Friday, August 18, 2017

ಸಂಸ್ಕೃತ ಪ್ರಪಂಚದ ರಸಪ್ರಸಂಗಗಳು* ಪ್ರಸಂಗ – ೧೮ *ರಾಮವೈರಿಭಗಿನೀವ ರಾಜಸೇ!*

*ಸಂಸ್ಕೃತ ಪ್ರಪಂಚದ ರಸಪ್ರಸಂಗಗಳು*

ಪ್ರಸಂಗ – ೧೮

*ರಾಮವೈರಿಭಗಿನೀವ ರಾಜಸೇ!*

ಕೋಲಾಚಲ ಮಲ್ಲಿನಾಥನ ಕಥೆಯನ್ನು ಹಿಂದೆ ಓದಿದ್ದೀರಿ. ಸದಾ ಮಹಾಕಾವ್ಯಗಳ ಅನುಸಂಧಾನ ಮಾಡುತ್ತ ಕಾವ್ಯಕನ್ನಿಕೆಯರ ವರ್ಣನೆಯಲ್ಲಿಯೇ ಮುಳುಗಿ ಹೋಗುತ್ತಿದ್ದ ಮಲ್ಲಿನಾಥನ ಮೇಲೆ ಅವನ ಪತ್ನಿಗೆ ತುಸು ಕೋಪ. ಒಮ್ಮೆ ಕೇಳಿಯೇ ಬಿಡುತ್ತಾಳೆ ‘ನನ್ನನ್ನು ನೀವು ಯಾವಾಗಲೂ ವರ್ಣಿಸುವುದೇ ಇಲ್ಲವಲ್ಲ’ ಎಂದು ಕೇಳಿಯೇ ಬಿಟ್ಟಳು. ಮಲ್ಲಿನಾಥ ನಗುತ್ತ ಅವಳಿಗಾಗಿ ಒಂದು ವಿಶೇಷ ಪದ್ಯವನ್ನು ರಚಿಸಿ ಪಠಿಸಿದ.

ತಿಂತ್ರಿಣೀದಲಸಮಾನಲೋಚನೇ!
ದೇವದುಂದುಭಿ ಸಮಾನಮಧ್ಯಮೇ!
ಅರ್ಕಶುಷ್ಕಫಲವಧ್ವನಸ್ತನಿ!
ರಾಮವೈರಿಭಗಿನೀವ ರಾಜಸೇ ||

ಹುಣಸೆ ಎಲೆಯಂತಹ ಕಣ್ಣುಳ್ಳವಳೇ, ದೇವಾಲಯದ ನಗಾರಿಯಂತಹ ಸೊಂಟವುಳ್ಳವಳೇ, ಒಣಗಿದ ಎಕ್ಕೆಯ ಕಾಯಿಯಂತಹ ಎದೆಯನ್ನುಳ್ಳವಳೇ, ರಾಮನ ವೈರಿ(ರಾವಣನ)ಯ ಸೋದರಿಯಂತೆ ತೋರುತ್ತಿರುವೆ.

ಆ ದಿನ ಪಂಡಿತನಿಗೆ ಮನೆಯಲ್ಲಿ ಊಟ ಸಿಕ್ಕಿತೋ, ಇಲ್ಲ ಅಡಿಗೆ ಮನೆಯಲ್ಲಿ ಪಾತ್ರೆಗಳು ಮಾತನಾಡಿದವೋ ದೇವರೇ ಬಲ್ಲ !

ಆದರೆ, ಕೆಲ ದಿನಗಳಲ್ಲೇ ಗಂಡನ ಮೇಲೆ ಮುಯ್ಯಿ ತೀರಿಸಿಕೊಳ್ಳುವ ಅವಕಾಶ ಆ ಗೃಹಿಣಿಗೆ ಒದಗಿತು. ಮಹಾಕಾವ್ಯಗಳಿಗೆ ವ್ಯಾಖ್ಯಾನವನ್ನು ಬರೆಯುತ್ತ ಯಾವಾಗಲೂ ’ಇತ್ಯರ್ಥಃ’, ’ಇತಿ ಭಾವಃ’ ಎಂಬ ಶಬ್ದಗಳನ್ನು ಉಪಯೋಗಿಸುತ್ತ ರೂಢಿ ಬಲದಿಂದ ಕೆಲವೊಮ್ಮೆ ವ್ಯವಹಾರದಲ್ಲೂ ಅವನ್ನೇ ಹೇಳುತ್ತಿದ್ದ ಪಂಡಿತ ಒಂದಿನ ‘ಇಂದು ಏನು ಅಡಿಗೆ?’ ಎಂದು ಹೆಂಡತಿಯನ್ನು ಕೇಳಿಬಿಟ್ಟ. ಇಂತಹ ಸಂದರ್ಭಕ್ಕಾಗಿ ಕಾಯುತ್ತಿದ್ದ ಆ ಪತ್ನಿ ಕೊಟ್ಟ ಉತ್ತರವನ್ನು ನೋಡಿ-

ಇತ್ಯರ್ಥಕ್ವಥಿತಂ ಚೈವೇ-
ತಿಭಾವತೇಮನಮ್ ತಥಾ |
ಸಜ್ಜೀಕೃತೇಽದ್ಯ ಭುಕ್ತ್ಯರ್ಥಂ
ತುಷ್ಯತಾಂ ಭವದಾಶಯಃ ||

ಇತ್ಯರ್ಥ ಎಂಬ ಸಾರನ್ನೂ, ಇತಿ ಭಾವಃ ಎಂಬ ಮಜ್ಜಿಗೆ ಹುಳಿಯನ್ನೂ ಮಾಡಿದ್ದೇನೆ. ತಿಂದು ತೃಪ್ತರಾಗಿ.

ಈ ದಂಪತಿಗಳ ಕಾವ್ಯಾನುಲಾಪ ಸರಸ ಅನುಕರಣಯೋಗ್ಯವಲ್ಲವೆ?

📝 *ಮಹಾಬಲ ಭಟ್, ಗೋವಾ*

# ಸಂಸ್ಕೃತ ಕಲಿಯಿರಿ, ಸಂಸ್ಕೃತಿ ತಿಳಿಯಿರಿ.

No comments:

नारायण महादेव धोनि

 असङ्ख्यानां वीरयोधानां जन्मभूमिः इयं भारतमाता। अतः एव कश्चन कविः कवयति 'वन्ध्या न भारतजननी शूरसुतानां जन्मभूमिः' इति। प्रायेण सार्ध...