Sunday, August 13, 2017

ಸಂಸ್ಕೃತ ಪ್ರಪಂಚದ ರಸಪ್ರಸಂಗಗಳು* ಪ್ರಸಂಗ – ೧೩ *ಭೋಜನಂ ದೇಹಿ ರಾಜೇಂದ್ರ!*

*ಸಂಸ್ಕೃತ ಪ್ರಪಂಚದ ರಸಪ್ರಸಂಗಗಳು*

ಪ್ರಸಂಗ – ೧೩

*ಭೋಜನಂ ದೇಹಿ ರಾಜೇಂದ್ರ!*

ಕವಿಗಳೆಂದರೆ ತನ್ನ ಪ್ರಾಣವೆಂದು ತಿಳಿದಿದ್ದ ಭೋಜರಾಜ ಒಮ್ಮೆ ’ಅಕ್ಷರಲಕ್ಷ’ ಎಂಬ ಯೋಜನೆಯನ್ನು ಜಾರಿಗೆ ತಂದ. ಯಾರಾದರೂ ಸುಂದರ ಕವನವನ್ನು ರಚಿಸಿ ತಂದರೆ ಒಂದು ಅಕ್ಷರಕ್ಕೆ ಒಂದು ಲಕ್ಷ ಹೊನ್ನನ್ನು ನೀಡುವ ಯೋಜನೆ ಅದು. ಅದನ್ನು ತಿಳಿದ ಒಬ್ಬ ಪ್ರತಿಭಾವಿಹೀನ ಕವಿ ಹೇಗಾದರೂ ರಾಜನ ಕೃಪಾದೃಷ್ಟಿಗೆ ಪಾತ್ರನಾಗಬೇಕೆಂದು ಕಷ್ಟಪಟ್ಟು ಶ್ಲೋಕದ ಎರಡು ಚರಣಗಳನ್ನು ರಚಿಸಿದ. ’ಭೋಜನಂ ದೇಹಿ ರಾಜೇಂದ್ರ! ಘೃತಸೂಪಸಮನ್ವಿತಮ್’ – ಮಹಾರಾಜ! ತುಪ್ಪ ಹಾಗೂ ಸಾರುಗಳಿಂದ ಕೂಡಿದ ಊಟವನ್ನು ನೀಡು’. ಮುಂದೇನು ಬರೆಯಬೇಕೆಂದು ಎಷ್ಟು ಯೋಚಿಸಿದರೂ ಹೊಳೆಯಲಿಲ್ಲ. ಕಾಳಿದಾಸನ ಮನೆಗೆ ಓಡಿದ. ಕಾಳಿದಾಸ ತಕ್ಷಣ ಅವನಿಗೆ ಶ್ಲೋಕದ ದ್ವಿತೀಯಾರ್ಧವನ್ನು ರಚಿಸಿಕೊಟ್ಟ.

ಮರುದಿನ ರಾಜ ಸಭೆಯನ್ನು ಪ್ರವೇಶಿಸಿದ ಆ ಪಂಡಿತ ಶ್ಲೋಕವನ್ನು ಪಠಿಸಿದ.

ಭೋಜನಂ ದೇಹಿ ರಾಜೇಂದ್ರ!
ಘೃತಸೂಪಸಮನ್ವಿತಮ್ |
ಮಾಹಿಷಂ ಚ ಶರಚ್ಚಂದ್ರ-
ಚಂದ್ರಿಕಾಧವಲಂ ದಧಿ ||

(ಮಹಾರಾಜ! ತುಪ್ಪ, ಸಾರು ಹಾಗೂ ಶರತ್ಕಾಲದ ಬೆಳದಿಂಗಳಂತೆ ಬಿಳಿಯಾಗಿರುವ ಎಮ್ಮೆಯ ಮೊಸರು ಇವುಗಳಿಂದ ಕೂಡಿದ ಊಟವನ್ನು ನೀಡು.)

ರಾಜನು ಇದನ್ನು ಕೇಳಿ ಸಂತುಷ್ಟನಾಗಿ ಆ ಕವಿಗೆ ೧೬ ಲಕ್ಷ ಹೊನ್ನು ಕೊಡುವಂತೆ ಕೋಶಾಧಿಕಾರಿಯನ್ನು ಆಜ್ಞಾಪಿಸಿದ. ಕವಿಗೆ ಆಶ್ಚರ್ಯವಾಯಿತು. ಪದ್ಯ ಅನುಷ್ಟುಪ್ ಛಂದಸ್ಸಿನಲ್ಲಿದೆ. ೩೨ ಅಕ್ಷರಗಳಿವೆ, ಹಾಗಾಗಿ ೩೨ ಲಕ್ಷ ಬರಬೇಡವೇ ಎಂದ. ಅದಕ್ಕೆ ರಾಜ ’ಮೊದಲಾರ್ಧ ಮಾತ್ರ ನಿನ್ನದು ತಾನೆ? ಮೊಸರನ್ನು ಕೊಡೆಂದು ಕೇಳಿದವನು ಕಾಳಿದಾಸನಲ್ಲವೆ?’ ಎಂದು ನಕ್ಕ. ಸ್ವತ: ಕವಿಯಾದ ಭೋಜನಿಗೆ ಮೊದಲ ಹಾಗೂ ಎರಡನೆಯ ಸಾಲುಗಳ ಮಧ್ಯೆ ಇರುವ ಅಗಾಧ ವ್ಯತ್ಯಾಸ ತಿಳಿಯದಿದ್ದೀತೆ?
📝 *ಮಹಾಬಲ ಭಟ್, ಗೋವಾ*
#ಸಂಸ್ಕೃತ ಕಲಿಯಿರಿ, ಸಂಸ್ಕೃತಿ ತಿಳಿಯಿರಿ.

No comments:

नारायण महादेव धोनि

 असङ्ख्यानां वीरयोधानां जन्मभूमिः इयं भारतमाता। अतः एव कश्चन कविः कवयति 'वन्ध्या न भारतजननी शूरसुतानां जन्मभूमिः' इति। प्रायेण सार्ध...