Monday, August 21, 2017

ಸಂಸ್ಕೃತ ಪ್ರಪಂಚದ ರಸಪ್ರಸಂಗಗಳು* ಪ್ರಸಂಗ – ೨೦ *ಬಾದರಾಯಣ ಸಂಬಂಧ*

*ಸಂಸ್ಕೃತ ಪ್ರಪಂಚದ ರಸಪ್ರಸಂಗಗಳು*

ಪ್ರಸಂಗ – ೨೦

*ಬಾದರಾಯಣ ಸಂಬಂಧ*

ನಿಮಗೆಲ್ಲ ’ಬಾದರಾಯಣ ಸಂಬಂಧ’ ಎಂಬ ನುಡಿಗಟ್ಟು ಗೊತ್ತಿರಬಹುದು. ಅದು ಹೇಗೆ ರೂಢಿಗೆ ಬಂತು ಎಂಬ ಅರಿವಿದೆಯೆ? ಕೆಲವರು ಈ ನುಡಿಗಟ್ಟನ್ನು ಬಾದರಾಯಣರೆಂದು ಖ್ಯಾತರಾದ ವ್ಯಾಸಮಹರ್ಷಿಗಳಿಗೆ ಅನ್ವಯಿಸುವುದುಂಟು. ಆದರೆ ಆ ನುಡಿಗಟ್ಟಿನ ಹುಟ್ಟಿನ ರೋಚಕ ಕಥೆ ಇಲ್ಲಿದೆ ಓದಿ.

ಚಕ್ಕಡಿ ಗಾಡಿಯಲ್ಲಿ ಪ್ರಯಾಣಿಸುವ ಕಾಲವದು. ಒಬ್ಬ ಯಾತ್ರಿಕ ಒಂದು ಹಳ್ಳಿಯಲ್ಲಿ ಪ್ರಯಾಣಿಸುತ್ತಿರುವಾಗ ಗಾಡಿ ಕೆಟ್ಟು ಹೋಯಿತು. ಸಂಜೆಯ ಸಮಯ. ಮಳೆ ಬರುವ ಲಕ್ಷಣವೂ ಕಾಣಿಸುತ್ತಿತ್ತು. ಚಾಲಕ ಗಾಡಿಯನ್ನು ಸರಿಮಾಡಲು ಯತ್ನಿಸುತ್ತಿದ್ದ. ಹಸಿವೆಯಿಂದಲೂ ಬಳಲುತ್ತಿದ್ದ ಆ ಯಾತ್ರಿಕ ಅಲ್ಲಿಯೇ ಇದ್ದ ಮನೆಯನ್ನು ಹೊಕ್ಕ. ಅತ್ಯಂತ ಆತ್ಮೀಯ ಪರಿಚಿತರಂತೆ ಯಜಮಾನನೊಂದಿಗೆ ವ್ಯವಹರಿಸತೊಡಗಿದ. ಸದ್ಗೃಹಸ್ಥನಾದ ಯಜಮಾನನಾದರೋ ತಾವು ಯಾರೆಂದು ಕೇಳುವುದು ಸಭ್ಯತನವಲ್ಲವೆಂದು ತಿಳಿದು ಪತ್ನಿಯ ಕಡೆಯ ಸಂಬಂಧಿಯಿರಬೇಕೆಂದು ಬಗೆದು ಉಪಚರಿಸಿದ. ಪತ್ನಿಯಾದರೋ ಗಂಡನ ಸಂಬಂಧಿಯಿರಬೇಕೆಂದು ಉಪಚರಿಸಿದಳು. ಊಟವಾಯಿತು. ವೀಳ್ಯವನ್ನು ಸವಿಯುವಾಗ ಯಜಮಾನ ಕುತೂಹಲ ತಾಳಲಾರದೆ ಕೇಳಿಯೇ ಬಿಟ್ಟ. ’ನಮಗೂ ನಿಮಗೂ ಯಾವ ರೀತಿಯ ಸಂಬಂಧ?’. ಆ ಯಾತ್ರಿಕ ನಗುತ್ತ ಯಜಮಾನನ ಮನೆಯ ಅಂಗಳದ ತುದಿಯಲ್ಲಿದ್ದ ಬದರೀ(ಬೋರೆ) ಮರವನ್ನು ತೋರಿಸಿ ಹೇಳಿದ –

ಅಸ್ಮಾಕಂ ಬದರೀಚಕ್ರಂ
ಯುಷ್ಮಾಕಂ ಬದರೀತರುಃ |
ಬಾದರಾಯಣಸಂಬಂಧಾತ್
ಯೂಯಂ ಯೂಯಂ ವಯಂ ವಯಮ್ ||

ನಮ್ಮ ಗಾಡಿಯ ಚಕ್ರ ಬೋರೆ ಮರದಿಂದ ಮಾಡಿದ್ದು. ನಿಮ್ಮ ಮನೆಯ ಅಂಗಳದಲ್ಲಿ ಒಂದು ಬೋರೆ ಮರವಿದೆ. ಹಾಗಾಗಿ ಬಾದರಾಯಣ ಸಂಬಂಧದಿಂದ ನಾವು ನೀವು, ನೀವು ನಾವು.

ಅಷ್ಟರಲ್ಲಿ ಗಾಡಿ ರಿಪೇರಿಯಾಗಿತ್ತು. ಯಾತ್ರಿಕ ಹೊರಟೇ ಬಿಟ್ಟ.

📝 *ಮಹಾಬಲ ಭಟ್, ಗೋವಾ*
# ಸಂಸ್ಕೃತ ಕಲಿಯಿರಿ, ಸಂಸ್ಕೃತಿ ತಿಳಿಯಿರಿ.

No comments:

नारायण महादेव धोनि

 असङ्ख्यानां वीरयोधानां जन्मभूमिः इयं भारतमाता। अतः एव कश्चन कविः कवयति 'वन्ध्या न भारतजननी शूरसुतानां जन्मभूमिः' इति। प्रायेण सार्ध...