Wednesday, August 16, 2017

ಸಂಸ್ಕೃತ ಪ್ರಪಂಚದ ರಸಪ್ರಸಂಗಗಳು* ಪ್ರಸಂಗ – ೧೪ *ಬೃಹತ್ಕಥೆಯ ಕಥೆ*

*ಸಂಸ್ಕೃತ ಪ್ರಪಂಚದ ರಸಪ್ರಸಂಗಗಳು*

ಪ್ರಸಂಗ – ೧೪

*ಬೃಹತ್ಕಥೆಯ ಕಥೆ*

ದಕ್ಷಿಣಾಪಥದ ಸಾತವಾಹನ ರಾಜನೊಮ್ಮೆ ತನ್ನ ರಾಣಿಯರೊಡನೆ ಜಲಕ್ರೀಡೆಗೆ ಹೊರಟ. ಒಬ್ಬರಿಗೊಬ್ಬರು ನೀರನ್ನೆರಚಿಕೊಳ್ಳುತ್ತಿರುವಾಗ ಪಟ್ಟದ ರಾಣಿಯು ’ಮೋದಕೈಸ್ತಾಡಯ, ಮೋದಕೈಸ್ತಾಡಯ’ ಎಂದಳು. ರಾಣಿ ಹೇಳಿದ ಮೇಲೆ ತಡವೆ? ರಾಜ ಅರಮನೆಯಿಂದ ಮೋದಕಗಳನ್ನು ತರಿಸಿ ರಾಣಿಯ ಮೇಲೆ ಎಸೆಯತೊಡಗಿದ. ರಾಜನ ಅಜ್ಞಾನವನ್ನು ನೋಡಿ ರಾಣಿಯರೆಲ್ಲ ನಗಹತ್ತಿದರು. ರಾಜನಿಗೆ ಆಶ್ಚರ್ಯವಾಯಿತು. ಆಗ ಹಿರಿಯರಾಣಿ ವಿವರಿಸಿದಳು ’ಮೋದಕೈಸ್ತಾಡಯ ಎಂಬುದನ್ನು ಮಾ+ಉದಕೈಃ+ತಾಡಯ ಎಂದು ವಿಗ್ರಹಿಸಿದಾಗ ನೀರಿನಿಂದ ಹೊಡೆಯಬೇಡ ಎಂದರ್ಥವಾಗುತ್ತದೆ’ ಎಂದಳು. ರಾಜನು ರಾಣಿಯರ ಮುಂದೆ ಆದ ಅವಮಾನದಿಂದ ಕುಗ್ಗಿ ಹೋದ. ಅವನ ಆಸ್ಥಾನದಲ್ಲಿ ಗುಣಾಢ್ಯ ಎಂಬ ಸಂಸ್ಕೃತ ಪಂಡಿತನಿದ್ದ. ತನಗೆ ಸಂಸ್ಕೃತ ಕಲಿಸುವಂತೆ ರಾಜ ಅವನನ್ನು ವಿನಂತಿಸಿಕೊಂಡ. ಅವನಾದರೋ ರಾಜನನ್ನು ಸಂಸ್ಕೃತಜ್ಞನನ್ನಾಗಿ ಮಾಡಲು ಆರು ವರ್ಷಗಳು ಬೇಕೆಂದ. ಅಲ್ಲಿಯೇ ಇದ್ದ ಕಾತಂತ್ರ ಎಂಬ ವ್ಯಾಕರಣವನ್ನು ಬರೆದ ಶರ್ವವರ್ಮಾ ಎಂಬ ವಿದ್ವಾಂಸ ತಾನು ೬ ತಿಂಗಳಲ್ಲಿ ಕಲಿಸಬಲ್ಲೆ ಎಂದ. ಗುಣಾಢ್ಯನು ಅದು ಸಾಧ್ಯವೇ ಇಲ್ಲ ಎಂದು ವಾದಿಸಿ ಪ್ರತಿಜ್ಞೆ ಗೈದ. ’ಶರ್ವವರ್ಮಾ ಆರು ತಿಂಗಳಲ್ಲಿ ರಾಜನನ್ನು ಸಂಸ್ಕೃತಪಂಡಿತನನ್ನಾಗಿ ಮಾಡಿದರೆ ನಾನು ಸಂಸ್ಕೃತ, ಪ್ರಾಕೃತ ಮುಂತಾದ ಪ್ರಸಿದ್ಧ ಭಾಷೆಗಳಲ್ಲಿ ಬರೆಯುವುದನ್ನೇ ನಿಲ್ಲಿಸುತ್ತೇನೆ’.

ಸ್ಪರ್ಧೆ ಆರಂಭವಾಯಿತು. ರಾಣಿಯರ ಮುಂದೆ ಆದ ಅವಮಾನವು ರಾಜನಲ್ಲಿ ಕಲಿಯುವ ತುಡಿತವನ್ನು ತೀವ್ರಗೊಳಿಸಿತ್ತು. ಶರ್ವವರ್ಮನ ಚಾಕಚಕ್ಯತೆಯೂ ಅದಕ್ಕೆ ಸೇರಿ ಆರೇ ತಿಂಗಳಲ್ಲಿ ರಾಜ ಸಂಸ್ಕೃತಭಾಷೆಯಲ್ಲಿ ಪ್ರಭುತ್ವವನ್ನು ಸಾಧಿಸಿದ. ಗುಣಾಢ್ಯ ಸ್ಪರ್ಧೆಯಲ್ಲಿ ಸೋತು ವಿಂಧ್ಯಾಟವಿಯನ್ನು ಸೇರಿ ಅಲ್ಲಿಯೇ ಪೈಶಾಚ ಭಾಷೆಯಲ್ಲಿ ಏಳು ಲಕ್ಷ ಶ್ಲೋಕಗಳ ’ಬೃಹತ್ಕಥಾ’  ಎಂಬ ಗ್ರಂಥವನ್ನು ಬರೆದು ಶಿಷ್ಯರ ಮೂಲಕ ರಾಜನಿಗೆ ಕಳಿಸಿಕೊಟ್ಟ. ರಾಜ ಅದನ್ನು ಆದರಿಸಲಿಲ್ಲ. ಅದರಿಂದ ಖಿನ್ನನಾದ ಗುಣಾಢ್ಯ ಅರಣ್ಯವಾಸಿಗಳಿಗೆ ತನ್ನ ಕಾವ್ಯವನ್ನು ಕೇಳಿಸಿ ಅಗ್ನಿಯಲ್ಲಿ ಹಾಕಲು ಆರಂಭಿಸಿದ. ಯಾರದೋ ಮೂಲಕ ಆ ಗ್ರಂಥದ ಮಹತ್ತ್ವವನ್ನು ಅರಿತ ಭೂಪತಿಯು ಅಲ್ಲಿಗೆ ತಲುಪುವಷ್ಟರಲ್ಲಿ ಕೇವಲ ಏಳನೆಯ ಒಂದಂಶ ಅಂದರೆ ಒಂದು ಲಕ್ಷ ಶ್ಲೋಕಗಳ ಭಾಗ ಮಾತ್ರ ಉಳಿದುಕೊಂಡಿತ್ತು.

ನಂತರ ಕ್ಷೇಮೇಂದ್ರನೆಂಬ ಕವಿ ’ಬೃಹತ್ಕಥಾಮಂಜರೀ’ ಎಂಬ ಹೆಸರಿನಲ್ಲಿ ಈ ಗ್ರಂಥವನ್ನು ಸಂಸ್ಕೃತದಲ್ಲಿ ಅನುವಾದಿಸಿದ. ಸೋಮದೇವ ಬರೆದ ಕಥಾಸರಿತ್ಸಾಗರದಲ್ಲಿ ಈ ಕಥೆ ವರ್ಣಿಸಲ್ಪಟ್ಟಿದೆ.

(ಮಾಹಿತಿ ಕೃಪೆ: ವಿಕಿಪೀಡಿಯಾ)

📝 *ಮಹಾಬಲ ಭಟ್, ಗೋವಾ*

# ಸಂಸ್ಕೃತ ಕಲಿಯಿರಿ, ಸಂಸ್ಕೃತಿ ತಿಳಿಯಿರಿ

No comments:

नारायण महादेव धोनि

 असङ्ख्यानां वीरयोधानां जन्मभूमिः इयं भारतमाता। अतः एव कश्चन कविः कवयति 'वन्ध्या न भारतजननी शूरसुतानां जन्मभूमिः' इति। प्रायेण सार्ध...