Monday, August 21, 2017

ಸಂಸ್ಕೃತ ಪ್ರಪಂಚದ ರಸಪ್ರಸಂಗಗಳು* ಪ್ರಸಂಗ – ೨೧ *ಚವೈತುಹಿ ಚವೈತುಹಿ*

*ಸಂಸ್ಕೃತ ಪ್ರಪಂಚದ ರಸಪ್ರಸಂಗಗಳು*

ಪ್ರಸಂಗ – ೨೧

*ಚವೈತುಹಿ ಚವೈತುಹಿ*

ಭೋಜರಾಜನ ಅಕ್ಷರಲಕ್ಷ ಯೋಜನೆಯ ಕೀರ್ತಿ ಕರ್ಣಾಕರ್ಣಿಯಾಗಿ ರಾಜ್ಯಾದ್ಯಂತ ಹರಡಿತ್ತು. ಪ್ರತಿಭೆಯಿಲ್ಲದ ಅರ್ಧ ಪಂಡಿತರೂ ಸಾವಿರ ಹೊನ್ನು ಸಿಕ್ಕರೂ ಸಾಕು ಎಂದು ಸಾಲುಗಟ್ಟಿದರು. ಅವರಲ್ಲೊಬ್ಬ ಸೂರ್ಯ ಮೂಡುವುದಕ್ಕಿಂತ ಮೊದಲೇ ಹೇಗೋ ಅರಮನೆಯ ಪ್ರವೇಶ ಗಿಟ್ಟಿಸಿಕೊಂಡು ರಾಜನ ಅಂತ:ಪುರವನ್ನೂ ಪ್ರವೇಶಿಸಿದ. ರಾಜನಿಗೆ ಸುಪ್ರಭಾತವನ್ನು ಹಾಡುವುದು ಅವನ ಉದ್ದೇಶವಾಗಿತ್ತು.

‘ಉತ್ತಿಷ್ಠೋತ್ತಿಷ್ಠ ಗೋವಿಂದ’ ಎಂಬ ಸುಪ್ರಭಾತ ಶ್ಲೋಕದ ಪಾದ ನೆನಪಾಯಿತು ಅವನಿಗೆ ಗೋವಿಂದನ ಸ್ಥಾನದಲ್ಲಿ ರಾಜೇಂದ್ರನನ್ನು ನಿಲ್ಲಿಸಿ ’ಉತ್ತಿಷ್ಠೋತ್ತಿಷ್ಠ ರಾಜೇಂದ್ರ’ ಎಂದು ಮೊದಲ ಪಾದವನ್ನು ಮುಗಿಸಿದ. ಎದ್ದ ಮೇಲೆ ಮುಖ ಪ್ರಕ್ಷಾಲನೆ ಮಾಡಬೇಕಲ್ಲ, ಅದಕ್ಕೆ ಹೇಳಿದ ’ಮುಖಂ ಪ್ರಕ್ಷಾಲಯಸ್ವ’ ಇಲ್ಲಿ ಒಂದಕ್ಷರ ಕಡಿಮೆ ಬಿತ್ತು. ಹಾಗೇ ಬಿಟ್ಟು ಮೂರನೇ ಪಾದಕ್ಕೆ ಜಿಗಿದ. ‘ಪ್ರಭಾತೇ ಕೂಜತೇ ಕುಕ್ಕುಟ:’ (ಬೆಳಿಗ್ಗೆ ಕೋಳಿ ಕೂಗುತ್ತದೆ) ಎನ್ನಲು ಹೋದ. ಇಲ್ಲಿ ಒಂದಕ್ಷರ ಹೆಚ್ಚಾಯಿತು. ಹಿಂದಿನ ಚರಣದಲ್ಲಿ ಒಂದಕ್ಷರ ಕಡಿಮೆ ಬಿದ್ದಿದ್ದು ನೆನಪಾಯಿತು. ಮೂರನೆಯ ಪಾದದಲ್ಲಿ ಹೆಚ್ಚಾದ ’ಟ:’ ವನ್ನು ಅಲ್ಲಿ ಸೇರಿಸಿದ. ಇಷ್ಟೆಲ್ಲ ಕಸರತ್ತು ಮಾಡುವಷ್ಟರಲ್ಲಿ ಹೈರಾಣಾಗಿದ್ದ. ನಾಲ್ಕನೆಯ ಪಾದವನ್ನು ರಚಿಸುವಷ್ಟು ವ್ಯವಧಾನವಿರಲಿಲ್ಲ. ಅಕ್ಷರಗಳ ಕೊರತೆಯಾದಾಗ ಅರ್ಥವಿಲ್ಲದ ಪಾದಪೂರಣಗಳಾದ ಚ,ವೈ,ತು,ಹಿ ಇವುಗಳನ್ನು ಬಳಸಬಹುದು ಎಂದು ತಿಳಿದಿದ್ದ. ಆ ಪದಗಳನ್ನೇ ಬಳಸಿ ಕೊನೆಯ ಚರಣವನ್ನು ಬರೆದ.

ಉತ್ತಿಷ್ಠೋತ್ತಿಷ್ಠ ರಾಜೇಂದ್ರ!
ಮುಖಂ ಪ್ರಕ್ಷಾಲಯಸ್ವ ಟ: |
ಪ್ರಭಾತೇ ಕೂಜತೇ ಕುಕ್ಕು
ಚವೈತುಹಿ ಚವೈತುಹಿ ||

ಬೆಳಿಗ್ಗೆಯೇ ವಕ್ಕರಿಸಿದ ಇಂತಹ ಕವಿಗೆ ರಾಜ ಏನು ಮಾಡಿಯಾನು? ಕನಿಕರಿಸಿ ಏನೋ ಒಂದಿಷ್ಟು ಕೊಟ್ಟು ಕಳಿಸಿದ.

(ಈ ಲೇಖನಕ್ಕೆ ವಿಶ್ವವಾಣಿಯಲ್ಲಿ ೧೧.೧೨.೨೦೧೬ ರಂದು ವಿಶ್ವವಾಣಿಯಲ್ಲಿ ಪ್ರಕಟವಾದ ಶ್ರೀವತ್ಸ ಜೋಶಿಯವರ ತಳಿರು ತೋರಣ ಅಂಕಣದ ಸಹಾಯವನ್ನು ತೆಗೆದುಕೊಂಡಿದ್ದೇನೆ. ಅವರಿಗೆ ಕೃತಜ್ಞ.)

📝 *ಮಹಾಬಲ ಭಟ್, ಗೋವಾ*

# ಸಂಸ್ಕೃತ ಕಲಿಯಿರಿ, ಸಂಸ್ಕೃತಿ ತಿಳಿಯಿರಿ

No comments:

नारायण महादेव धोनि

 असङ्ख्यानां वीरयोधानां जन्मभूमिः इयं भारतमाता। अतः एव कश्चन कविः कवयति 'वन्ध्या न भारतजननी शूरसुतानां जन्मभूमिः' इति। प्रायेण सार्ध...