ ಸಪ್ತ |
ಮಧುದಧಿಘೃತಧಾರಾಕ್ಷೀರಸಾರಪ್ರವಾಹಃ
ತದುಪರಿ ದಿನಮೇಕಂ ಪಾದರಕ್ಷಾಪ್ರಹಾರಃ ||

ಮಾವನಮನೆಯ ವಾಸ ಸ್ವರ್ಗವಾಸದಂತೆ. ಮೂರೋ, ಐದೋ, ಏಳು ದಿನವೋ ಉಳಿದರೆ ಹರಿಯುವುದು ಜೇನು, ಮೊಸರು, ತುಪ್ಪ, ಹಾಲುಗಳ ಪ್ರವಾಹ. ಅದರಮೇಲೆ ಒಂದು ದಿನ ಉಳಿದರೂ ಸಿಗುವುದು ಪಾದರಕ್ಷೆಯ ಪ್ರಹಾರ!


ಗಂಡಸರು ಯೋಚಿಸಬೇಕಾದ್ದು!   

No comments:

नारायण महादेव धोनि

 असङ्ख्यानां वीरयोधानां जन्मभूमिः इयं भारतमाता। अतः एव कश्चन कविः कवयति 'वन्ध्या न भारतजननी शूरसुतानां जन्मभूमिः' इति। प्रायेण सार्ध...