Friday, August 18, 2017

ಸಂಸ್ಕೃತ ಪ್ರಪಂಚದ ರಸಪ್ರಸಂಗಗಳು* ಪ್ರಸಂಗ – ೧೭ *ಠಾಠಂ ಠಠಂ ಠಂ ಠಠಠಂ ಠ ಠಂ ಠ:*

*ಸಂಸ್ಕೃತ ಪ್ರಪಂಚದ ರಸಪ್ರಸಂಗಗಳು*

ಪ್ರಸಂಗ – ೧೭

*ಠಾಠಂ ಠಠಂ ಠಂ ಠಠಠಂ ಠ ಠಂ ಠ:*

ಭೋಜರಾಜನೊಮ್ಮೆ ತನ್ನ ಅರಮನೆಯ ಅಟ್ಟದಲ್ಲಿ ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದ. ಅಲ್ಲಿಗೆ ಸಮೀಪದಲ್ಲೇ ಇರುವ ಕೆರೆಗೆ ಒಬ್ಬಳು ಯುವತಿ ಕೊಡ ಹಿಡಿದು ಬಂದಳು. ತಳಕುತ್ತ ಬಳಕುತ್ತ ಸರೋವರದ ಮೆಟ್ಟಿಲನ್ನು ಇಳಿಯುತ್ತಿರುವಾಗ ಅವಳ ಕೈಯಿಂದ ಕೊಡ ಜಾರಿ ಹೋಯಿತು. ಒಂದೊಂದೇ ಮೆಟ್ಟಿಲನ್ನು ತಾಕಿ ಸರೋವರಕ್ಕೆ ಬೀಳುವಾಗ ಅದು ”ಠಾಠಂ ಠಠಂ ಠಂ ಠಠಠಂ ಠ ಠಂ ಠ:’ ಎಂದು ಲಯಬದ್ಧವಾಗಿ ಶಬ್ದ ಮಾಡಿತು. ಅದನ್ನು ಕೇಳಿದ ಭೋಜರಾಜ ಆ ಸಾಲನ್ನಿಟ್ಟುಕೊಂಡು ಕವಿತೆಯನ್ನು ರಚಿಸುವಂತೆ ತನ್ನ ಆಸ್ಥಾನದ ಕವಿಗಳಿಗೆ ಸವಾಲು ಹಾಕಿದ. ಯಾರಿಗೂ ಸಂದರ್ಭ ಅರ್ಥವಾಗಲಿಲ್ಲ. ಕಾಳಿದಾಸ ಎರಡು ದಿನಗಳ ಅವಧಿಯನ್ನು ಬೇಡಿದ.

ಆ ಎರಡು ದಿನಗಳಲ್ಲಿ ಭೋಜರಾಜನ ದಿನಚರಿಯನ್ನು ಕಾಳಿದಾಸ ಸೂಕ್ಷ್ಮವಾಗಿ ಅವಲೋಕಿಸಿದ. ಸಾಯಂಕಾಲ ಭೋಜರಾಜ ಸರೋವರದ ಕಡೆ ಆಸಕ್ತಿಯಿಂದ ನೋಡುವುದನ್ನೂ ಅಲ್ಲಿಗೆ ನೀರನ್ನು ತೆಗೆದುಕೊಂಡು ಹೋಗಲು ಯುವತಿಯರು ಬರುವುದನ್ನೂ ಗಮನಿಸಿದ. ಅದರ ಆಧಾರದ ಮೇಲೆ ಮರುದಿನ ಪದ್ಯವೊಂದನ್ನು ರಚಿಸಿ ಪಠಿಸಿದ.

ರಾಮಾಭಿಷೇಕೇ ಜಲಮಾಹರನ್ತ್ಯಾ:
ಹಸ್ತಾಚ್ಯುತೋ ಹೇಮಘಟೋ ಯುವತ್ಯಾ:|
ಸೋಪಾನಮಾರ್ಗೇ ಸ ಕರೋತಿ ಶಬ್ದಂ
ಠಾಠಂ ಠಠಂ ಠಂ ಠಠಠಂ ಠ ಠಂ ಠ: ||

(ಮೊದಲ ಸಾಲಿನ ’ರಾಜ್ಯಾಭಿಷೇಕೇ ಮದವಿಹ್ವಲಾಯಾ:’ ಎಂಬ ಪಾಠಾಂತರವೂ ಇದೆ.)

ರಾಮಾಭಿಷೇಕದಲಿ ನೀರ ಸೇದಲು ಬಂದ
ರಮಣಿಯ ಕೈಯಿಂದ ಜಾರಿತ್ತು ಚಿನ್ನದ ಕೊಡ |
ಮೆಟ್ಟಿಲಿನ ಹಾದಿಯಲಿ ನುಡಿಯುತ್ತ ಸಾಗಿತ್ತು
ಠಾಠಂ ಠಠಂ ಠಂ ಠಠಠಂ ಠ ಠಂ ಠ: ||

(ಅನುವಾದ ಲೇಖಕನದ್ದು)

ರಾಮನ ರಾಜ್ಯಾಭಿಷೇಕ ಸಂದರ್ಭದಲ್ಲಿ ನೀರನ್ನು ತೆಗೆದುಕೊಂಡು ಹೋಗಲು ಬಂದ ಯುವತಿಯ ಕೈಯಿಂದ ಜಾರಿದ ಚಿನ್ನದ ಕೊಡ ಮೆಟ್ಟಿಲಿನ ಹಾದಿಯಲ್ಲಿ ಹೀಗೆ ಶಬ್ದ ಮಾಡುತ್ತಿತ್ತು.

ಭೋಜರಾಜ ಸಂತುಷ್ಟನಾಗಿ ಕಾಳಿದಾಸನನ್ನು ಸತ್ಕರಿಸಿದ.

📝 *ಮಹಾಬಲ ಭಟ್, ಗೋವಾ*

# ಸಂಸ್ಕೃತ ಕಲಿಯಿರಿ, ಸಂಸ್ಕೃತಿ ತಿಳಿಯಿರಿ

No comments:

नारायण महादेव धोनि

 असङ्ख्यानां वीरयोधानां जन्मभूमिः इयं भारतमाता। अतः एव कश्चन कविः कवयति 'वन्ध्या न भारतजननी शूरसुतानां जन्मभूमिः' इति। प्रायेण सार्ध...