Sunday, August 20, 2017

ಸಂಸ್ಕೃತ ಪ್ರಪಂಚದ ರಸಪ್ರಸಂಗಗಳು* ಪ್ರಸಂಗ – ೧೯ *ಕಾಳಿದಾಸನ ಚೆಕ್ ಮೇಟ್!*

*ಸಂಸ್ಕೃತ ಪ್ರಪಂಚದ ರಸಪ್ರಸಂಗಗಳು*

ಪ್ರಸಂಗ – ೧೯

*ಕಾಳಿದಾಸನ ಚೆಕ್ ಮೇಟ್!*

ಭೋಜರಾಜನ ಅಕ್ಷರಲಕ್ಷ ಯೋಜನೆ ಮಂತ್ರಿಯ ನಿದ್ದೆ ಕೆಡಿಸಿತ್ತು. ಇದರಿಂದ ಖಜಾನೆ ಬರಿದಾಗುವ ಭಯವಿತ್ತು. ಹಾಗಾಗಿ ಅವನು ಒಂದು ಉಪಾಯವನ್ನು ಮಾಡಿದ. ಆಸ್ಥಾನದಲ್ಲಿ ಅನೇಕ ಏಕಪಾಠಿ, ದ್ವಿಪಾಠಿ, ತ್ರಿಪಾಠಿ ಪಂಡಿತರಿದ್ದರು. ಕವಿ ತನ್ನ ಕಾವ್ಯವನ್ನು ಓದಿದ ಕೂಡಲೇ ಏಕಪಾಠಿ ಅದನ್ನು ಪುನರುಚ್ಚರಿಸಿ ’ಇದು ನನಗೆ ಮೊದಲೇ ತಿಳಿದಿತ್ತು’ ಎಂದು ಹೇಳಿ ತೋರಿಸುತ್ತಿದ್ದ. ಅದನ್ನು ಕೇಳಿದ ದ್ವಿಪಾಠಿ ನನಗೂ ಗೊತ್ತಿದೆ ಎಂದು ಪುನರುಚ್ಚರಿಸುತ್ತಿದ್ದ. ನಂತರ ತ್ರಿಪಾಠಿಯೂ ಹೀಗೇ ಮಾಡುತ್ತಿದ್ದ. ಅದರಿಂದಾಗಿ ಕವಿಗೆ ಸಿಗುವ ಬಹುಮಾನ ತಪ್ಪಿ ಹೋಗುತ್ತಿತ್ತು.

ಕಾಳಿದಾಸನಿಗೆ ಇದು ರುಚಿಸಲಿಲ್ಲ. ಅವನು ಕವಿಯೊಬ್ಬನನ್ನು ಕರೆದು ಒಂದು ಪದ್ಯವನ್ನು ಬರೆದು ಕೊಟ್ಟ. ಆ ಕವಿ ಅದನ್ನು ಸಭೆಯಲ್ಲಿ ಪಠಿಸಿದ.

ಸ್ವಸ್ತಿ ಶ್ರೀ ಭೋಜರಾಜ! ತ್ವಮಖಿಲಭುವನೇ ಧಾರ್ಮಿಕ; ಸತ್ಯವಕ್ತಾ
ಪಿತ್ರಾ ತೇ ಸಂಗ್ರಹೀತಾ ನವನವತಿಮಿತಾ ರತ್ನಕೋಟ್ಯೋ ಮದೀಯ: |
ತಾಂಸ್ತ್ವಂ ದೇಹೀತಿ ರಾಜನ್! ಸಕಲಬುಧಜನೈರ್ಜ್ಞಾಯತೇ ಸತ್ಯಮೇತತ್
ನೋ ವಾ ಜಾನಂತಿ ಯತ್ತನ್ಮಮ ಕೃತಿಮಪಿ ನೋ ದೇಹಿ ಲಕ್ಷಂ ತತೋ ಮೇ ||

’ಹೇ ಭೋಜರಾಜನೇ! ನಿನಗೆ ಮಂಗಲವಾಗಲಿ. ನೀನು ಈ ಜಗತ್ತಿನಲ್ಲಿ ಶ್ರೇಷ್ಠನಾದ ಧಾರ್ಮಿಕ ಹಾಗೂ ಸತ್ಯವಾದಿ. ನಿನ್ನ ತಂದೆಯವರು ನನ್ನಿಂದ ೯೯ ಕೋಟಿ ರತ್ನಗಳನ್ನು ತೆಗೆದುಕೊಂಡಿದ್ದರು. ಅದನ್ನು ನನಗೆ ಮರಳಿ ಕೊಡು. ಇದು ನಿನ್ನ ಆಸ್ಥಾನದಲ್ಲಿರುವ ವಿದ್ವಾಂಸರಿಗೂ ಗೊತ್ತು. ಅವರಿಗೆ ಗೊತ್ತಿಲ್ಲ ಅಂತಾದರೆ ನನಗೆ ಈ ಪದ್ಯಕ್ಕೆ ಲಕ್ಷ ಹೊನ್ನನ್ನು ಕೊಡು.’

ಏಕಪಾಠಿ ಈ ಪದ್ಯ ಗೊತ್ತಿತ್ತು ಎಂದು ಹೇಳುವಂತಿರಲಿಲ್ಲ. ಹೇಳಿದರೆ ೯೯ ಕೋಟಿ ರತ್ನಗಳನ್ನು ಕೊಡಬೇಕಾದೀತು! ಏಕಪಾಠಿ ಪಠಿಸದ ಹೊರತು ದ್ವಿಪಾಠಿ ಹೇಳುವಂತಿರಲಿಲ್ಲ. ತ್ರಿಪಾಠಿಯ ಗತಿಯೂ ಅಷ್ಟೇ. ಕೋಟಿ ರತ್ನಗಳನ್ನು ಕೊಡುವುದಕ್ಕಿಂತ ೮೪ ಲಕ್ಷಹೊನ್ನು ಕೊಟ್ಟು ಸಾಗಹಾಕುವುದು ಒಳಿತೆಂದು ಭೋಜರಾಜ ಯೋಚಿಸಿದ.

ಹೇಗಿದೆ ಕಾಳಿದಾಸನ ಚೆಕ್ ಮೇಟ್?!

📝 *ಮಹಾಬಲ ಭಟ್, ಗೋವಾ*

# ಸಂಸ್ಕೃತ ಕಲಿಯಿರಿ, ಸಂಸ್ಕೃತಿ ತಿಳಿಯಿರಿ

No comments:

नारायण महादेव धोनि

 असङ्ख्यानां वीरयोधानां जन्मभूमिः इयं भारतमाता। अतः एव कश्चन कविः कवयति 'वन्ध्या न भारतजननी शूरसुतानां जन्मभूमिः' इति। प्रायेण सार्ध...