Tuesday, August 22, 2017

ಸಂಸ್ಕೃತ ಪ್ರಪಂಚದ ರಸಪ್ರಸಂಗಗಳು* ಪ್ರಸಂಗ – ೨೨ *ದ್ವಿತೀಯಾ ಸ್ಯಾಮಹಂ ಕಥಮ್*

*ಸಂಸ್ಕೃತ ಪ್ರಪಂಚದ ರಸಪ್ರಸಂಗಗಳು*

ಪ್ರಸಂಗ – ೨೨

*ದ್ವಿತೀಯಾ ಸ್ಯಾಮಹಂ ಕಥಮ್*

ಹದಿನೆಂಟನೆಯ ಶತಮಾನದಲ್ಲಿ ಕೇರಳದಲ್ಲಿ ಮನೋರಮಾ ಎಂಬ ವಿದುಷಿಯೊಬ್ಬಳಿದ್ದಳು. ಅವಳ ಮೊದಲ ಪತಿ ದಿವಂಗತನಾದ ಬಳಿಕ ವರಾನ್ವೇಷಣೆಗೆ ತೊಡಗಿದಳು. ಆಗೆಲ್ಲ ವಧುಪರೀಕ್ಷೆ ನಡೆಯುತ್ತಿರಲಿಲ್ಲ. ವರಪರೀಕ್ಷೆ ನಡೆಯುತ್ತಿತ್ತು. ಹಾಗೆ ಅವಳನ್ನು ವರಿಸಬಂದ ಪುರುಷನಿಗೆ ಅವಳು ವ್ಯಾಕರಣದ ಪ್ರಶ್ನೆಗಳನ್ನು ಕೇಳುತ್ತಿದ್ದಳು. ಒಮ್ಮೆ ಒಬ್ಬನಿಗೆ ವಿಹಸ್ಯ, ವಿಹಾಯ ಮತ್ತು ಅಹಮ್ ಎಂಬ ಪದಗಳ ರೂಪಪರಿಚಯ ಮಾಡುವಂತೆ ಹೇಳಿದಳು. ಅವನಾದರೋ ರಾಮಶಬ್ದಪಂಡಿತ. ಅಂದರೆ ಕೇವಲ ರಾಮಶಬ್ದದ ವಿಭಕ್ತಿರೂಪಗಳನ್ನು ಮಾತ್ರ ಬಲ್ಲವನಾಗಿದ್ದ. ಅವನು ಕ್ರಮವಾಗಿ ಷಷ್ಠೀ, ಚತುರ್ಥೀ ಹಾಗೂ ದ್ವಿತೀಯಾ ವಿಭಕ್ತಿ ಎಂದ. ಯಾರೋ ಹುಡುಗ ಹೇಗಿದ್ದಾನೆ ಎಂದು ಕೇಳಿದಾಗ ಹೀಗೆಂದಳು.

ಯಸ್ಯ ಷಷ್ಠೀ ಚತುರ್ಥೀ ಚ
ವಿಹಸ್ಯ ಚ ವಿಹಾಯ ಚ |
ಅಹಂ ಚ ದ್ವಿತೀಯಾ ಸ್ಯಾತ್
ದ್ವಿತೀಯಾ ಸ್ಯಾಮಹಂ ಕಥಮ್? ||

ಯಾರಿಗೆ ವಿಹಸ್ಯ ಎಂಬುದು ಷಷ್ಠೀ ವಿಭಕ್ತಿರೂಪವೋ, ವಿಹಾಯ ಅನ್ನುವುದು ಚತುರ್ಥೀ ವಿಭಕ್ತಿರೂಪವೋ ಹಾಗೂ ಅಹಂ ಎನ್ನುವುದು ದ್ವಿತೀಯಾ ವಿಭಕ್ತಿಯೋ ಅಂಥವನಿಗೆ ನಾನು ದ್ವಿತೀಯಾ ಅಂದರೆ ಪತ್ನಿಯಾಗುವುದು ಹೇಗೆ?

ವಿಹಸ್ಯ ಅನ್ನುವುದು ವಿ ಉಪಸರ್ಗಪೂರ್ವಕ ಹಸ್ ಧಾತುವಿಗೆ ಲ್ಯಪ್ ಪ್ರತ್ಯಯವನ್ನು ಸೇರಿಸಿದಾಗ ಉಂಟಾಗುವ ಒಂದು ಅವ್ಯಯ. ಆದರೆ ಅದರ ಉಚ್ಚಾರಣೆ ರಾಮಶಬ್ದದ ಷಷ್ಠೀ ವಿಭಕ್ತಿರೂಪವಾದ ’ರಾಮಸ್ಯ’ ದಂತೆ ಇದೆ. ವಿಹಾಯ ಅನ್ನುವುದು ವಿ ಉಪಸರ್ಗಪೂರ್ವಕ ಹಾ ಧಾತುವಿಗೆ ಲ್ಯಪ್ ಪ್ರತ್ಯಯವನ್ನು ಜೋಡಿಸಿದಾಗ ಸಿಗುವ ಅವ್ಯಯ. ಇದು ರಾಮ ಶಬ್ದದ ಚತುರ್ಥೀವಿಭಕ್ತಿರೂಪವಾದ ’ರಾಮಾಯ’ ಎನ್ನುವಂತೆ ಇದೆ. ಅಹಂ ಎಂಬುದು ಅಸ್ಮದ್ ಶಬ್ದದ ಪ್ರಥಮಾವಿಭಕ್ತಿರೂಪ. ಅದು ರಾಮ ಶಬ್ದದ ದ್ವಿತೀಯಾ ವಿಭಕ್ತಿ ರೂಪವಾದ ’ರಾಮಮ್’ ದಂತೆ ಇದೆ. ರಾಮಶಬ್ದಪಂಡಿತ ಮತ್ತೇನು ಉತ್ತರ ಹೇಳಿಯಾನು?

📝 *ಮಹಾಬಲ ಭಟ್, ಗೋವಾ*

# ಸಂಸ್ಕೃತ ಕಲಿಯಿರಿ, ಸಂಸ್ಕೃತಿ ತಿಳಿಯಿರಿ.

No comments:

नारायण महादेव धोनि

 असङ्ख्यानां वीरयोधानां जन्मभूमिः इयं भारतमाता। अतः एव कश्चन कविः कवयति 'वन्ध्या न भारतजननी शूरसुतानां जन्मभूमिः' इति। प्रायेण सार्ध...