Friday, August 18, 2017

ಸಂಸ್ಕೃತ ಪ್ರಪಂಚದ ರಸಪ್ರಸಂಗಗಳು* ಪ್ರಸಂಗ – ೧೬ *ಸರ್ವಶುಕ್ಲಾ ಸರಸ್ವತೀ*

*ಸಂಸ್ಕೃತ ಪ್ರಪಂಚದ ರಸಪ್ರಸಂಗಗಳು*

ಪ್ರಸಂಗ – ೧೬

*ಸರ್ವಶುಕ್ಲಾ ಸರಸ್ವತೀ*

ಕರ್ಣಾಟಕದ ಚಾಲುಕ್ಯವಂಶದ ಇಮ್ಮಡಿ ಪುಲಿಕೇಶಿಯ ಸೊಸೆಯಾಗಿದ್ದ ವಿಜಯಾಂಬಿಕೆ ಅಥವಾ ವಿಜ್ಜಿಕೆ ಸಂಸ್ಕೃತ ಕವಯಿತ್ರಿಯರಲ್ಲಿ ಅಗ್ರಗಣ್ಯಳಾಗಿದ್ದಳು. ಅವಳ ’ಕೌಮುದೀಮಹೋತ್ಸವ’ ಎಂಬ ನಾಟಕ ಭಾಗಶಃ ಸಿಕ್ಕಿದೆ. ವಿಜ್ಜಿಕೆಗೆ ತನ್ನ ಪಾಂಡಿತ್ಯದ ಬಗ್ಗೆ ತುಂಬು ಅಭಿಮಾನವಿತ್ತು. ಅವಳಲ್ಲಿ ಯಾರೋ ಒಮ್ಮೆ ನಿಮ್ಮ ಮೆಚ್ಚಿನ ಕವಿಗಳಾರು ಎಂದು ಪ್ರಶ್ನೆ ಮಾಡಿದಾಗ ಹೇಳಿದ್ದಳು-

ಏಕೋಽಭೂನ್ನಲಿನಾತ್ತತಶ್ಚ ಪುಲಿನಾದ್ವಲ್ಮೀಕತಶ್ಚಾಪರಃ
ತೇ ಸರ್ವೇ ಭವಂತಿ ಕವಯಸ್ತೇಭ್ಯೋ ನಮಸ್ಕುರ್ಮಹೇ |
ಅರ್ವಾಂಚೋ ಯದಿ ಗದ್ಯಪದ್ಯರಚನೈಶ್ಚೇಷ್ಟಾಂ ಚ ಮತ್ಕುರ್ವತೇ
ತೇಷಾಂ ಮೂರ್ಧ್ನಿ ದಧಾಮಿ ವಾಮಚರಣಂ ಕರ್ಣಾಟರಾಜಪ್ರಿಯಾ ||

ಕಮಲದಿಂದ ಹುಟ್ಟಿದ ಬ್ರಹ್ಮ, ಮರಳಿನಿಂದ ಹುಟ್ಟಿದ ವ್ಯಾಸ, ಹುತ್ತದಿಂದ ಹುಟ್ಟಿದ ವಾಲ್ಮೀಕಿ ಇವರು ಮಾತ್ರ ಕವಿಗಳು. ಅವರನ್ನು ಬಿಟ್ಟು ಹೊಸಬರಾರಾದರೂ ತಾವು ಕವಿಗಳೆಂದು ಚೇಷ್ಟೆ ಮಾಡಿದರೆ ಅವರ ತಲೆಯ ಮೇಲೆ ನನ್ನ ಎಡಗಾಲನ್ನಿರಿಸುತ್ತೇನೆ.

ಇದು ಧಾರ್ಷ್ಟ್ಯವೋ ಸ್ವಾಭಿಮಾನದ ಪರಾಕಾಷ್ಠತೆಯೋ ಗೊತ್ತಿಲ್ಲ.

ದಂಡಿಯೆಂಬ ಗದ್ಯಕವಿಚಕ್ರವರ್ತಿ ತನ್ನ ಕಾವ್ಯಾದರ್ಶ ಎಂಬ ಲಕ್ಷಣಗ್ರಂಥದ ಮಂಗಲಾಚರಣೆಯನ್ನು ಹೀಗೆ ಮಾಡಿದ್ದ.

ಚತುರ್ಮುಖಮುಖಾಂಭೋಜ
ವನಹಂಸವಧೂರ್ಮಮ |
ಮಾನಸೇ ರಮತಾಂ ನಿತ್ಯಂ
ಸರ್ವಶುಕ್ಲಾಸರಸ್ವತಿ ||

ಚತುರ್ಮುಖ ಬ್ರಹ್ಮನ ಮುಖಕಮಲಗಳ ಕೊಳದಲ್ಲಿ ವಿಹರಿಸುವ ಹಂಸಿಯಾಗಿರುವ, ಸಂಪೂರ್ನವಾಗಿ ಶುಭ್ರವರ್ಣವುಳ್ಳ ಸರಸ್ವತಿಯು ನನ್ನ (ಮಾನಸ ಸರಸ್ಸಿನಂತಿರುವ) ಮನಸ್ಸಿನಲ್ಲಿ ರಮಿಸಲಿ.

ಈ ಪದ್ಯವನ್ನು ಓದಿದ ವಿಜಯ ಭಟ್ಟಾರಿಕೆ ಹೀಗೆಂದು ಬರೆದಳು.

ನೀಲೋತ್ಪಲದಲಶ್ಯಾಮಾಂ
ವಿಜ್ಜಿಕಾಂ ಮಾಮಜಾನತಾ |
ವೃಥೈವ ದಂಡಿನಾ ಪ್ರೋಕ್ತಂ
ಸರ್ವಶುಕ್ಲಾ ಸರಸ್ವತೀ ||

’ಕೆನ್ನೈದಿಲೆಯ ಬಣ್ಣವನ್ನು ಹೊಂದಿದ ನನ್ನನ್ನು ತಿಳಿಯದೆ ದಂಡಿಯು ವ್ಯರ್ಥವಾಗಿ ಸರಸ್ವತಿಯು ಶುಭ್ರವರ್ಣದವಳು ಎಂದು ಹೇಳಿದ್ದಾನೆ’. ಅವಳ ಮಾತಿನಲ್ಲಿರುವ ಮೊನಚು ನಿಮಗರ್ಥವಾಗಿರಬೇಕು. ತನ್ನನ್ನು ಸಾಕ್ಷಾತ್ ಸರಸ್ವತಿ ಎಂದು ಹೇಳಿಕೊಳ್ಳುವ ಅವಳ ಸ್ವಾಭಿಮಾನಕ್ಕೆ ಎಣೆಯುಂಟೆ?

📝 *ಮಹಾಬಲ ಭಟ್, ಗೋವಾ*

# ಸಂಸ್ಕೃತ ಕಲಿಯಿರಿ, ಸಂಸ್ಕೃತಿ ತಿಳಿಯಿರಿ

No comments:

नारायण महादेव धोनि

 असङ्ख्यानां वीरयोधानां जन्मभूमिः इयं भारतमाता। अतः एव कश्चन कविः कवयति 'वन्ध्या न भारतजननी शूरसुतानां जन्मभूमिः' इति। प्रायेण सार्ध...