Friday, August 18, 2017

ಸಂಸ್ಕೃತ ಪ್ರಪಂಚದ ರಸಪ್ರಸಂಗಗಳು* ಪ್ರಸಂಗ – ೧೫ *ಬಾಧತಿ – ಬಾಧತೇ*

*ಸಂಸ್ಕೃತ ಪ್ರಪಂಚದ ರಸಪ್ರಸಂಗಗಳು*

ಪ್ರಸಂಗ – ೧೫

*ಬಾಧತಿ – ಬಾಧತೇ*

ಒಬ್ಬ ಮಹಾಪಂಡಿತ ದೂರ ದೇಶದಿಂದ ಧಾರಾನಗರಕ್ಕೆ ಆಗಮಿಸಿದ್ದ. ನಗರದ ಹೊರವಲಯಕ್ಕೆ ಆಗಮಿಸಿದ ಅವನು ’ತನ್ನನ್ನು ನಿನ್ನ ಆಸ್ಥಾನದ ವಿದ್ವಾಂಸರೇ ಪಲ್ಲಕ್ಕಿಯಲ್ಲಿ ಹೊತ್ತುಕೊಂಡು ಅರಮನೆಗೆ ಒಯ್ಯಬೇಕು’ ಎಂದು ರಾಜನಿಗೆ ಸಂದೇಶ ಕಳಿಸಿದ. ಪಂಡಿತನ ಕೀರ್ತಿಯನ್ನು ಕೇಳಿದ್ದ ಮಹಾರಾಜ ಆಗಲೆಂದು ಒಪ್ಪಿ ಕಾಳಿದಾಸಾದಿ ಕವಿಗಳನ್ನು ಪಲ್ಲಕ್ಕಿಯೊಂದಿಗೆ ಕಳಿಸಿದ. ಅದು ಛಳಿಗಾಲದ ಸಮಯ. ಕವಿಗಳಿಗೆ ಪಲ್ಲಕ್ಕಿಯನ್ನು ಹೊತ್ತು ಅಭ್ಯಾಸವೂ ಇಲ್ಲ. ನಡುಗುತ್ತಿದ್ದ ಕವಿಗಳು ಹೊತ್ತಿದ್ದ ಪಲ್ಲಕ್ಕಿ ಕುಲುಕಾಡುತ್ತಿತ್ತು. ಒಳಗೆ ಸುಖವಾಗಿ ಕುಳಿತಿದ್ದ ಪಂಡಿತನಿಗೆ ಅದು ಕಿರಿಕಿರಿಯಾಗುತ್ತಿತ್ತು. ಅವನು ಗರ್ವದಿಂದ ಕೇಳಿದ – ’ಶೀತಂ ಬಾಧತಿ ಕಿಮ್?’ ತಕ್ಷಣ ಪಲ್ಲಕ್ಕಿಯನ್ನು ಹೊತ್ತಿದ್ದ ಕಾಳಿದಾಸ ಉತ್ತರಿಸಿದ – ’ನ ತಥಾ ಬಾಧತೇ ಶೀತಂ ಯಥಾ ಬಾಧತಿ ಬಾಧತೇ’

ಧಾತುಗಳಲ್ಲಿ ಆತ್ಮನೇಪದಿ, ಪರಸ್ಮೈಪದಿ, ಉಭಯಪದಿ ಎಂದು ಮೂರು ವಿಧಗಳಿವೆ. ’ಬಾಧ್’ ಧಾತು ಆತ್ಮನೇಪದಿಯಾದ್ದರಿಂದ ಬಾಧತಿ ಎಂಬುದು ತಪ್ಪು ರೂಪ. ಬಾಧತೇ ಎಂಬುದು ಸರಿಯಾದ ರೂಪ. ಪಂಡಿತನ ಪ್ರಶ್ನೆ ವ್ಯಾಕರಣರೀತ್ಯಾ ಅಶುದ್ಧವಾಗಿತ್ತು. ಕಾಳಿದಾಸ ಮಾರ್ಮಿಕವಾಗಿ ’ನಿಮ್ಮ ಬಾಧತಿ ಪದ ಬಾಧಿಸುವಷ್ಟು ಛಳಿ ಬಾಧಿಸುತ್ತಿಲ್ಲ’ ಎಂದು ಪಂಡಿತನಿಗೆ ಛಡಿಯೇಟು ನೀಡಿದ್ದ.

ಪಂಡಿತನ ಗರ್ವ ಜರ್ರನೆ ಇಳಿಯಿತು. ಅವನು ಪಲ್ಲಕ್ಕಿಯಿಂದ ಇಳಿದ. ಕಾಳಿದಾಸನಿಗೆ ಸಾಷ್ಟಾಂಗ ನಮಸ್ಕಾರ ಹಾಕಿದ. ಎಲ್ಲರೂ ನಡೆದು ಅರಮನೆ ಸೇರಿದರು.

ಕಾಂಚಿ ಮಠದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಸಂಸ್ಕೃತದ ಮಹತ್ತ್ವವನ್ನು ವರ್ಣಿಸುತ್ತ ವಿದೇಶಾಂಗ ವ್ಯವಹಾರ ಮಂತ್ರಿ ಶ್ರೀಮತೀ ಸುಷ್ಮಾ ಸ್ವರಾಜ್ ಈ ಘಟನೆಯನ್ನು ಬೇರೆ ರೀತಿಯಲ್ಲಿ ನಿರೂಪಿಸಿದ್ದಾರೆ. ಬೇಟೆಗೆಂದು ಕಾಡಿಗೆ ಹೋಗಿದ್ದ ರಾಜ ಅಲ್ಲಿ ಕಟ್ಟಿಗೆಯ ಹೊರೆಯನ್ನು ಹೊತ್ತು ಕಷ್ಟದಿಂದ ಸಾಗುತ್ತಿದ್ದ ವೃದ್ಧನೊಬ್ಬನನ್ನು ನೋಡಿ ‘ಭಾರಃ ಬಾಧತಿ ಕಿಮ್?’ ಎಂದು ಪ್ರಶ್ನಿಸುತ್ತಾನೆ. ಆಗ ಆ ವೃದ್ಧ ಪ್ರಜೆ ‘ಭಾರೋ ನ ಬಾಧತೇ ರಾಜನ್! ತವ ಬಾಧತಿ ಬಾಧತೇ’ ಎಂದು ಹೇಳುತ್ತಾನೆ.

📝 *ಮಹಾಬಲ ಭಟ್, ಗೋವಾ*
# ಸಂಸ್ಕೃತ ಕಲಿಯಿರಿ, ಸಂಸ್ಕೃತಿ ತಿಳಿಯಿರಿ.

No comments:

नारायण महादेव धोनि

 असङ्ख्यानां वीरयोधानां जन्मभूमिः इयं भारतमाता। अतः एव कश्चन कविः कवयति 'वन्ध्या न भारतजननी शूरसुतानां जन्मभूमिः' इति। प्रायेण सार्ध...